ಬಿಡುಗಡೆ ದೊರಕಿದ ಮೇಲು ಕೂಡ
ಬಿಡುಗಡೆ ದೊರಕಿದ ಮೇಲು ಕೂಡ
ಬಂಧನದೊಳಗಿರಬೇಕೆ?
ಓ ಭಾರತ ದೇಶದ ಜನಗಳಿರಾ
ಈ ಪುಣ್ಯ ಭೂಮಿಯ ಮಕ್ಕಳಿರಾ ||
ಧರ್ಮದ ಬಂಧನ, ವೇಷದ ಬಂಧನ
ಭಾಷೆಯ ಬಂಧನ ಬೇಕೆ?
ಓ ಭಾರತ ದೇಶದ ಜನಗಳಿರಾ
ಈ ಪುಣ್ಯ ಭೂಮಿಯ ಮಕ್ಕಳಿರಾ ||
ನಾನು ನನ್ನದು ಎಂಬುದನ
ಕೊಂಚ ಮನಸಿನಿಂದ ಆಚೆಗೆ ತಳ್ಳಿರಿ
ದೇಶ ಪ್ರೇಮವೆಂಬುದನ
ನಿಮ್ಮ ಮನಸಿನ ಒಳಗೆ ತುಂಬಿರಿ ||
ಎಷ್ಟೋ ಜನರ ನೆತ್ತರ ಕಾಣಿಕೆ
ನಮ್ಮ ನಾಡಿನ ಬಿಡುಗಡೆಯು
ಕಣ್ಣೀರಿನ ಹೊಳೆಯಲಿ ತೇಲಿ ಬಂದ
ಮುತ್ತದು ನಾಡಿನ ಬಿಡುಗಡೆಯು ||
ಮುತ್ತದು ಜಾರಿ ಮತ್ತೆ ಒಡೆಯದಾಂಗ
ಕಾಯಬೇಕು, ಎಲ್ಲಾ ಕೇಳಿರಿ
ದೇಶದ ಕೀರ್ತಿಯ ಬೆಳಗಿಸಲು
ತ್ಯಾಗದಿಂದ ಎಲ್ಲಾ ಬಾಳಿರಿ ||
ಮನಸು ತುಂಬಲಿ, ಕನಸು ತುಂಬಲಿ
ನಮ್ಮ ನಾಡಿನ ಉನ್ನತಿಯು
ಅದ ಸಾಧಿಸಲೋಸುಗ ತುಂಬಲಿ
ನಮ್ಮ ಹೆಜ್ಜೆ ಹೆಜ್ಜೆಯಲಿ ಜಾಗ್ರುತಿಯು ||
ರಾಮಾಯಣ ನಡೆದ ಈ ನಾಡಿನಲಿ
ಮತ್ತೆ ರಾವಣ ಬಾರದೆ ಇರಲಿ
ಭಾರತ ನಡೆದ ಭವ್ಯ ಭೂಮಿಯಲಿ
ಮಹಾಭಾರತ ಮರುಕಳಿಸದೆ ಇರಲಿ ||
ಬಿಡುಗಡೆ ದೊರಕಿದ ಮೇಲು ಕೂಡ
ಬಂಧನದೊಳಗಿರಬೇಕೆ?
ಓ ಭಾರತ ದೇಶದ ಜನಗಳಿರಾ
ಈ ಪುಣ್ಯ ಭೂಮಿಯ ಮಕ್ಕಳಿರಾ ||
- Log in to post comments