ಬಾಳಿಗೊಂದು ಚಿಂತನೆ - 75

ಓರ್ವನು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ನಾಲ್ಕು ಜನ ಗಮನಿಸಿ ಹೊಗಳುವುದು ಸಾಮಾನ್ಯ. ಅದು ಅವನ ಕಷ್ಟಕ್ಕೆ, ಕೆಲಸಕ್ಕೆ ಸಿಕ್ಕಿದ ಪ್ರಶಂಸೆ. ಆದರೆ ತನ್ನನ್ನು ತಾನೇ ಹೊಗಳಿಕೊಳ್ಳುವುದು ಎಷ್ಟು ಸರಿ? ಇದನ್ನು ‘ಸ್ವಪ್ರಶಂಸೆ’ ಎನ್ನಬಹುದು. ಒಳಿತನ್ನು ಕಂಡು ಹೊಗಳಲಿ ಯಾರೂ ಬೇಡವೆನ್ನರು. ಏನೂ ಮಾಡದೆಯೆ ‘ಸಮಾಜ ಸೇವೆ’ ಎಂಬ ಬಿರುದು ಹಣೆಗೆ ಅಂಟಿಸಿ ಬಿಡುವುದು ವಿಪರೀತವಾಗಿದೆ. ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದು. ಪ್ರಶಸ್ತಿಗೆ ಅರ್ಜಿ ಹಾಕಿದ ಹಾಗೆ. ಬೇರೆಯವರು ಗುರುತಿಸಿ ನೀಡಿದರೆ ಎಷ್ಟು ಸಂತೋಷವಿದೆ ಅದರಲ್ಲಿ. ಏನೂ ಮಾಡದೆ ಹೊಗಳುವವರ ಬಗ್ಗೆ ಒಂದು ಸುಭಾಷಿತದಲ್ಲಿ ಹೀಗೆ ಬರೆದಿದೆ .
*ಸ್ತೋತಾರಃ ಕೇ ಭವಿಷ್ಯಂತಿ* *ಮೂರ್ಖಸ್ಯ ಜಗತೀತಲೇ|*
*ನ ಸ್ತೌತಿ ಚೇತ್ ಸ್ವಯಂ ಚ ಸ್ವಂ* *ಕದಾ ಕಸ್ಯಾಸ್ತು ನಿರ್ವೃತ್ತಿಃ||*
ಮೂರ್ಖನು ತನ್ನನ್ನು ತಾನೇ ಹೊಗಳಿಕೊಳ್ಳದಿದ್ದರೆ ಅವನನ್ನು ಗುರುತಿಸುವವರಾಗಲಿ, ಹೊಗಳುವವರಾಗಲಿ ಬೇರಾರು ಇಲ್ಲ. ಅವನಿಗೆ ಮತ್ತೆ ಸುಖವೆಲ್ಲಿದೆ? ಸುಖಾಪೇಕ್ಷೆ ಮಾನವನ ಸ್ವಭಾವ. ನಾವು ಬುದ್ಧಿವಂತರೂ ಪ್ರಾಜ್ಞರೂ ಆಗುವುದು ನಮಗೆ ಶೋಭೆ.ನಡೆದು ಬಂದ ಹಾದಿಯನ್ನು ಆಗಾಗ ಹಿಂದಿರುಗಿ ನೋಡೋಣ. ಸ್ವವಿಮರ್ಶೆಗೆ ಹೆಚ್ಚು ಒತ್ತು ಕೊಡುತ್ತಾ ಸಾಗೋಣ. ಸ್ವಪ್ರಶಂಸೆ ಬೇಡ. ಪ್ರಶಸ್ತಿಗಳೋ, ಅಭಿನಂದನೆಗಳೋ, ಹೊಗಳಿಕೆಯೋ ಅದರಷ್ಟಕ್ಕೇ ಬರಲಿ. ಬೆನ್ನು ಹತ್ತುವುದು ಸರಿಯಲ್ಲ. ಹಿಂದೆ ಹೋಗಿ ಪಡೆದ ಯಾವ ಗೌರವಕ್ಕೂ ಬೆಲೆ ಇಲ್ಲ. ಎದುರಿನಿಂದ ಅಭಿನಂದನೆಗಳ ಸುರಿಮಳೆ ಸಿಗಬಹುದು. ಆದರೆ ಬೆನ್ನಹಿಂದೆ ಆಡುವ ಮಾತುಗಳೇ ಬೇರೆ. ಅಂಥ ಅಭಿಲಾಷೆಯು ಇರಬಾರದು. ನಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಲ್ಲಿ ಮಾಡೋಣ. ಗಳಿಸೋಣ, ನೆಮ್ಮದಿಯಲಿರೋಣ.
-ರತ್ನಾ ಭಟ್ ತಲಂಜೇರಿ
ಆಕರ:ಸುಭಾಷಿತ ಶ್ಲೋಕ
ಚಿತ್ರ ಕೃಪೆ: ಇಂಟರ್ನೆಟ್ ತಾಣ