ಫಸಲು ವಿಮೆ ರೈತಸ್ನೇಹಿ ಆಗಬೇಕಾದರೆ….

ಫಸಲು ವಿಮೆ ರೈತಸ್ನೇಹಿ ಆಗಬೇಕಾದರೆ….

ಈ ವರುಷ ಮೇ ತಿಂಗಳಿನ ಬಿರುಬೇಸಗೆಯಲ್ಲಿ ಕರ್ನಾಟಕದಲ್ಲಿ ಹಾಗೂ ದೇಶದ ಹಲವೆಡೆ ಭಾರೀ ಮಳೆಯಾಗಿದೆ. ಇದು ಅಕಾಲ ಮಳೆ. ಬರ, ನೆರೆ ಮತ್ತು ಅಕಾಲ ಮಳೆ – ಈ ಮೂರು ಪ್ರಾಕೃತಿಕ ವಿಕೋಪಗಳ ಬಿರುಸು ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ್ತಿದೆ. ಇದರಿಂದಾಗಿ ಕೃಷಿಕರ ಅಂದಾಜುಗಳೆಲ್ಲ ತಲೆಕೆಳಗಾಗುತ್ತಿವೆ.

ಇಂತಹ ಸನ್ನಿವೇಶದಲ್ಲಿ ಕೃಷಿಕರ ಹಿತಾಸಕ್ತಿಯ ರಕ್ಷಣೆಗೆ ದಾರಿ ಯಾವುದು? ಫಸಲು ವಿಮೆ ಒಂದು ಪರಿಣಾಮಕಾರಿ ದಾರಿ. ಕೃಷಿಕರಿಗೆ ಕನಿಷ್ಠ ಆದಾಯದ ಗ್ಯಾರಂಟಿ ಫಸಲು ವಿಮೆಯ ಪ್ರಧಾನ ಅಂಶ. ನಮ್ಮ ದೇಶದಲ್ಲಿ ಪ್ರಧಾನಮಂತ್ರಿ ಫಸಲು (ಪ್ರಫ) ವಿಮಾ ಯೋಜನೆ ಜ್ಯಾರಿಯಾದದ್ದು ೨೦೧೬ರ ಮುಂಗಾರು ಹಂಗಾಮಿನಲ್ಲಿ. ರೈತಸ್ನೇಹಿ ಫಸಲು ವಿಮಾ ಯೋಜನೆಯನ್ನು ದೇಶದ ಉದ್ದಗಲದಲ್ಲಿ ಚಾಲೂ ಮಾಡುವುದು ಈ ಯೋಜನೆಯ ಉದ್ದೇಶ.

ಆದರೆ, ರಾಜ್ಯಗಳ ಹಂತದಲ್ಲಿ ಈ ಉದ್ದೇಶಕ್ಕೆ ಧಕ್ಕೆಯಾಗಿದೆ ಮತ್ತು ಜಿಲ್ಲಾ ಮಟ್ಟದಲ್ಲಿ ಇದನ್ನು ಜ್ಯಾರಿ ಮಾಡುವಾಗ ಹಲವು ಲೋಪಗಳಾಗಿವೆ. ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್-ವೈರನ್ಮೆಂಟ್ (ಸಿಎಸ್ಇ) ನಡೆಸಿದ ಅಧ್ಯಯನದ ಪ್ರಕಾರ ಈ ವಿಮಾ ಯೋಜನೆಯ ಅಸಮರ್ಪಕ ಜ್ಯಾರಿಯ ಬಗ್ಗೆ ರೈತರಲ್ಲಿ ಅಸಮಾಧಾನ ಮಡುಗಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ, ಈ ಯೋಜನೆಯನ್ನೇ ರದ್ದು ಮಾಡಬೇಕೆಂದು ಹರಿಯಾಣದ ಕೆಲವು ರೈತ-ಕಾರ್ಯಕರ್ತರು ಹೈಕೋರ್ಟಿನಲ್ಲಿ ದಾವೆ ಹೂಡಿದರು.

ರೈತರಿಗೆ ಈ ವಿಮಾ ಯೋಜನೆಯಲ್ಲಿ ಅತ್ಯಂತ ಆತಂಕ ಹುಟ್ಟಿಸುವ ವಿಷಯ “ಫಸಲು ನಷ್ಟದ ಲೆಕ್ಕಾಚಾರ”. ಯಾಕೆಂದರೆ, ಪ್ರತಿಯೊಂದು ಹಳ್ಳಿಯಲ್ಲಿ ಈ ಲೆಕ್ಕಾಚಾರಕ್ಕಾಗಿ ಪರಿಗಣಿಸುವ ಸ್ಯಾಂಪಲ್ ಪ್ರದೇಶ ಬಹಳ ಚಿಕ್ಕದು; ಇದರಿಂದಾಗಿ ಫಸಲು ನಷ್ಟದ ಅಂದಾಜು ಮತ್ತು ವಿಭಿನ್ನತೆಯಲ್ಲಿ ತಪ್ಪುಗಳಾಗಿವೆ. ಹಲವಾರು ಪ್ರಕರಣಗಳಲ್ಲಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಈ ಲೆಕ್ಕಾಚಾರವನ್ನು ಗದ್ದೆಗಿಳಿದು ಮಾಡುವುದಿಲ್ಲ; ಬದಲಾಗಿ, ಕಚೇರಿಯಲ್ಲಿ ಕುಳಿತು, ಅಂದಾಜಿನಲ್ಲಿ ಕಾಗದದ ಹಾಳೆಗಳಲ್ಲಿ ದಾಖಲಿಸುತ್ತಾರೆ. ಫಸಲು ನಷ್ಟದ ಲೆಕ್ಕಾಚಾರ ಮಾಡಲು ತರಬೇತಿ ಪಡೆದ ಸಿಬ್ಬಂದಿ ಕೊರತೆ, ಭ್ರಷ್ಟಾಚಾರಕ್ಕೆ ಭಾರೀ ಅವಕಾಶ ಮತ್ತು ಸ್ಯಾಂಪಲಿಂಗ್ ಪ್ರಕ್ರಿಯೆಯ ವೇಗ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸಲಿಕ್ಕಾಗಿ ಸ್ಮಾರ್ಟ್ ಫೋನ್ ಹಾಗೂ ಡ್ರೋನ್ ಇತ್ಯಾದಿ ಆಧುನಿಕ ತಂತ್ರಜ್ನಾನದ ಬಳಕೆ ಮಾಡದಿರುವುದು – ಇವು ಆ ಅಧ್ಯಯನದಲ್ಲಿ ಕಂಡುಬಂದ ವಿಮಾ ಯೋಜನೆಯ ಪ್ರಧಾನ ದೋಷಗಳು.

ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯಿಂದ ವಿಮಾ ಕಂಪೆನಿಗಳಂತೂ ೨೦೧೬ರ ಮುಂಗಾರಿನಲ್ಲಿ ಸುಮಾರು ರೂ.೧೦,೦೦೦ ಕೋಟಿ ಭರ್ಜರಿ ಲಾಭ ಗಳಿಸಿವೆ. ಆದರೆ, ಅಸಮರ್ಪಕ ವಿಮಾ ಪರಿಹಾರ ಮತ್ತು ಪರಿಹಾರ ಪಾವತಿಯಲ್ಲಿ ವಿಳಂಬದ ಬಗ್ಗೆ ಹಲವಾರು ದೂರುಗಳು ಬಂದಿವೆ. ಅನೇಕ ಪ್ರಕರಣಗಳಲ್ಲಿ, ವಿಮಾ ಕಂಪೆನಿಗಳು ಸ್ಥಳೀಯ ವಿಕೋಪದಿಂದಾದ ನಷ್ಟದ ಬಗ್ಗೆ ತನಿಖೆ ನಡೆಸಲಿಲ್ಲ; ಹಾಗಾಗಿ ವಿಮಾ ಪರಿಹಾರ ಪಾವತಿಸಲಿಲ್ಲ.

ಕೆಲವು ಜಿಲ್ಲೆಗಳಲ್ಲಿ ಪರಿಹಾರದ ಕ್ಲೈಮುಗಳನ್ನು ಇನ್ನೂ ಇತ್ಯರ್ಥ ಪಡಿಸಿಲ್ಲ. ಮುಂಗಾರು ೨೦೧೬ರ ಮತ್ತು ೨೦೧೬-೧೭ರ ಎರಡನೇ ಬೆಳೆಹಂಗಾಮಿನ (ರಾಬಿ) ಕ್ಲೈಮುಗಳೂ ಬಾಕಿಯಿವೆ. ಆದರೆ, ಮುಂಗಾರು ೨೦೧೬ರಲ್ಲಿ ವಿಮಾ ಕಂಪೆನಿಗಳು ರೈತರಿಗೆ ಅಧಿಕ ಪ್ರೀಮಿಯಮ್ ವಿಧಿಸಿದ್ದವು. ಫಸಲು (ಬೆಳೆ) ವಿಮೆಯ ಪ್ರೀಮಿಯಮ್ ಭವಿಷ್ಯದ ಫಸಲಿನ ನಷ್ಟದ ನಿರೀಕ್ಷಿತ ಬೆಲೆ ಆಗಿರುತ್ತದೆ. ಅದರಂತೆ, ವಿಮಾ ಕಂಪೆನಿಗಳು ಸುಮಾರು ಶೇಕಡಾ ೧೨.೬ ಸರಾಸರಿ ಪ್ರೀಮಿಯಮ್ ವಿಧಿಸಿದ್ದವು. ಇದು ಭಾರತದ ಫಸಲು (ಬೆಳೆ) ವಿಮೆಯ ಚರಿತ್ರೆಯಲ್ಲೇ ಅತ್ಯಧಿಕ ಪ್ರೀಮಿಯಮ್ ದರ. ಕೆಲವು ರಾಜ್ಯಗಳಲ್ಲಿ ವಿಧಿಸಿದ ಫಸಲು ವಿಮೆ ಪ್ರೀಮಿಯಮ್ ಗಮನಿಸಿ: ಗುಜರಾತಿನಲ್ಲಿ ಶೇ.೨೦.೫, ರಾಜಸ್ಥಾನದಲ್ಲಿ ಶೇ.೧೯.೯, ಮಹಾರಾಷ್ಟ್ರದಲ್ಲಿ ಶೇ.೧೮.೯. ಅದರಿಂದಾಗಿ, ವಿಮಾ ಕಂಪೆನಿಗಳ ಫಸಲು ವಿಮೆ ಪ್ರೀಮಿಯಮ್ ಸಂಗ್ರಹದಲ್ಲಿ ಭಾರೀ ಹೆಚ್ಚಳದ ಸಾಧನೆ: ಮುಂಗಾರು ೨೦೧೬ರಲ್ಲಿ ರೂ.೧೬,೭೦,೦೦೦ ಕೋಟಿ ಮತ್ತು ರಾಬಿ ೨೦೧೬-೧೭ರಲ್ಲಿ ರೂ.೫,೬೬,೯೮೯ ಕೋಟಿ.

ಪ್ರಫ ವಿಮಾ ಯೋಜನೆಯ ಅನುಕೂಲ ಬ್ಯಾಂಕುಗಳ ಸಾಲಗಾರ ರೈತರಿಗೆ ಸೀಮಿತ. ಯಾಕೆಂದರೆ, ಅವರು ಕಡ್ಡಾಯವಾಗಿ ಫಸಲು ವಿಮೆ ಪ್ರೀಮಿಯಮ್ ಪಾವತಿಸಬೇಕು. ಗೇಣಿಬೇಸಾಯ ಮಾಡುವ ರೈತರು ಈ ಯೋಜನೆಯಿಂದ ಹೊರಗೆ ಉಳಿದಿದ್ದಾರೆ. ಮುಂಗಾರು ೨೦೧೬ರಲ್ಲಿ ೩೮.೬ ದಶಲಕ್ಷ ಹೆಕ್ಟೇರ್ ಮತ್ತು ರಾಬಿ ೨೦೧೬-೧೭ರಲ್ಲಿ ೧೯.೫ ದಶಲಕ್ಷ ಹೆಕ್ಟೇರ್ ಜಮೀನಿನ ಬೆಳೆಗಳಿಗೆ ಫಸಲು ವಿಮೆ ಮಾಡಿಸಲಾಗಿತ್ತು (೨೮-೭-೨೦೧೭ರ ಮಾಹಿತಿ). ಆದರೆ, ಬಹುಪಾಲು ರೈತರಲ್ಲಿ ಪ್ರಫ ವಿಮಾ ಯೋಜನೆ ಬಗ್ಗೆ ಜಾಗೃತಿ ಮೂಡಿಲ್ಲ. ರೈತರಿಗೂ ವಿಮಾಕಂಪೆನಿಗಳಿಗೂ ನೇರ ಸಂಪರ್ಕ ಇನ್ನೂ ಚಾಲ್ತಿಯಲ್ಲಿಲ್ಲ!  

ಫಸಲುವಿಮೆ ಪರಿಣಾಮಕಾರಿ ಆಗಬೇಕಾದರೆ, ಗೇಣಿಬೇಸಾಯ ಮಾಡುವ ರೈತರಿಗೂ ಫಸಲುವಿಮೆ ವಿಸ್ತರಿಸಬೇಕು ಮತ್ತು ಎಲ್ಲ ಮುಖ್ಯ ಬೆಳೆಗಳಿಗೂ ಫಸಲುವಿಮೆ ಒದಗಿಸಬೇಕು. ಫಸಲುವಿಮೆಗೆ ನೋಂದಾಯಿಸುವ ರೈತರು ಮಿಶ್ರಬೆಳೆ ಬೆಳೆಯುವುದನ್ನು ಕಡ್ಡಾಯಗೊಳಿಸಬೇಕು. ಕೆಲವು ಬೆಳೆಗಳ ಫಸಲು ಪ್ರಮಾಣದ ಬಗ್ಗೆ ದಶಕಗಳ ಮಾಹಿತಿ ಲಭ್ಯವಿಲ್ಲ; ಅಂತಹ ಬೆಳೆಗಳ ಕನಿಷ್ಠ ಫಸಲು ಪ್ರಮಾಣ ನಿರ್ಧರಿಸಲು ಲಭ್ಯವಿರುವ ಮಾಹಿತಿ ಬಳಸಬೇಕು. ಜೊತೆಗೆ, ಕಾಡುಪ್ರಾಣಿಗಳು, ಬೆಂಕಿ ಅಥವಾ ತೀವ್ರ ಚಳಿಯಿಂದಾದ ಫಸಲು ನಷ್ಟಕ್ಕೂ ವಿಮಾ ಪರಿಹಾರ ನೀಡಬೇಕು. ಫಸಲಿನ ಕೊಯ್ಲಿನ ನಂತರ, ಆಲಿಕಲ್ಲು ಮಳೆಯಂತಹ ಪ್ರಾಕೃತಿಕ ವಿಕೋಪದಿಂದ ಫಸಲು ನಷ್ಟವಾದರೆ, ಅದಕ್ಕೂ ವಿಮಾ ಪರಿಹಾರ ಕೊಡಬೇಕು. ಮಳೆಬಾರದೆ ಬಿತ್ತನೆ ಮಾಡದಿದ್ದರೆ ಅದನ್ನೂ ಬೆಳೆನಷ್ಟವೆಂದು ಪರಿಗಣಿಸಬೇಕು. ಪ್ರಫ ವಿಮಾ ಯೋಜನೆಯ ಎಲ್ಲ ಮಾಹಿತಿಯೂ ವಿಮಾಕಂಪೆನಿ ಮತ್ತು ಸರಕಾರಗಳ ಕೃಷಿ ಇಲಾಖೆಗಳ ವೆಬ್-ಸೈಟುಗಳಲ್ಲಿ ಸುಲಭವಾಗಿ ಲಭ್ಯವಿರಬೇಕು. ಗ್ರಾಮ ಪಂಚಾಯತು ಮತ್ತು ರೈತರನ್ನು ಫಸಲು ನಷ್ಟ ಅಂದಾಜಿಸುವ ಪ್ರಕ್ರಿಯೆಯಲ್ಲಿ ತೊಡಗಿಸುವ ಮೂಲಕ ಅದನ್ನು ಪಾರದರ್ಶಕವಾಗಿಸಬೇಕು. ಅಂತಿಮವಾಗಿ, ೧೫ ದಿನಗಳೊಳಗೆ ರೈತರ ದೂರುಗಳನ್ನು ಇತ್ಯರ್ಥ ಮಾಡುವ ವ್ಯವಸ್ಥೆ ಜ್ಯಾರಿಗೊಳಿಸಬೇಕು.

ಈ ಎಲ್ಲ ಸುಧಾರಣೆಗಳನ್ನು ಮಾಡಿದರೆ, ಪ್ರಧಾನಮಂತ್ರಿ ಫಸಲು ವಿಮಾ ಯೋಜನೆ ರೈತಸ್ನೇಹಿಯಾಗಿ, ಪ್ರಾಕೃತಿಕ ವಿಕೋಪಗಳಿಂದ ತತ್ತರಿಸುವ ರೈತರಿಗೆ ಅವರ ಸಂಕಟದ ಕಾಲದಲ್ಲಿ ಆಸರೆಯಾಗಲು ಸಾಧ್ಯ.  

ಫೋಟೋ ಕೃಪೆ: ಫಸ್ಟ್ ಪೋಸ್ಟ್ ಸುದ್ದಿ ವಾಹಿನಿ