ಬದುಕು ಕಟ್ಟಲು ಹೊರಟವಳು - ಭಾಗ 1

ಬದುಕು ಕಟ್ಟಲು ಹೊರಟವಳು - ಭಾಗ 1

ರಾತ್ರಿ ಎರಡು ದಾಟಿದೆ. ಶಾಂತಾ ಚಾಪೆಯ ಮೇಲೆ ಈಗಷ್ಟೆ ಮಲಗಿದ್ದಾಳೆ. ಮಕ್ಕಳಿಬ್ಬರು ಆಗಲೇ ಗಾಢ ನಿದ್ರೆಯಲ್ಲಿದ್ದಾರೆ.‌ ಆಕೆಗೆ ನಿದ್ರೆ ಸುಳಿಯುತ್ತಿಲ್ಲ. ತಲೆಯಲ್ಲಿ ನೂರಾರು ಯೋಚನೆಗಳು. ಸ್ವಸಹಾಯ ಸಂಘದಿಂದ ಪಡೆದ ಸಾಲದ ಕಂತು ನಾಳೆ ತುಂಬ ಬೇಕು. ಮಗಳು ಕಾಲೇಜು ಫೀಸು ಕಟ್ಟುವಂತೆ ವಾರದಿಂದ ಹಟ  ಬಿದ್ದಿದ್ದಾಳೆ. ಈ ಮಧ್ಯೆ ನಾಳೆಯ ಪಾಠದ ತಯಾರಿ ಇನ್ನೂ ನಡೆಸಿಲ್ಲ. ಬೆಳಿಗ್ಗೆ ಬೇಗನೆ ಎದ್ದು, ತಿಂಡಿ ತಯಾರಿಸಿ, ತಾನು ಪಾಠ ಟಿಪ್ಪಣಿ ತಯಾರಿಸಿ ಹೊರಡಬೇಕು. 

ಶಾಲೆಯಲ್ಲಿ ಎರಡನೇ ಅವಧಿ. ಶಾಂತ ಒಂಭತ್ತನೇ ತರಗತಿ ಬೋಧಿಸುತ್ತಿದ್ದಾಳೆ. ಆಕೆ ಬಿ.ಎಡ್. ಶಿಕ್ಷಣಾರ್ಥಿ. ಪಾಠ ಮಾಡುವಾಗ ತಡವರಿಸುತ್ತಿದ್ದಾಳೆ. ತರಬೇತಿ ಹಂತದಲ್ಲಿ ಕಲಿತ ಹಂತಗಳು ಕೈಕೊಡುತ್ತಿದೆ. ಸಮಯದ ಹೊಂದಾಣಿಕೆಯೂ ಸಾಧ್ಯವಾಗುತ್ತಿಲ್ಲ. ಹಿಂದಿನ ಬೆಂಚಿನಲ್ಲಿ ತನ್ನ ಉಪನ್ಯಾಸಕರು ಕುಳಿತಿದ್ದಾರೆ. ಅಲ್ಲದೆ ನಾಲ್ಕೈದು ಮಂದಿ ಸಹಪಾಠಿಗಳು ಇವಳನ್ನೇ ಕೆಕ್ಕರಿಸಿ ನೋಡುತ್ತಿದ್ದಾರೆ. ಉಪನ್ಯಾಸಕರತ್ತ ಒಮ್ಮೆ ದೃಷ್ಟಿ ಬೀರುತ್ತಾಳೆ. ಅಷ್ಟೇ ಸಾಕಿತ್ತು ಮೈಯೆಲ್ಲಾ ಬೆವರ ತೊಡಗುತ್ತದೆ. ಅಷ್ಟರಲ್ಲಿ ಅವಧಿ ಮುಗಿಯುತ್ತದೆ. ಬೋಧನೆಯ ಎರಡನೇ ಹಂತವೇ ಮುಗಿದಿರಲಿಲ್ಲ. 

ಶಾಂತ ತರಗತಿಯಿಂದ ಕೊಠಡಿಗೆ ಬಂದಳು. ಅದಾಗಲೇ ಅವಳನ್ನು ಉಪನ್ಯಾಸಕರು ಕಾಯುತ್ತಿದ್ದಾರೆ. ಸಹಪಾಠಿಗಳು ಜೊತೆಗಿದ್ದಾರೆ. ಶಾಂತ ಭಯದಿಂದಲೇ ಕೊಠಡಿಯೊಳಗೆ ಬರುತ್ತಾಳೆ. ಆಕೆಯ ಪಾಠದ ಬಗ್ಗೆ ವಿಮರ್ಶೆ ತೀವ್ರವಾಗುತ್ತದೆ. ಪಾಠ ಟಿಪ್ಪಣಿಯೂ ಪೂರ್ಣ ಬರೆದಿರಲಿಲ್ಲ. ಚಾರ್ಟ್ ಅರ್ಧಂಬರ್ಧವಿತ್ತು. ಎಲ್ಲರೂ ಆಕೆಯನ್ನು ಜಾಡಿಸುತ್ತಿದ್ದಾರೆ. ಶಾಂತ ಮೌನವಾಗಿ ನಿಂತಿದ್ದಾಳೆ. ತಪ್ಪನ್ನು ಒಪ್ಪಿಕೊಂಡು, ಕ್ಷಮಿಸುವಂತೆ ಬೇಡುತ್ತಿದ್ದಾಳೆ. ನಾಳೆಯಿಂದ ಸರಿ ಪಡಿಸುವುದಾಗಿ ತಿಳಿಸುತ್ತಾಳೆ.

ಶಾಲೆಯಲ್ಲಿ ತರಬೇತಿಗೆ ಬಂದು ವಾರ ಎರಡು ಕಳೆದರೂ ಶಾಂತಳಲ್ಲಿ ಬದಲಾವಣೆ ಕಾಣಲಿಲ್ಲ. ಬೆಳಿಗ್ಗೆ ಹತ್ತು ನಿಮಿಷ ತಡವಾಗಿಯೇ ಶಾಲೆಗೆ ಬರುತ್ತಿದ್ದಳು. ಪಾಠ ಯೋಜನೆಗಳು ಯಾವುದೂ ಪೂರ್ತಿಯಾಗಿರುತ್ತಿರಲಿಲ್ಲ. ಮನದಲ್ಲಿ ಅದ್ಯಾವುದೋ ಯೋಚನೆಗಳೇ ತುಂಬಿರುತ್ತಿತ್ತು. ಪಾಠ ವೀಕ್ಷಕರಿಂದ ದಿನಾ ಮಂಗಳಾರತಿ ನಡೆಯುತ್ತಿತ್ತು. ಕೆಲವೊಮ್ಮೆ ಆಕೆಯ ಕಣ್ಣುಗಳು ತೇವಗೊಳ್ಳುತ್ತಿತ್ತು. ಆಕೆ ಇದೀಗ ಎಲ್ಲರಿಗೂ ಒಂದು ಪ್ರಶ್ನಾರ್ಥಕವಾಗಿದ್ದಳು. ಈ ಮಧ್ಯೆ ಎಲ್ಲವನ್ನೂ ಗಮನಿಸುತ್ತಿದ್ದ ಮುಖ್ಯ ಶಿಕ್ಷಕ ರವಿಗೆ ಶಾಂತಾಳ ವ್ಯಕ್ತಿತ್ವ ವಿಚಿತ್ರವಾಗಿ ತೋರುತ್ತದೆ. ರವಿಗೆ ಆಕೆ ಬದುಕಿನಲ್ಲಿ ಯಾವುದೋ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾಳೆ ಎಂಬುವುದು ಅರ್ಥವಾಗುತ್ತಿತ್ತು. ಆ ಬಗ್ಗೆ ಆಕೆಯಿಂದ ತಿಳಿದುಕೊಳ್ಳುವ ಕುತೂಹಲ. ಒಂದು ಸಂದರ್ಭ ನೋಡಿ ಆಕೆಯನ್ನು ಮಾತಾಡಿಸುತ್ತಾನೆ. ಆರಂಭದಲ್ಲಿ ಅಳುಕು ಇದ್ದರೂ, ಆಕೆ ತನ್ನ ವೃತ್ತಾಂತವನ್ನು ರವಿಯ ಮುಂದೆ ಹೇಳತೊಡಗಿದಳು.

ಆಕೆ ಬಡ ಕುಟುಂಬದ ಹೆಣ್ಣು ಮಗಳು. ಅಪ್ಪ ಅಮ್ಮನ ಕಷ್ಟದ ಬದುಕು ಈಕೆಯ ಮೇಲೆ ಬಹಳನೇ ಪ್ರಭಾವ ಬೀರಿತ್ತು. ಅಪ್ಪನಿಗೆ ಆರು ಮಕ್ಕಳು. ನಾಲ್ಕು ಗಂಡು, ಇಬ್ಬರು ಹೆಣ್ಣು. ಶಾಂತಾಳಿಗೆ ಮೂರು ಮಂದಿ ಅಣ್ಣಂದಿರು. ಒಬ್ಬ ತಮ್ಮ ಹಾಗೂ ಒಬ್ಬಳು ತಂಗಿ. ಅಪ್ಪನಿಗೆ ಮಕ್ಕಳನ್ನು ಹಸಿವಿನಿಂದ ಕಾಪಾಡುವುದೇ ಬಹುದೊಡ್ಡ ಸಾಹಸವಾಗಿತ್ತು. ಅಮ್ಮ ತಾನೂ ದುಡಿದು ಸಂಸಾರಕ್ಕೆ ಹೆಗಲು ಕೊಡುತ್ತಿದ್ದಳು. ಶಾಂತ ಪಕ್ಕದ ಶಾಲೆಯಲ್ಲಿ ನಾಲ್ಕನೇ ತರಗತಿ ಕಲಿಯುತ್ತಿದ್ದಳು. ಮುಂದೆ ಆಕೆಯನ್ನು ಶಾಲೆಗೆ ಕಳುಹಿಸಲು ಅಪ್ಪ ಅಶಕ್ತನಾಗಿದ್ದ. ಕಲಿಕೆಯಲ್ಲಿ ಚುರುಕಾಗಿದ್ದ ಶಾಂತಾ ಅಪ್ಪ ಶಾಲೆ ಬಿಡಿಸುವ ಯೋಚನೆ ಮಾಡಿದಾಗ ತೀರಾ ವಿಚಲಿತಳಾಗಿದ್ದಳು. ಸಣ್ಣವಳಾಗಿದ್ದರೂ ಆಕೆಗೆ ಕಲಿಕೆಯ ಬಗ್ಗೆ ತುಂಬಾ ಆಸಕ್ತಿ. ಆಕೆ ಹಟ ಮಾಡಿದಾಗ, ಅಪ್ಪ ದೂರದ ಆಶ್ರಮ ಶಾಲೆಗೆ ಸೇರಿಸಿ ಬಂದಿದ್ದ. ಅವಳು ಮನೆ ಬಿಟ್ಟು ಆಶ್ರಮ ಸೇರಿದರೂ ಎದೆಗುಂದಿರಲಿಲ್ಲ. ಮನೆಯಿಂದ ದೂರವಾದ ಚಿಕ್ಕ ಹುಡುಗಿ ಮನನೊಂದರೂ ಆಶ್ರಮ ಬಿಡಲಿಲ್ಲ. 

ಆಶ್ರಮದಲ್ಲಿ ಮೂರು ವರ್ಷ ಕಳೆದ ಆಕೆ ಏಳನೇ ತರಗತಿಯಲ್ಲಿ ಪೂರ್ಣಗೊಳಿಸಿದ್ದಳು. ಶಿಕ್ಷಕರ ಮೆಚ್ಚುಗೆ ಪಡೆದಿದ್ದ ಆಕೆ ಮುಂದೆ ಪ್ರೌಢಶಾಲೆ ಸೇರಬೇಕಿತ್ತು. ಮನೆಯವರು ಅದಕ್ಕೆ ಸಮ್ಮತಿಸಲಿಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಈಕೆ ಮನೆಯಲ್ಲಿದ್ದು ಅಕ್ಕ ಪಕ್ಕದ ಮನೆಯಲ್ಲಿ ದುಡಿದು ಅಷ್ಟೋ ಇಷ್ಟೋ ಸಂಪಾದಿಸಿದರೆ ಮನೆ ಖರ್ಚಿಗೆ ಸಹಾಯವಾಗಬಹುದೆಂಬುವುದು ಅವರ ಯೋಚನೆ. ಶಾಂತಾ ತೀರಾ ಖಿನ್ನಳಾಗಿದ್ದಳು. ಓದಬೇಕೆಂಬುವುದು ಆಕೆಯ ಬಯಕೆ. ಎಲ್ಲಾ ಮಕ್ಕಳಂತೆ ನಾನು ಕಲಿಯಬೇಕೆಂದು ಬಯಸಿದ್ದಳು. ಇವಳ ಹಟಕ್ಕೆ ಮಣಿದ ಅಮ್ಮ ದೂರದ ಊರಿನಲ್ಲಿ ಹಾಸ್ಟೇಲ್ ಗೆ ಸೇರಿಸಿ, ಅಲ್ಲಿಂದಲೇ ಎಂಟನೇ ತರಗತಿಗೆ ಸೇರಿಸಿದ್ದಳು.

ಶಾಂತಾ ಎಂಟನೇ ತರಗತಿ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದಾಳೆ. ಅದು ಬೇಸಿಗೆ ರಜೆ. ಅದೇ ರಜೆಯಲ್ಲಿ ಅಣ್ಣನಿಗೆ ಮದುವೆ. ಆತನದ್ದು ಮದುವೆಯಾಗುವ ವಯಸ್ಸಂತೂ ಆಗಿರಲಿಲ್ಲ. ಆದರೂ ಹಟ ಹಿಡಿದು ಮದುವೆಯಾಗಿದ್ದ. ಮದುವೆಯಾಗಿ ಅತ್ತಿಗೆ ಮನೆಗೆ ಬಂದು ತಿಂಗಳೊಂದು ಇನ್ನೂ ದಾಟಿರಲಿಲ್ಲ. ಅತ್ತೆ - ಸೊಸೆಯ ಮಧ್ಯೆ ಬಿರುಕು ಮೂಡಿತ್ತು. ಅವರಿಗೆಂದೂ ಒಮ್ಮೆಯೂ ಕೂಡಿ ಬರಲೇ ಇಲ್ಲ. ಪರಿಸ್ಥಿತಿ ವಿಪರೀತಕ್ಕೆ ಹೋದಾಗ, ಅಣ್ಣ ಆಕೆಯೊಂದಿಗೆ ಮನೆ ಬಿಟ್ಟು ದೂರದ ಊರಿನಲ್ಲಿ ಸಂಸಾರ ಹೂಡಿದ. ಅಣ್ಣನ ನಿರ್ಗಮನ ಶಾಂತಾಳ ಮೇಲೆ ನೇರ ಪ್ರಭಾವ ಬೀರಿತ್ತು. ಮನೆಯವರು ಆಕೆಯನ್ನು ಶಾಲೆ ಬಿಡಿಸಿ, ದುಡಿಮೆಗೆ ಹಚ್ಚಿದರು. ಆಕೆಯ ಕಲಿಯುವ ಕನಸಿಗೆ ಕೊಳ್ಳಿ ಇಡಲಾಗಿತ್ತು. ಅವಳ ವಯಸ್ಸಿನ ಮಕ್ಕಳು ಶಾಲೆಗೆ ಹೋಗುವ ದೃಶ್ಯ ಕಂಡರಂತೂ, ಆಕೆ ಮರೆಯಲ್ಲಿ ನಿಂತು ಅಳುತ್ತಿದ್ದಳು.

ಆಕೆ ಶಾಲೆ ಬಿಟ್ಟು ಮೂರು ವರ್ಷ ಸಂದಿತ್ತು. ಆಕೆಗಿನ್ನೂ ಹದಿನಾರರ ಹರೆಯ. ಅಷ್ಟರಲ್ಲೇ ಮನೆಯಲ್ಲಿ ಮದುವೆ ಮಾಡುವ ತಯಾರಿ. ಆಕೆಗೆ ಮದುವೆ ಸುತರಾಂ ಇಷ್ಟವಿಲ್ಲ. ತಾನು ಕಂಡ ಕನಸ್ಸುಗಳೆಲ್ಲಾ ನುಚ್ಚು ನೂರಾಗಿತ್ತು. ಬದುಕಿದ್ದು ಬಡತನದಲ್ಲಾದರೂ ಬೆಟ್ಟದಷ್ಟು ಕನಸು ಹೊತ್ತವಳಾಕೆ. ಇದೀಗ ಮನೆಯವರು ಹರಕೆ ಕುರಿಯಂತೆ ಶಾಂತಾಳನ್ನು ಹಸೆಮನೆಯಲ್ಲಿ ಕೂರಿಸಿದ್ದರು. ಆಕೆಯದು ಮದುವೆಯ ವಯಸ್ಸಂತೂ ಆಗಿರಲೇ ಇಲ್ಲ. ಹಸೆಮನೆಯಲ್ಲಿ ಕುಳಿತಿದ್ದ ಆಕೆಯ ಕಣ್ಣುಗಳು ಹನಿಗಳನ್ನು ಉದುರಿಸುತ್ತಿತ್ತು. ವ್ಯವಸ್ಥೆಯ ಮುಂದೆ ಆಕೆ ಮೂಕಳಾಗಿದ್ದಳು.

ಆಕೆಗಿನ್ನೂ ಹದಿನಾರು. ಕೈಹಿಡಿದ ಆತನಿಗೆ ಮೂವತ್ತ ನಾಲ್ಕು. ಆತ ದೂರದ ಯಾವುದೋ ಊರಿನಲ್ಲಿ ಉದ್ಯಮಿಯೆಂದು ಹೇಳಿದ್ದ. ಮನೆಯಳಿಯ ಉದ್ಯಮಿಯಾಗಿರುವುದು ಮನೆಯವರಿಗೆ ಸಮಾಧಾನ ತಂದಿತ್ತು. ಮಗಳಾದರೂ ಸುಖವಾಗಿರಬಹುದೆಂಬ ಆಶಾವಾದ. ಮನೆಯವರ ಅವಸರದ ನಿರ್ಧಾರ ಮುಗ್ಧ ಮನಸ್ಸಿನ ಶಾಂತಾಳ ಬದುಕನ್ನು ಕದಡಿತ್ತು. ‌ನಾಟಿ ಮಾಡದೆ ಒಣಗಿ ಒಡೆದ ಗದ್ದೆಯಂತೆ ಆಕೆಯ ಬದುಕು ಬಿರುಕು ಬಿಡತೊಡಗಿತ್ತು.

ಆಕೆಯ ಗಂಡ ದೂರದ ಊರಿನಲ್ಲಿ ಹೋಟೇಲು ಒಂದರಲ್ಲಿ ದಿನಗೂಲಿಯಾಗಿದ್ದ. ಆತ ಉದ್ಯಮಿಯೆಂದು ಹೇಳಿದ್ದು ಸುಳ್ಳಾಗಿತ್ತು. ಆ ಸುಳ್ಳನ್ನು ಮನೆಯವರು ನಂಬಿದ್ದರು. ಮದುವೆಯಾಗಿ ಇನ್ನೂ ತಿಂಗಳು ದಾಟಿರಲಿಲ್ಲ. ಮನೆಯ ಮುಂದೆ ಪೋಲೀಸರು ನಿಂತಿದ್ದು ಕಂಡು ಮನೆಯವರು ದಂಗಾಗಿದ್ದರು. ಮನೆಯಲ್ಲಿ ಸಹಿಸಲಾರದ ಬಡತನವಿದ್ದರೂ ಮರ್ಯಾದೆಗೇನೂ ಕೊರತೆಯಿರಲಿಲ್ಲ. ಶಾಂತಾಳಂತೂ ಸದ್ಗುಣವನ್ನು ಬಹಳನೇ ರೂಢಿಸಿಕೊಂಡಿದ್ದಳು. ಆಕೆಗೆ ಅದು ಅಮ್ಮನಿಂದ ರಕ್ತಗತವಾಗಿ ಬಂದಿತ್ತು. ಪೋಲೀಸರು ಬಂದವರೇ ಶಾಂತಾಳ ಗಂಡನ ಬಗ್ಗೆ ವಿಚಾರಿಸ ತೊಡಗಿದರು.

ಶಾಂತಾಳ ಗಂಡ ರಾಜು ನಂಬಿಕಸ್ತನಂತೂ ಆಗಿರಲಿಲ್ಲ. ಆತನ ಕೈ ಹಿಡಿದ ಶಾಂತಾ ಕಷ್ಟ ಸುಖಗಳನ್ನು ಅರಿತುಕೊಳ್ಳುವಷ್ಟು ಮಾಗಿಯೂ ಇರಲಿಲ್ಲ. ಶಾಂತಾಳನ್ನು ವರಿಸುವ ಮುಂಚೆಯೇ ಆತ ಮತ್ತೊಬ್ಬಳ ತೆಕ್ಕೆಯೊಳಗೆ ಬಿದ್ದಿದ್ದ. ಆಕೆಯೊಂದಿಗೆ ಮದುವೆಯಾಗುವುದಾಗಿಯೂ ನಂಬಿಸಿದ್ದ. ಇದೀಗ ಆಕೆಗೆ ವಂಚಿಸಿ ಶಾಂತಾಳ ಕೈ ಹಿಡಿದಿದ್ದ. ಅಮಾಯಕ ಶಾಂತಾಳಿಗೆ ಇವೆಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇರಲಿಲ್ಲ. ರಾಜು ಪ್ರೇಮಿಸಿ, ವಂಚಿಸಿದ್ದ ಆ ಹುಡುಗಿಯ ಮನೆಯವರು ಪೋಲೀಸರಿಗೆ ದೂರು ನೀಡಿದ್ದರು. ಮನೆಯಲ್ಲಿ ರಾಜು ಇಲ್ಲದ್ದು ಅರಿತ ಪೋಲೀಸರು ಹಿಂತಿರುಗಿದ್ದರು. ಮುಂದೆ ಅದೇನೋ ನಡೆದು ಕೇಸನ್ನು ಮುಗಿಸಲಾಗಿತ್ತು.

ಸುಮಾರು ಒಂದು ವರ್ಷ ಮದುವೆಯಾದರೂ, ಗಂಡನ ಮನೆಗೆ ತೆರಳದ ಶಾಂತ ಇಂದು ಗಂಡನೊಂದಿಗೆ ಹೊರಟಿದ್ದಳು. ಇದೀಗ ಆಕೆಗೆ ಪುಟ್ಟ ಪುಟ್ಟ ನಿರೀಕ್ಷೆಗಳು ಚಿಗುರೊಡೆಯುತ್ತಿತ್ತು. ಮುಗ್ಧ ಶಾಂತಾ ಗಂಡನೊಂದಿಗೆ ಹೆಜ್ಜೆ ಹಾಕಿದ್ದಳು. ರಾಜು ಶಾಂತಾಳನ್ನು ಕರೆದೊಯ್ದದ್ದು ತಾನು ದುಡಿಯುತ್ತಿದ್ದ ದೂರದ ಊರಿಗಾಗಿತ್ತು. ಅಲ್ಲಿ ಆತನಿಗೆ ವಾಸಿಸುವ ಮನೆಯೂ ಇರಲಿಲ್ಲ. ಕೂಲಿ ಮಾಡುತ್ತಿದ್ದ ಹೋಟೇಲಿನಲ್ಲಿಯೇ ಶಾಂತಾ ಹಲವು ದಿನ ಕಳೆಯಬೇಕಾಯಿತು. ಮದುವೆ- ಸಂಸಾರವೆಂದರೆ ಇದುವೆನಾ? ಎಂದು ಆಕೆ ಮನದಲ್ಲೇ ಪ್ರಶ್ನಿಸುತ್ತಿದ್ದಳು. ಅದ್ಹೇಗೋ ಆತ ಒಂದು ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದಾಗ ಶಾಂತಾ ಸ್ವಲ್ಪ ನಿರಾಳವಾದಳು.

ಶಾಂತಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಬಾಡಿಗೆ ಮನೆಯಲ್ಲಿ ಗಂಡನೊಂದಿಗೆ ಇರಲು ಆಕೆಗೆ ಕಷ್ಟವಾದಾಗ ತಾಯಿ ಮನೆಗೆ ರಾಜು ಬಿಟ್ಟು ಹೋಗಿದ್ದ. ಎಷ್ಟಾದರೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗಲ್ಲವೇ?... ಮನೆಯಲ್ಲಿ ಆಕೆಗೆ ಸರಿಹೊಂದುತ್ತಿರಲಿಲ್ಲ. ಆಕೆಗೆ ಅಮ್ಮನೇ ಸಾಂತ್ವಾನವಾಗಿದ್ದಳು. ಈ ಮಧ್ಯೆ ಅದ್ಹೇಗೋ ಸಂಘವೊಂದಕ್ಕೆ ಸೇರಿ, ಸಾಲ ಪಡೆದು ಒಂದು ಚಿಕ್ಕ ನಿವೇಶನ ಖರೀದಿ ಮಾಡಿದಳು. ಅದು ತಾಯಿ ಮನೆಯ ಸಮೀಪವೇ ಆಗಿತ್ತು. ಅಪ್ಪನ ಸಾವು ಶಾಂತಾಳ ಬದುಕಿನ ಮತ್ತೊಂದು ದುರಂತವಾಗಿತ್ತು. ಆಕೆ ಕಷ್ಟವನ್ನೇ ಹೊತ್ತು ಹುಟ್ಟಿ ಬಂದವಳಂತೆ ಬದುಕುತ್ತಿದ್ದಳು ಇಲ್ಲವೇ ಆಕೆಯ ಬದುಕನ್ನು ಕಂಡವರಿಗೆ ಆ ಭಾವನೆ ಮೂಡುತ್ತಿತ್ತು.

ಶಾಂತಾ ಒಂದು ಗಂಡು ಮತ್ತು ಹೆಣ್ಣು ಮಗುವಿನ ತಾಯಿಯಾಗಿದ್ದಳು. ಗಂಡ ಕೆಲಸ ಬಿಟ್ಟು ಮನೆಯಲ್ಲೇ ಇರತೊಡಗಿದ. ಊರಿನಲ್ಲೇ ಕೂಲಿಗಾಲಿ ಮಾಡಿ ಅಷ್ಟೋ ಇಷ್ಟೋ ಸಂಪಾದಿಸುತ್ತಿದ್ದ. ಶಾಂತಾಳ ದುಡಿಮೆಯೂ ಸಂಸಾರಕ್ಕೆ ಪೂರಕವಾಗಿತ್ತು. ಪುಟ್ಟ ಮಕ್ಕಳನ್ನು ಮಡಿಲಲ್ಲಿ ಹೊತ್ತ ಶಾಂತಾಳ ಬದುಕು ಒಂದು ಹೋರಾಟವೇ ಆಗಿತ್ತು. ಅದು ಕೊನೆಯಿಲ್ಲದ ಹೋರಾಟ. ಅಂತ್ಯವಿಲ್ಲದ ಕಿರಣದಂತೆ ತೋಚುತ್ತಿತ್ತು. ಬದುಕಿಗಾಗಿ ಆಕೆ ಬೀಡಿ ಸುತ್ತುತ್ತಿದ್ದಳು. ತಾಯಿ ಮನೆ ತೊರೆದು ಬೇರೆ ಮನೆಯಲ್ಲಿ ಗಂಡನೊಂದಿಗೆ ವಾಸಿಸತೊಡಗಿದ ಆಕೆಗೆ ಆಸರೆಯಾಗುವವರು ಇಲ್ಲವಾಗಿದ್ದರು. ಅಲ್ಪ ಸ್ವಲ್ಪ ಗಂಡನೇ ಆಕೆಗೆ ನಿರೀಕ್ಷೆಯಾಗಿದ್ದ.

ಮನೆಯಲ್ಲಿ ಬೀಡಿಸುತ್ತಿ ಮಕ್ಕಳನ್ನು ಸಲಹುತ್ತಿದ್ದ ಶಾಂತಾಳಿಗೆ ಕಂಪ್ಯೂಟರ್ ಕಲಿಯುವ ಆಸೆ ಮೂಡಿತು. ಅವಳ ಗುಪ್ತ ಮನಸ್ಸಿನಲ್ಲಿ ಕಲಿಯುವ ಆಸೆಯಿನ್ನೂ ಜೀವಂತವಿತ್ತು. ಆದರೆ ಕನಿಷ್ಟ ಹತ್ತನೇ ತರಗತಿ ಪಾಸಾದರೆ ಕಂಪ್ಯೂಟರ್ ಕಲಿತರೆ ಪ್ರಯೋಜನವಿದೆ. ಅದಿಲ್ಲದಿದ್ದರೆ ನಿಷ್ಪ್ರಯೋಜಕ ಎಂದು ತಿಳಿದಾಗ ಬಹಳನೇ ಬೇಸರಗೊಂಡಳು. ಆಕೆ ಒಂದು ಛಲಗಾತಿ. ನಾನ್ಯಾಕೆ ಹತ್ತನೇ ತರಗತಿ ಪರೀಕ್ಷೆ ಬರೆಯಬಾರದು?.. ಎಂದು ದಿನ ಪೂರ್ತಿ ಯೋಚಿಸತೊಡಗಿದಳು. ಮಕ್ಕಳಿಬ್ಬರು ಇನ್ನೂ ಚಿಕ್ಕವರು. ಇದು ಪರೀಕ್ಷೆ ಬರೆಯುವ ಸಮಯವೇ? ಎಂದು ಒಳ ಮನಸ್ಸು ಹೇಳ ತೊಡಗಿತು. ಆರಂಭದಲ್ಲಿ ವಿರೋಧಿಸಿದರೂ ನಂತರ ಗಂಡನನ್ನು ಒಪ್ಪಿಸುವಲ್ಲಿ ಸಫಲಳಾದಳು. 

ಶಾಂತಾ ಕಲಿಕೆಯಲ್ಲಿ ಪ್ರತಿಭಾವಂತೆ ಇದ್ದದ್ದು ನಿಜ. ಆದರೆ ಆಕೆ ದುರಾದೃಷ್ಟವಂತೆ. ಕಲಿಕೆಯಿಂದ ವಂಚಿತಳಾಗಿದ್ದಳು. ಬಹಳನೇ ವರ್ಷಗಳ ನಂತರ ಪರೀಕ್ಷೆ ಬರೆಯಳು ಸಿದ್ಧಳಾಗಿದ್ದಳು. ಆಕೆಗೆ ಗಣಿತ ಮತ್ತು ವಿಜ್ಞಾನ ಸಂಪೂರ್ಣ ಮರೆತು ಹೋಗಿತ್ತು. ಅದು ಓದಿದ ಕೂಡಲೇ ಅರ್ಥವಾಗುವಂತಹ ವಿಷಯವೂ ಅಲ್ಲ. ಹಾಗಾಗಿ ಆ ಎರಡು ವಿಷಯಗಳಿಗೆ ಟ್ಯೂಷನ್ ಪಡೆಯಬೇಕಿತ್ತು. ಇಬ್ಬರು ಮಕ್ಕಳನ್ನು ಎತ್ತಿಕೊಂಡೇ ಟ್ಯೂಷನ್ ಕ್ಲಾಸಿಗೆ ಹಾಜರಾಗುತ್ತಿದ್ದ ಆಕೆ ಅಸಾಧಾರಣ ಹೆಣ್ಣಾಗಿದ್ದಳು. ಆಕೆ ಒಂದೆಡೆ ಬೀಡಿಗೆ ಲೇಬಲ್ ಸುತ್ತುತ್ತಾ, ಸಮಯ ಸಿಕ್ಕಾಗ ಬೀಡಿ ಸುತ್ತುತ್ತಾ, ಮಕ್ಕಳ ಪಾಲನೆ ಮಾಡುತ್ತಾ ಪರೀಕ್ಷೆಗೆ ಸಿದ್ಧಳಾದಳು. 

(ಇನ್ನೂ ಇದೆ)

-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ