ಪ್ರತೀ ತಂದೆಯ ಭಾಗ್ಯದಲ್ಲಿ ಮಗಳಿರಲ್ಲ!

ಪ್ರತೀ ತಂದೆಯ ಭಾಗ್ಯದಲ್ಲಿ ಮಗಳಿರಲ್ಲ!

ದಶರಥ ಮಹಾರಾಜನು ತನ್ನ ನಾಲ್ಕು ಪುತ್ರರತ್ನರ ಜೊತೆ ಸಕುಟುಂಬ ಪರಿವಾರ ಸಮೇತ, ಅದ್ದೂರಿಯ ಮದುವೆಯ ದಿಬ್ಬಣದ ಸಂಗಡ ಜನಕ ಮಹಾರಾಜನ ಅರಮನೆಯ ಹೆಬ್ಬಾಗಿಲಲ್ಲಿ ಬಂದು ನಿಲ್ಲುತ್ತಾನೆ. ಆಗ ಜನಕ ಮಹಾರಾಜನು ತನ್ನ ಪರಿವಾರದ ಜೊತೆ ಎದುರಿಗೆ ಬಂದು ಶ್ರೀರಾಮನ ಮದುವೆ ಮೆರವಣಿಗೆಗೆ ಸ್ವಾಗತ ಕೋರುತ್ತಾನೆ.

ದಶರಥ ಮಹಾರಾಜ ತುಂಬಾ ವಿನಮ್ರದಿಂದ ಜನಕ ಮಹಾರಾಜನ ಹತ್ತಿರ ಹೋಗಿ ಆತನ ಪಾದಗಳಿಗೆ ನಮಸ್ಕಾರ ಮಾಡುತ್ತಾನೆ. ಗಲಿಬಿಲಿಗೊಂಡ ಜನಕನು ದಶರಥನನ್ನು ಎಬ್ಬಿಸಿ ಅಪ್ಪಿಕೊಂಡು ಆಶ್ಚರ್ಯದಿಂದ "ಮಹಾರಾಜ ನೀವು ದೊಡ್ಡವರು, ಮೇಲಾಗಿ ವರನ ಕಡೆಯವರು ,ಹೀಗೆ ನನಗೆ ಪಾದಾಭಿವಂದನೆ ಮಾಡುವುದು ಸರಿಯಲ್ಲ. ನಿಮ್ಮ ಈ ನಡೆಯಿಂದ ಗಂಗೆಯು ಹಿಂದಕ್ಕೆ ಹರಿಯುತ್ತಿರುವವಳೇ? ಎಂಬ ಸಂಶಯ ಮೂಡುತ್ತಿದೆ!” ಎಂದನು. 

ಅದಕ್ಕೆ ಮಹಾರಾಜ ದಶರಥ ಅದ್ಭುತವಾದ ಉತ್ತರವನ್ನು ಕೊಡುತ್ತಾನೆ "ಜನಕ ರಾಜನೇ ನೀವು ದಾನ ನೀಡುವವವರು. ಇನ್ನೂ ಸ್ವಲ್ಪ ಹೊತ್ತಿಗೆ ಕನ್ಯಾದಾನ ಮಾಡುತ್ತಿರುವವರು. ನಾನು ಯಾಚಕ. ನಿಮ್ಮಿಂದ ಮಗನಿಗಾಗಿ ಕನ್ಯೆಯನ್ನು ಪಡೆಯಲು ಬಂದಿರುವವನು. ಈಗ ನೀವೇ ಹೇಳಿರಿ, ದಾನ ಮಾಡುವವ ದೊಡ್ಡವನೋ? ಇಲ್ಲಾ ಯಾಚಕನೋ! ನಮ್ಮಿಬ್ಬರಲ್ಲಿ ಶ್ರೇಷ್ಠನಾರೋ ನಿಮಗೆ ಗೊತ್ತು" ಎಂದನು. 

ದಶರಥ ಮಹಾರಾಜನ ಮಾತು ಕೇಳಿದ ಜನಕನಿಗೆ ಕಣ್ಣೀರು, ಆನಂದಭಾಷ್ಪಗಳು. ಉದ್ವೇಗದಿಂದ ತನ್ನಲ್ಲಿಯೇ ಅಂದುಕೊಳ್ಳುತ್ತಾನೆ "ಹೌದು ಯಾರ ಮನೆಯಲ್ಲಿ ಮಗಳಿರುತ್ತಾಳೋ ಅವರೇ ಭಾಗ್ಯವಂತರು!" ಪ್ರತಿ ಮಗಳ ಭಾಗ್ಯದಲ್ಲಿ ಅಥವಾ ಅದೃಷ್ಟದಲ್ಲಿ ತಂದೆ ಇದ್ದೇ ಇರುತ್ತಾನೆ ಆದರೆ ಪ್ರತಿ ತಂದೆಯ ಭಾಗ್ಯದಲ್ಲಿ ಮಗಳಿರಲ್ಲ!

ಇದು ಮಗಳಿಗಿರುವ ಮಹತ್ವ. ಇದು ಭಾರತೀಯ ಸಂಸ್ಕೃತಿ. ಇದು ನಮ್ಮ ರಾಮಾಯಣ ಕಾಲದ ನೀತಿ.

ಎಷ್ಟು ನಿಜವಾದ ಮಾತಲ್ಲವೇ? ಆದರೆ ನಾವು ಈಗಲೂ ಹೆಣ್ಣೆಂದರೆ ಶಾಪ, ಹೆಣ್ಣು ಹುಟ್ಟಿದರೆ ಕಷ್ಟಕ್ಕೆ ದಾರಿ, ಹೆಣ್ಣಿನ ಕಾಲ್ಗುಣ ಸರಿಯಾಗಿಲ್ಲ, ಹೆಣ್ಣು ಹಣದ ವೆಚ್ಚಕ್ಕೆ ದಾರಿ ಹೀಗೆಲ್ಲಾ ಹೀಗಳೆಯುತ್ತಾ ಇರುತ್ತೇವೆ. ಆದರೆ ಹೆಣ್ಣು ಮಗು ಮನೆಯಲ್ಲಿದ್ದರೆ ಲಕ್ಷ್ಮಿ, ಸರಸ್ವತಿ ಇದ್ದಂತೆ ಎಂದೇಕೆ ನಾವು ಅಂದುಕೊಳ್ಳುವುದಿಲ್ಲ. ಐದಾರು ದಶಕಗಳ ಹಿಂದಿನ ಮಾತಾದರೆ ಬೇರೆ ವಿಷಯ, ಈಗಲೂ ೨೧ನೇ ಶತಮಾನದಲ್ಲೂ ನಮ್ಮ ನಡುವೆ ಹೆಣ್ಣು ಹುಟ್ಟಿದರೆ ಶಾಪ ಎಂದು ಅಂದುಕೊಳ್ಳುವವರಿದ್ದಾರಲ್ಲ, ಅವರಿಗೆ ಏನನ್ನಬೇಕು? ಇನ್ನಾದರೂ ಹೆಣ್ಣು-ಗಂಡು ಸಮಾನತೆಯ ಅರಿವನ್ನು ಬೆಳೆಸಿಕೊಳ್ಳಿರಿ, ಏಕೆಂದರೆ ನಮ್ಮ ದೇವರ ಹೆಸರುಗಳೂ ಸಹ ರಾಧಾಕೃಷ್ಣ, ಸೀತಾರಾಮ ಹೀಗೆ ಹೆಣ್ಣಿನ ಹೆಸರಿನಿಂದಲೇ ಪ್ರಾರಂಭವಾಗುತ್ತವೆ. 

(ಆಧಾರ) - ಸತೀಶ್ ಶೆಟ್ಟಿ, ಚೇರ್ಕಾಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ