ಬಾಳಿಗೊಂದು ಚಿಂತನೆ - 167

ಬಾಳಿಗೊಂದು ಚಿಂತನೆ - 167

ನಮಗೆ ಕಷ್ಟ-ನಷ್ಟಗಳು ಬಂದಾಗ ಅಯ್ಯೋ ಹೀಗಾಯಿತಲ್ಲ ಎಂದು ದುಃಖ ಪಡುತ್ತೇವೆ. ಆದರೆ ಅದು ನಮ್ಮನ್ನು ಗಟ್ಟಿಗೊಳಿಸುತ್ತದೆ. ಬದುಕಿ ತೋರಿಸು ಎಂಬ ಸಂದೇಶ ನೀಡುತ್ತದೆ. ನೆಲದಲ್ಲಿ ಗಟ್ಟಿಯಾಗಿ ಹೆಜ್ಜೆಯೂರಲು ಸಹಾಯ ಮಾಡುತ್ತದೆ. ನಮ್ಮೊಳಗಿನ ಶಕ್ತಿ ಏನೆಂದು ಗೊತ್ತಾಗುವುದೇ ಇಂತಹ ಸಂದರ್ಭದಲ್ಲಿ. ಯಾವುದಕ್ಕೂ ಜಗ್ಗದೆ, ಕುಗ್ಗದೆ, ಮಣಿಯದೆ ಮುಂದಡಿಯಿಟ್ಟರೆ, ಸೋಲು ಇಲ್ಲ. ನಮ್ಮ ವ್ಯಕ್ತಿತ್ವ ಏನೆಂದು ನಮಗೂ ಇತರರಿಗೂ ಅರಿವಾಗುವುದು ಹೀಗಾದಾಗ ಮಾತ್ರ. ‘ಹುಟ್ಟಿಸಿದ ದೇವ ಹುಲ್ಲು ಮೇಯಿಸದೆ ಇರುವನೇ’? ಹಾಗೆಂದು ಕೈಕಟ್ಟಿ ಕುಳಿತರೆ ಹುಲ್ಲು ಬಿಡಿ ಮಣ್ಣು ಸಹ ಸಿಗದು. ಈ ಜಗದಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಆದರೆ ಕಷ್ಟ ಪಡಬೇಕು. ದುಡಿಯಬೇಕು. ಯಾರದೋ ಗಳಿಕೆಯಲ್ಲಿ ತಿನ್ನುವ ಆಲೋಚನೆ ಬೇಡ. ಭಗವಂತನ ಕೃಪಾಶ್ರಯದ ಮೇಲೆ ನಂಬಿಕೆ ಇರಿಸಬೇಕು.

ನಾನು ನಮ್ಮ ಯೋಚನೆಗಳು, ಯೋಜನೆಗಳೇ ಮಾತಾಗಿರಬೇಕು. ಮಾತುಗಳಲ್ಲಿ ಕೃತಿ ತುಂಬಿರಬೇಕು. ಕೃತಿಗಳೇ ಅಭ್ಯಾಸಗಳಾಗಿರಬೇಕು. ಹೀಗಿದ್ದಾಗ ಜೀವನದಲ್ಲಿ ಕಷ್ಟ ಎಂಬ ನದಿಯನ್ನು ಲೀಲಾಜಾಲವಾಗಿ ಈಜಿ ದಡ ಸೇರಬಹುದು ಅಲ್ಲವೇ? ಕಷ್ಟಗಳು ಮಾನವನಿಗಲ್ಲದೆ ಇನ್ನಾರಿಗೆ ಬರಲು ಸಾಧ್ಯ? ಒಂದೆಡೆ ಜೀವಗಳ ಮಾರಣ ಹೋಮ ಆಗುತ್ತಿದೆ. ನೋಡುವಾಗ ಕರುಳು ಕಿತ್ತು ಬರುತ್ತಿದೆ. ‘ಬದುಕು, ಜೀವ ಎನ್ನುವುದು ಇಷ್ಟೂ ನಿಕೃಷ್ಟವಾಯಿತೇ’ ಎಂದು ಒಳಮನಸ್ಸು ಚೀರುತ್ತಿದೆ. ಇಂತಹ ವೈಜ್ಞಾನಿಕ ಸಾಧನಗಳೇ ಬೇಡವಿತ್ತೇನೋ ಎಂದು ಕಾಣುತ್ತದೆ. ಒಟ್ಟಿನಲ್ಲಿ ಮನುಷ್ಯ ಸಂಬಂಧಗಳಿಗೆ ಬೆಲೆಯಿಲ್ಲ, ದ್ವೇಷದ ಹೊಗೆ ಆವರಿಸಿದಾಗ ಕಣ್ಣಿಗೆ ಪೊರೆ ಬರುವುದು ಸಹಜ. ಸಿಟ್ಟಿನಲ್ಲಿ ಕೊತಕೊತ ಕುದಿಯುತ್ತಿದ್ದವಗೆ ಇತರರ ಮಾತು ರುಚಿಸದು.ಮಾತುಕತೆ,ಸಂಧಾನದ ಮೂಲಕ ಬಗೆಹರಿಸಬಹುದಾದ ಸಂಗತಿಗಳು,ಹಿಮಾಲಯದೆತ್ತರ ಬೆಳೆದು ನಿಂತರೆ ಕೆಡವಲು ಕಷ್ಟ.

ಈ ಸನ್ನಿವೇಶದಲ್ಲೂ ನಾವು ಬದುಕಬೇಕೆಂದರೆ ಉಪಾಯಗಳನ್ನು ಕಂಡುಹಿಡಿಯಬೇಕು. ನಮ್ಮದೇ ಆದ ಜನ, ಮನೆಮಠ, ನಮ್ಯವರು ಅನಿಸಿಕೊಂಡವರ ಬಗ್ಗೆ ಆಲೋಚಿಸಬೇಕಾಗುತ್ತದೆ.

*ನಹಿ ವೈರೇಣ ವೈರಾಣಿ ಶಾಮ್ಯಂತೀಹ ಕದಾಚನ*/

*ಅವೈರೇಣೈವ ಶಾಮ್ಯಂತಿ ಏಷ ಧರ್ಮ: ಸನಾತನ:*/

ವೈರದ ಉಪಶಮನ ವೈರದಿಂದಲ್ಲ. ಅಲ್ಲಿ ಮಾತುಕತೆ, ಪ್ರೀತಿ, ಸ್ನೇಹಗಳು ಕೆಲಸಕ್ಕೆ ಬರಬಹುದು. ಸತ್ಯ, ಅಹಿಂಸೆ, ಸಾವು-ನೋವುಗಳ ಅರಿವನ್ನು ಚಿಂತಿಸಿದಾಗ ಪರಿಹಾರ ಇದ್ದೇ ಇದೆ. ನಮ್ಮ ಸನಾತನ ಸಂಸ್ಕೃತಿಯ ಸಾರ ಅದುವೇ ಅಲ್ಲವೇ? ಮನುಷ್ಯ ಪ್ರಯತ್ನ ಅತಿ ದೊಡ್ಡದು. ಆ ಪ್ರಯತ್ನ ಪಡೋಣ. ಧರ್ಮಮಾರ್ಗ ಬಿಟ್ಟು ಹೋಗಬಾರದು. ಇಲ್ಲಿ ಧರ್ಮ ಎಂದರೆ ಸತ್ಯ, ನ್ಯಾಯ, ನಿಷ್ಠೆ. ಹಾಗಿದ್ದಾಗ ಕಣ್ಣಿಗೆ ಗೋಚರವಾಗದ ಶಕ್ತಿಯೊಂದು ಬೆನ್ನ ಹಿಂದೆ ನಿಂತು ಖಂಡಿತಾ ಸಹಕಾರ ಯಾವುದಾದರೂ ಒಂದು ರೂಪದಲ್ಲಿ ನೀಡಬಹುದು. ನಂಬಿಕೆ, ವಿಶ್ವಾಸ ಮುಖ್ಯ. ದು:ಖ ಪಡುವುದನ್ನು ಬಿಟ್ಟು ಬದುಕಲು ನಾನಾ ದಾರಿಗಳನ್ನು ಅರಸುತ್ತಾ ನೆಲೆ ಕಂಡುಕೊಳ್ಳೋಣ.

-ರತ್ನಾ .ಕೆ.ಭಟ್ ತಲಂಜೇರಿ

(ಶ್ಲೋಕ: ಸಂಸ್ಕೃತಿ ಸಾರ)

ಚಿತ್ರ ಕೃಪೆ: ಇಂಟರ್ನೆಟ್ ತಾಣ