ಬಾಳಿಗೊಂದು ಚಿಂತನೆ - 165

ಉತ್ತಮ ವಿಚಾರಗಳನ್ನು ಕಲಿಯಲು, ಕೇಳಿ ತಿಳಿದುಕೊಳ್ಳಲು ವಯಸ್ಸಿನ ಇತಿಮಿತಿಯಿಲ್ಲ. ‘ಅಯ್ಯೋ ನನಗೆ ವಯಸ್ಸಾಯಿತು’ ಎಂದು ಹಲುಬುವವರನ್ನು ನೋಡಿದ್ದೇವೆ. ಆರೋಗ್ಯವಾಗಿದ್ದರೆ ಉಸಿರು ನಿಲ್ಲುವವರೆಗೂ ಚಟುವಟಿಕೆಯಿಂದ ಇರಬಹುದು. ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿದಾಗ ಮತ್ತಷ್ಟೂ ಜ್ಞಾನ, ತಿಳುವಳಿಕೆ, ಗತ ಇತಿಹಾಸ, ಘಟನೆಗಳ ಬಗ್ಗೆ ಅರಿಯಬಹುದು.
*ಇತ್ಥಂ ಕವಿಕುಟುಂಬಸ್ಯ ವಚನಾನಿ ಚಿನೋತಿ ಯ:/*
*ಅವಿದ್ಧವಚನಸ್ಯಾಪಿ ತಸ್ಯವಶ್ಯಾ ಸರಸ್ವತೀ//*
ವಿದ್ವಾಂಸರಿಂದ ಅಮೂಲ್ಯ ಜ್ಞಾನ ವಚನಗಳನ್ನು ಆರಿಸಿ, ಸಂಗ್ರಹಿಸಿ ಇಟ್ಟುಕೊಳ್ಳುವವಗೆ ಸರಸ್ವತಿ ಮಾತೆ ವಶವಾದಂತೆ, ಒಲಿದಂತೆ. ಹೆಚ್ಚೆಚ್ಚು ಪುಸ್ತಕಗಳನ್ನು ಓದಿದಷ್ಟೂ, ನಾವು ಇತರರಿಗೆ ಹೇಳಬಹುದು. ಇನ್ನೊಬ್ಬರಿಗೆ ಜ್ಞಾನವನ್ನು ಹಂಚುವಾಗ ಸತ್ಯ ವಿಚಾರಗಳನ್ನು ಮಾತ್ರ ಮಂಡಿಸಬೇಕು. ‘ಒಂದು ಉತ್ತಮ ಕೃತಿ ಸಾವಿರ ಮಾತಿಗಿಂತ ಮೇಲು’ ಪುಸ್ತಕಗಳನ್ನು ಎರವಲು ಪಡೆಯದೆ ಕೊಂಡು ಓದುವ ಅಭ್ಯಾಸ ಬೆಳೆಸಿಕೊಳ್ಳೋಣ.
ಸರ್ವಜ್ಞ ಕವಿ ಒಂದೆಡೆ ತನ್ನ ತ್ರಿಪದಿಯಲ್ಲಿ ಜ್ಞಾನದ ಬಗ್ಗೆ ಹೇಳುವ ಮಾತು ಎಷ್ಟು ಮಾರ್ಮಿಕವಾಗಿದೆ.
*ಜ್ಞಾನವುಳ್ಳವನೊಡಲು ಭಾನುಮಂಡಲದಂತೆ*
*ಜ್ಞಾನವಿಲ್ಲದನ ಬರಿಯೊಡಲು ಹಾಳೂರ*
*ಸ್ಥಾನದಂತಿಕ್ಕು ಸರ್ವಜ್ಞ//*
ಜ್ಞಾನ, ತಿಳುವಳಿಕೆ, ವಿಚಾರಗಳನ್ನು ಅರಿಯಲು ಯಾವುದೇ ವಯಸ್ಸಿನ ಮಾಪನವಿಲ್ಲದೆ ಕಲಿಯೋಣವಲ್ಲವೇ? ಒಂದಲ್ಲ ಒಂದು ದಿನ ಉಪಯೋಗಕ್ಕೆ ಬರಬಹುದು. ಜ್ಞಾನ ಎನ್ನುವುದು ಬಗೆದಷ್ಟೂ ಆಳಕ್ಕೆ ಹೋಗುವಂಥದ್ದು. ಊಹೆಗೂ ನಿಲುಕಲೂ ಕಷ್ಟ. ಅರಿಯುವವನಿಗೆ ಮಾತ್ರ ಸಾಧ್ಯ ಅದರಲ್ಲಿರುವ ತಿರುಳು. ‘ಬಲ್ಲವನೇ ಬಲ್ಲ ಬೆಲ್ಲದ ರುಚಿಯ’. ಬೆಲ್ಲವೇ ತಿಂದು ಗೊತಿಲ್ಲದವರಿಗೆ ಅದು ಸಿಹಿಯೋ ಅಥವಾ ಕಹಿಯೋ ಗೊತ್ತಾಗದು. ಹಾಗೆಯೇ ಈ ತಿಳುವಳಿಕೆ ಎನ್ನುವುದು ಸಹ. ತಿಳುವಳಿಕೆ ನಿಂತ ನೀರಲ್ಲ. ಅದು ಪರಿವರ್ತನೆ ಆಗುತ್ತಿರುತ್ತದೆ. ‘ಬದಲಾವಣೆ ಜಗದ ನಿಯಮ’ ಅಲ್ವೇ? ನೀರು ಹೇಗೆ ಹರಿಯುವಾಗ ತನ್ನಲ್ಲಿರುವ ಕಸಕಡ್ಡಿಯನ್ನು ತೆಗೆದುಕೊಂಡು ಹೋಗುತ್ತದೆಯೋ ಹಾಗೆ ನಾವು ಸಹ ಮಲಿನತೆ, ಕಶ್ಮಲಗಳ ದೂರತಳ್ಳಿ, ಮನಸ್ಸಿಂದ ಕಿತ್ತುಹಾಕಿ ಮುಂದಿನ ದಾರಿ, ಜ್ಞಾನದ ಹಸಿವನ್ನು ಅರಸುತ್ತಾ ಸಾಗಬೇಕು. ವಯಸ್ಸು ಹೋಗ್ತಾ ಇರುತ್ತದೆ. ಈ ಕ್ಷಣ ನಮ್ಮದು. ಇನ್ನೊಂದು ನಿಮಿಷದಲ್ಲಿ ಏನಾಗುವುದೋ ಯಾರಿಗೂ ಗೊತ್ತಿಲ್ಲ. ಇರುವ ಈ ಕ್ಷಣವನ್ನು ಉತ್ತಮ ಕೆಲಸಕಾರ್ಯಗಳಿಗೆ ಬಳಸೋಣ. ನಾಳೆಯ ದಿನ ನಂತರ ಆಲೋಚಿಸಿದರಾಯಿತು. ನಾವೆಲ್ಲರೂ ಬಾಗುತ್ತಾ ಮಾಗಿದ ಫಲಗಳಾಗೋಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ