ಬಸವಣ್ಣನ ಮೂಲ ಹೆಸರು ಬಸವಣ್ಣ ಭಟ್ಟ! ಇದು ‘ಸಂ’ಶೋಧನೆ?
೧೨ನೇಯ ಶತಮಾನದ ಸಾಮಾಜಿಕ-ಧಾರ್ಮಿಕ ಕ್ರಾಂತಿಯ ಹರಿಕಾರ, ವಚನ ಚಳುವಳಿಯ ಯುಗಪುರುಷ ಹಾಗು ಜಾತಿ ರಹಿತ ಸಮಾನತೆಯ ಕಲ್ಯಾಣ ರಾಜ್ಯದ ಪರಿಕಲ್ಪನೆಯ ಬಸವಣ್ಣನವರ ಮೂಲ, ಜಾತಿ, ಕುಲ-ಗೋತ್ರಗಳ ಬಗ್ಗೆ ಆಗಾಗ ಹೊಸ ಹೊಸ ವಿವಾದಗಳು, ವಾದಗಳು, ವ್ಯಾಖ್ಯಾನಗಳು ಹೊರಹೊಮ್ಮಿ ಸಾರ್ವಜನಿಕ ಚರ್ಚೆಗೆ ಕಾರಣವಾಗುತ್ತಿದೆ.
ಡಾ. ಬಂಜಗೆರೆ ಜಯಪ್ರಕಾಶ ಅವರ ಇತ್ತೀಚಿನ ‘ಆನುದೇವಾ ಹೊರಗಣನವನು’ ಕೃತಿ, ಆ ‘ಜಾತಿ’ ವಾದಕ್ಕೆ ವ್ಯತಿರಿಕ್ತವಾಗಿ ಇಂದು ಬಹುತೇಕ ಪತ್ರಿಕೆಗಳು ಪ್ರಕಟಿಸಿರುವ ಕರ್ನಾಟಕ ವಿಶ್ವವಿದ್ಯಾಲಯದ ಪಿಎಚ್ ಡಿ ವಿದ್ಯಾರ್ಥಿ ಪಿ.ಕೆ.ಕಾರಭಾರಿ ರಾಮದುರ್ಗ ತಾಲೂಕಿನ ಬನ್ನೂರು ಎಂಬ ಗ್ರಾಮದಲ್ಲಿ ಪತ್ತೆ ಹಚ್ಚಿರುವ ಬಸವಣ್ಣನವರ ಕುಲ-ಗೋತ್ರ ಸಾಕ್ಷೀಕರಿಸುವ ‘ಈ ಜಾತಿ’ ಶಾಸನದ ಪ್ರಕಾರ ಅವರು ಬ್ರಾಹ್ಮಣ ಕುಲದವರು!
‘ಕ್ರಿ.ಶ.೧೧೭೯- ೧೧೮೦ನೇ ಸಾಲಿನ ಉದ್ದುಪುಡಿ ಶಾಸನದಲ್ಲಿ ಇಂಗಳೇಶ್ವರ ಬಾಗೇವಾಡಿಯ ಕಾಶ್ಯಪ ಗೋತ್ರದ ರುದ್ರಭಟ್ಟನ ಪುತ್ರ ಬಸವಣ್ಣ ಭಟ್ಟ ಎಂದಿದೆ. ಈ ಮೂಲಕ ಬಸವಣ್ಣನ ಮೂಲ ಜಾತಿ ಬ್ರಾಹ್ಮಣ ಎನ್ನಲಾಗಿದೆ, ಮತ್ತು ‘ಬಸವಣ್ಣಭಟ್ಟ, ರುದ್ರ ಭಟ್ಟರ ಹೆಸರು ಸಾಮಾಜಿಕ ಬದಲಾವಣೆಗಳ ನಂತರ ಬಸವಣ್ಣ, ಮಾದರಸ ಎಂದು ಬದಲಾಗಿರಬಹುದು’.
ಏನೇ ಇರಲಿ, ಜಾತಿರಹಿತ, ವರ್ಗರಹಿತ ಮತ್ತು ಸಮಾನತೆಯ ಆಧಾರದ ಕಲ್ಯಾಣ ರಾಜ್ಯದ ಕ್ರಾಂತಿಗೆ ನಾಂದಿ ಹಾಡಿದ ಬಸವಣ್ನನವರನ್ನೇ ಜಾತಿಯ ಚೌಕಟ್ಟಿನಲ್ಲಿ ಬಂಧಿಸಿ, ಗಲ್ಲಿ ಗಲ್ಲಿಗಳಲ್ಲಿ ಅವರ ಮೂರ್ತಿ ಸ್ಥಾಪಿಸಿ ‘ಪುತ್ಥಳಿ ಸಂಸ್ಕೃತಿ’ ಗೆ ನಾ,ದಿ ಹಾಡಿ ಅವರ ತತ್ವ-ಆದರ್ಶಗಳನ್ನೆಲ್ಲ ಗಾಳಿಗೆ ತೂರಿ, ಸತ್ತ ದೇಹಕ್ಕೆ ಜೀವ ತುಂಬಿ ಈ ‘ಮಮ್ಮೀ’ ‘ಸಂ’ಶೋಧನೆಗಳು ನಮಗೆ ಬೇಕೆ? ಸಮಾಜಕ್ಕೆ ಇದರಿಂದ ಏನು ಲಾಭ? ಅದರ
ಬದಲು ಬಸವಣ್ಣ ಹೇಳಿದ್ದೇನು? ನಾವು ಮಾಡಿದ್ದೇನು? ಈ ಅಂತರವನ್ನು ಕಡಿಮೆಗೊಳಿಸುವುದು ಹೇಗೆ? ಈ ಸಮಾಜಮುಖಿ ಸಂಶೋಧನೆಗಳು ನಮಗೆ ಬೇಕಲ್ಲವೇ?