ಬಾಳಿಗೊಂದು ಚಿಂತನೆ - 206

ಬಾಳಿಗೊಂದು ಚಿಂತನೆ - 206

‘ಉಪಕಾರ ಸ್ಮರಣೆ’ ಎಂಬುದು ‘ಹೊನ್ನ ಕಲಶದಂತೆ’.ಕಷ್ಟ ಕಾಲದಲ್ಲಿ ಕೈಹಿಡಿದವರನ್ನು ಯಾವತ್ತೂ ಮರೆಯಬಾರದು. ಮರೆತರೆ ಆತನ ಬಳಿ ಸ್ವಲ್ಪವೂ ನೈತಿಕ ಗುಣಗಳಿಲ್ಲವೆಂಬುದು ಸ್ಪಷ್ಟ. ಬಾಲ್ಯಕಾಲದಲ್ಲಿಯೇ ಮಗುವಿಗೆ ಉತ್ತಮ ಸಂಸ್ಕಾರಗಳನ್ನು ನೀಡಿದಲ್ಲಿ ಹೀಗಾಗಲು ಸಾಧ್ಯವಿಲ್ಲ. ಎಳೆಯ ಸಮಯದಲ್ಲಿ ಕಲಿತ ಪ್ರತಿಯೊಂದು ಸಹ ಅಚ್ಚೊತ್ತಿದಂತೆ ಮನಸ್ಸಿನಲ್ಲಿ ನಿಲ್ಲುವುದು.

ಕೃತಜ್ಞತೆ ಎನ್ನುವುದು ಅತ್ಯಂತ ದೊಡ್ಡ ಗುಣ. ನಮಗೆ ಮಾಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದು ಧರ್ಮ. ಮರೆತರೆ ಅದನ್ನೇ ‘ಕೃತಘ್ನತೆ’ ಹೇಳ್ತೇವೆ. ಅದನ್ನು ದ್ರೋಹ ಹೇಳಬಹುದು. ಉಂಡ ಮನೆಗೆ ಯಾರೂ ದ್ರೋಹ ಮಾಡಬಾರದು. ಇದು ಪಾಪದ ಕೆಲಸ ಸಹ. ಕಷ್ಟದಲ್ಲಿದ್ದವರಿಗೆ ಸಹಾಯಹಸ್ತ ನೀಡುವುದು ಮಾನವೀಯತೆ. ಆದರೆ ಸಹಾಯ ಪಡಕೊಂಡವನು ಮಾತ್ರ ತಾನು ಉತ್ತಮ ಸ್ಥಿತಿಗೆ ಬಂದಾಗ ಸಹಾಯ ಮಾಡಿದವನನ್ನು ಪರಿಚಯವೇ ಇಲ್ಲದ ಹಾಗೆ ಮಾಡುವುದನ್ನು ಸಮಾಜದಲ್ಲಿ ಕಾಣ್ತಾ ಇದ್ದೇವೆ. ಇದು ವಿಪರ್ಯಾಸ. 

ಯಾವತ್ತೂ ಸಹಕರಿಸಿದವನ ಬಗ್ಗೆ ಕೃತಜ್ಞತೆ ಇರಲಿ. ನಮ್ಮ ಮನೆಯ ಶ್ವಾನಕ್ಕೆ ಮೂರು ಹೊತ್ತು ಹೊಟ್ಟೆಗೆ ನೀಡಿ, ಪ್ರೀತಿ ತೋರಿಸಿದರೆ, ಬದುಕಿನುದ್ದಕ್ಕೂ ಎಷ್ಟು ನಿಯತ್ತಿರುತ್ತದೆ ಅಲ್ಲವೇ? ಅದರಿಂದಲೂ ಕೆಳಮಟ್ಟಕ್ಕೆ ನಾವು ಹೋಗುವುದು ಸರಿಯಲ್ಲ. ದಾನ-ಧರ್ಮ ಎನ್ನುವುದು ಹಿರಿಯರಿಂದ, ಸಂಸ್ಕಾರದಿಂದ, ಸಮಾಜದಿಂದ, ಸ್ವ ಪ್ರೇರಣೆಯಿಂದ ಬರುವಂತಹ ಮೌಲ್ಯವಾಗಿದೆ. ದೀನರಿಗೆ, ಬಡವರಿಗೆ, ಕೈಲಾಗದವರಿಗೆ, ವಯಸ್ಸಾದವರಿಗೆ ಸಹಕರಿಸಿದರೆ ದೇವ ಮೆಚ್ಚುವ ಕೆಲಸ. ಒಬ್ಬರು ಕೊಡುತ್ತಾರೆಂದು ಸುಮ್ಮ ಸುಮ್ಮನೆ ತೆಗೆದುಕೊಳ್ಳುವುದು ತರವಲ್ಲ. ನಮಗೆ ಅಗತ್ಯವಿದ್ಧರೆ ಮಾತ್ರ ಪಡಕೊಳ್ಳುವುದು ಭೂಷಣ. ಕೊಟ್ಟಿದ್ದೇವೆಂದು ಹೇಳಿಕೊಂಡು ಬರುವುದು ಸಹ ಒಳ್ಳೆಯದಲ್ಲ. ಆದರೆ ಪಡಕೊಂಡ ಮನುಷ್ಯ ದ್ರೋಹವೆಸಗಿದರೆ ಇದು ಅನಿವಾರ್ಯ.

   *ಬ್ರಹ್ಮ ಘ್ನೇ ಚ ಸುರಾಪೇ ಚ*

       *ಚೋರೇ ಭಗ್ನವ್ರತೇ ಶಠೇ*

        *ನಿಷ್ಕ್ರತಿರ್ವಿಹಿತಾ ಸದ್ಭಿಃ*

          *ಕೃತಘ್ನೇ ನಾಸ್ತಿ ನಿಷ್ಕ್ರತಿಃ||*

ವಿದ್ಯಾವಂತನಾದ ಸಜ್ಜನ ವ್ಯಕ್ತಿಯನ್ನು ಕೊಲೆಮಾಡಿದವನಿಗೂ, ಹೆಂಡ ಕುಡಿದವನಿಗೂ, ಚಿನ್ನ ಇತ್ಯಾದಿ ಕದ್ದ ಕಳ್ಳನಿಗೂ, ಒರಟನಿಗೆ, ಮರ್ಯಾದೆ ಉಲ್ಲಂಘಿಸಿ ಮೋಸಮಾಡುವವನಿಗೆ ಸಹ ಪ್ರಾಯಶ್ಚಿತ್ತವಿದೆ. ಆದರೆ ಕೃತಘ್ನನಿಗೆ ಕ್ಷಮೆಯೂ  ಇಲ್ಲ ಪ್ರಾಯಶ್ಚಿತ್ತವೂ ಇಲ್ಲ . ಪಡೆದದ್ದನ್ನು , ಆರ್ಥಿಕವಾಗಿ ಬೆಂಬಲ ನೀಡಿದ್ದನ್ನು ಮರೆಯದೆ, ಕೃತಘ್ನರಾಗದೆ ಮಾನವೀಯತೆಯನ್ನು ಉಳಿಸಿಕೊಳ್ಳೋಣ.

-ರತ್ನಾ ಕೆ ಭಟ್ ತಲಂಜೇರಿ

(ಶ್ಲೋಕ: ಪಂಚತಂತ್ರ)

ಚಿತ್ರ ಕೃಪೆ: ಇಂಟರ್ನೆಟ್ ತಾಣ