ಬಾಳಿಗೊಂದು ಚಿಂತನೆ - 164

ಬಾಳಿಗೊಂದು ಚಿಂತನೆ - 164

ಮಹಾಭಾರತದಲ್ಲಿ ಭೀಷ್ಮಪಿತಾಮಹರು ಹೇಳಿದ ಮಾತು ‘ಸರ್ವ ಧರ್ಮಗಳಲ್ಲಿ ಅತಿ ಶ್ರೇಷ್ಠವಾದ್ದು ಗುರುವಿನ ‌ಸೇವೆ’ ಮನುಷ್ಯನು ಪರಿಪೂರ್ಣನಾಗಲು ಗುರುವು ಬೇಕೇ ಬೇಕು. ಬ್ರಹ್ಮ ಸಾಕ್ಷಾತ್ಕಾರ ಎಂದರೆ ಗುರುದರುಷನವೇ ಆಗಿದೆ. ಬ್ರಹ್ಮ ವಸ್ತು ಹೇಗಿರುತ್ತದೆ ಎಂಬುದನ್ನು ಜನ ಸಾಮಾನ್ಯರಿಗೆ ತಿಳಿಸುವ ಸಲುವಾಗಿಯೇ ‘ಗುರು’ ಎಂಬ ಪದ, ಸ್ಥಾನ ಸೃಷ್ಟಿಯಾಯಿತು. ನಮ್ಮ ಬದುಕಿನ ಸಂಪೂರ್ಣ ವ್ಯಕ್ತಿ ಚಿತ್ರಣ ಬದಲಾಗಲು ಗುರು ಕಾರಣನಾಗಬಹುದು. ಸದ್ಭಾವನೆ ಇದ್ದವರಿಗೆ ಎಲ್ಲವೂ ಸುಸೂತ್ರ.

ಪ್ರಾಚೀನ ಸಾಹಿತ್ಯಗಳಾದ ಉಪನಿಷತ್ತುಗಳಲ್ಲಿ ಗುರುಸೇವೆಯಲ್ಲಿ ಸಾರ್ಥಕತೆಯನ್ನು ಕಂಡ ಉಪಕೋಸಲ, ಸತ್ಯಕಾಮ, ಉದ್ಧಾಲಕ ಮುಂತಾದ ಮಹಾತ್ಮರ ಕಥೆಗಳನ್ನು ಓದಬಹುದು. ಇವೆಲ್ಲವೂ ಪ್ರೇರಕ ಶಕ್ತಿಗಳು ನಮಗೆ. ಗುರುಸೇವೆಯಲ್ಲಿ ಅಹಂಕಾರ ಸಲ್ಲದು. ಸಾತ್ವಿಕತೆಗೆ ಮಾತ್ರ ಅವಕಾಶ.

ಗುರು-ಶಿಷ್ಯಸಂಬಂಧವೆಂದರೆ ತೆರೆದ ಪುಸ್ತಕದಂತೆ. ಇಲ್ಲಿ ಯಾವುದೇ ಗುಟ್ಟುಗಳಿಲ್ಲ. ಸಂಶಯ ಹತ್ತಿರ ಸಹ ಬರಬಾರದು. ನಮ್ಮ ದೇಶ ಭವ್ಯ ಪರಂಪರೆಯ ತಳಪಾಯದಡಿಯೇ ತಲೆಯೆತ್ತಿದೆ. ಇಲ್ಲಿ ಗುರು-ಶಿಷ್ಯರಿಗೆ ಉತ್ತಮ ಬಾಂಧವ್ಯವಿದೆ. ಅಜ್ಞಾನದ ಕೂಪದಿಂದ ಜ್ಞಾನವೆಂಬ ಬೆಳಕಿನೆಡೆಗೆ ತನುಮನಗಳನ್ನು ಒಯ್ಯುವವನೇ ಗುರು. ‘ನಾಸ್ತಿ ಮಾತೃ ಸಮೋ ಗುರು’ ತಾಯಿಗೆ ಮೊದಲ ಗುರು ಸ್ಥಾನ. 

‘ಮನೆಯೆ ಮೊದಲ ಪಾಠಶಾಲೆ ಜನನೀ ತಾನೇ ಮೊದಲ ಗುರು’ ನಾವೆಲ್ಲ ಓದಿದವರು. ತಂದೆ,ಆಚಾರ್ಯರು ಹೀಗೆ ಗುರುಸ್ಥಾನವನ್ನು ಹೇಳುವುದು ಸಂಪ್ರದಾಯ, ಸಂಸ್ಕೃತಿ. ‘ಮಾತೃದೇವೋಭವ, ಪಿತೃ ದೇವೋಭವ,ಆಚಾರ್ಯ ದೇವೋಭವ’ ಭಾರತೀಯ ಸನಾತನ ಸಂಸ್ಕೃತಿಯ ಕೊಡುಗೆಯಿದು. ‘ಗುರು: ಗರೀಯಾನ್ ಪಿತೃತೋ ಮಾತೃತಶ್ಚ’ ವಿದ್ಯಾಗುರುವು ನಮ್ಮ ಹೆತ್ತವರಿಗಿಂತಲೂ, ನಮ್ಮ ಜನ್ಮಕ್ಕೆ ಕಾರಣರಾದವರಿಗಿಂತಲೂ ದೊಡ್ಡವರೆಂಬ ಉಲ್ಲೇಖವಿದೆ. ಯಾರೇ ಆದರೂ ತಾಯಿ ತಂದೆಯರಿಗೆ, ಗುರುಗಳಿಗೆ ಅವಮಾನ ಮಾಡಬಾರದು.

ಮಹಾಭಾರತದಲ್ಲಿ ಒಂದೆಡೆ ಭೀಷ್ಮರು ಧರ್ಮರಾಯನ ಹತ್ತಿರ ಮಿತ್ರದ್ರೋಹಿ, ಕೃತಘ್ನ, ಸ್ತ್ರೀಹಂತಕ, ತಾಯಿ ತಂದೆ ಮತ್ತು ಗುರುಗಳ ಘಾತಕ ಈ ಪಾಪಗಳಿಗೆ ಪ್ರಾಯಶ್ಚಿತ್ತವೇ ಇಲ್ಲ ಎಂದಿದ್ದಾರೆ. ವಿದ್ಯೆಯೆಂಬ ಸಂಪತ್ತನ್ನು ನಮ್ಮದಾಗಿಸಿಕೊಳ್ಳಲು ಅನವರತ ಶ್ರಮ, ಸತತ ಸಾಧನೆ, ಏಕಾಗ್ರತೆ, ಶ್ರದ್ಧೆ, ದೃಢಸಂಕಲ್ಪ ಬೇಕು. ವಿದ್ಯೆಯ ಫಲ ಯಾವತ್ತೂ ನಮ್ಮ ಕೈಬಿಡದು. ಅರೆಜ್ಞಾನಿಗಳಾಗುವುದು ಸಮಾಜಕ್ಕೆ ಒಂದು ರೀತಿಯ ಅಪಾಯ, ಕಲಿತವನಿಗು ಪ್ರಯೋಜನವಾಗದು. ಪೂರ್ಣ ಜ್ಞಾನವನ್ನು ನಮ್ಮದಾಗಿಸಿಕೊಳ್ಳೋಣ. ತುಂಬಿದ ಕೊಡ ಯಾವತ್ತೂ ತುಳುಕದು. ಹಾಗೆಯೇ ಇರಲು ಪ್ರಯತ್ನಿಸೋಣ. ಉಪಕಾರಿಗಳಾಗೋಣ.

*ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ/*

*ಪಾತ್ರತ್ವಾದ್ಧನಮಾಪ್ನೋತಿ ಧನಾದ್ಧರ್ಮಂ ತತ: ಸುಖಂ*//

ವಿದ್ಯೆಯಿಂದ ವಿನಯ ಉಂಟಾಗುತ್ತದೆ. ವಿನಯದಿಂದ ಯೋಗ್ಯತೆ ತಾನಾಗಿಯೇ ಬರುತ್ತದೆ. ಯೋಗ್ಯತೆ ಇದ್ದಲ್ಲಿ ಗಳಿಕೆಗೆ ದಾರಿ, ಸಂಪತ್ತು ಬರುತ್ತದೆ. ಸಂಪತ್ತಿದ್ದಲ್ಲಿ ದಾನಧರ್ಮಾದಿಗಳು, ಧಾರ್ಮಿಕ ಕಾರ್ಯಗಳು ಸುಖ ಸಂತೋಷ ಲಭಿಸುವುದು. ವಿದ್ಯೆಯೇ ಭೂಷಣ, ಅರಿವೇ ಗುರು ಅರಿಯೋಣ-ತಿಳಿಯೋಣ. ನಮ್ಮ ಮಕ್ಕಳಿಗೆ ಉತ್ತಮ ವಿದ್ಯೆ ಕೊಡಿಸೋಣ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕಗಳು: ಸುಭಾಷಿತ ರತ್ನಾವಳಿ)

ಚಿತ್ರ ಕೃಪೆ: ಇಂಟರ್ನೆಟ್ ತಾಣ