ಬಾಳಿಗೊಂದು ಚಿಂತನೆ -132

ಬಾಳಿಗೊಂದು ಚಿಂತನೆ -132

‘ಶರೀರದ ಶಕ್ತಿ, ಮನಸ್ಸಿನ ಶಕ್ತಿ, ಸಂಕಲ್ಪ ಶಕ್ತಿ ಇದ್ದಲ್ಲಿ ಕಾರ್ಯಸಿದ್ಧಿ’ - ಸ್ವಾಮಿ ವಿವೇಕಾನಂದರ ಶಕ್ತಿಯ ಕುರಿತಾದ ಸಂದೇಶವಿದು. ಸರ್ವಮುಖ ಶಕ್ತಿಯ ಅಗತ್ಯ ಈಗ ಬಹಳಷ್ಟಿದೆ. ಭಗವಂತನಲ್ಲಿ ಶ್ರದ್ಧೆಯಿರಲಿ. ವೇದ, ಉಪನಿಷತ್ ಗಳು ಮನುಷ್ಯರ ಜೀವಾಳ ಅವುಗಳನ್ನು ಓದಿ ತಿಳಿಯಿರೆಂದು ಕರೆಯಿತ್ತರು. ಧರ್ಮಪಾಲನೆ ಆದ್ಯಕರ್ತವ್ಯ, ಹಿಮ್ಮೆಟ್ಟದಿರಿ, ಆಚರಣೆಯಲಿರಲಿ. ಸತ್ಯವೇ ನಮ್ಮ ಉಸಿರಾಗಿರಲಿ, ನರನಾಡಿಯಲಿಯೂ ಸತ್ಯ, ದಯೆ, ಅನುಕಂಪ, ಪ್ರಾಮಾಣಿಕತೆ, ಸಹಕಾರಗಳೆಂಬ ನೈತಿಕ ಮೌಲ್ಯಗಳು ಹರಿಯಲಿ. ತಮೋಗುಣವನ್ನು ಪೂರ್ತಿ ಬಿಡಬೇಕು. ನಾವು ಏನೇ ಹೇಳಿದರೂ, ಯಾವುದರ ಬಗ್ಗೆ ಮಾತನಾಡಿದರೂ ಬಡತನದಿಂದ ಕಷ್ಟ ಪಡುವವರ ಬಗ್ಗೆ, ಸೂರಿಲ್ಲದವರ ಬಗ್ಗೆ ಮೊದಲು ಯೋಚಿಸಬೇಕು. ಸಹಾನುಭೂತಿ ಹೃದಯದಿಂದ ಬರಲಿ. ಎಲ್ಲಾ ಪಾಪಕಾರ್ಯಗಳ ಆರಂಭಕ್ಕೆ ದೌರ್ಬಲ್ಯ ಮತ್ತು ಸ್ವಂತಿಕೆ ಇಲ್ಲದಿರುವುದೇ ಕಾರಣ. ಅಂತರಂಗದ ಬಗ್ಗೆ, ಆತ್ಮಶಕ್ತಿಯ ಬಗ್ಗೆ ನಮಗೆ ನಾವೇ ಅರಿತರೆ ಎಲ್ಲಾ ಪರಿಪೂರ್ಣ. ‘ಯುವಶಕ್ತಿಗಳೇ ಎದ್ದೇಳಿ, ತೂಕಡಿಕೆ ಬೇಡ. ತೋಳುಗಳಲ್ಲಿ ಭರವಸೆಯಿಟ್ಟು ಕೆಲಸಕ್ಕೆ ಧುಮುಕಿ’ ಕರೆಯಿತ್ತ ಮಹಾನುಭಾವರು. ಯಾರು ಏನು ಬೇಕಾದರೂ ಹೇಳಲಿ ಸಮಾಜಕ್ಕೆ ಒಳ್ಳೆಯದು ಮಾಡು, ನಿನ್ನವರನ್ನು ನೋಯಿಸದಿರು, ನಮಗೆ ನಾವೇ ಶತ್ರುಗಳಾಗಬಾರದು. ‘ಹೇಡಿಯಾಗಿ ನೂರು ವರುಷದ ಬಾಳ್ವೆ ಯಾತಕ್ಕೆ? ಮರಣಕ್ಕೆ ಹೆದರದಿರು’ ಎಂಬ ಕರೆ ಯುವ ಸಮುದಾಯವನ್ನು ಬಡಿದೆಬ್ಬಿಸುವಂತಿತ್ತು. ಭಗವಂತನನ್ನು ಒಳ್ಳೆಯ ಕೆಲಸಗಳಲ್ಲಿ ಕಾಣಲು ಪ್ರಯತ್ನಿಸು, ಸ್ವಾರ್ಥಬಿಟ್ಟು ಬದುಕು. ಸ್ವಾಮಿ ವಿವೇಕಾನಂದರನ್ನು ಒಂದೆಡೆ ಸಿಡಿಲ ಸಂತ ಎಂಬುದಾಗಿ ಅವರ ವಾಕ್ ಚಾತುರ್ಯ ಕೈಗೊಂಡ ಕಾರ್ಯಗಳನ್ನು ನೋಡಿ ಕರೆದರು. ದೇಶದಲ್ಲಿ ಬಡತನ ನಿರ್ಮೂಲನೆಯಾಗಬೇಕಾದರೆ ಯುವಶಕ್ತಿ ಕಣಕ್ಕೆ ಇಳಿಯಬೇಕು, ಅದೇ ಇಲ್ಲ, ಸೋರಿಹೋಗಿ ಹಾಳಾಗುತ್ತಿದೆ. ಸದ್ಬಳಕೆಯಾಗುತ್ತಿಲ್ಲ, ಇನ್ನೂ ನಿದ್ದೆಯಲ್ಲೇ ಇದ್ದಾರೆ ಎಂಬುದು ಅವರ ಅಭಿಮತವಾಗಿತ್ತು. ವಿವೇಕಪೂರ್ಣತೆಯ ಆಲೋಚನೆಗಳು ಮೌಲ್ಯವರ್ಧನೆಗೆ ಸಹಕಾರಿ. ನಮ್ಮ ಮೇಲೆ ನಮಗೆ ನಂಬಿಕೆ ಮೊದಲಿರಬೇಕು. ದೃಢನಿಶ್ಚಯವಿರಬೇಕು. ಹಿಡಿದ ಗುರಿ ನೇರವಾಗಿದ್ದಾಗ ಗಮ್ಯ ತಲುಪಲು ಸಾಧ್ಯ. ನೇರ ಗುರಿಯಿಲ್ಲದವ ದಾರಿಯನ್ನು ಕ್ರಮಿಸಲಾರ, ಕಲ್ಲುಮುಳ್ಳು ಸರಿಸಲಾರ. ನಿಷ್ಠಾವಂತ ಮಾನವರ ಕೊರತೆ ಕಾಡುವುದೇ ಎಲ್ಲಾ ಸಮಸ್ಯೆಗಳಿಗೆ ರಹದಾರಿ. ಉತ್ಸಾಹವಿರಲಿ, ಅನಂತಶಕ್ತಿಯ ಬಗ್ಗೆ ಅರಿವಿರಲಿ. ‘ಮುದುಡಿ ಮುಪ್ಪಾದ ಮೇಲೆ ಏನಿದೆ ಹೇಳಿ? ಯೌವನದಲ್ಲಿಯೇ ಏನಾದರೂ ಒಳ್ಳೆಯದು ಮಾಡಿ. ನಂಬಿಕೆ ಇರುವುದೇ ತರುಣ ಪೀಳಿಗೆ ಸಮುದಾಯದವರ ಮೇಲೆ. ಎಲ್ಲರೂ ಒಂದಾಗಿ ಶ್ರಮಿಸೋಣ. ನಮ್ಮ ಪ್ರಾಚೀನ ಉಜ್ವಲ ಪರಂಪರೆಯ ಮೇಲೆ ನಾವು ನಿಂತಿದ್ದೇವೆ. ಅದು ಕುಸಿಯದಂತೆ ಕಾಪಾಡುವುದು ನಮ್ಮ ಕರ್ತವ್ಯ. ನಿಜವಾದ ದೇಶ ಗುಡಿಸಲುಗಳ ಒಳಗಡಗಿದೆ. ಅದನ್ನು ಪ್ರೋತ್ಸಾಹಿಸಿ ಬೆನ್ನುತಟ್ಟುವ ಕೆಲಸವಾಗಬೇಕಾಗಿದೆ. ಪ್ರತಿಯೊಂದು ವಿಷಯಗಳ ಬಗ್ಗೆ ಆಳವಾದ ಅರಿವನ್ನು ಅಧ್ಯಯನ ಮಾಡಿದರೆ ಮಾತ್ರ ತಿಳಿಯಲು ಸಾಧ್ಯ. ಅಮೂಲಾಗ್ರ ಸುಧಾರಣೆ ದೇಶದ ಪ್ರಗತಿ.

ಸ್ವಾಮಿ ವಿವೇಕಾನಂದರ ಅನುಭವ ಸಾರಗಳು ನಿತ್ಯಸತ್ಯ, ಸ್ವಲ್ಪವಾದರೂ ಅಳವಡಿಸುವ ಪ್ರಯತ್ನ ಮಾಡೋಣ.

**ನಿಂದಂತು ನೀತಿ ನಿಪುಣಾ ಯದಿ ವಾ ಸ್ತುವಂತು/*

*ಲಕ್ಷ್ಮೀ:ಸಮಾವಿಶತು ಗಚ್ಛತು ವಾ ಯಥೇಷ್ಟಮ್//*

*ಅದೈವ ವಾ ಮರಣಮಸ್ತು ಯುಗಾಂತರೇ ವಾ/*

*ನ್ಯಾಯತ್ಪಥ:ಪ್ರವಿಚಲಂತಿ ಪದಂ ನ ಧೀರಾ//*

ಹಿರಿಯರು ಬೈಯಲಿ ಹೊಗಳಲಿ, ಲಕ್ಷ್ಮೀ ಪ್ರಸನ್ನಳಾಗಲಿ ಆಗದಿರಲಿ, ಹೋಗಲಿ, ಸಾವು ಇಂದೇ ಬರಲಿ ಅಥವಾ ನಂತರ ಬರಲಿ, ಕೈಗೊಳ್ಳುವ ಸತ್ಯದ ಹಾದಿಯಿಂದ ಕೊಂಚವೂ ಅತ್ತಿತ್ತ ಸರಿಯದವನೇ ನಿಜವಾದ ಧೀರಪುರುಷ.

-ರತ್ನಾ ಕೆ ಭಟ್ ತಲಂಜೇರಿ

(ಆಕರ ಗ್ರಂಥ: ಸ್ವಾಮಿ ವಿವೇಕಾನಂದರ ವಾಣಿಗಳ ಸಂಗ್ರಹ)

(ಶ್ಲೋಕ: ಭತೃಹರಿ--ನೀತಿಶತಕ)