ಬಾಳಿಗೊಂದು ಚಿಂತನೆ (22) -ಸುಭಾಷಿತ

ಮಾನಸಂ ಶಮಯೇತ್ತಸ್ಮಾತ್ ಜ್ಞಾನೇನಾಗ್ನಿಮಿವಾಂಬುನಾ/
ಪ್ರಶಾಂತೇ ಮಾನಸೇ ಹ್ಯಸ್ಯ ಶಾರೀರಮುಪಶಾಮ್ಯತಿ//
ಬೆಂಕಿಯನ್ನು ನೀರಿನಿಂದ ಆರಿಸಬಹುದು. ಅಗ್ನಿಯ ಶಮನಕ್ಕೆ ಜಲವೇ ಆಗಬೇಕು. ಅದೇ ರೀತಿ. ಮಾನಸಿಕ ದುಃಖ, ನೋವು, ಹತಾಶೆ ಇವುಗಳನ್ನು ಶಮನಮಾಡಲು ಜ್ಞಾನವೆಂಬ ನೀರು ಅಗತ್ಯವಾಗಿ ಬೇಕು. ಧ್ಯಾನ, ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ದುಃಖ ಕಡಿಮೆಯಾಗಬಹುದು. ಅತಿಯಾದ ಸಿಟ್ಟು, ಯಾರಲ್ಲಿಯೂ ಹೇಳಿಕೊಳ್ಳಲಾಗದ ನೋವಿನ ವಿಚಾರಗಳು ಆದಾಗ ದೇಹ ಜರ್ಜರಿತವಾಗುತ್ತದೆ. ಅದಕ್ಕೆ ಔಷಧ ಮೌನವಾಗಿ ಕುಳಿತು ಧ್ಯಾನಮಾಡುವುದು. ಮನಸ್ಸನ್ನು ಕೇವಲ ಉಸಿರಿನಲ್ಲಿ ಕೇಂದ್ರೀಕರಿಸಿದಾಗ ನೆಮ್ಮದಿ ಸಿಗುತ್ತದೆ. ಮನಸ್ಸು ಪ್ರಶಾಂತವಾಗಿ, ಶರೀರವೂ ಸ್ವಸ್ಥವಾಗುತ್ತದೆ.
ಆಧಾರ:ಸರಳ ಸುಭಾಷಿತ
***
ಬದುಕಿನ ಸತ್ಯ
ನಾವು ಈ ಜೀವನದ ಸುದೀರ್ಘ ಹಾದಿಯಲಿ ಪಯಣಿಸುವಾಗ, ಕಲ್ಲು ಮುಳ್ಳುಗಳು ಹೇಗೆ ದಾರಿ ಕ್ರಮಿಸುವಾಗ ಸಿಗುವುದೋ ಹಾಗೆಯೇ *ಕಷ್ಟ ಮತ್ತು ಸುಖಗಳು* ಸಿಗುತ್ತವೆ. ಅವುಗಳನ್ನು ದಾಟಿಕೊಂಡು ಮುಂದೆ ಮುಂದೆ ಹೋಗುತ್ತೇವೆ. ಈ ಎಲ್ಲಾ ಸಂದರ್ಭದಲ್ಲಿ ನಮ್ಮ ಜೊತೆಗಿರುವ ಸ್ನೇಹಿತರು ಎಂದರೆ *ಮುಗುಳ್ನಗು ಮತ್ತು ಮೌನ*. ಇದು ನಿತ್ಯ ಸತ್ಯ ವಿಚಾರಗಳು.
-ರತ್ನಾ ಭಟ್, ತಲಂಜೇರಿ.
ಚಿತ್ರ: ಇಂಟರ್ನೆಟ್ ತಾಣ