ಬಾಳಿಗೊಂದು ಚಿಂತನೆ - 40

ಬಾಳಿಗೊಂದು ಚಿಂತನೆ - 40

ಸಂಬಂಧದಲ್ಲಿ ಸಂದೇಹ ಇಣುಕಿ ಸಹ ನೋಡಬಾರದು. ಎಲ್ಲಿ ಸಂದೇಹ ತಲೆ ಹಾಕ್ತದೋ ಅಲ್ಲಿ ಸಂಬಂಧ ಕೆಡುತ್ತಾ ಬರುವುದು ಸಾಮಾನ್ಯ. ಒಮ್ಮೆ ಸಂದೇಹ ತಲೆಗೆ ಹೊಕ್ಕರೆ, ಅದು ಮರದ ಹುಳ(ಗೆದ್ದಲು)ದ ಹಾಗೆ. ನಿಧಾನವಾಗಿ ಕೊರೆಯುತ್ತಾ ಬದುಕನ್ನು ಮೂರಾಬಟ್ಟೆ ಮಾಡುವುದರಲ್ಲಿ ಸಂಶಯವಿಲ್ಲ.

ಹಿಂದೆ ಒಮ್ಮೆ ನನ್ನ ಬಳಿ ಓರ್ವ ಮಹಿಳೆ ಭೇಟಿಯಾಗಿ ಹೇಳಿದಳು *ನನಗೆ ಗಂಡನಿಂದ ವಿಚ್ಛೇದನ ಕೊಡಿಸಿ ಟೀಚರೇ* ಎಂಬುದಾಗಿ. ನನಗೆ ಆಶ್ಚರ್ಯವೂ, ಇನ್ನೊಂದೆಡೆ ಸ್ವಲ್ಪ ಸಿಟ್ಟೂ ಬಂತು. ನಾನು ಹೇಳಿದೆ "ಅಮ್ಮ, ನಾನು ಲಾಯರಲ್ಲ, ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿ" ಎಂಬುದಾಗಿ. ಅವಳದ್ದು ಒಂದೇ ಹಠ, ಅವನೊಟ್ಟಿಗೆ ಬಾಳಲಾರೆ ಎಂದು.

ಸಂಜೆ ಪುನಃ ಬರಹೇಳಿ ನಿಧಾನವಾಗಿ ವಿಷಯ ಕೇಳಿ ತಿಳಿದಾಗ * ಸಂದೇಹ, ಸಂಶಯ * ಎರಡೂ ಇಣುಕಿ ಹ್ಯೊಕೈ ಆಗಿ ಕಡೇಗೆ ನನ್ನ ಬಳಿ ಬಂದಂತೆ ಆಕೆ. ಅಂತೂ ಇಬ್ಬರನ್ನೂ ಬರಹೇಳಿ, ಮುಖತಾ ಮಾತನಾಡಿ  ಸರಿಮಾಡಿ, ಇವತ್ತಿಗೂ ಚಂದದಲ್ಲಿ ಸಂಸಾರ ನಡೆಸುತ್ತಾ ಇದ್ದಾರೆ. ನಾನು ಹೇಳಿದೆ "ಒಬ್ಬ ಮಗ ಇದ್ದಾನೆ ಈಗ ೧ನೇ ತರಗತಿ ಮುಂದೆ ದೊಡ್ಡವನಾದಂತೆ ನಿಮ್ಮಿಬ್ಬರ ಬಗ್ಗೆ ತಿಳಿದಾಗ ಅವನಿಗೆ ಹೇಗೆ ಅನಿಸಬಹುದು, ಇಬ್ಬರನ್ನೂ ತುಚ್ಛೀಕರಿಸ್ತಾನೆ, ನಿಮ್ಮ ಬಗ್ಗೆ ಅವನಲ್ಲಿ ತಿರಸ್ಕಾರದ ಭಾವನೆ ಮೂಡಲು ಪ್ರಾರಂಭವಾಗುತ್ತದೆ. ನಿಮಗೆ ಆಗ ಬದುಕು ಬೇಕಾ?" ಹಾಗೆ ಆಗಬಾರದು ಎಂದು ಹೇಳಿದರು ಇಬ್ಬರೂ ಒಂದೇ ಉಸುರಿಗೆ. ಆಕೆ ಟೈಲರಿಂಗ್ ಕ್ಲಾಸಿಗೆ ಹೋಗುತ್ತಿದ್ದಳಂತೆ, ಅಲ್ಲಿ ಒಬ್ಬಾತ ಹೆಚ್ಚಾಗಿ ಮಾತನಾಡ್ತಾನೆ ಎಂಬುದು ಗಂಡನ ಆರೋಪ. ಗಂಡನಿಗೆ ಸದಾ ಸಂಶಯ ಮನೋಭಾವ. ಅವನು ಬೇರೆ ಯಾರನ್ನೋ ಆಕೆಯ ಹಿಂದೆ ಛೂ ಬಿಟ್ಟಿದ್ದ. ಬೇರೆಯವರ ಮಾತು ಕೇಳಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಏನೆಲ್ಲಾ ಅನಾಹುತಕ್ಕೆ ಕಾರಣವಾಯಿತು. ಅವನ ಸಂಸಾರ ಸರಿಪಡಿಸಲು, ಆಕೆಯ ಹತ್ತಿರ ಹೇಳಲು ಕಷ್ಟವಾದಾಗ, ಯಾರ ಹತ್ತಿರವಾದರೂ ಹೇಳಿಕೊಂಡಾಗ ಮನಸ್ಸು ಹಗುರವಾಗ್ತದೆ, ಅಷ್ಟೆ. ಈಕೆ ಎಷ್ಟು ಹೇಳಿದರೂ ಕೇಳದೆ ಹೀಗೆಲ್ಲ ಆಯಿತು. ನಮ್ಮ ಬದುಕಿನಲ್ಲಿ ಇಂಥ ಸಣ್ಣಪುಟ್ಟ ಘಟನೆಗಳು ಆದಾಗ ನಾವುನಾವೇ ಸರಿಪಡಿಸಿಕೊಂಡು ಮುಂದುವರಿಯಬೇಕಲ್ಲವೇ? ಮೂರನೆಯವರವರೆಗೆ ಹೋಗದಂತೆ ಜಾಗೃತೆ ವಹಿಸಬೇಕು.

ಸಂದೇಹ ಬಿಟ್ಟು ಪರಸ್ಪರ ನಂಬಿಕೆ ಬೆಳೆಸಿಕೊಳ್ಳೋಣ. ಇದರಿಂದ ಮನಸ್ಸುಗಳು ಮುರಿಯುವುದು ಬೇಡ. ಇರುವ ಒಂದು ಮನುಷ್ಯ ಜನ್ಮವನ್ನು ಆದಷ್ಟೂ ಚಂದದಲ್ಲಿ ಅನುಭವಿಸೋಣ.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ