ಬೆಳಗಾಗುವ ಮುನ್ನ (ವಿಶ್ವಕಥಾಕೋಶ -೨೨)

ಬೆಳಗಾಗುವ ಮುನ್ನ (ವಿಶ್ವಕಥಾಕೋಶ -೨೨)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೭೫.೦೦, ಮುದ್ರಣ: ೨೦೧೨

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಹಾಗೂ ೨೦೧೨ರಲ್ಲಿ ತೃತೀಯ ಮುದ್ರಣ ಮಾಡಲಾಯಿತು. ದ್ವಿತೀಯ ಮುದ್ರಣದ ಸಮಯದಲ್ಲಿ ಪ್ರಕಾಶಕರು ಬರೆದ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಇಪ್ಪತ್ತೆರಡನೆಯ ಸಂಪುಟ ‘ಬೆಳಗಾಗುವ ಮುನ್ನ'. ವಿಶ್ವಕಥಾಕೋಶದ ಈ ಸಂಪುಟದಲ್ಲಿ ಕ್ಯೂಬಾ, ಜಮೇಯಿಕ (ಜಮೈಕಾ) ದೇಶದ ಕಥೆಗಳಿವೆ. ಈ ಸಂಪುಟದ ಕ್ಯೂಬಾ ವಿಭಾಗದಲ್ಲಿ, ಕ್ರಾಂತಿಪೂರ್ವ ಅವಧಿಯಲ್ಲಿ ರಚಿತವಾದ ‘ಬೆಳಗಾಗುವ ಮುನ್ನ' ಕಥೆಯಿಂದ ಕ್ರಾಂತಿಯ ಅನಂತರ ಸೃಷ್ಟಿಯಾದ ‘ಬೆಳಗಾಯಿತು' ತನಕ ಎಂಟು ಕಥೆಗಳಿವೆ. ಕುಸಿದು ಬಿದ್ದ ಹಳೆಯ ಸಮಾಜವೂ ನಿತ್ಯ ಸ್ಪಂದಿಸುವ ಹೊಸ ಸಮಾಜವೂ ಈ ಕಥೆಗಳಿಗೆ ರಕ್ತ ಮಾಂಸ ನೀಡಿದೆ.

ಉಳಿದ ಎರಡು ಕಥೆಗಳು ಜಮೇಯಿಕದವು. ಕ್ಯೂಬಾದ ಕಥೆಗಳು ಸ್ಪಾನಿಷ್ ನಿಂದ ಇಂಗ್ಲಿಷಿಗೆ ಅನುವಾದಗೊಂಡು ಕನ್ನಡಕ್ಕೆ ಇಳಿದಿವೆ. ಜಮೇಯಿಕದ ಕಥೆಗಳು ಭಾರತೀಯರಿಗೆ ಪರಿಚಿತವಾದ ಇಂಗ್ಲಿಷಿನಿಂದಲೇ ನೇರವಾಗಿ ತರ್ಜುಮೆಗೊಂಡಿವೆ. ಕಥಾ ಪಾತ್ರಗಳ ಬಣ್ಣ ಬಿಳುಪು, ಕಪ್ಪು ಅಥವಾ ಮಿಶ್ರವರ್ಣ. ಈ ವೈವಿಧ್ಯದಿಂದ ಸಂಪುಟದ ಮೌಲ್ಯ ಹೆಚ್ಚಿದೆ ಎಂದು ಸಂಪಾದಕರು ಅಭಿಪ್ರಾಯ ಪಟ್ಟಿದ್ದಾರೆ.

ಈ ಪುಸ್ತಕದಲ್ಲಿ ಇರುವ ೧೦ ಕಥೆಗಳೆಂದರೆ, ಬೆಳಗಾಗುವ ಮುನ್ನ (ಲಿನೊ ನಾವಸ್ ಕಾಲ್ವು), ಮಿಸ್ಟರ್ ಚಾರ್ಲ್ಸ್ (ಉಂಬರ್ತೊ ಆರೆನಾಲ್), ಬೆಕ್ಕಿನ ಎರಡನೇ ಮರಣ ( ಆನೆಲ್ಕು ಝಾರ್ಜಿ ಕಾರ್ದೋಸೊ), ಸಂತ ರೀತಾಳ ಪವಿತ್ರೋದಕ (ಲೂಯಿಜ್ ಆಗುಯಾರೊ), ಅಂಗವಿಕಲ (ಝೆಜೊಷ್ ಡಿಯಾಜ್ ರಾಡ್ರಿಗೆಝ್), ಜೀಪಿನಲ್ಲಿದ್ದ ನಾಲ್ವರು (ರೆನಾಲ್ಡ್ ಗೊಂಜಾಲಿಜ್), ಸೈನಿಕ ಎಲೋಯ್ (ಸಾಮುಅಲ್ ಫೆಝೊ), ಬೆಳಗಾಯಿತು (ದೋರಾ ಅಲೊಂಝೊ), ದಿಯೆಗೊ ಸಾರೆಸ್ ಕಥೆ (ಆಕ್ಸ್ ಫರ್ಡ್ ಸೇಯಿಂಟ್ ಜಾನ್), ಹೇಳದೆ ಉಳಿದಿದ್ದ ಕಥೆ (ಮಾರ್ಗಿಟ್ ವಿನ್ಸೆಂಜ್). 

ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ಶ್ರೀಕಾಂತ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ತೃತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೧೩೫ ಪುಟಗಳನ್ನು ಹೊಂದಿದೆ. ಕ್ಯೂಬಾ ಹಾಗೂ ಜಮೇಯಿಕ ದೇಶದ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.