ಬಾಳಿಗೊಂದು ಚಿಂತನೆ - (131) ಇಂದ್ರಿಯಗಳ ಹಿಡಿತ

ಬಾಳಿಗೊಂದು ಚಿಂತನೆ - (131) ಇಂದ್ರಿಯಗಳ ಹಿಡಿತ

ಇಂದ್ರಿಯಗಳನ್ನು ತನ್ನ ಹಿಡಿತದಲ್ಲಿಡುವವನೇ ಜೀವನವನ್ನು ಜಯಿಸಿಯಾನು. ಅದುವೇ ಹತೋಟಿಯಲ್ಲಿ ಇಲ್ಲದವ ಏನನ್ನೂ ಸಾಧಿಸಲಾರ. ಬರಿದೆ ಬಾಯಿ ಮಾತಿನಿಂದ ಏನನ್ನೋ ಹೇಳುತ್ತಾ, ಉಪಯೋಗವಿಲ್ಲದ ವಿಷಯಾಸಕ್ತನಾಗಿರುವನು. ಇಂಥವರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ತಾನೂ ಉತ್ತಮ ಜೀವನ ನಡೆಸಲಾರ. ಬೇರೆಯವರ ಬದುಕನ್ನು ಹಾಳುಮಾಡುವ ಬುದ್ಧಿ ಇಂಥವನಿಗೆ. ಅರಿಷಡ್ವರ್ಗಗಳ ದಾಸನೀತ. ನಾಲ್ಕು ಜನರ ಮಧ್ಯೆ ತಂದಿಟ್ಟು ಚಂದ ನೋಡುವವನು ಈತನು. ಇಂದ್ರಿಯಗಳ ದಾಸನಾಗುವುದರ ಬದಲು, ನಾವು ಹೇಳಿದಂತೆ ಕೇಳುವ ಹಾಗೆ ನೋಡಿಕೊಳ್ಳುವುದೇ ಜಾಣತನ. ಇಬ್ಬರ ಮಧ್ಯೆ ತಂದಿಕ್ಕಿ ಚಂದ ನೋಡುವ ಮನೋಭಾವದವನು. ಆಗ ನಾವು ನಮ್ಮದೇ ಆದ ಬುದ್ಧಿಯನ್ನು ಉಪಯೋಗಿಸಿ, ಅವರ ಸ್ನೇಹವನ್ನು ನಯವಾಗಿ ತಿರಸ್ಕರಿಸಿ ಹೊರಬರುವುದೇ ಜಾಣತನ. ಇಲ್ಲದಿದ್ದರೆ ಅವರೊಂದಿಗೆ ನಮ್ಮನ್ನೂ ಪಾತಾಳಕ್ಕೆ ತಳ್ಳಿಯಾರು. ಇವರಿಗೆ ಅಲ್ಪಮತಿಗಳೆನ್ನುವರು. ನಮ್ಮ ಇಂದ್ರಿಯಗಳು ನಮ್ಮ ಕೈಯೊಳಗಿದ್ದರೆ ಏನೂ ಮಾಡಲಾಗದು. ಇಂತಹ ಠಕ್ಕ ನರಿ ಬುದ್ಧಿಯವರಲ್ಲ ಯಾರು ಬಂದರೂ, ಹೇಗೆಲ್ಲ ತಲೆ ತಿರುಗಿಸಿ, ಬುದ್ಧಿಹಾಳುಗೆಡಹಲು ನೋಡಿದರೂ ನಾವು ಸೋಲಲಾರೆವು. ‘ಕಚ್ಚೆ ಕೈಬಾಯಿಗಳು ನಮ್ಮ ಇಚ್ಚೆಯಲ್ಲಿರಲು ಲೋಕದಲ್ಲಿ ಭಯವಿದೆಯೇ’ ಸರ್ವಜ್ಞರ ವಚನದ ಸಾಲುಗಳಲ್ಲಿ ನಾವು ಓದಿದ್ದೇವೆ. ಎಲ್ಲಾ ನಮ್ಮ ಕೈಯಲ್ಲಿಯೇ ಇದೆ. ಮುಷ್ಠಿ ಬಿಗಿಯಾಗಿರಬೇಕು, ಸಡಿಲವಾಗಬಾರದು ಅಷ್ಟೆ.

ಸುಭಾಷಿತಗಳು ಆದರ್ಶ ಜೀವನದ ಮಾರ್ಗವನ್ನು ತೋರಿಸುವುದು. ಜೀವನಕ್ಕೆ ಹತ್ತಿರ, ಸಾಹಿತ್ಯವಾಗಿಯೂ ಪ್ರಾಶಸ್ತ್ಯ ವಿದೆ. ಬರಹಗಾರನಿಗೆ ಉತ್ತಮ ನಿಧಿ.

*ಜೀತೇಂದ್ರಿಯತ್ವಂ ವಿನಯಸ್ಯ ಕಾರಣಂ ಗುಣಪ್ರಕರ್ಷೋ    ವಿನಯಾದವಾಪ್ಯತೇ|*

*ಗುಣಾಧಿಕೇ ಪುಂಸಿ ಜನೋ$ನುರಜ್ಯತೇ*

*ಜನಾನುರಾಗಪ್ರಭವಾ ಹಿ ಸಂಪದಃ||*

ಇಂದ್ರಿಯಗಳು ವಶವರ್ತಿಯಾಗಿದ್ದರೆ ನಮ್ಮಲ್ಲಿ ವಿನಯಗುಣವು ಉಂಟಾಗುವುದು. ಇನ್ನೂ ಅನೇಕ ಸದ್ಗುಣಗಳು ವಿನಯದಿಂದ ಉದ್ಭವಿಸುವವು. ಅನೇಕ  ಉತ್ತಮ ಗುಣಗಳನ್ನು ಹೊಂದಿರುವ ಸಜ್ಜನರನ್ನು ಜನರು ಮೆಚ್ಚುವರು. ಯಾರು ಜನರ, ಸಮಾಜದ ಪ್ರೀತಿ, ವಿಶ್ವಾಸ ಸಂಪಾದಿಸುವರೋ ಅವರು ಹೃದಯ ಶ್ರೀಮಂತಿಕೆ ಎಂಬ ಐಶ್ವರ್ಯ ಹೊಂದಿದವರು. ಏನಿದ್ದರೇನು ಮಾನವತ್ವವಿಲ್ಲದವನ ಹತ್ತಿರ? ಆತ ಹೊರನೋಟಕ್ಕೆ ಮಾತ್ರ. ಒಳಗೇನಿಲ್ಲ. ‘ದೂರದ ಬೆಟ್ಟ ಕಣ್ಣಿಗೆ ಚಂದ’ ಎಂಬ ಹಾಗೆ. ಮಾನವತೆಯೇ ದೊಡ್ಡ ಐಶ್ವರ್ಯ. ಅದನ್ನು ಗಳಿಸೋಣ,ಬೆಳೆಸೋಣ,ಹಂಚೋಣ.

(ಶ್ಲೋಕ: ಸುಭಾಷಿತ ರತ್ನಾವಳಿ)

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ