ಬಾಳಿಗೊಂದು ಚಿಂತನೆ - 162

ಜ್ಞಾನಿಗಳ ಮಾತನ್ನು ನಾವು ಓದಿದಾಗ, ಕೇಳಿದಾಗ ಅವರ್ಣನೀಯವಾದ ಆನಂದ ಉಂಟಾಗುತ್ತದೆ. ಸತ್ಸಂಗ ಎಂದರೆ ಅಲ್ಲಿ ನಮ್ಮ ಮನದ ಅರಿಷಡ್ವರ್ಗಗಳ ನಾಶಕ್ಕೆ ಬೇಕಾದ ಮದ್ದು ಸಿಗುವ ಸ್ಥಳ. ಮಾತುಗಳೆಂಬ ಔಷಧದ ಮೂಲಕ ನಮ್ಮ ಹೃದಯ ಪರಿವರ್ತನೆ ಆಗಬಲ್ಲುದು. ಯಾವುದಕ್ಕೂ ಸಮಯಾವಕಾಶವಿಲ್ಲದವರು, ಇದ್ದಲ್ಲಿಯೇ ಧ್ಯಾನ, ಯೋಗ, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಮಾಡಬೇಕು.
ಸಮಸ್ತ ಜಗತ್ತಿಗೂ ತಂದೆಯಾದ ಭಗವಾನ್ ಈಶ್ವರನ ‘ಓಂ ನಮ: ಶಿವಾಯ ಮಂತ್ರ’ ವನ್ನು ಬಲ್ಲವರು ೧೦೮ ಸಲ ಹೇಳಬೇಕು, ಧ್ಯಾನಿಸಬೇಕು ಹೇಳುವರು. ನಮಗೆ ಎಷ್ಟು ಸಾಧ್ಯವೋ ಅಷ್ಟು ಸರ್ತಿ ಹೇಳಬಹುದು. ಈಶ್ವರ ದೇವರು ನಿರ್ಗುಣಿ, ನಿರಾಕಾರಿ, ಲಿಂಗರೂಪಿ. ಹೇಗೆ ತಂದೆಯಾದವ ಮಕ್ಕಳನ್ನು ರಕ್ಷಿಸುವನೋ, ಹಾಗೆ ಜಗದ ಜೀವರ ತಂದೆ ಶಿವನು ನಮ್ಮನ್ನು ಕಾಪಾಡುವನೆಂಬ ನಂಬಿಕೆ.
*ಪಿತಾ ಯಥಾ ರಕ್ಷತಿ ಪುತ್ರಮೀಶ*
*ಜಗತ್ಪಿತಾ ತ್ವಂ ಜಗತ: ಸಹಾಯ:*/
*ಕೃತಾಪರಾಧಂ ತವ ಸರ್ವಕಾಲೇ*
*ಕೃಪಾನಿಧೇ ಮಾಂ ಶಿವ ಪಾಹಿ ಶಂಭೋ*//
ಹೇ ಶಿವ! ಸಮಸ್ತ ಜಗತ್ತಿನ ತಂದೆ ನೀನೇ ಭಗವನ್. ನೀನು ಜಗದ ಜೀವರ ಸಹಾಯಕ, ರಕ್ಷಕ. ಹೇ ಕೃಪಾನಿಧೇ, ಕರುಣಾಳು, ಅರಿಯದೆ ಮಾಡಿದ ಅಪರಾಧವ ಮನ್ನಿಸಿ ಪೊರೆ. ನಾವೊಂದು ಕಡೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ ಸಂದರ್ಭವನ್ನು ಓದಬಹುದು.
*ಪಿತಾಸಿ ಲೋಕಸ್ಯ ಚರಾಚರಸ್ಯ*
*ತ್ವಮಸ್ಯ ಪೂಜ್ಯಸ್ಯ ಗುರುರ್ಗರೀಯಾನ್*/
*ನ ತ್ವತ್ಸಮೋಸ್ತ್ಯಭ್ಯಧಿಕ: ಕುತೋನ್ಯೋ*
*ಲೋಕತ್ರಯೇಪ್ಯಪ್ರತಿಮಪ್ರಭಾವ*//
ಮೂರು ಲೋಕಗಳಲ್ಲಿಯೂ ಶಿವನಿಗಿಂತ ಶ್ರೇಷ್ಠ ಮತ್ತೊಂದಿಲ್ಲ, ಮತ್ತೊಬ್ಬರಿಲ್ಲ. ತಂದೆ ಮಕ್ಕಳ ಸಂಬಂಧದಂತೆ. ತಂದೆಯಾದವ ತನ್ನ ಮಗುವಿಗೆ ಆಹಾರ ಒದಗಿಸುವವ. ಆ ಕೆಲಸವನ್ನು ಪರಮೇಶ ಮಾಡ್ತಾನಲ್ಲವೇ? ಅವನ ಕಾರುಣ್ಯವಿಲ್ಲದಿದ್ದರೆ ಹೇಗೆ ಸಾಧ್ಯ? ಸನ್ಮಾರ್ಗ, ಸನ್ನಡತೆ, ಭಯ ವಿಮೋಚನೆಗೊಳಿಸುವವ ‘ತಂದೆ’ ಎನಿಸಲು ಅರ್ಹ. ಅದು ಪರಮೇಶನಿಗಿದೆ. ಸೂರ್ಯ, ಆಕಾಶ, ಚಂದ್ರ ಸೃಷ್ಟಿ ಮಾಡಿ ಅಂಧಕಾರದ ಭಯ ಹೋಗಲಾಡಿಸಿದವ. ಜೀವಿಗಳ ಜೀವನಕ್ಕೆ ಬೇಕಾದ ಹಳ್ಳಕೊಳ್ಳ, ನದಿ ಗುಡ್ಡ ಬೆಟ್ಟ, ಕಾಡು -ನಾಡು, ದವಸ-ಧಾನ್ಯಗಳು, ಹೊಲ-ಗದ್ದೆಗಳು ಸೃಷ್ಟಿಯಾಯಿತು. ಸೃಷ್ಟಿಯ ಪ್ರಾರಂಭದ ವೇದಗಳು ಹೇಳಲ್ಪಟ್ಟವು. ಯಾರು ಕೆಟ್ಟ ಕೆಲಸಗಳನ್ನು ಮಾಡುವರೋ ಅವರಿಗೆ ಬೇರೆ ಬೇರೆ ರೀತಿಯಲ್ಲಿ ತಿಳುವಳಿಕೆ ನೀಡಬೇಕು. ಮತ್ತೂ ಕೇಳದಿದ್ದರೆ ದಂಡ ವಿಧಿಸಬೇಕು. ಈಶ್ವರನು ಜಗತ್ತನ್ನು ಸೃಷ್ಟಿಸುವಾಗಲೇ ಸನ್ಮಾರ್ಗ ಚಿಂತನೆ, ದಾರಿಗಳನ್ನು ಸಹ ಜೊತೆಗೆ ಉಪದೇಶಿಸಿದನು.
ಯಾರು ಉತ್ಪತ್ತಿ ಮತ್ತು ವಿನಾಶ, ಬರುವುದು ಹೋಗುವುದು, ವಿದ್ಯೆ -ಅವಿದ್ಯೆ ಇವುಗಳನ್ನು ತಿಳಿದಿರುವನೋ ಅವನೇ ‘ಭಗವಾನ್’. ಈ ಭಗವಾನ್ ಎಂಬ ಶಬ್ದವೇ ‘ಈಶ್ವರ’. ಮಾಯೆಯನ್ನೇ ತನ್ನ ಶಕ್ತಿಯಾಗಿ ಉಳ್ಳವನು. ಭಗವಾನ್ ಈಶ್ವರನು ಲಿಂಗರೂಪಿಯಾಗಿ ನೆಲೆನಿಂತು ಹರಸುವನೆಂಬ ನಂಬಿಕೆ ನಮ್ಮದು. ಶಿವರಾತ್ರಿಯ ಈ ಪರ್ವ ಕಾಲದಲ್ಲಿ ಶಿವನನ್ನು ಆರಾಧಿಸೋಣ, ಭಜಿಸೋಣ, ಧ್ಯಾನಿಸೋಣ.ಅಹಂಕಾರವೆಂಬ ಕತ್ತಲೆಯ ಹೊರದೂಡೋಣ. ಸುಜ್ಞಾನ ದೀಪ್ತಿಯ ತನುಮನದಿ ಬೆಳಗೋಣ.
-ರತ್ನಾ ಕೆ.ಭಟ್ ತಲಂಜೇರಿ
(ಆಕರ ಪುಸ್ತಕ: ಉಪದೇಶ ಸುಧಾ)
ಚಿತ್ರ ಕೃಪೆ: ಇಂಟರ್ನೆಟ್ ತಾಣ