ಬಡಿದಾಡಲು ಜನರು ಚುನಾಯಿಸಿಲ್ಲ

ರಾಜ್ಯ ಬಿಜೆಪಿಯ ಒಂದಷ್ಟು ಪ್ರಭೃತಿಗಳಿಗೆ ಜನರ ಸಂಕಟ ಇನ್ನೂ ಅರ್ಥವಾದಂತಿಲ್ಲ. ಜನಪರ ಕಾಳಜಿಯಿಟ್ಟುಕೊಂಡು ಅಹರ್ನಿಶಿ ದುಡಿಯಬೇಕು ಎಂಬ ಸಂಕಲ್ಪ ಅವರಲ್ಲಿ ಇನ್ನೂ ಗಟ್ಟಿಕೊಂಡಂತಿಲ್ಲ. ಒಂದೊಮ್ಮೆ ಹಾಗೆ ಆಗಿದ್ದಿದ್ದರೆ, ಈಗ ಅವರು ವರ್ತಿಸುತ್ತಿರುವ ರೀತಿಯಲ್ಲಿ ಅವರ ಮಾತು ಮತ್ತು ಧೋರಣೆ ಇರುತ್ತಿರಲಿಲ್ಲ. ಸರಕಾರವನ್ನು ನಡೆಸುತ್ತಿರುವವರು ತಮ್ಮ ನಿಗದಿತ ಪಥದಿಂದ ವಿಮುಖರಾಗದೆ ಹೆಜ್ಜೆ ಹಾಕುವಂತಾಗುವುದಕ್ಕೆ, ಅಭಿವೃದ್ಧಿ ಮತ್ತು ಜನಕಲ್ಯಾಣದ ನಿಟ್ಟಿನಲ್ಲಿ ಅವರನ್ನು ಸದಾ ಸನ್ನದ್ಧರಾಗಿರುವಂತೆ ಚುರುಕು ಮುಟ್ಟಿಸುವುದಕ್ಕಾಗಿ ಕಾರಣವಾಗಬೇಕಾದ ಬಿಜೆಪಿ ನಾಯಕರು ಸ್ವತಃ ಅಂತಃಕಲಹದಲ್ಲಿ ವ್ಯಸ್ತರಾಗಿಬಿಟ್ಟಿದ್ದಾರೆ. ಇವರಿಗೆ ಜನಕಲ್ಯಾಣಕ್ಕಿಂತಲೂ ವೈಯಕ್ತಿಕ ಹಿತಾಸಕ್ತಿಗಳ ಈಡೇರಿಕೆಯೇ ಹೆಚ್ಚಾಗಿರುವುದು ವಿಷಾದನೀಯ ಎನ್ನಲಡ್ದಿಯಿಲ್ಲ. ಇಷ್ಟೆಲ್ಲಾ ನಡೆಯುತ್ತಿದ್ದರೂ, ಸಂಬಂಧಪಟ್ಟವರಿಗೆ ಮೂಗುದಾರ ಹಾಕಿ ಸರಿದಾರಿಗೆ ತರಬೇಕಿದ್ದ ದೆಹಲಿಯಲ್ಲಿನ ಪಕ್ಷದ ವರಿಷ್ಟರು, ರಾಜ್ಯ ಬಿಜೆಪಿಗರ ಹಾರಾಟ ಮತ್ತು ಕೂಗಾಟಗಳನ್ನು ಮನರಂಜನೆ ಎಂದು ಭಾವಿಸಿ ಸುಮ್ಮನಿದ್ದುಬಿಟ್ಟಿದ್ದಾರಾ? ಎಂಬ ಸಂದೇಹ ಒಮ್ಮೊಮ್ಮೆ ಕಾಡುತ್ತದೆ. ಗದ್ದುಗೆಯಲ್ಲಿ ಪ್ರತಿಷ್ಟಾಪನೆಗೊಂಡಿರುವ ಆಡಳಿತ ಪಕ್ಷದಂತೆ, ಕಾಲಾನುಕಾಲಕ್ಕೆ ಅದರ ಕಿವಿಹಿಂಡಿ ಸರಿದಾರಿಯಲ್ಲಿ ನಡೆಸಬೇಕಾದ ಸಮರ್ಥ ಪ್ರತಿಪಕ್ಷವೂ ಇರಬೇಕಾದದ್ದು ಪ್ರಜಾಪ್ರಭುತ್ವದ ಆಶಯ ಮತ್ತು ನಿರೀಕ್ಷೆ.
ಆದರೆ ಕರ್ನಾಟಕದಲ್ಲಿ ಈ ಆಶಯ ನೆರವೇರುತ್ತಿಲ್ಲ ಎಂಬುದು ಹಸಿಮಣ್ಣಿನ ಮೇಲೆ ಗಾಜಿನಿಂದ ಬರೆದ ಅಕ್ಷರದಷ್ಟೇ ನಿಚ್ಚಳವಾದ ಸಂಗತಿಯಾಗಿದೆ. ಜನರ ಹಿತಾಸಕ್ತಿಯ ರಕ್ಷಣೆಯಲ್ಲಿ ಉದಾಸೀನ ತೋರಿದರೆ ಅಥವಾ ಚುನಾವಣೆಗೆ ಇನ್ನೂ ಸಾಕಷ್ಟು ಕಾಲವಿದೆಯಲ್ಲಾ, ಆಮೇಲೆ ನೋಡಿಕೊಂಡರಾಯಿತು ಎಂಬ ಧೋರಣೆಯಲ್ಲಿ ಅವರನ್ನು ನಿರ್ಲಕ್ಷಿಸಿದರೆ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಆದ ಗತಿಯೇ ಭವಿಷ್ಯದಲ್ಲಿ ಕರ್ನಾಟಕದ ಬಿಜೆಪಿಗೂ ಒದಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಈಗಲೂ ಕಾಲ ಮಿಂಚಿಲ್ಲ ಹೀಗೆ ಬಣ ಬಡಿದಾಟದಲ್ಲಿ ವ್ಯಸ್ತರಾಗಲು ಜನರು ತಮ್ಮನ್ನು ಚುನಾಯಿಸಿಲ್ಲ ಎಂಬ ಸತ್ಯವನ್ನು ರಾಜ್ಯ ಬಿಜೆಪಿಗರು ಇನ್ನಾದರೂ ಅರಿಯಲಿ, ಒಂದು ಕಾಲಕ್ಕೆ ‘ಶಿಸ್ತಿನ ಪಕ್ಷ’ ಎಂದು ಕರೆಸಿಕೊಳ್ಳುತ್ತಿದ್ದ ಬಿಜೆಪಿಯ ಒಡನಾಡಿಗಳು ಹೀಗೆ ಅಶಿಸ್ತಿಗೆ ಒಡ್ಡಿಕೊಳ್ಳುವುದು ತರವಲ್ಲ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೨-೦೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ