ಬಾಳಿಗೊಂದು ಚಿಂತನೆ - 169

ಬಾಳಿಗೊಂದು ಚಿಂತನೆ - 169

ನಮಗೆ ಯಾರ ಮೇಲಾದರೂ ವಿಶ್ವಾಸ ಬಂದರೆ ಕಣ್ಣುಮುಚ್ಚಿ ಅವರು ಹೇಳಿದ್ದನ್ನು ಕೇಳುತ್ತೇವೆ. ಬಹಳ ನಂಬಿಗಸ್ಥನ ಹಾಗೆ ಮಾತಾಡ್ತಾನೆ. ನಿಧಾನದಲ್ಲಿ ಆತ ಬೆನ್ನಿನ ಹಿಂದೆ ಇರಿವಾಗಲೇ ಆತನ ಹುಳುಕು ಗೊತ್ತಾಗುವುದು. ನಂಬಿಕೆ ಬಂದ ಮೇಲೆ ಏನೇನೋ ಸಂಗತಿಗಳನ್ನು ಆತನಲ್ಲಿ ಹಂಚಿಕೊಳ್ಳಲೂ ಬಹುದು. ಯಾವಾಗ ಪರಿಸ್ಥಿತಿ ಓರೆಯಾಯಿತೋ ಆತನ ಬಳಿ ಮಾತನಾಡಿದ ವಿಷಯಗಳನ್ನು ಬೇರೆಯವರ ಹತ್ತಿರ ಹರಿಯಬಿಟ್ಟಿರುತ್ತಾನೆ. ಹಾಗಾದರೆ ಹೀಗಿರುವ ವ್ಯಕ್ತಿಗಳು ನಂಬಿಕೆಗೆ ಎಷ್ಟು ಅರ್ಹರು? ಒಬ್ಬರನ್ನು ನಂಬುವಾಗಲೂ ಬಹಳ ಜಾಗ್ರತೆ ಮಾಡಬೇಕು. ಇಲ್ಲದಿದ್ದರೆ ನಮ್ಮಲ್ಲಿರುವ ಒಳ್ಳೆಯತನವನ್ನು ನಾವಾಗಿಯೇ ಗಾಳಿಯಲ್ಲಿ ಹಾರಿ‌ಸಿದಂತಾಗಬಹುದು. ಯಾರಲ್ಲಿ ವಿನಯ ವಿಧೇಯತೆ ಇಲ್ಲವೋ ಅವನಿಗೆ ತಾನೆಂಬ ಅಹಂ ಹೆಚ್ಚು. ಇದು ಮನುಷ್ಯರಲ್ಲಿ ಕಾಣುವ ಸಾಮಾನ್ಯ ಗುಣ. ಹಳ್ಳಿ ಮಾತುಗಳಲ್ಲಿ ಪೊಗರು ಹೇಳ್ತೇವೆ. ಯಾರೂ ಹೇಳಿದ್ದನ್ನು ಕೇಳುವ ಸ್ವಭಾವ ಅವರಿಗಿಲ್ಲ. ತಾನು ಹೇಳಿದ್ದು ಮಾತ್ರ ಸರಿ, ಉಳಿದವರದ್ದೆಲ್ಲ ತಪ್ಪು ಎನ್ನುವ ಧೋರಣೆ ಅವರದು. ಐಶ್ವರ್ಯವೂ ಸೇರಿದರೆ ಕೇಳುವುದೇ ಬೇಡ, ಯಾರಿಗೂ ಅವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಇಂದ್ರಿಯಗಳ ಮೇಲಿನ ಹಿಡಿತವೇ ವಿನಯ ಸಂಪನ್ನತೆ.

*ನಯಸ್ಯ ವಿನಯೋ ಮೂಲಂ ವಿನಯ: ಶಾಸ್ತ್ರನಿಶ್ಚಯ:/*

*ವಿನಯೋ ಹೀಂದ್ರಿಯಜಯ: ತದ್ಯುಕ್ತ: ಶಾಸ್ತ್ರಮೃಚ್ಛತಿ//*

ನೀತಿಯ ಮೂಲವೇ ವಿನಯ.ಎಲ್ಲಾ ಶಾಸ್ತ್ರಗಳ ಗುರಿ ವಿನಯ ಸಂಪಾದನೆ. ಇಂದ್ರಿಯಗಳ ಮೇಲಿನ ಹಿಡಿತ ವಿನಯದಿಂದಲೇ ಬರುವುದು. ಸಕಲ ಶಾಸ್ತ್ರಗಳ ಸಾರವನ್ನು ಅರಿಯಲು ವಿನಯವೆಂಬ ಆಭರಣ ಬೇಕು. ವಿನಯ, ವಿಧೇಯತೆ, ನಂಬಿಕೆ, ವಿಶ್ವಾಸ ಇವೆಲ್ಲ ಜೀವನ ಮೌಲ್ಯಗಳು. ಇವುಗಳನ್ನು ಅಳವಡಿಸಿಕೊಂಡವ ಯಾವತ್ತೂ ಸೋಲಲಾರ. ಯಾರು ಎಷ್ಟೇ ಧೂರ್ತತನ ಎಸಗಿದರೂ, ಒಮ್ಮೆಗೆ ಆತನಿಗೆ ಜಯ ಸಾಧಿಸಿದೆನೆಂಬ ಅಹಂ ಆದರೂ ಮುಂದೆ ಸೋಲು ಕಟ್ಟಿಟ್ಟ ಬುತ್ತಿ. ಉತ್ತಮನನ್ನು ಒರೆಗೆ ಹಚ್ಚುವುದು ಹೆಚ್ಚಂತೆ. ತಡವಾಗಿಯಾದರೂ ಆತ ಬೆಳಕಿಗೆ ಬರ್ತಾನೆ. ಸಮಾಜದಲ್ಲಿ ಹೀಗಿರುವುದನ್ನು ಎಷ್ಟೋ ಕಂಡಿದ್ದೇವೆ. ಉತ್ತಮ ಗುಣಗಳಿಂದ ಶೋಭಿತನಾಗಿ, ಇತರರಿಗೆ ತೊಂದರೆ ಕೊಡದೆ ಇರುವುದೆಂದರೆ ಭಗವಂತನ ಆರಾಧನೆ ಮಾಡಿದಂತೆ.ಅದುವೇ ಈಶ್ವರ ಪೂಜೆ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ: ಸಂಸ್ಕೃತಿ ಸಂಚಾರ)

ಚಿತ್ರ ಕೃಪೆ: ಇಂಟರ್ನೆಟ್ ತಾಣ