ಬಿಡುಗಡೆಯ ಹಾಡುಗಳು (ಭಾಗ ೧೯) - ಅನಾಮಿಕ ಕವಿ
ಬಿಡುಗಡೆಯ ಹಾಡುಗಳು ಕೃತಿಯಲ್ಲಿರುವ ಎಲ್ಲಾ ಕವನಗಳು ಸ್ವಾತಂತ್ರ್ಯ ಪೂರ್ವದಲ್ಲಿ ಬರೆದವುಗಳು. ಈ ಕಾರಣದಿಂದಾಗಿ ಕೆಲವು ಕವನಗಳ ಕವಿಗಳು ಯಾರು ಎಂಬುದೇ ತಿಳಿದು ಬರುತ್ತಿಲ್ಲ. ಅಂತಹುದೇ ಒಂದು ಕವನವನ್ನು ಈ ವಾರ ಆಯ್ದು ಪ್ರಕಟಿಸಲಾಗಿದೆ.
ದುರ್ವ್ಯಸನಗಳನ್ನು ಬಿಡಿ
(‘ಎನ್ನದು ಈ ಕನ್ನಡ ನಾಡು’ ಎಂಬಂತೆ)
ಕುಡಿಯಬೇಡಿ ಸೆರೆಸೇಂದಿಗಳ । ಬಿಡಿರಿ ಬಿಡಿರಿ ದುರ್ವ್ಯಸನಗಳ ॥ಪ॥
ಮಾಡುವೆ ನಿಮಗೆ ವಿನತಿಗಳನಾ । ಬೇಡುವೆ ಮುಗಿಯುತ ಕರಗಳನಾ ॥ಅ॥
ಸರಕಾರಕೆ ಕರರೂಪದಲಿ । ಪರಿಪರಿ ಲಾಭವ ಮಾಡುತಲಿ ।
ಪರದೇಶಕೆ ಹಣ ಹಾಕುತಲಿ । ದಾರಿದ್ರ್ಯವ ನಮಗೀಯುತಲಿ ॥
ಪರಸತ್ತೆಯ ಸ್ಥಿರಗೊಳಿಸುತಲಿ । ಪರದಾಸ್ಯದುರಿಯೊಳೊಗೆಯುತಲಿ ।
ಸಿರಿಸಂಪದಗಳ ಸೆಳೆಯುತಲಿ । ದರವೇಶಿಗಳಿವರೆನಿಸುತಲಿ ॥
ಧರೆಯಲಿ ಸುಖ ಸಂಹರಿಸುವದು ।
ಅರಸನ ತಿರುಕನ ಮಾಡುವದು ॥
ನರಕದ ಯಾತನೆ ತೋರುವರು
ವರಣಿಸಲಾಗದು ಈ ಸೆರೆಯ । ಪರಿಪರಿ ಕೊಡುತಿಹ ವ್ಯಥೆಯ ॥೧॥
ಜ್ಞಾನಿಯ ಜ್ಞಾನವ ಕೆಡಿಸುವದು । ಬಲವಂತನ ಬಲವಳಿಸುವದು ॥
ಮಾನ ಮಾನ್ಯತೆ ಕಳೆಯುವದು । ಗುಣವಂತಹನ ಗುಣ ಹಿಂಗಿಸುವುದು ॥
ಮನುಜನ ಮಾನುಷತನವನ್ನೇ । ಕ್ಷಣದಲಿ ಮಾಯವ ಮಾಡುವದು ॥
ಮಾನಭಂಗವನು ಪೊಂದಿಸುತೆ । ಹೀನ ದೀನತೆಯ ತಂದಿಡುತೆ ॥
ಧರ್ಮಾಧರ್ಮ ವಿಚಾರವನು ।
ನೀತಿ - ಅನೀತಿ ವಿವೇಕವನು ।
ನಾಶ ಮಾಡುವದು ಬುದ್ಧಿಯನು ।
ಸಾಕು ಸಾಕು ಸೇಂದಿಯ ಸಂಗ । ಸಾಕು ಸಾಕು ಸಹಿಸಿದ ಭಂಗ ॥೨॥
ಕುಡಿದಾಕ್ಷಣ ಹುರಿದುಂಬಿಪುದು । ಕಡೆಗತಿ ನಿತ್ರಾಣವು ನಿಜವು ॥
ನಾಲಿಗೆಗಿದು ರುಚಿಕರ ರಸವು । ಆರೋಗ್ಯಕೆ ನಾಶಕ ವಿಷವು ॥
ಕಣ್ಣಿಗೆ ನುಣ್ಣಗೆ ಕಾಣುವದು । ಗುಣದಲ್ಲಿ ಘಾತಕವಾಗಿಹುದು ॥
ಹೊರಗಡೆ ಹೊಂಬಣ್ಣದ ಕೊಡವು । ಒಳಗೆ ನೋಡೆ ವಿಷ ತುಂಬಿಹುದು ॥
ಮೊದಲಿಗೆ ಸವಿ ಸವಿ ತೋರುವದು ।
ತರತರದಲಿ ಮನ ಸೆಳೆಯುವದು ॥
ಕುಡಿಯಲು ಕರುಳನುಕೊರೆಯುವದು ।
ಹಿತಶತ್ರುಗಳಂದದಿ ಜನರ । ಹತಿಸುವದೈ ತಿಳಿಸದೆ ತಿರುಳ ॥೩॥
ವಿಷವನು ಕುಡಿದರೆ ಒಮ್ಮಲೆಯೇ । ಅಸುವನು ಹೀರುವದಾಕ್ಷಣವೇ ॥
ಸೆರೆ ಕುಡಿದರೆ ಉಸುರಿರುವವರೆಗೂ । ಬರುವವು ತರತರ ಕಷ್ಟಗಳೂ ॥
ವಿಷ ಕುಡಿದರೆ ಪ್ರಾಣವನೊಂದ । ಕಸಕೊಳ್ಳುವದೆಂಬುದು ಸಹಜ ॥
ಸೆರೆ ತನುಮನ ಪ್ರಾಣವ ಸಹಿತ । ಆತ್ಮವನು ಹತಗೊಳಿಸುವದು ॥
ಸರ್ವನಾಶಕರವೀ ಹೆಂಡ ।
ಕುಡಿದವನಾಗುವನೈ ಭಂಡ ॥
ಆತನ ನರ ಜನ್ಮವೆ ದಂಡ ।
ಈ ಪರಿ ಘಾತಕವಾಗಿಹುದು । ತಾಪತ್ರಯದಾಯಕ ಸೆರೆಯು ॥೪॥
ಭಾರತ ಮಂಗಲ ಭೂಮಿಯೊಳು । ಇರಬಾರದು ಸೇಂದಿಯ ಮಲವು ॥
ಆರ್ಯ ಋಷಿಗಳ ಸ್ಥಾನದೊಳು । ದುರ್ಗುಣ ರಾಶಿಯು ಶೋಭಿಸದು ॥
ಮಾರಿಮಸಣಿ ರಕ್ಕಸರೆಂದು । ದೂರಕೆ ತೊಲಗಿಸಬೇಕೆಂದು ॥
ಹುರುಪಿನಿಂದ ಹೋರಾಡುವುದು । ವರ ನೀತಿಯ ಸಂಗ್ರಾಮವಿದು ॥
ನಿರ್ವ್ಯಸನದ ಸುಖ ಸೇವಿಸಲು ।
ನಿರ್ಮಲ ಜೀವನ ಸಾಗಿಸಲು ॥
ನಿರ್ಮಾದಕ ನಾಡೆನಿಸಲು ।
ಕರ್ಮ ಕುಶಲತೆಯ ತೋರಿಸಿರಿ । ನಿರ್ಮೋಹದಿ ದುಡಿಯುವ ಬನ್ನಿ ॥೫॥