ಪ್ರಾಮಾಣಿಕ ರಾಷ್ಟ್ರ ನಾಯಕರೀರ್ವರು
ಜಗದಗಲ ಮೆಚ್ಚಿ ತಲೆದೂಗಿದ ಮಹನೀಯರು
ಕರ್ತವ್ಯನಿಷ್ಠೆ ದೇಶಪ್ರೇಮ ಪ್ರಜ್ಞಾವಂತ ಸರಳತೆಗೆ ಸಾಕ್ಷಿಯಾದವರು|
ಅಹಿಂಸೆ,ತ್ಯಾಗ,ಶಾಂತಿ ಪರಮೋಚ್ಚ ಧರ್ಮವೆಂದವರು
ಅಂತಃಸಾಕ್ಷಿ ನೊಂದವರ ಬಾಳಿಗೆ ಧ್ವನಿಯಾದವರು||
ತುಂಡುಡುಗೆಯ ಸರದಾರ ಬಡತನ ಶಾಪವಲ್ಲ ಎಂದು ಸಾರಿದ ಮಹಾತ್ಮಾ
ವಿದೇಶಿ ದಬ್ಬಾಳಿಕೆ ನಾಗರಿಕ ಹಕ್ಕುವರ್ಣನೀತಿಗಾಗಿ ಹೋರಾಡಿ ಗೆಲಿದ ಬಾಪೂಜಿ|
ಉಪ್ಪಿನಕರ ಉಪವಾಸ ಸ್ವದೇಶಿ ಚಳುವಳಿ ಸಂಘಟಿಸಿ ಮೆರೆದ ಗಾಂಧೀಜಿ
ಎಲ್ಲಾ ಧರ್ಮಗಳಿಗೂ ತಾಯಿಬೇರು ಸತ್ಯವೆಂದ ರಾಷ್ಟ್ರಪಿತ||
ಭರತಖಂಡದಿ ಸತ್ಯಾಗ್ರಹದ ಸಾಗರದಿ ಈಜಿ ದಡ ಸೇರಿದಿರಿ
ಆಗಸದ ಧ್ರುವ ನಕ್ಷತ್ರವಾಗಿ ಬುದ್ಧನಂತೆ ತ್ಯಾಗ ಜೀವಿಯಾದಿರಿ|
ದೇವರಭಯ ನಮ್ಮ ಬದುಕಿನ ದಾರಿದೀಪವೆಂದಿರಿ
ಪಾರದರ್ಶಕತೆ ಸಹಕಾರ ಕರ್ತವ್ಯ ನಿಷ್ಠೆ ಆಚರಿಸಿ ತೋರಿಸಿದಿರಿ||
ವಿಶ್ವಮಾನವತೆಯ ಸಂದೇಶದ ಬೀಜವನು ಬಿತ್ತಿ ಅಜರಾಮರವಾದಿರಿ
ಸ್ವಚ್ಛತೆ ಸ್ವಾವಲಂಬನೆ ಕಷ್ಟಸಹಿಷ್ಣುತೆಯ ಸಾಕಾರ ಮೂರುತಿಗಳಾದಿರಿ|
ರೈತಾಪಿ ಜನರ ಬವಣೆಗಳ ನೀಗಿಸಲು ಶಾಸ್ತ್ರೀಜಿ ಪಣತೊಟ್ಟಿರಿ
'ಜೈ ಜವಾನ್ ಜೈ ಕಿಸಾನ್ ಘೋಷಣೆ'ಯಲಿ ಬಡದೆಬ್ಬಿಸಿದಿರಿ||
ಭಗವಂತನನ್ನು ಕಾಯಕದಲಿ ಕಂಡ ನಿಸ್ವಾರ್ಥ ರಾಷ್ಟ್ರ ಸೇವಕರಾದಿರಿ
ಬಾಪೂ ಮಹಾತ್ಮಾರಾಷ್ಟ್ರಪಿತ ಸಾಕೆ? ನಿನಗೆ ಶಾಂತಿಪ್ರಿಯ ಎನಿಸಿದಿರಿ|
ಆತ್ಮಾವಲೋಕನ ಅತಿ ದೊಡ್ಡ ಅಸ್ತ್ರ ವೆಂದು ಸಾರಿದಿರಿ
ರಾಜಕೀಯ ಮುತ್ಸದ್ಧಿಗಳಾಗಿ ಪ್ರಾಮಾಣಿಕ ರಾಷ್ಟ್ರನಾಯಕರೆನಿಸಿದಿರಿ||
ಮತ್ತೊಮ್ಮೆ ಈರ್ವರೂ ಬುವಿಯಲಿ ಉದಿಸಿರಿ
ಕಾಯಕದ ಮರ್ಮವ ತಿಳಿ ಹೇಳಿರಿ/
ಭ್ರಷ್ಟಾಚಾರ ಅನಾಚಾರಗಳ ಬೇರು ಕಿತ್ತೆಸೆಯಿರಿ
ಬಡತನದಿ ಕೆಸರಿನ ಕಮಲದಂತೆ ಅರಳಿ ಬೆಳಗಿರಿ//
ನಿಮ್ಮಿಬ್ಬರ ಉಸಿರಿನ ನಿಟ್ಟುಸಿರ ಅರಿಯದಾದರು
ಅರ್ಥವಾಗುವಷ್ಟರಲಿ ಎಲ್ಲಾ ಕಳೆದುಕೊಂಡರು/
ಭಾರತಾಂಬೆಯ ಮಡಿಲ ಮಹಾನ್ ಬೆಟ್ಟಗಳೆರಡು ನವರತುನಗಳಾದಿರಿ
ನೆನೆಯುವೆ ಈ ದಿನ ತಮ್ಮತ್ಯಾಗ ಬಲಿದಾನ ಹೋರಾಟದ ಮಜಲುಗಳನ್ನು//
(ಗಾಂಧೀಜಿ, ಶಾಸ್ತ್ರೀಜಿಯವರ ನೆನಹು)
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
