ಬೇಡವೆಂದು ಬಿಸಾಕುವ ಮುನ್ನ ಒಮ್ಮೆ ಯೋಚಿಸಿ

ಬೇಡವೆಂದು ಬಿಸಾಕುವ ಮುನ್ನ ಒಮ್ಮೆ ಯೋಚಿಸಿ

ಒಂದು ಊರಿನಲ್ಲಿ ಒಬ್ಬ ನೇಕಾರನಿದ್ದ. ಶಾಂತ ಸ್ವಭಾವದ ಮನುಷ್ಯ. ನಿಗರ್ವಿ, ತುಂಬ ಪ್ರಾಮಾಣಿಕ. ಆ ಊರಿನ ಕೆಲ ತರಲೆ ಯುವಕರ ಗುಂಪು ನೇಕಾರನ ಅಂಗಡಿಗೆ ಒಂದು ದಿನ ಆಗಮಿಸಿತು. ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿದ್ದ ಅವರೊಳಗೊಬ್ಬ ನೇಕಾರನ ಅಂಗಡಿಯಲ್ಲಿ ಒಂದು ಬೆಲೆ ಬಾಳುವ ಸೀರೆಯನ್ನು ಆಯ್ಕೆ ಮಾಡಿ ಅದರ ಬೆಲೆ ವಿಚಾರಿಸಿದ. ನೇಕಾರ ಆ ಸೀರೆಗೆ ೧೦ ನಾಣ್ಯಗಳ ಬೆಲೆ ಕಟ್ಟಿದ. ನೇಕಾರನನ್ನು ಛೇಡಿಸುವ ಉದ್ದೇಶದಿಂದ ಆ ಶ್ರೀಮಂತ ಯುವಕ, ನನಗೆ ಪೂರ್ಣ ಸೀರೆ ಬೇಡ, ಅರ್ಧ ಸಾಕು ಎನ್ನುತ್ತ ಸೀರೆಯನ್ನು ಹರಿದು ಎರಡು ಭಾಗ ಮಾಡಿ. ಒಂದು ಭಾಗದ ಬೆಲೆ ವಿಚಾರಿಸಿದ. 

ನೇಕಾರ ಶಾಂತ ಚಿತ್ತದಿಂದ ಆ ಅರ್ಧ ಸೀರೆಯ ಬೆಲೆ ೫ ನಾಣ್ಯಗಳು ಎಂದು ಉತ್ತರಿಸಿದ. ಯುವಕ ಮತ್ತೆ ಸೀರೆಯನ್ನು ಎರಡು ಭಾಗ ಮಾಡಿ, ಒಂದು ಭಾಗ ಸಾಕು ಅದರ ಬೆಲೆ ಹೇಳು ಎಂದು ನೇಕಾರನನ್ನು ಕೆಣಕಿದ. ನೇಕಾರ ಕೊಂಚವೂ ವಿಚಲಿತನಾಗದೇ ಸೀರೆಯ ಬೆಲೆ ಎರಡು ನಾಣ್ಯಗಳು ಎಂದು ಉತ್ತರಿಸಿದ.

ಕೊನೆಗೆ ಈ ಸೀರೆ ನನಗೀಗ ಯಾವ ಉಪಯೋಗಕ್ಕೂ ಬಾರದು ಎಂದು ಕೈಚೆಲ್ಲಿದ. ಆಗ ನೇಕಾರ ಹುಡುಗಾ ಈಗ ಈ ಸೀರೆ ನಿನಗಷ್ಟೇ ಅಲ್ಲ ಯಾರ ಉಪಯೋಗಕ್ಕೂ ಬಾರದು ಎಂದು ಶಾಂತಚಿತ್ತದಿಂದ ಮಾತನಾಡಿದ. ಯುವಕನಿಗೆ ನಾಚಿಕೆಯಾಯಿತು. ಕ್ಷಮಿಸಿ, ನನ್ನಿಂದಾಗಿ ನಿಮಗೆ ನಷ್ಟವಾಯಿತು. ದಯವಿಟ್ಟು ಸೀರೆಯ ಪೂರ್ತಿ ಬೆಲೆಯನ್ನು ನನ್ನಿಂದ ಸ್ವೀಕರಿಸಿ ಎಂದು ಮನವಿ ಮಾಡಿಕೊಂಡ. ನೀನು ನನ್ನಿಂದ ಸೀರೆ ಕೊಂಡಿಲ್ಲ, ಆದ್ದರಿಂದ ನಿನ್ನಿಂದ ಹಣ ಪಡೆಯಲಾರೆ ಎಂದು ನೇಕಾರ ಹಣ ಸ್ವೀಕರಿಸಲು ನಿರಾಕರಿಸಿದ. ಈ ಮಾತು ಕೇಳುತ್ತಲೆ ಆ ಯುವಕನ ಅಹಂಗೆ ಪೆಟ್ಟು ಬಿದ್ದಿತು. ನಾನು ಶ್ರೀಮಂತನ ಮಗ, ಹಣ ಕೊಟ್ಟರೆ ನನಗೇನೂ ಅಂತಹ ವ್ಯತ್ಯಾಸವಾಗುವುದಿಲ್ಲ ಆದರೆ ನೀನು ಬಡವ ಈ ನಷ್ಟವನ್ನು ಹೇಗೆ ಭರಿಸುತ್ತೀಯಾ? ಸುಮ್ಮನೆ ಹಣವನ್ನು ಸ್ವೀಕರಿಸು ಎಂದ. ನೇಕಾರ ನಗುತ್ತ, ಹುಡುಗಾ ನೀನು ನನಗಾದ ನಷ್ಟವನ್ನು ಭರಿಸಲಾರೆ. ಒಮ್ಮೆ ಯೋಚಿಸು, ಹತ್ತಿ ಬೆಳೆಯಲು ರೈತ ಎಷ್ಟು ಶ್ರಮ ಪಟ್ಟಿದ್ದಾನೆ. ಆ ಹತ್ತಿಯಿಂದ ನೂಲು ತೆಗೆಯುವಲ್ಲಿ, ಸೀರೆ ನೇಯುವಲ್ಲಿ ಬಣ್ಣ ಹಾಕುವಲ್ಲಿ ನನ್ನ ಮಗ ಮತ್ತು ನನ್ನ ಹೆಂಡತಿ ಎಷ್ಟು ಬೆವರು ಹರಿದಿದೆ. ಇಷ್ಟು ಶ್ರಮ ಸಾರ್ಥಕವಾಗೋದು ಈ ಸೀರೆಯನ್ನು ಯಾರಾದರೂ ಉಟ್ಟು ಸಂತೋಷ ಪಟ್ಟಾಗ ಮಾತ್ರ. ಆದರೆ ನೀನು ಸೀರೆಯನ್ನು ತುಂಡು ತುಂಡು ಮಾಡಿಬಿಟ್ಟೆ. ಕೇವಲ ಹಣ ಕೊಡುವುದರಿಂದ ನೀನು ಈ ನಷ್ಟವನ್ನು ತುಂಬಿಕೊಡಲಾರೆ ನೇಕಾರನ ದನಿಯಲ್ಲಿ ಆಕ್ರೋಶಕ್ಕೆ ಬದಲಾಗಿ ಸೌಮ್ಯತೆ ಮತ್ತು ಅಂತಃಕರಣವಿತ್ತು.

ಆ ಶ್ರೀಮಂತ ಯುವಕ ನಾಚಿ ನೀರಾದ, ಅವನ ಕಣ್ಣುಗಳು ತುಂಬಿ ಬಂದವು. ನೇಕಾರನ ಕಾಲು ಹಿಡಿದು ಬಿಕ್ಕತೊಡಗಿದ. ನೇಕಾರ ಪ್ರೀತಿಯಿಂದ ಆ ಯುವಕನನ್ನು ಎಬ್ಬಿಸಿ, ಅಪ್ಪಿಕೊಂಡು, ಮಗೂ ನಾನು ನಿನ್ನಿಂದ ಹಣ ಪಡೆದುಕೊಂಡಿದ್ದರೆ ನನಗೂ ಉಪಯೋಗವಾಗುತ್ತಿತ್ತು. ಆದರೆ ನಿನ್ನ ಬದುಕಿನಲ್ಲಿ ಯಾವ ಬದಲಾವಣೆ ಆಗುತ್ತಿರಲಿಲ್ಲ. ಸೀರೆ ಒಂದು ಹೋದರೆ ಇನ್ನೊಂದು ಬರಬಹುದು ಆದರೆ ಈ ಬದುಕು ಇರುವುದೊಂದೇ. ಈ ಬದುಕು ಅಹಂಕಾರದಿಂದ ನಷ್ಟವಾದರೆ ಇನ್ನೊಂದು ಬದುಕನ್ನು ಎಲ್ಲಿಂದ ತರೋದು? ನಿನ್ನ ಪಶ್ಚಾತ್ತಾಪವೇ ನನ್ನ ಬಳುವಳಿ ಅಂದ. ಹೀಗೆ ತನ್ನ ಅಂತಃಕರಣ, ತಿಳುವಳಿಕೆಯಿಂದ ಆ ಶ್ರೀಮಂತ ಯುವಕನ ಕಣ್ಣು ತೆರೆಸಿದ ನೇಕಾರ ಬೇರಾರೂ ಅಲ್ಲ, ಸಂತ ಕಬೀರ. ಒಮ್ಮೆ ಯೋಚಿಸಿ ನಾವೂ ಕೂಡ ದಿನದಲ್ಲಿ ರೈತರು ಕಷ್ಟಪಟ್ಟು ಬೆಳೆದ ಅದೆಷ್ಟೋ ಆಹಾರವನ್ನು ವ್ಯರ್ಥ ಮಾಡುತ್ತೇವೆ. ಈ ಮನಸ್ಥಿತಿ ಖಂಡಿತ ಬದಲಾಗಬೇಕಿದೆ.

-ರೂಪಾ ಗುರುರಾಜ್ (ವಿಶ್ವವಾಣಿಯಿಂದ)

 ಚಿತ್ರ ಕೃಪೆ: ಇಂಟರ್ನೆಟ್ ತಾಣ