ಬದನೆಯಲ್ಲಿ ಕಾಯಿ ಕೊಳೆಯುವ ಸಮಸ್ಯೆ ನಿವಾರಣೆ ಹೇಗೆ?

ಬದನೆಯಲ್ಲಿ ಕಾಯಿ ಕೊಳೆಯುವ ಸಮಸ್ಯೆ ನಿವಾರಣೆ ಹೇಗೆ?

ಕರಾವಳಿಯ ಉಡುಪಿ ಜಿಲ್ಲೆ ಬದನೆ ಬೇಸಾಯಕ್ಕೆ ಹೆಸರುವಾಸಿ. ನೂರಾರು ವರ್ಷಗಳಿಂದಲೂ ಇಲ್ಲಿ ಬದನೆ ಬೇಸಾಯ ನಡೆಯುತ್ತಿದ್ದು, ಪ್ರಸಿದ್ಧ ಮಟ್ಟು ಗುಳ್ಳ ಇಲ್ಲಿಯ ಬೌಗೋಳಿಕ ಮಾನ್ಯತೆ ಪಡೆದ ತರಕಾರಿ. ಕಟಪಾಡಿ ಸಮೀಪದ ಮಟ್ಟು, ಬ್ರಹ್ಮಾವರದ ಉಪ್ಪೂರು ಸುತ್ತಮುತ್ತ, ಕೊಕ್ಕರ್ಣೆ, ಬೆನಗಲ್, ನೀಲಾವರ ಮುಂತಾದ ಕಡೆ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲವೆಂಬ ಮೂರು ಹಂಗಾಮುಗಳಲ್ಲೂ ಬದನೆ ಬೆಳೆಸುತ್ತಾರೆ. ಕರಾವಳಿಯ ಉಳಿದ ಕಡೆಗಳಲ್ಲೂ ಬದನೆ ಬೆಳೆಸುತ್ತಾರೆಯಾದರೂ ಪ್ರದೇಶ ಇಲ್ಲಿನಷ್ಟು ಇಲ್ಲ. ಈ ಪ್ರದೇಶಗಳಲ್ಲಿ ಬೆಳೆಸಲ್ಪಡುವ ಬದನೆಗೆ ಗುಳ್ಳ ಬದನೆ, ಊರ ಬದನೆ, ಸ್ಥಳೀಯ ತರಕಾರಿ ಎಂಬ ಖ್ಯಾತಿಯ ಮೇಲೆ ಉತ್ತಮ ಬೇಡಿಕೆ ಮತ್ತು ಬೆಲೆ ಇರುತ್ತದೆ.

ಒಂದು ಕಾಲದಲ್ಲಿ ಮೇಲಿನ ಪ್ರದೇಶಗಳಲ್ಲೆಲ್ಲಾ ೨೦೦-೩೦೦ ಎಕ್ರೆ ಸ್ಥಳದಲ್ಲಿ  ಪ್ರತೀಯೊಂದೂ ಮನೆಯವರೂ ತಪ್ಪದೇ ಬೆಳೆಸುತ್ತಿದ್ದ ಬದನೆ ಬೆಳೆ, ಇತ್ತೀಚಿನ ದಿನಗಳಲ್ಲಿ ಬಹಳಷ್ಟು  ಕಡಿಮೆಯಾಗಲಾರಂಭಿಸಿದೆ. ಹೆಚ್ಚಿನವರು ಬದನೆಯ ಸಹವಾಸವೇ ಬೇಡ ಎಂದು ಬಿಟ್ಟಿದ್ದಾರೆ. ಕಾರಣ, ಬದನೆಗೆ ಬರುವ ಕಾಯಿ ಕೊರಕ ಮತ್ತು ಕಾಯಿ ಕೊಳೆಯುವ ರೋಗ. ಬದನೆ ಬೆಳೆಸಲ್ಪಡುವ ಈ ಪ್ರದೇಶಗಳಲ್ಲಿ  ಸುತ್ತಾಡಿ, ಬದನೆ ಬೆಳೆಯುವ ಹೊಲವನ್ನು  ವೀಕ್ಷಿಸಿದರೆ  ತಿಳಿಯುತ್ತದೆ, ಈ ರೈತರು ಬೆಳೆಯುವುದಕ್ಕಿಂತ ಹೆಚ್ಚು ಪ್ರಮಾಣವನ್ನು ರೋಗದಿಂದ ನಷ್ಟಮಾಡಿಕೊಳ್ಳುತ್ತಿದ್ದಾರೆ ಎಂಬ ಸತ್ಯ. ಬದನೆ ಗಿಡದಲ್ಲಿ ಕಾಯಿಗಳು ಬೆಳೆಯುತ್ತಿದ್ದಂತೆಯೇ ಕೊಳೆತು ಹೋಗುವುದು, ಕ್ರಮೇಣ ಗಿಡವೇ ಬಾಡಿ ಸಾಯುವುದನ್ನು ಕಾಣಬಹುದು.

ಇದು ಯಾವ ಕಾರಣಕ್ಕೆ ಆಗುತ್ತದೆ, ಪರಿಹಾರ ಏನು ಎಂಬ ಬಗ್ಗೆ ಬಹುತೇಕ ರೈತರಿಗೆ ಮಾಹಿತಿ ಇಲ್ಲ. ಇಲ್ಲಿನ ಹೆಚ್ಚಿನ ತರಕಾರಿ ಬೆಳೆಗಾರರಿಗೆ ಸ್ಥಳೀಯ ಕೀಟನಾಶಕ, ಗೊಬ್ಬರ ಮಾರಾಟಗಾರರೇ ಬೆಳೆ ಸಲಹೆ ನೀಡುವವರಾಗಿದ್ದು, ಅವರ ತಿಳುವಳಿಕೆಯ ಮೇಲೆ ಕೊಟ್ಟ ಔಷಧಿ ಕೆಲವೊಮ್ಮೆ ಪರಿಣಾಮಕಾರಿಯಾದರೆ ಮತ್ತೆ ಕೆಲವೊಮ್ಮೆ ಫಲ ನೀಡದೆಯೂ ಇರುತ್ತದೆ.

ಇದು ಒಂದು ಬ್ಲೈಟ್ ರೋಗ  (Phomopsis Blight) ಬ್ಲೈಟ್ ಎಂದರೆ ಶಿಲೀಂದ್ರ ಜಾತಿಯ ಪರೋಪ ಜೀವಿಯಿಂದ  ಉಂಟಾಗುವ ಕಪ್ಪಗಾಗುವ, ಒಣಗುವ, ಕೊಳೆಯುವ ರೋಗ. ಇದು  ಎಲೆಗಳಿಗೆ, ಕಾಂಡಕ್ಕೆ, ಕಾಯಿಗಳಿಗೂ ಬರುತ್ತದೆ. ಮೊದಲಲ್ಲಿ ಸೋಂಕಿಗೊಳಗಾದ ಭಾಗ ಮೆದುವಾಗಿ, ಕೊಳೆತ ನೀರಿನ ತರಹ (Water Decayed) ಆಗಿ ಕ್ರಮೇಣ ಕಪ್ಪಗಾಗುತ್ತದೆ. ಇದು ಬೆಂದಂತೆ ಕಂಡು ಬರುತ್ತದೆ. ಕಾಯಿಯ ಯಾವುದೇ ಭಾಗಕ್ಕೂ ಇದು ಬಾಧಿಸಬಹುದು. ಪ್ರಾರಂಭದಲ್ಲಿ ಸಣ್ಣದಾಗಿದ್ದು ಒಂದೆರಡು ದಿನದಲ್ಲಿ  ದೊಡ್ದ ಪ್ರಮಾಣದಲ್ಲಿ  ವಿಸ್ತರಿಸುತ್ತದೆ. ಬದನೆಯಲ್ಲಿ ಇದು ಒಂದು ದೊಡ್ದ ರೋಗವೆಂದೇ ಹೇಳಬಹುದು.

ಇದಕ್ಕೆ ಕಾರಣ ಒಂದು ಶಿಲೀಂದ್ರ. ಸಾಮಾನ್ಯವಾಗಿ ಈ ತೊಂದರೆ ಇರುವ ಪ್ರದೇಶದಿಂದ ಬೀಜ ತಂದು ಎಲ್ಲಿ ಬೆಳೆಸಿದರೂ ಈ ರೋಗ ತೊಂದರೆ ಬರುತ್ತದೆ. ಎಲ್ಲಿ ಈ ರೋಗ ಇದೆಯೋ ಅಲ್ಲಿ ವರ್ಷದಿಂದ ವರ್ಷಕ್ಕೆ ರೋಗ ಹೆಚ್ಚುತ್ತಲೇ ಇರುತ್ತದೆ. ಯಾವ ರೈತನೂ ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ವರದಿ ಇಲ್ಲ.

ಇದು ಶಿಲೀಂದ್ರ ರೋಗವಾಗಿದ್ದು, ಬೀಜ ಮತ್ತು ಮಣ್ಣಿನ ಮೂಲಕ ಪ್ರಸಾರವಾಗುತ್ತದೆ. ಸಾಮಾನ್ಯವಾಗಿ ಬೀಜದಿಂದ ಸಸ್ಯಾಭಿವೃದ್ದಿ ಮಾಡುವ ಎಲ್ಲಾ ಬೀಜಕ್ಕೂ ಬೀಜೋಪಚಾರ  ಮಾಡಬೇಕು ಎಂಬುದಾಗಿ ವಿಜ್ಞಾನ ಹೇಳುತ್ತದೆ. ಇದನ್ನು ರಾಸಾಯನಿಕವಾಗಿಯೂ ಮಾಡಬಹುದು. ಜೈವಿಕವಾಗಿಯೂ ಮಾಡಬಹುದು. ರಾಸಾಯನಿಕ ಬೀಜೋಪಚಾರದಲ್ಲಿ  ಥೈರಂ ಅಥವಾ ಕ್ಯಾಪ್ಟಾಫ್ (Thiram or Captof 2.5 gram/ kg) ಮೂಲಕವೂ, ಜೈವಿಕವಾಗಿ ಟ್ರೈಕೋಡರ್ಮಾ, ಸುಡೋಮೋನಸ್ ಮುಂತಾದವುಗಳಿಂದ ಉಪಚಾರ ಮಾಡಿ ನಂತರ ಬಿತ್ತನೆ ಮಾಡಬೇಕು. ಬೀಜಗಳನ್ನು ಯಾವ ಗಿಡದಲ್ಲಿ ಈ ರೋಗ ಸೋಂಕು ತಗಲಿಲ್ಲವೋ ಅದರಿಂದ ಮಾತ್ರ ಆಯ್ಕೆ ಮಾಡಬೇಕು.

ಮಣ್ಣಿನಲ್ಲಿ ಈ ರೋಗಾಣು ಸುಪ್ತಾವಸ್ತೆಯಲ್ಲಿ ಇರುತ್ತದೆ. ಒಂದೇ ಭೂಮಿಯಲ್ಲಿ ಪ್ರತೀ ವರ್ಷ ಬದನೆ ಬೆಳೆದರೆ ಅಲ್ಲಿ ವರ್ಷದಿಂದ ವರ್ಷಕ್ಕೆ ರೋಗ ಹೆಚ್ಚುತ್ತದೆ. ಅದಕ್ಕೆ ಸ್ಥಳವನ್ನು ಬದಲಿಸಬೇಕು. ಬದನೆ ಬೆಳೆದ ಸ್ಥಳದಲ್ಲಿ ಹುರುಳಿ, ನೆಲಕಡ್ಲೆ, ಭತ್ತ, ಅವರೆ ಮುಂತಾದ ಬೆಳೆಗಳನ್ನು ಬೆಳೆಸಿ ಬೆಳೆ ಪರಿವರ್ತನೆಯನ್ನು ಅಗತ್ಯವಾಗಿ ಮಾಡಬೇಕು. ಸಾಮಾನ್ಯವಾಗಿ ಹೆಚ್ಚಿನ ಬೆಳೆಗಾರರು ರೋಗ ತಗಲಿದ ಕಾಯಿಯನ್ನು ಸಸ್ಯವನ್ನು ಹೊಲದಲ್ಲೇ ಬಿಡುತ್ತಾರೆ. ಅದು ರೋಗ ಸೋಂಕು ಉಲ್ಬಣವಾಗಲು ಸಹಕಾರಿ. ಅದನ್ನು ದೂರ ಒಯ್ದು ಸುಡಬೇಕು. ಬೆಳೆ ಬೆಳೆಸುವ ಮುನ್ನ ಹೊಲವನ್ನು ಚೆನ್ನಾಗಿ ಉಳುಮೆಮಾಡಿ ಅಷ್ಟೂ ಪ್ರದೇಶಕ್ಕೆ ಪಾರದರ್ಶಕ ಪಾಲಿಥೀನ್ ಹೊದಿಕೆ ಹಾಕಿ ಒಂದು ವಾರ ಕಾಲ ಬಿಸಿಲಿಗೆ ಒಡ್ಡಿ ಸೋಲರೈಸೇಶನ್ ಮಾಡಬೇಕು. ಇದರಿಂದ  ರೋಗಕಾರಕ ಜೀವಾಣು ನಾಶವಾಗುತ್ತದೆ. ಇದು ಕಷ್ಟವಾದ ಪಕ್ಷದಲ್ಲಿ  ಪ್ರತೀ  ಚದರ ಮೀಟರಿಗೆ ೫ ಲೀ. ನಂತೆ ಕೃಷಿ ಬಳಕೆಯ ಹೈಡ್ರೋಜನ್ ಪೆರಾಕ್ಸೈಡ್ (H2O2) ದ್ರಾವಣದಿಂದ ಉಪಚರಿಸಿದರೆ  ಮಣ್ಣು ಜನ್ಯ ಯಾವುದೇ ಜೀವಿಗಳು ಉಳಿಯಲಾರವು. ಹೈಡ್ರೋಜನ್ ಪೆರಾಕ್ಸೈಡ್ ಮೂಲಕ  ಉಪಚಾರ ಮಾಡಿದಲ್ಲಿ ೪-೬ ಗಂಟೆ ಬಿಟ್ಟು ನಂತರ ಆ ಮಣ್ಣಿನಲ್ಲಿ ನಾಟಿ ಮಾಡಬಹುದು. ಬೀಜವನ್ನು  ಸುಡುಮಣ್ಣಿನಲ್ಲಿ ಬಿತ್ತಿ ಸಸಿ ಮಾಡಿಕೊಳ್ಳಬೇಕು. ಇದು ಸುಟ್ಟ ಮಣ್ಣಾದ ಕಾರಣ ಅದರಲ್ಲಿ ರೋಗಾಣುಗಳು ಇರಲಾರವು. ರೋಗ ಆದ ಕಾರಣ  ಇದಕ್ಕೆ ರೋಗ ನಾಶಕ ಸಿಂಪರಣೆ  ಮಾಡಬೇಕೇ ವಿನಹ ಕೀಟನಾಶಕದಿಂದ ಇದು ನಿಯಂತ್ರಣವಾಗುವುದಿಲ್ಲ. ಡೈಥೇನ್ Z78, ಶಿಲೀಂದ್ರ ನಾಶಕವನ್ನು ೭-೧೦ ದಿನಕೊಮ್ಮೆ ಸಿಂಪರಣೆ ಮಾಡಬೇಕು. ರೋಗವು ಬಹುತೇಕ ನಾಟಿ ತಳಿಗಳನ್ನು ಬೆಳೆಸುವ ಪ್ರದೇಶಕ್ಕೆ ಪಸರಿಸಿದ್ದು ಎಲ್ಲರೂ ಇದಕ್ಕೆ ಸೂಕ್ತ ಬೀಜ, ಬೀಜೋಪಚಾರ, ಹೊಲದ ಸಿದ್ದತೆ ಮಾಡದೇ ಇದ್ದಲ್ಲಿ, ಮುಂದೊಂದು ದಿನ ಈ ಬೀಜವೇ ಅಳಿವಿನಂಚಿಗೆ ಬರಲೂಬಹುದು. 

ಚಿತ್ರದಲ್ಲಿ: ರೋಗ ಬಾಧಿತ ಬದನೆ ಕಾಯಿಗಳು, ಬದನೆ ಗಿಡಗಳು ಹಾಗೂ ಎಲೆಗಳು

ಚಿತ್ರಗಳು: ರಾಧಾಕೃಷ್ಣ ಹೊಳ್ಳ, ವೇಣೂರು