ಪ್ರಮಾಣ ವಚನ ಅಥವಾ ಪ್ರತಿಜ್ಞಾ ವಿಧಿ...

ಪ್ರಮಾಣ ವಚನ ಅಥವಾ ಪ್ರತಿಜ್ಞಾ ವಿಧಿ...

ಇವು ಆತ್ಮಸಾಕ್ಷಿಯ ನುಡಿಗಳೇ - ಸಂವಿಧಾನಾತ್ಮಕ ಕರ್ತವ್ಯವೇ - ಒಂದು ಒಣ ವಿಧಿ ವಿಧಾನವೇ? ನಡೆ ನುಡಿ - ಮಾತು ಕೃತಿಯ ನಡುವೆ ದೊಡ್ಡ ಕಂದರ ಸೃಷ್ಟಿಯಾಗಿರುವ ಸನ್ನಿವೇಶದಲ್ಲಿ ಪ್ರಮಾಣ ವಚನ ಒಂದು ಅಧೀಕೃತ ಮತ್ತು ಕೃತಕ ಪ್ರಕ್ರಿಯೆಯಾಗಿದೆ. ಅದರಲ್ಲಿ ಯಾವುದೇ ಜೀವ ಉಳಿದಿಲ್ಲ. ನಂಬಿಕೆ ಭರವಸೆಯೂ ಇಲ್ಲ. ಸಂವಿಧಾನ ರಚನಾ ತಜ್ಞರು ಒಂದು ಒಳ್ಳೆಯ ಆಶಯದಿಂದ ಇದನ್ನು ರಚಿಸಿದ್ದಾರೆ. ಆದರೆ ಅದು ಈಡೇರಿಲ್ಲ ಎಂಬುದು ಬಹಿರಂಗ ಸತ್ಯ.

ಬಹುತೇಕರು ದೇವರ ಮೇಲೆ, ಕೆಲವರು ಅವರ ನಂಬಿಕೆಯ ವ್ಯಕ್ತಿಗಳ ಮೇಲೆ, ಒಂದಿಬ್ಬರು ಹೆತ್ತ ತಂದೆ ತಾಯಿ ಮೇಲೆ ಕೆಲವರು ಸಂವಿಧಾನದ ಮೇಲೆ ಪ್ರತಿಜ್ಞೆ ಮಾಡಿದರು. ಆದರೆ ಜನರ ಮೇಲೆ ಯಾರೂ ಪ್ರತಿಜ್ಞೆ ಮಾಡಲಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಹೇಳಿ ಜನರಿಗೆ ಕೈಮುಗಿದು ಮತ ಕೇಳುವ ಇವರು ಆಯ್ಕೆಯಾದ ನಂತರ ಅತಿಮಾನುಷ ಶಕ್ತಿಯ ಮೇಲೆ ಹೆಚ್ಚು ನಂಬಿಕೆ ಇಡುತ್ತಾರೆ. ಮತದಾರ ಎಂಬ ವ್ಯಕ್ತಿಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಇದು ವ್ಯವಸ್ಥೆಯ ಒಂದು ವ್ಯಂಗ್ಯ.

ಪ್ರತಿಜ್ಞಾ ವಿಧಿ ಹೀಗಿರಬೇಕು. ".............ಎಂಬ ಹೆಸರಿನ ನಾನು, ಸಂವಿಧಾನ ಸ್ಥಾಪಿತ ವಿಧಿ ವಿಧಾನಗಳ ಮೂಲಕ ಶಾಸಕನಾಗಿ ಈ ನೆಲದ ಹೆಸರಿನ ಮೇಲೆ ಪ್ರಮಾಣ ಮಾಡುತ್ತಿದ್ದೇನೆ. ನಾನು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುತ್ತಿರುವುದರಿಂದ ಮತ್ತು ಈ ಚುನಾವಣೆಯಲ್ಲಿ ಸ್ಪರ್ಧಿಸಿ ಈಗ ಕರ್ನಾಟಕ ವಿಧಾನಸಭೆಯ ಶಾಸಕನಾಗಿ ಆಯ್ಕೆಯಾಗಿರುವುದರಿಂದ ನನ್ನ ಈ ನೆಲ, ಜಲ, ಭಾಷೆ, ತಾಯಿ,ತಂದೆ, ಸಂವಿಧಾನ ಮತ್ತು ಕರ್ನಾಟಕದ ಜನರ ಹೆಸರಿನ ಮೇಲೆ ಪ್ರತಿಜ್ಞೆ ಮಾಡುತ್ತಿದ್ದೇನೆ,

ನಾನು ಶಾಸಕನಾಗಿರುವುದೇ ಬಹುದೊಡ್ಡ ಗೌರವ. ಈ ಸಮಾಜದ ಋಣ ತೀರಿಸಲು ನನಗೆ ಸಿಕ್ಕಿರುವ ಈ ಅವಕಾಶವನ್ನು ಕಾಯಾ ವಾಚಾ ಮನಸಾ ರಾಗ ದ್ವೇಷಗಳಿಲ್ಲದೆ, ಪಕ್ಷಪಾತ ಮಾಡದೆ, ಜನರ ಒಳಿತಿಗಾಗಿ ಉಪಯೋಗಿಸುತ್ತೇನೆ. ಚುನಾವಣಾ ಸಂದರ್ಭದ ಯಾವುದೇ  ಸೇಡನ್ನು ನನ್ನ ಜನಗಳ ಮೇಲೆ ತೋರಿಸುವುದಿಲ್ಲ. ಹಾಗೆ ಮಾಡಿದರೆ ನನ್ನನ್ನು ಅನಾಗರಿಕ ಎಂದು ಸಾರ್ವಜನಿಕವಾಗಿ ನಿಲ್ಲಿಸಿ ಛೀಮಾರಿ ಹಾಕಿ ನನ್ನ ಶಾಸಕ ಸ್ಥಾನವನ್ನು ಅನರ್ಹ ಗೊಳಿಸುವ ಅಧಿಕಾರವನ್ನು ಈ ಮೂಲಕ ನಮ್ಮ ನ್ಯಾಯಾಂಗ ವ್ಯವಸ್ಥೆಗೆ ನೀಡುತ್ತಿದ್ದೇನೆ.

ಈ ನೆಲದಲ್ಲಿ ವಾಸಿಸುತ್ತಿರುವ ನನ್ನೆಲ್ಲ ಮತದಾರರೇ ನಿಮ್ಮ ಮೇಲೆ ಪ್ರಮಾಣ ಮಾಡಿ ಆತ್ಮಸಾಕ್ಷಿಯಾಗಿ ಹೇಳುತ್ತೇನೆ. ನನ್ನನ್ನು ನೀವು ಆಯ್ಕೆ ಮಾಡಿರುವುದು ನಿಮ್ಮ ಪ್ರತಿನಿಧಿ ಎಂದು ಕೇವಲ  ಶಾಸಕನಾಗಿ ಮಾತ್ರ. ಒಂದು ವೇಳೆ ಮಾನ್ಯ ಮುಖ್ಯಮಂತ್ರಿಗಳು ನನ್ನ ಪ್ರತಿಭೆ ಸಾಮರ್ಥ್ಯ ನೋಡಿ, ಅವರಿಗೆ ನನ್ನ ಅವಶ್ಯಕತೆ ಇದ್ದರೆ ಅವರಾಗೆ ಮಾಧ್ಯಮಗಳ ಮುಖಾಂತರ ಸಾರ್ವಜನಿಕವಾಗಿ ಕರೆಕೊಟ್ಟರೆ ಮಾತ್ರ ನಾನು ಮಂತ್ರಿಯಾಗುವೆ. ಅದು ನನಗೆ ಒಂದು ಸಂತೋಷದ ಜವಾಬ್ದಾರಿ ಮಾತ್ರವಾಗಿರುತ್ತದೆ. ಒಂದು ವೇಳೆ ಮಂತ್ರಿ ಆಗದಿದ್ದರೆ ಆಗ ನನ್ನ ಸಂತೋಷ ಖಂಡಿತವಾಗಿಯೂ ಇಮ್ಮಡಿಯಾಗುತ್ತದೆ. ಏಕೆಂದರೆ ‌ನನ್ನೆಲ್ಲಾ‌ ಸಮಯ ಮತ್ತು ಶ್ರಮವನ್ನು ಶಾಸಕನಾಗಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ.

ಮಂತ್ರಿಗಿರಿಗಾಗಿ ಅಥವಾ ಯಾವುದೇ ಖಾತೆಗಾಗಿ ಅಥವಾ ಯಾವುದೇ ನಿಗಮ ಮಂಡಳಿಗಳ ಅಧ್ಯಕ್ಷತೆಗಾಗಿ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಯತ್ನ ಮಾಡುವುದಿಲ್ಲ. ಒಂದು ವೇಳೆ ಹಾಗೆ ಮಾಡಿರುವುದು ಸಾಬೀತಾದರೆ ಸ್ವತಃ ನಾನೇ ಎಲ್ಲರ ಕ್ಷಮೆ ಕೇಳಿ ನನ್ನ ಕುಟುಂಬ ಸಮೇತ ಈ ರಾಜ್ಯವನ್ನು ತೊರೆದು ಗಡಿಪಾರು ಶಿಕ್ಷೆಗೆ ಒಳಪಡಿಸಿಕೊಳ್ಳುತ್ತೇನೆ. ಭ್ರಷ್ಟಾಚಾರ ರಹಿತ, ಜಾತಿ ರಹಿತ ಆಡಳಿತ ನೀಡುವ ಮತ್ತು ಕೋಮು ಸೌಹಾರ್ದತೆ ಕಾಪಾಡುವ ಪ್ರತಿಜ್ಞೆ ಮಾಡುತ್ತೇನೆ. 

ಮೇಲೆ ಹೇಳಿದ ಎಲ್ಲಾ ಪ್ರತಿಜ್ಞೆಗಳು ನನ್ನ ಸ್ವ ಇಚ್ಛೆಯಿಂದ ಮಾಡಿದ್ದೇನೆ. ಯಾವುದೇ ಭಯ ಒತ್ತಡದಿಂದ ಮಾಡಿರುವುದಿಲ್ಲ. ಮೇಲೆ ಸಂಕಲ್ಪ ಮಾಡಿ ಒಳಗೆ ಕಾನೂನಿನ ಒಳಸುಳಿಗಳನ್ನು ಉಪಯೋಗಿಸಿಕೊಂಡು ಇದನ್ನು ನಾಶಪಡಿಸಲು ಪ್ರಯತ್ನಿಸುವುದಿಲ್ಲ. ಅಧಿಕಾರ ಶಾಶ್ವತವಲ್ಲ. ಜನರಿಗೆ ನಾನು ಮಾಡುವ ಕೆಲಸಗಳು ಶಾಶ್ವತ .ದೇಶದ ಸಂವಿಧಾನದ ಆಶಯಗಳಿಗೆ ಯಾವುದೇ ಕುಂದು ಬಾರದಂತೆ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ.

ಮೇಲೆ ಹೇಳಿದ ಎಲ್ಲವೂ ಸತ್ಯ ಮತ್ತು ನನ್ನ ಮಾತಿಗಳಿಗೆ ಬದ್ದನಾಗಿರುತ್ತೇನೆ ಎಂದು ಮತ್ತೊಮ್ಮೆ ಪ್ರಮಾಣ ಮಾಡುವ ನಿಮ್ಮ ಸೇವಕ ಎಂಬ ಹೆಸರಿನ ನಾನು......."

***

ಮಂತ್ರಿಮಂಡಲ ಎಂಬ ಬಗೆಹರಿಯದ ಬಹುದೊಡ್ಡ ಸಮಸ್ಯೆಯನ್ನು ತನ್ನ ಒಡಲೊಳಗೆ ಹುದುಗಿಸಿಕೊಂಡು‌ ಅಭದ್ರತೆಯಿಂದ ನರಳುವ ಯಾವ ಮುಖ್ಯಮಂತ್ರಿಯೂ ರಾಜ್ಯದ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಗಮನಹರಿಸಲು ಸಾಧ್ಯವಿಲ್ಲ. ಇದು ರಾಜಕೀಯ ಸುಳಿಗಳು ‌ ಇದನ್ನು ಎದುರಿಸಲೇ ಬೇಕು ಎಂದು ಒಪ್ಪಿಕೊಂಡರೆ ಆ ಸ್ಥಾನದಲ್ಲಿರುವ ವ್ಯಕ್ತಿ ಇದನ್ನು ಸಮರ್ಥವಾಗಿ ನಿಭಾಯಿಸುವ ಕಲೆ ಮೈಗೂಡಿಸಿಕೊಳ್ಳಬಹುದೇ ಹೊರತು ರಾಜ್ಯದ ಜನರ ಸೇವೆ ಬಗ್ಗೆ ಗಮನ ಹರಿಸಲು ಸಮಯವೇ ಸಾಕಾಗುವುದಿಲ್ಲ. ಒಟ್ಟಿನಲ್ಲಿ ಜನತೆಗೆ ವರವಾಗಬೇಕಿದ್ದ  ಮಂತ್ರಿಮಂಡಲ ರಚನೆ ಶಾಪವಾಗಿ ಪರಿವರ್ತನೆಯಾದ ಕಾಲ ಘಟ್ಟದಲ್ಲಿ ನಾವಿದ್ದೇವೆ. ಇದು ಶೀಘ್ರವಾಗಿ ಬದಲಾಗಬೇಕಿದೆ. ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೇಟ್ ತಾಣ