ಬಾಳಿಗೊಂದು ಚಿಂತನೆ - 166

ನಮ್ಮ ಜೀವನವೆಂದರೆ ಬೊಗಸೆಯೊಳಗಿರುವ ನೀರಿನಂತೆ. ಎಷ್ಟು ಹೊತ್ತು ಆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅದು ಸೋರಿಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಏನೂ ಸಾಧಿಸಲಾಗದು. ನಾವು ಹುಟ್ಟಿದ್ದು, ಹಸಿವಿಗೆ ಊಟಮಾಡಿದ್ದು, ಕೊನೆಗೊಮ್ಮೆ ಹೋದದ್ದು ಅಷ್ಟೇ ಆದೀತಷ್ಟೆ. ಹಾಗಾಗಿ ಏನಾದರೂ ಸಾಧಿಸಬೇಕೆಂದರೆ ವಯಸ್ಸಿರುವಾಗಲೇ ಆಲೋಚಿಸಬೇಕು. ನಮ್ಮ ಹತ್ತಿರ ಏನು, ಎಷ್ಟು ಇದೆ ನೋಡಿಕೊಂಡು, ಇನ್ನು ಏನು ಮಾಡಬಹುದೆಂದು ಯೋಚಿಸಿ ಮುಂದಡಿಯಿಡಬೇಕು. ನಾವು ಹೋದ ಮೇಲೂ ನಾಲ್ಕು ಜನ ನಮ್ಮ ಬಗ್ಗೆ ‘ಅಬ್ಬಾ! ಇವ ಹೋದ, ಒಮ್ಮೆ ಹೋದ್ರೆ ಸಾಕಿತ್ತು. ಇನ್ನು ನೆಮ್ಮದಿ ಊರಿಗೆ’ ಎಂಬ ಮಾತು ಯಾರೂ ಹೇಳದಂತೆ ನಮ್ಮ ವ್ಯವಹಾರವಿರಬೇಕು. ಡಿ.ವಿ.ಜಿಯವರು ತಮ್ಮ ಕಗ್ಗದಲ್ಲಿ ಹೇಳಿದ ಮಾತುಗಳು ಎಷ್ಟೊಂದು ಸೂಕ್ತ.
*ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು,*
*ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ*/
*ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ*
*ಎಲ್ಲರೊಳಗೊಂದಾಗು-ಮಂಕುತಿಮ್ಮ*//
ಹುಲ್ಲು ಪಶುಗಳ, ಪ್ರಾಣಿಗಳ ಆಹಾರ. ನೋಡುಗರ ಕಣ್ಣಿಗೆ ಅಲಂಕಾರ, ಸೌಂದರ್ಯ ಸಹ. ತನ್ನನ್ನು ಬಂದು ತಿನ್ನೆಂದು ಯಾವತ್ತೂ ಹುಲ್ಲು ಹೇಳುವುದಿಲ್ಲ. ಮಲ್ಲಿಗೆಯ ಸುವಾಸನೆ, ಘಮಲು ನಮಗೆಲ್ಲ ತಿಳಿದಿದೆ. ಕಷ್ಟಗಳಿಗೆ ಅಂಜದೆ ಹೆದರದೆ ಕಲ್ಲಿನ ಹಾಗಿರಬೇಕಂತೆ. ದೀನರಿಗೆ, ಕೈಲಾಗದವರಿಗೆ ಸಹಕರಿಸು. ಪ್ರೀತಿ, ವಿಶ್ವಾಸ ಹಂಚಿ ಬಾಳಬೇಕು. ಇರುವುದನ್ನು ತಾನೂ ಉಪಯೋಗಿಸಿ, ಒಂದಂಶ ಇಲ್ಲದವರಿಗೆ ನೀಡಿ ಅದರಲ್ಲಿ ಸಂತೋಷಪಡಬೇಕು. ಎಲ್ಲರೊಂದಿಗೆ ಬದುಕು, ಎಲ್ಲರೂ ಬೇಕು ನಮಗೆ. ಒಂಟಿ ಜೀವನ ಬೇಡ.
ಉತ್ತಮ ಗುಣನಡತೆಗಳಿಂದ, ಸತ್ಕಾರ್ಯಗಳನ್ನು ಮಾಡುತ್ತಾ, ಧರ್ಮಕ್ಕೆ ಚ್ಯುತಿ ಬಾರದಂತೆ, ಒಳ್ಳೆಯ ಹೆಸರನ್ನು ಗಳಿಸಬೇಕು. ಇತರರಿಗೆ ತೊಂದರೆ ಕೊಡದೆ ಜೀವಿಸಬೇಕು.
*ಅಸ್ಥಿರಂ ಜೀವಿತಂ ಲೋಕೇ ಅಸ್ಥಿರೇ ಧನ ಯೌವನೇ/*
*ಅಸ್ಥಿರಾ ಪುತ್ರದಾರಾಶ್ಚ ಧರ್ಮ ಕೀರ್ತಿದ್ವಯಂ ಸ್ಥಿರಂ//*
ಈ ಪ್ರಪಂಚದಲ್ಲಿ ಜೀವನ, ಬದುಕು ಅಸ್ಥಿರವಾದ್ದು. ತಾರುಣ್ಯ, ಐಶ್ವರ್ಯ ಅಸ್ಥಿರ. ಪತಿ-ಪತ್ನಿ, ಮಕ್ಕಳು ಸಂಬಂಧಗಳು ಸಹ ಅಸ್ಥಿರ. ಶಾಶ್ವತ ಧರ್ಮ ಮತ್ತು ಕೀರ್ತಿ ಮಾತ್ರ. ಇವೆರಡಕ್ಕೆ ಅಳಿವಿಲ್ಲ. ನಮ್ಮ ಗುಣನಡತೆ, ಶೀಲ ಚಾರಿತ್ರ್ಯ, ಆತ್ಮಗೌರವ ಎಲ್ಲವೂ ನಾವಳಿದ ಮೇಲೂ ಇರುವುದೆಂಬ ಪ್ರಜ್ಞೆ ಇರಲಿ. ಹಾಗೆಯೇ ಪ್ರಯತ್ನಿಸೋಣ. ಇಲ್ಲದಿದ್ದರೆ ‘ರೈಲು ಹೋದ ಮೇಲೆ ಟಿಕೆಟ್’ ತೆಗೆದ ಹಾಗೆ ಆಗಬಹುದು.
-ರತ್ನಾ ಕೆ .ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ರತ್ನಾವಳಿ)