ಬದಲಿಮೇವಿನ ಸಂಶೋಧನೆಗೆ ೫೦ ವರುಷ! ಆದರೂ ಮೇವು ಕೊರತೆ ನಿರಂತರ

ಬದಲಿಮೇವಿನ ಸಂಶೋಧನೆಗೆ ೫೦ ವರುಷ! ಆದರೂ ಮೇವು ಕೊರತೆ ನಿರಂತರ

ತಮಿಳ್ನಾಡಿನ ೨೦೧೬-೧೭ರ ಬರಗಾಲವನ್ನು ಶತಮಾನದ ಅತ್ಯಂತ ದಾರುಣ ಬರಗಾಲ ಎನ್ನಲಾಗಿದೆ. ಆಗ, ತೂತುಕುಡಿಯ ಮಂಗಳಗಿರಿ ಗ್ರಾಮದ ಡಿ. ಕಿಂಗ್ಸ್ ಲೇ ಅವರಿಗೆ ತಮ್ಮ ೧೫ ದನಗಳಿಗೆ ಮೇವು ಒದಗಿಸುವುದು ಹೇಗೆಂಬುದೇ ಚಿಂತೆಯಾಗಿತ್ತು.

“ಹಾಗಾಗಿ ನಾನು ಹೈಡ್ರೊಫೋನಿಕ್ಸ್ ಜೋಳ ಬೆಳೆಸಲು ನಿರ್ಧರಿಸಿದೆ” ಎನ್ನುತ್ತಾರೆ ಕಿಂಗ್ಸ್ ಲೇ. ಈ ತಂತ್ರಜ್ನಾನದ ಅನುಸಾರ, ಮಣ್ಣಿಲ್ಲದೆ ಜೋಳ ಬೆಳೆಸಬಹುದು; ನೀರಿನಲ್ಲಿ ಕರಗಿಸಿದ ಖನಿಜ ಪೋಷಕಾಂಶಗಳನ್ನು ಸಸ್ಯಗಳಿಗೆ ಒದಗಿಸಿದರಾಯಿತು. ಹೈಡ್ರೊಫೋನಿಕ್ಸ್ ಘಟಕ ಶುರು ಮಾಡಲಿಕ್ಕಾಗಿ, ಕೃಷಿ ವಿಜ್ನಾನ ಕೇಂದ್ರದಿಂದ ೧೬ ಪ್ಲಾಸ್ಟಿಕ್ ಟ್ರೇಗಳನ್ನು ತಂದರು ಕಿಂಗ್ಸ್ ಲೇ. ಅವನ್ನು ಪೋಷಕಾಂಶಭರಿತ ನೀರಿನಿಂದ ತುಂಬಿಸಿ, ಮೊಳಕೆ ಬರಿಸಿದ ಜೋಳದ ಬೀಜಗಳನ್ನು ಆ ನೀರಿಗೆ ಚಿಲ್ಲಿದರು. ಕೇವಲ ಹತ್ತು ದಿನಗಳಲ್ಲಿ ಜೋಳದ ಸಸಿಗಳು ೩೦ ಸೆ.ಮೀ. ಎತ್ತರಕ್ಕೆ ಬೆಳೆದು, ಎಳೆ ಕಾಳುಗಳು ಮೂಡಿ, ಕೊಯ್ಲಿಗೆ ತಯಾರಾದವು!

ಹೈನಪಶುಗಳಿಗೆ ಬದಲಿಮೇವು ಶೋಧಿಸಲಿಕ್ಕಾಗಿ ಕಳೆದ ೫೦ ವರುಷಗಳಿಂದ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆ ಚಾಲ್ತಿಯಲ್ಲಿದೆ – ನವದೆಹಲಿಯ ಭಾರತೀಯ ಕೃಷಿ ಸಂಶೋಧನ ಮಂಡಲಿ (ಐಸಿಎಆರ್) ಮತ್ತು ಝಾನ್ಸಿಯ ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಗಳ ಆಶ್ರಯದಲ್ಲಿ. ಆ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾದ ಸುಮಾರು ೨೦೦ ಬದಲಿ ಮೇವುಗಳಲ್ಲಿ ಹೈಡ್ರೊಫೋನಿಕ್ಸ್ “ದಿಡೀರ್ ಜೋಳ”ವೂ ಸೇರಿದೆ.

ಆ ಯೋಜನೆಯ ಬಹುಪಾಲು ಅನುಶೋಧನೆಗಳ ಉದ್ದೇಶ ಮೇವಿನ ಬೆಳೆಗಳ ಪೋಷಕಾಂಶ ಪ್ರಮಾಣ ಮತ್ತು ಉತ್ಪಾದಕತೆ ಹೆಚ್ಚಿಸುವುದು. ಉದಾಹರಣೆಗೆ ಅಜೋಲಾ. ನೀರು ನಿಂತ ಹೊಂಡಗಳಲ್ಲಿ ಮತ್ತು ಭತ್ತದ ಹೊಲಗಳಲ್ಲಿ ಬೆಳೆಯುತ್ತದೆ ಈ ಸಸ್ಯ. ಇತರ ಹಲವು ಮೇವಿನ ಬೆಳೆಗಳಿಗೆ ಹೋಲಿಸಿದಾಗ ಇದರಲ್ಲಿ ಪ್ರೊಟೀನಿನ ಪ್ರಮಾಣ ಶೇಕಡಾ ೧೯ರಿಂದ ಶೇ.೩೦ರಷ್ಟು ಜಾಸ್ತಿ. ಇದರ ತಾಜಾ ಅಥವಾ ಒಣಗಿಸಿದ ಎಲೆಗಳನ್ನು ಹೈನಪಶುಗಳಿಗೆ ಆಹಾರವಾಗಿ ತಿನ್ನಿಸಬಹುದು. ಆದರೆ ಇದನ್ನು ದೀರ್ಘಾವಧಿ ಸಂಗ್ರಹಿಸಿಡಲು ಸಾಧ್ಯವಿಲ್ಲ.

ಎರಡನೆಯ ಬದಲಿಮೇವು ಮೆಸ್-ಕ್ವಟ್ ಕೋಡುಗಳು. ಈ ಸಸ್ಯ ಒಣ ಮತ್ತು ಅರೆಒಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಶೇ.೧೨ರಷ್ಟು ಪ್ರೊಟೀನ್ ಮತ್ತು ಶೇ.೧೫ರಷ್ಟು ಸಕ್ಕರೆಯಂಶ ಹೊಂದಿರುವ ಇದರ ಕೋಡುಗಳನ್ನು ಧಾನ್ಯದ ಹುಡಿಗಳ ಬದಲಾಗಿ ಹೈನಪಶುಗಳಿಗೆ ತಿನಿಸಬಹುದು. ಆದರೆ ಇದನ್ನು ಬೆಳೆಯಲು ಜಾಸ್ತಿ ನೀರು ಅಗತ್ಯ.

ಅದೇನಿದ್ದರೂ, ಮಂಗಳಗಿರಿಯಿಂದ ಕೆಲವೇ ಕಿಮೀ ದೂರದಲ್ಲಿರುವ ವಿಲಾತಿಕುಲಂ ತಾಲೂಕಿನ ರೈತರು ಮೆಸ್-ಕ್ವಟ್ ಸೃಷ್ಟಿಸಿದ ವಿಷಮಚಕ್ರದಲ್ಲಿ ಸಿಲುಕಿದರು. ಈ ಸಸ್ಯವು ತನ್ನ ಬೇರುಗಳನ್ನು ಮಣ್ಣಿನಾಳಕ್ಕೆ ಇಳಿಸುವ ಮೂಲಕ ಅಂತರ್ಜಲಮಟ್ಟ ಕ್ಷಿಪ್ರವಾಗಿ ಕುಸಿಯುವಂತೆ ಮಾಡುವ ಅನಾಹುತಕಾರಿ ಸಸ್ಯ. “ದನಗಳಿಗೆ ಬಲಿತ ಮೆಸ್-ಕ್ವಟ್ ಕೋಡುಗಳೆಂದರೆ ಪಂಚಪ್ರಾಣ. ಆದರೆ ಅದರ ಗಡುಸಾದ ಬೀಜಗಳನ್ನು ದನಗಳು ಜೀರ್ಣಿಸಿಕೊಳ್ಳಲಾರವು. ಹಾಗಾಗಿ ಆ ಬೀಜಗಳು ಸೆಗಣಿಯಲ್ಲಿ ಹೊರಕ್ಕೆ ಬಂದು, ಆ ಸಸ್ಯದ ಪ್ರಸಾರಕ್ಕೆ ಕಾರಣವಾಗುತ್ತವೆ” ಎಂದು ಮಾಹಿತಿ ನೀಡುತ್ತಾರೆ ವಿ. ಶ್ರೀನಿವಾಸನ್, ಹಿರಿಯ ವಿಜ್ನಾನಿ, ಕೃಷಿ ವಿಜ್ನಾನ ಕೇಂದ್ರ, ತೂತುಕುಡಿ. ಅಲ್ಲಿನ ಸಮುದ್ರತೀರ ಪ್ರದೇಶದಲ್ಲಿ ವೇಗವಾಗಿ ಹರಡುತ್ತಿದೆ ಈ ಸಸ್ಯ.

ಈ ವಿಷಮಚಕ್ರವನ್ನು ಕೊನೆಗಾಣಿಸಲಿಕ್ಕಾಗಿ ೨೦೦೭ರಲ್ಲಿ ಅಲ್ಲಿನ ವಿಜ್ನಾನಿಗಳು ಶೋಧಿಸಿದ ತಂತ್ರ: ಬಲಿತ ಮೆಸ್-ಕ್ವಟ್ ಕೋಡುಗಳನ್ನು ಹುಡಿ ಮಾಡಿ ಪಶುಗಳಿಗೆ ಆಹಾರವಾಗಿ ನೀಡುವುದು. “ಮೆಸ್-ಕ್ವಟ್ ಕೋಡಿನ ಹುಡಿಯನ್ನು ಪಶುಆಹಾರವಾಗಿ ಕೊಡಲು ಶುರು ಮಾಡಿದ ನಂತರ ನನ್ನ ದನಗಳು ದಿನಕ್ಕೆ ಅರ್ಧ ಲೀಟರ್ ಹಾಲು ಜಾಸ್ತಿ ಕೊಡುತ್ತಿವೆ. ಅದಲ್ಲದೆ, ದನಗಳ ಹಾಲು ಹೆಚ್ಚು ದಪ್ಪವಾಗಿದೆ” ಎಂದು ತಿಳಿಸುತ್ತಾರೆ, ವಿಲಾತಿಕುಲಂ ತಾಲೂಕಿನ ಕೃಷಿಕ ಎಂ. ಮಾದಸ್ವಾಮಿ. ಮೆಸ್-ಕ್ವಟ್ ಕೋಡಿನ ಮಾರಾಟದಿಂದಲೂ ಆದಾಯ ಗಳಿಸಲು ಅವರಿಗೆ ಸಾಧ್ಯವಾಗಿದೆ. ಪ್ರತಿದಿನ ಮೆಸ್-ಕ್ವಟ್ ಕೋಡುಗಳನ್ನು ಸಂಗ್ರಹಿಸಿ, ಸ್ಥಳೀಯ ಮಿಲ್ಲಿನ ಮಾಲೀಕನಿಗೆ ಕಿಲೋಕ್ಕೆ ರೂ.೬ ದರದಲ್ಲಿ ಅವರು ಮಾರುತ್ತಿದ್ದಾರೆ. “ಜಿಲ್ಲೆಯ ಬಹುಪಾಲು ರೈತರು ಈಗ ದನಗಳಿಗೆ ಮೆಸ್-ಕ್ವಟ್ ಕೋಡಿನ ಹುಡಿಯನ್ನೇ ತಿನಿಸುತ್ತಿದ್ದಾರೆ. ಯಾಕೆಂದರೆ ಇದು ಕಿಲೋಕ್ಕೆ ೧೬ ರೂಪಾಯಿ ಬೆಲೆಗೆ ಸಿಗುತ್ತದೆ. ಗೋಧಿ ಅಥವಾ ಸಜ್ಜೆ ಹುಡಿಗೆ ಬೆಲೆ ಜಾಸ್ತಿ, ಕಿಲೋಕ್ಕೆ ೨೨ ರೂಪಾಯಿ” ಎನ್ನುತ್ತಾರೆ ಶ್ರೀನಿವಾಸನ್.

ಇತರ ದೇಶಗಳು ಪಶುಮೇವಿನ ಕೊರತೆ ನಿವಾರಿಸಲು ಕಾರಣವಾದ ಬದಲಿಮೇವುಗಳ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿವೆ. ಉದಾಹರಣೆಗೆ ಮುಳ್ಳಿಳ್ಳದ ಕಳ್ಳಿ ಗಿಡ. ಪುಣೆಯ ಲಾಭರಹಿತ ಸಂಸ್ಥೆ ಬೈಫ್ ಅಭಿವೃದ್ಧಿ ಸಂಶೋಧನಾ ಪ್ರತಿಷ್ಠಾನವು ೨೦೧೫ರಲ್ಲಿ ಇದರ ಬಗ್ಗೆ ಸಂಶೋಧನೆ ಆರಂಭಿಸಿತು. ಈ ಕಳ್ಳಿ ತಿಂದರೆ ದನಗಳು ಕಡಿಮೆ ನೀರು ಕುಡಿಯುತ್ತವೆ ಎಂಬುದು ಗಮನಾರ್ಹ.

೧೯೭೦ರಲ್ಲಿ ಅಖಿಲ ಭಾರತ ಸಂಶೋಧನಾ ಯೋಜನೆಯನ್ನು ಐಸಿಎಆರ್ ಶುರು ಮಾಡಿದಾಗ ಅದರ ಉದ್ದೇಶ: ವಿಭಿನ್ನ ಕೃಷಿಪ್ರದೇಶಗಳಲ್ಲಿ ಮೇವಿನ ಬೆಳೆಗಳ ಉತ್ಪಾದನೆ ಹೆಚ್ಚಿಸುವುದು. ಆದರೆ, ಅರ್ಧ-ಶತಮಾನದ ನಂತರವೂ ನಮ್ಮ ದೇಶದಲ್ಲಿ ಮೇವಿನ ಕೊರತೆ ಕಡಿಮೆಯಾಗಿಲ್ಲ. ಝಾನ್ಸಿಯ ಸಂಶೋಧನಾ ಸಂಸ್ಥೆಯ ಅಂಕೆಸಂಖ್ಯೆಗಳ ಅನುಸಾರ ನಮ್ಮ ದೇಶವು ಮೇವಿನ ಬೇಡಿಕೆಯ ಶೇ.೬೩ರಷ್ಟು ಕೊರತೆ ಎದುರಿಸುತ್ತಿದೆ.

ಈ ಸಂಶೋಧನಾ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮೇವಿನ ಕೊರತೆಗೆ ಹಲವು ಕಾರಣಗಳನ್ನು ನೀಡುತ್ತಾರೆ. ಮುಖ್ಯವಾಗಿ, ಅನಿಶ್ಚಿತ ಮಳೆಯಿಂದಾಗಿ ಹಲವು ಪ್ರದೇಶಗಳು ನೆರೆ ಮತ್ತು ಬರದ ಸಂಕಟ ಎದುರಿಸುತ್ತಿವೆ. ಇದರಿಂದಾಗಿ ಮೇವಿನ ಲಭ್ಯತೆಯೂ ಕಡಿಮೆಯಾಗಿದೆ.

ಅಂತೂ, ನಮ್ಮ ದೇಶದಲ್ಲಿ ಬದಲಿಮೇವಿನ ಬಗ್ಗೆ ಐದು ದಶಕಗಳ ಸಂಶೋಧನೆ ನಡೆದಿದ್ದರೂ, ಗ್ರಾಮಮಟ್ಟದಲ್ಲಿ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಕಿಂಗ್ಸ್ ಲೇ ಏನಂತಾರೆ ಗೊತ್ತೇ? “ಹೈಡ್ರೊಫೋನಿಕ್ಸ್ ದುಬಾರಿ ತಂತ್ರಜ್ನಾನ; ಆ ಘಟಕ ಶುರು ಮಾಡಲು ೨೫,೦೦೦ ರೂಪಾಯಿ ಖರ್ಚು ಮಾಡಿ, ೧೨ ದಿನಗಳ ನಂತರ ನನಗೆ ಸಿಕ್ಕಿದ್ದು ಕೇವಲ ಎಂಟು ಕಿಲೋ ಜೋಳ” ಎನ್ನುತ್ತಾರೆ. ಒಂದು ದನಕ್ಕೆ ದಿನವೊಂದಕ್ಕೆ ೧೫ -೨೦ ಕಿಲೋ ಜೋಳ ತಿನ್ನಲು ಬೇಕು; ಹಾಗಿರುವಾಗ ಇದೆಲ್ಲಿಗೆ ಸಾಕು? “ಎರಡನೇ ಸುತ್ತಿನಲ್ಲಿ ನನಗೆ ಕೊಟ್ಟ ಜೋಳದ ಬೀಜಗಳು ಮೊಳಕೆ ಬರಲೇ ಇಲ್ಲ” ಎಂದು ಅವಲತ್ತು ಕೊಳ್ಳುತ್ತಾರೆ ಅವರು. ಈ ನಷ್ಟಕ್ಕೆ ಅವರಿಗೆ ಪರಿಹಾರವೇನೋ ಸಿಕ್ಕಿದೆ. ಆದರೆ ಹೈಡ್ರೊಫೋನಿಕ್ಸಿನ ಸಹವಾಸ ಸಾಕಪ್ಪಾ ಸಾಕು ಎನ್ನುತ್ತಾರೆ ಕಿಂಗ್ಸ್ ಲೇ.

ಇಂತಹ ತಳಮಟ್ಟದ ಸಮಸ್ಯೆಗಳನ್ನು ಪರಿಹರಿಸ ಬೇಕಾದರೆ, ಬದಲಿಮೇವಿನ ಕೃಷಿ ಬಗ್ಗೆ ಲಕ್ಷಗಟ್ಟಲೆ ಕೃಷಿಕರಿಗೆ ತರಬೇತಿ ನೀಡಬೇಕು. ಆದರೆ ಸಮಸ್ಯಾ ಪರಿಹಾರಕ್ಕೆ ಅಡ್ಡಿಯಾಗಿದೆ ಅನುದಾನದ ಕೊರತೆ. ಅಂತೂ, ಐವತ್ತು ವರುಷಗಳ ಅಖಿಲ ಭಾರತ ಸಂಶೋಧನೆಯ ಫಲ ಕೃಷಿಕರನ್ನು ತಲಪುತ್ತಿಲ್ಲ!