ಬಹುಮುಖ ಬಾಲಪ್ರತಿಭೆ- ಶ್ರೀಕೃಷ್ಣ ಶೇಟ್
ಉಡುಪಿ ನಗರದ ವಳಕಾಡು ನಿವಾಸಿಯಾಗಿರುವ ಶ್ರೀಕೃಷ್ಣ ಎನ್. ಶೇಟ್ ಎಳವೆಯಲ್ಲಿಯೇ ವಿವಿಧ ಕಲೆ, ಸಂಸ್ಕೃತಿಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದು, ಗುರು ಹಿರಿಯರ, ಬಂಧು ಬಳಗದ, ಕಲಾಸಕ್ತರ ಮೆಚ್ಚುಗೆ, ಅಭಿಮಾನಕ್ಕೆ ಪಾತ್ರನಾಗಿದ್ದಾನೆ. ಉದ್ಯಮಿ ನಾಗಭೂಷಣ ಶೇಟ್ ಹಾಗೂ ಚಂದ್ರಿಕಾ ಎನ್. ಶೇಟ್ ದಂಪತಿಗಳ ಮಗನಾದ ಶ್ರೀಕೃಷ್ಣ, ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಕಲಿಕೆಯಲ್ಲಿ ಮುಂದಿರುವಂತೆಯೇ, ಪಠ್ಯೇತರ ಚಟುವಟಿಕೆಯಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದು ಶ್ರೀಕೃಷ್ಣನ ಹೆಚ್ಚುಗಾರಿಕೆಯಾಗಿದೆ.
ತಬಲಾ, ಕೊಳಲುವಾದನ ಮತ್ತು ಕೀಬೋರ್ಡ್ ಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶ್ರೀಕೃಷ್ಣ ಚಿತ್ರ ಕಲಾವಿದನಾಗಿಯೂ, ಬಡಗು ತಿಟ್ಟು ಯಕ್ಷಗಾನದ ಕಲಾವಿದನಾಗಿಯೂ ಸೈ ಎನಿಸಿಕೊಂಡಿದ್ದಾನೆ. ವಳಕಾಡು ಶಾಲಾ ವಾರ್ಷಿಕೋತ್ಸವಗಳಲ್ಲಿ, ಚಿಟ್ಪಾಡಿ ಶ್ರೀ ಶಾರದಾಂಬ ದೇವಸ್ಥಾನದಲ್ಲಿ, ಪ್ರಥಮ್ ವೃಂದಾವನ್ ನಲ್ಲಿ ನಡೆಯುವ ದೀಪಾವಳಿ ಆಚರಣೆಗಳಲ್ಲಿ ವಿವಿಧ ಕಲಾ ಕಾರ್ಯಕ್ರಮಗಳನ್ನು ನೀಡಿರುವ ಶ್ರೀಕೃಷ್ಣ ಕಲಾಸಕ್ತರ ಪ್ರಶಂಸೆ ಗಳಿಸಿದ್ದಾನೆ.
ಹೆತ್ತವರ ನಿರಂತರ ಪ್ರೋತ್ಸಾಹವೇ ಶ್ರೀಕೃಷ್ಣ ಇಂದು ವಿವಿಧ ಕಲೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಕಾರಣವಾಗಿದೆ. ಶ್ರೀಕೃಷ್ಣ ಶೇಟ್, ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಆಶಾವಾದಕ್ಕೆ ಕಾರಣನಾಗಿದ್ದಾನೆ.
ಬಾಲ ಪ್ರತಿಭೆ ಶ್ರೀಕೃಷ್ಣನಿಗೆ ಸರ್ವ ಶ್ರೇಯಸ್ಸನ್ನೂ ಕೋರೋಣ.
ಚಿತ್ರಗಳ ವಿವರ:
೧. ಯಕ್ಷಗಾನ ವೇಷಧಾರಿಯಾಗಿ ಶ್ರೀಕೃಷ್ಣ
೨. ಶ್ರೀಕೃಷ್ಣನ ಚಿತ್ರ ಕಲೆ
೩ ಕೊಳಲುವಾದನ - ಶ್ರೀಕೃಷ್ಣ
- ಶ್ರೀರಾಮ ದಿವಾಣ
- Log in to post comments