ಬದಲಾವಣೆ ನಮ್ಮಿಂದಲೇ ಆಗಲಿ...!

ಬದಲಾವಣೆ ನಮ್ಮಿಂದಲೇ ಆಗಲಿ...!

ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು. “ಊಟಕ್ಕೆ ಎಷ್ಟಾಗುತ್ತದೆ?”

ಮಾಲಿಕ ಉತ್ತರಿಸಿದರು…”ಮೀನು ಬೇಕಿದ್ದರೆ 50 ರೂಪಾಯಿ, ಮೀನು ಬೇಡವಾದರೆ 20 ರೂಪಾಯಿ…”

ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ ಹತ್ತು ರೂಪಾಯಿಯನ್ನು ತೆಗೆದು ಮಾಲಿಕನತ್ತ ಚಾಚುತ್ತಾ…”ನನ್ನ ಕೈಯಲ್ಲಿ ಇದುವೇ ಇರೋದು..ಇದಕ್ಕೆ ಸಿಕ್ಕುವುದು ಕೊಟ್ಟರೆ ಸಾಕು.. ಬರೀ ಅನ್ನವಾದರೂ ಸಾಕು.. ಹಸಿವು ನೀಗಿದರೆ ಸಾಕು.. ನಿನ್ನೆ ಮಧ್ಯಾಹ್ನದಿಂದ ಏನೂ ತಿಂದಿಲ್ಲ…” ಅಷ್ಟು ಹೇಳಬೇಕಾದರೆ ಅವರ ಮಾತುಗಳು ತಡವರಿಸಿದವು, ಕಣ್ಣುಗಳು ನೀರಾಡಿದವು.

ಹೋಟೆಲ್ ಮಾಲಿಕ ಮೀನು ಬಿಟ್ಟು ಬಾಕಿ ಎಲ್ಲಾ ಅವರಿಗೆ ಬಡಿಸಿದರು. ನಾನು ಅವರು ಊಟ ಮಾಡುವುದನ್ನೇ ನೋಡಿ ನಿಂತೆ. ಅವರ ಕಣ್ಣಿನಿಂದ ಕಣ್ಣೀರು ಸಣ್ಣದಾಗಿ ಕೆಳ ಜಾರುತಿತ್ತು. ಅದನ್ನು ಉಜ್ಜಿಕೊಂಡು ಸಣ್ಣ ಮಗುವಿನಂತೆ ನಿಧಾನವಾಗಿ ಊಟಮಾಡುವುದನ್ನ ಕಂಡ ಪಕ್ಕದಲ್ಲಿ ಕುಳಿತ ವ್ಯಕ್ತಿ ಕೇಳಿದರು.. “ನೀವ್ಯಾಕೆ ಅಳುತಿದ್ದೀರಾ?”

ಅವರು ಕೇಳಿದ ವ್ಯಕ್ತಿಯ ಮುಖವನ್ನ ನೋಡಿ ಕಣ್ಣನ್ನು ಉಜ್ಜಿಕೊಂಡು ಹೇಳಿದರು..”ನನ್ನ ಕಳೆದು ಹೋದ ಜೀವನವನ್ನು ನೆನೆದು ಕಣ್ಣೀರು ಬಂತು.. ಮೂರು ಮಕ್ಕಳು ನನಗೆ ಎರಡು ಗಂಡು, ಒಂದು ಹೆಣ್ಣು… ಮೂರು ಜನರಿಗೂ ಒಳ್ಳೆಯ ಕೆಲಸವಿದೆ... ನನಗೆ ಸಿಕ್ಕಿದ ಎಲ್ಲಾ ಸೌಭಾಗ್ಯವನ್ನು ನಾನು ಅವರಿಗೆ ನೀಡಿದೆ.... ಅದಕ್ಕಾಗಿ ನಾನು ಕಳೆದು ಕೊಂಡದ್ದು ನನ್ನ ಯೌವನವನ್ನು.... ಇಪ್ಪತ್ತೆಂಟು ವರುಷದ ಪ್ರವಾಸ ಜೀವನ....ಎಲ್ಲದಕ್ಕೂ ನನ್ನ ಬೆನ್ನೆಲುಬಾಗಿದ್ದ ನನ್ನ ಪತ್ನಿ ಮೊದಲೇ ನನ್ನನ್ನು ಒಂಟಿಯಾಗಿಸಿ ಹೊರಟು ಹೋದಳು.... ಆಸ್ತಿ ಪಾಲು ಮಾಡುವ ಸಂಧರ್ಭ ಎದುರಾಯಿತು ನನ್ನ ಮಕ್ಕಳು, ಸೊಸೆಯಂದಿರಿಗೆ. ಪಾಲು ಮಾಡುತಿದ್ದಂತೆ ನಾನು ಅವರಿಗೆ ಭಾರವಾಗತೊಡಗಿದೆ.. ಮಾಡಿದ್ದಕ್ಕೆ, ಮುಟ್ಟಿದ್ದಕ್ಕೆಲ್ಲಾ ನನ್ನನ್ನು ದೂರಲಾರಂಭಿಸಿದರು. ನಾನು ಒಬ್ಬ ಮುದುಕನಲ್ವಾ? ಆ ಒಂದು ಪರಿಗಣನೆಯಾದರೂ ಕೊಡಬಹುದಿತ್ತಲ್ಲಾ? ಅದೂ ಇಲ್ಲ. ಅವರ ಅಹಾರ ಸೇವನೆಯ ನಂತರವೇ ನಾನು ಊಟಕ್ಕೆ ಕುಳಿತುಕೊಳ್ಳುತಿದ್ದೆ. ಆದರೂ ಬಯ್ಯುತಿದ್ದರು. ತಿನ್ನುವಾಗ ಆಹಾರಕ್ಕೆ ಕಣ್ಣೀರು ಬಿದ್ದು ಅದು ಉಪ್ಪು ರಸ‌ವಾಗುತಿತ್ತು. ತಿನ್ನುವಾಗ ಮೊಮ್ಮಕ್ಕಳು ಕೂಡಾ ನನ್ನಲ್ಲಿ ಮಾತಾಡುತ್ತಿರಲಿಲ್ಲ. ಕಾರಣ ಮಾತನಾಡುವುದ ಕಂಡರೆ ಮಕ್ಕಳು ಅವರನ್ನು ಬಯ್ಯುತಿದ್ದರು. ಯಾವಾಗಲೂ ಅವರದ್ದು ಒಂದೇ ಮಾತು ಎಲ್ಲಿಗಾದರು ಹೊರಟು ಹೋಗಬಾರದೇ ಎಂದು. ಈ ಕಲ್ಲು ಭೂಮಿಯಲ್ಲಿ ರಾತ್ರಿ ಹಗಲು ಎನ್ನದೆ ಬೆವರು ಸುರಿಸಿ ದುಡಿದು ಉಂಟುಮಾಡಿದ ಹಣದಲ್ಲಿ, ಸರಿಯಾಗಿ ತಿನ್ನದೆಯೂ ಮಲಗದೆಯೂ ನಾನೂ ಅವಳೂ ಕೂಡಿ ಇಟ್ಟ ಹಣದಲ್ಲಿ ಕಟ್ಟಿದ ಈ ಮನೆ, ಅವಳ ನೆನಪುಗಳು ಮಲಗಿರೋದು ಆ ಮನೆಯಲ್ಲಿಯೇ. ಆ ಮನೆ ಬಿಟ್ಟು ಹೋಗಲು ಮನಸ್ಸು ಕೇಳಲಿಲ್ಲ. ಆದರೆ ಏನು ಮಾಡಲಿ, ನಿನ್ನೆ ಹೊರಟು ಬಿಟ್ಟೆ. ಸೊಸೆಯ ಒಡವೆ ಕದ್ದೆ ಎಂದು ಕಳ್ಳನ ಪಟ್ಟ ಕಟ್ಟಿ ಮಗ ನನ್ನಲ್ಲಿ ಸಿಟ್ಟುಗೊಂಡ. ಆದರೆ ಹೊಡೆಯಲಿಲ್ಲ ಅದೇ ನನ್ನ ಭಾಗ್ಯ. ಇನ್ನೂ ಮತ್ತೆ ಅಲ್ಲಿ ನಿಂತರೆ ಅದೂ ನಡೆಯಬಹುದು. ‘ಅಪ್ಪನಿಗೆ ಹೊಡೆದ ಮಗ’ ಎಂಬ ಹೆಸರು ಬರಬಾರದಲ್ಲ. ನನಗೆ ಸಾಯಲು ಭಯವಿಲ್ಲ ಅಲ್ಲದೆ ಇನ್ನು ನಾನು ಯಾರಿಗಾಗಿ ಬದುಕಬೇಕು.”

ಅವರು ಪೂರ್ತಿ ಊಟ ಮಾಡದೆ ಎದ್ದರು. ತನ್ನಲ್ಲಿರುವ ಹತ್ತು ರೂಪಾಯಿ ಮಾಲಿಕರೆಡೆಗೆ ಚಾಚಿದರು. ಮಾಲಿಕರೆಂದರು “ಬೇಡ ಕೈಯಲ್ಲಿ ಇರಲಿ. ಯಾವಾಗ ಬೇಕಿದ್ದರು ನೀವು ಇಲ್ಲಿಗೆ ಬರಬಹುದು. ನಿಮಗೆ ಬೇಕಾದ ಊಟ ಇಲ್ಲಿ ಇರುತ್ತದೆ."

ಆದರೆ ಆ ವ್ಯಕ್ತಿ ಆ ಹತ್ತು ರೂಪಾಯಿ ಅಲ್ಲಿ ಇಟ್ಟು ಹೇಳಿದರು, “ತುಂಬಾ ಸಂತೋಷವಾಯಿತು ನಿಮ್ಮ ಉಪಕಾರಕ್ಕೆ, ಏನೂ ಅನ್ಯಥಾ ತಿಳಿಯದಿರಿ. ಸ್ವಾಭಿಮಾನ ನನ್ನನ್ನು ಬಿಡುತ್ತಿಲ್ಲ. ಬರ್ತೀನಿ ಇನ್ನೊಮ್ಮೆ ಕಾಣುವಾ” ಎಂದು ಅವರ ಗಂಟನ್ನು ಎತ್ತಿಕೊಂಡು ಎಲ್ಲಿಗೆಂದಿಲ್ಲದೇ ಅವರಷ್ಟಕೆ ನಡೆದು ಹೋದರು.

ಆ ವ್ಯಕ್ತಿ ನನ್ನ ಮನಸಿಗೆ ಉಂಟು ಮಾಡಿದ ಆ ಗಾಯ ಈಗಲೂ ಒಣಗಲಿಲ್ಲ. ಅದ್ಯಾಕೆ ಎಲ್ಲಾ ಹಸುರು ಎಲೆಗಳೂ ಒಂದು ದಿನ ಹಣ್ಣೆಲೆಯಾಗುತ್ತೆಂದು ಯಾರು ಚಿಂತಿಸುತ್ತಿಲ್ಲ? ಈ ಬರಹವನ್ನು ಸಾಧ್ಯವಾದಷ್ಟು ಮಂದಿಗೆ ಹಂಚಿಕೊಳ್ಳುತ್ತಿರಿ. ಏಕೆಂದರೆ ‘ಬದಲಾವಣೆ ನಮ್ಮಿಂದಲೇ ಪ್ರಾರಂಭ ಆಗಲಿ...!’

ಸೂಚನೆ: ಈ ಬರಹವು ಸಾಮಾಜಿಕ ಜಾಲತಾಣದಲ್ಲಿ ನನಗೆ ದೊರೆಯಿತು. ಆದರೆ ಬರೆದವರ ಹೆಸರು ಇರಲಿಲ್ಲ. ಆ ಅಜ್ಞಾತ ಬರಹಗಾರನಿಗೆ ಕೃತಜ್ಞತೆ ಸಲ್ಲಿಸುತ್ತಾ ಇಲ್ಲಿ ಹಂಚಿಕೊಂಡಿರುವೆ. ಮನೆಯಲ್ಲಿ ವಯಸ್ಸಾದವರು ಇರುವುದು ಒಂದು ಯೋಗ. ಅವರ ಅನುಭವದ ಸಾರ, ಬದುಕು ನಮಗೆ, ನಮ್ಮ ಮಕ್ಕಳಿಗೆ ಪಾಠವಾಗಬೇಕು. ಅಜ್ಜ-ಅಜ್ಜಿಯರ ಜೊತೆ ಒಡನಾಟ ಮೊಮ್ಮಕ್ಕಳಿಗೆ ಅಷ್ಟೇ ಅಲ್ಲ ಆ ಹಿರಿಯ ಜೀವಗಳಿಗೂ ಆನಂದ ತರುತ್ತದೆ. ಅಲ್ಲವೇ?

(ಸಂಗ್ರಹ) ಸಂತೋಷ್ ಕುಮಾರ್, ಸುರತ್ಕಲ್

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ