ಬಾಳಿಗೊಂದು ಚಿಂತನೆ - 86

ನಮಗೆ ಎಷ್ಟು ಐಶ್ವರ್ಯವಿದ್ದರೂ ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲ ಎಂದಾದರೆ ಏನು ಪ್ರಯೋಜನ? ಹಾಗಾದರೆ ಇದು ಎಲ್ಲಿ ಸಿಗಬಹುದು? ಎಲ್ಲಿಯೂ ಸಿಗದು. ನಮ್ಮಲ್ಲೇ ಅಡಗಿದೆ. ನಾವು ನಮ್ಮನ್ನೇ ಆತ್ಮಾವಲೋಕನ ಮಾಡಿಕೊಂಡು, ಪ್ರತಿದಿನ ನಿಗದಿತ ಕೆಲಸಕಾರ್ಯಗಳನ್ನು ಹಚ್ಚಿಕೊಂಡರೆ ಒಂದಷ್ಟು ನೆಮ್ಮದಿ ಕಾಣಬಹುದು. ಇದರ ಜೊತೆಗೆ ಭಗವಂತನ ಕೃಪೆಗಾಗಿ ಉತ್ತಮ ಕಾರ್ಯ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ನಾವು ಕೈಗೊಳ್ಳುವ ಕೆಲಸ, ಉತ್ತಮ ವಿಚಾರ, ದಾನಧರ್ಮಾದಿಗಳಲ್ಲಿ ಸಹ ದೇವರ ಸೇವೆ ಅಡಗಿದೆ ಎಂಬುದನ್ನು ಮರೆಯಬಾರದು. ನಮ್ಮ ಹಿತದೊಂದಿಗೆ ಪರಹಿತ ಸಹ ಅಷ್ಟೇ ಮುಖ್ಯ. ದೇವರೆದುರು ಕುಳಿತು ಭಜನೆ ಮಾಡುವುದು ಯಾಕೆ ಹೇಳಿ? ಒಂದಷ್ಟು ಸಮಯ ಮನಸ್ಸಿಗೆ ಹಿತ, ನೆಮ್ಮದಿ, ನಿರಾಳತೆಗಲ್ಲವೇ? ನಮ್ಮ ಆತ್ಮತೃಪ್ತಿಗಾಗಿ. ಯಾರು ಯಾರನ್ನೋ ಓಲೈಸಲು ಭಜನೆ ಬೇಡ. ನಾವು ಮಾಡುವ ಪ್ರತಿಯೊಂದು ಕಾರ್ಯಗಳಲ್ಲೂ ದೇವರ ಸೇವೆ ಕಂಡೋ ಕಾಣದೆಯೋ ಅಡಗಿದೆ ಎಂಬ ಒಳಪ್ರಜ್ಞೆ ನಮಗಿರಬೇಕು. ‘ಕಾಯಕವೇ ಕೈಲಾಸ’ ಎಷ್ಟು ಹೊನ್ನಿನಂತಹ ನುಡಿ ಅಲ್ಲವೇ? ಕೆಲಸದಲ್ಲಿ ಭಗವಂತನನ್ನು, ಶಿವನನ್ನು ಕಾಣು ಬಸವಣ್ಣನವರ ಈ ನುಡಿ, ಈ ತತ್ವದಲ್ಲಿ ಎಷ್ಟೊಂದು ಸಾರ ಅಡಗಿದೆ. ನಾವು ಸುಮ್ಮನೆ ಕುಳಿತರೆ ನಮ್ಮ ಹೊಟ್ಟೆ ತುಂಬದು. ಭಗವಂತ ಕೊಡುವನೆಂದು ಕುಳಿತರೆ ಸಿಗದು. ‘ದುಡಿತದಲ್ಲಿ ಭಗವಂತನನ್ನು ಕಾಣು, ಗಳಿಸು ಉಣ್ಣು’ ಈ ತತ್ವ ಅಳವಡಿಸಿದರೆ ಈ ಜಗತ್ತಿನಲ್ಲಿ ಇಷ್ಟು ಸೋಮಾರಿಗಳು ಇರ್ತಾನೇ ಇರಲಿಲ್ಲ. ಹಾಗಾದರೆ ಇರುವ ಮೂರು ದಿನದ ಜೀವನದ ಗುಡಿಯೊಳಗೆ ನಮ್ಮ ತನದ ಚೌಕಟ್ಟಿನೊಳಗೆ ವ್ಯವಹರಿಸಿ ಆರೋಗ್ಯ, ನೆಮ್ಮದಿ, ಶಾಂತಿ ಪಡೆಯೋಣ.
-ರತ್ನಾಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ