ಫಲಿತಾಂಶ ಹೆಚ್ಚಳ: ಮಿಂಚಿನ ಸಂಚಾರ ಸ್ವಾಗತಾರ್ಹ

ಫಲಿತಾಂಶ ಹೆಚ್ಚಳ: ಮಿಂಚಿನ ಸಂಚಾರ ಸ್ವಾಗತಾರ್ಹ

ರಾಜ್ಯದಲ್ಲಿ ಎಸೆಸೆಲ್ಸಿ ಫಲಿತಾಂಶ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ಆತಂಕ, ನೀಡಿರುವ ಎಚ್ಚರಿಕೆಯ ಬೆನ್ನಿಗೆ ಶಿಕ್ಷಣ ಇಲಾಖೆಯು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವುದು ಶ್ಲಾಘನೀಯ, ಫಲಿತಾಂಶ ಉತ್ತಮಗೊಳ್ಳುವುದಕ್ಕಾಗಿ ಹಿರಿಯ ಅಧಿಕಾರಿಗಳನ್ನೇ ಸ್ವತಃ ಕಾರ್ಯರಂಗಕ್ಕೆ ಇಳಿಸುವ ನಿರ್ಧಾರವನ್ನು ಇಲಾಖೆಯು ತೆಗೆದುಕೊಂಡಿದೆ. ಈ ಅಧಿಕಾರಿಗಳು 'ಮಿಂಚಿನ ಸಂಚಾರ' ಕಾರ್ಯಕ್ರಮದ ಅಡಿ ಯಲ್ಲಿ ಎಲ್ಲ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ಈ ಒಟ್ಟು ಪರಿಶ್ರಮವು ಎಸೆಸೆಲ್ಸಿ ಫಲಿತಾಂಶ ಹೆಚ್ಚಳದಲ್ಲಿ ಮಾತ್ರವಲ್ಲದೆ ಮಕ್ಕಳ ಒಟ್ಟು ಕಲಿಕಾ ಪ್ರಗತಿಯಲ್ಲೂ ಪ್ರತಿಫಲನ ಹೊಂದಿದರೆ ಸಾರ್ಥಕವಾದೀತು.

ರಾಜ್ಯದಲ್ಲಿ ಈ ಬಾರಿ ಶೇ. ೬೨.೩೪ರಷ್ಟು ಫಲಿತಾಂಶ ದಾಖಲಾಗಿದ್ದು, ಇದು ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಕಳೆದ ವರ್ಷ ಕೃಪಾಂಕ ನೀಡಿದ್ದರಿಂದ ಹೆಚ್ಚು ಫಲಿತಾಂಶ ದಾಖಲಾಗಿತ್ತು, ಈ ವರ್ಷ ಕೃಪಾಂಕ ನೀಡದಂತೆ ಮುಖ್ಯಮಂತ್ರಿಗಳು ಸೂಚಿಸಿದ್ದರು. ಕೃಪಾಂಕ ನೀಡಿಕೆಯಿಂದ ಮಕ್ಕಳ ಕಲಿಕೆಯ ನೈಜ : ಸಾಮರ್ಥ್ಯದ ಮೌಲ್ಯಮಾಪನಕ್ಕೆ ಅವಕಾಶ ಸಿಗುವುದಿಲ್ಲ ಎಂಬ ಅವರ ಚಿಂತನೆ ಡಿ.ಸರಿಯಾದುದೇ ಆಗಿದೆ. ಇತ್ತೀಚೆಗೆ ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಸಭೆ ನಡೆಸಿದ್ದ ಮುಖ್ಯಮಂತ್ರಿಗಳು ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಫಲಿತಾಂಶ ಕಳಪೆ ಯಾಗಲು ಅವಕಾಶ ನೀಡಬಾರದು ಎಂದು ಸೂಚಿಸಿದ್ದರು. ಫಲಿತಾಂಶ ಕುಸಿತವಾದರೆ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಇರುವ ಮಿಂಚಿನ ಸಂಚಾರ ಕಾರ್ಯಕ್ರಮವನ್ನು ಹೆಚ್ಚು ವ್ಯವಸ್ಥಿತವಾಗಿ, ದಕ್ಷವಾಗಿ ಕಾರ್ಯರೂಪಕ್ಕೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ.

ಪ್ರಸ್ತುತ ಮಿಂಚಿನ ಸಂಚಾರ ಕಾರ್ಯಕ್ರಮದಡಿಯಲ್ಲಿ ಶಿಕ್ಷಣ ಇಲಾಖೆಯು ಉನ್ನತ ಹಂತದಿಂದ ತಳಹಂತದವರೆಗಿನ ಅಧಿಕಾರಿಗಳು ತಮ್ಮತಮ್ಮ ಕಾರ್ಯ ವ್ಯಾಪ್ತಿಯ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ, ಬೋಧನೆ ಚೆನ್ನಾಗಿ ನಡೆಯುವಂತೆ ಕಾರ್ಯಪ್ರವೃತ್ತರಾಗಲಿದ್ದಾರೆ. ಪ್ರತೀ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆ : ಸ್ಥಿತಿಗತಿಯ ಅವಲೋಕನ ನಡೆಸಿ, ಕುಂದು ಕೊರತೆಗಳು ಇದ್ದಲ್ಲಿ ಪರಿಹರಿಸುವುದು ಮಿಂಚಿನ ಸಂಚಾರದ ಧ್ಯೇಯ. ಇದು ಅಂತಿಮವಾಗಿ ಎಸೆಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬ ಆಲೋಚನೆ ಸರಿಯಾದುದೇ ಆಗಿದ್ದು, ಮಿಂಚಿನ ಸಂಚಾರ ಯೋಜಿತ ರೀತಿಯಲ್ಲಿ ಚೆನ್ನಾಗಿ ನಡೆಯಬೇಕಿದೆ. ಕೇವಲ ಎಸೆಸೆಲ್ಸಿ ಫಲಿತಾಂಶವಷ್ಟೇ ಅಲ್ಲದೆ, ಮಕ್ಕಳ ಕಲಿಕೆಗೆ ಸಂಬಂಧಿಸಿ ಮಿಂಚಿನ ಸಂಚಾರ ಕಾರ್ಯಕ್ರಮದಿಂದ ಆಗಬೇಕಿರುವ ಕಾರ್ಯಗಳು ಬಹಳಷ್ಟು ಇವೆ. ೨೦೨೪ರ ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿಯ ಪ್ರಕಾರ ರಾಜ್ಯದ ಶಾಲಾ ಮಕ್ಕಳಲ್ಲಿ ಇರುವ ಬಹಳ ದೊಡ್ಡ ನ್ಯೂನತೆ ಎಂದರ ಎಲ್ಲ ವಿಷಯಗಳಲ್ಲಿ ಮೂಲ ಕೌಶಲಗಳೇ ಇಲ್ಲದಿರುವುದು. ಸರಳ ಗಣಿತ ಕ್ರಿಯೆಗಳು, ಸ್ವತಂತ್ರವಾಗಿ ಓದುವುದು-ಬರೆಯುವುದರಂತಹ ಕೌಶಲಗಳು ಶಾಲಾ ಮಕ್ಕಳಿಗೆ ಸಿದ್ದಿಸಿಲ್ಲ ಎಂದು ವರದಿ ಕಂಡುಕೊಂಡಿದೆ. ಮಿಂಚಿನ ಸಂಚಾರ ಕಾರ್ಯಕ್ರಮದ ಮೂಲಕ ಇಂತಹ ಸಮಸ್ಯೆಗಳಿಗೂ ಉತ್ತಮ ಬೋಧನೆಯ ಮೂಲಕ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾದರೆ ಅಂತಿಮವಾಗಿ ಅದು ಎಸ್ಸೆಸೆಲ್ಸಿ ಫಲಿತಾಂಶ ಹೆಚ್ಚಳವಾಗಿ ಪ್ರತಿಫಲಿಸುತ್ತದೆ. ಆಗ ಇಂತಹ ಕಾರ್ಯಕ್ರಮ ಸಾರ್ಥಕ ಎನಿಸಿಕೊಳ್ಳುತ್ತದೆ. 

ಪ್ರಸ್ತುತ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಶೈಕ್ಷಣಿಕ ಉನ್ನತಿಯ ಹಲವು ಕಾರ್ಯಕ್ರಮಗಳನ್ನು ಮಿಂಚಿನ ಸಂಚಾರದ ಜತೆಗೆ ಜೋಡಿಸಿಕೊಂಡು ಶಿಕ್ಷಣ ಇಲಾಖೆಯು ಕಾರ್ಯೋನ್ಮುಖವಾಗಿರುವುದು ಶ್ಲಾಘನೀಯ. ಇದು ಒಂದು ವರ್ಷಕ್ಕೆ ಅಥವಾ ಒಂದು ತರಗತಿಗೆ ಸೀಮಿತವಾಗಬಾರದು. ಅಷ್ಟೇ ಅಲ್ಲ ಶೈಕ್ಷಣಿಕ ವರ್ಷದ ಆರಂಭಕ್ಕೆ ಸೀಮಿತವಾಗದೆ ರಾಜ್ಯದ ಸಮಗ್ರ ಶೈಕ್ಷಣಿಕ ಸುಧಾರಣೆಗೆ ಇಡೀ ವರ್ಷ ನಡೆಯುವ ಆಂದೋಲನ ಆಗಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೩-೦೬-೨೦೨೫

ಚಿತ್ರ ಕೃಪೆ: ಇಂಟರ್ನೆಟ್ ತಾಣ