ಬ್ರಾಡ್ ಗೇಜ್ ಸಂಪೂರ್ಣ ವಿದ್ಯುದೀಕರಣ ಯೋಜನೆ

ಬ್ರಾಡ್ ಗೇಜ್ ಸಂಪೂರ್ಣ ವಿದ್ಯುದೀಕರಣ ಯೋಜನೆ

ಭಾರತೀಯ ರೈಲ್ವೆಯು ವಿಶ್ವದಲ್ಲೇ ನಾಲ್ಕನೆಯ ಅತಿ ದೊಡ್ಡ ರೈಲ್ವೆ ವ್ಯವಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಸುಮಾರು ೧೨.೫೦ ಲಕ್ಷ ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜಾಗತಿಕವಾಗಿ ಬೃಹತ್ ಉದ್ಯೋಗದಾತ ಸಂಸ್ಥೆಗಳಲ್ಲಿ ಸಹ ಒಂದೆನಿಸಿದೆ. ದೇಶವ್ಯಾಪಿಯಾಗಿ ಒಟ್ಟಾರೆಯಾಗಿ ೬೮ ಸಾವಿರ ಕಿಲೋಮೀಟರ್ ಗಳಷ್ಟು ಉದ್ದ ಹಳಿಗಳನ್ನು ಹೊಂದಿದ್ದು, ಈ ಪೈಕಿ ಶೇಕಡ ೮೩ ಅಂದರೆ ೫೨ ಸಾವಿರದಷ್ಟು ಉದ್ದದ ಬ್ರಾಡ್ ಗೇಜ್ ಮಾರ್ಗಗಳ ವಿದ್ಯುದೀಕರಣ ಮಾಡಿದೆ. ಇನ್ನು ಏಳು ವರ್ಷಗಳಲ್ಲಿ ಅಂದರೆ ೨೦೩೦ರ  ಹೊತ್ತಿಗೆ, ವಿಶ್ವದ ಅತಿ ದೊಡ್ಡ ಹಸಿರು ರೈಲ್ವೆ ವ್ಯವಸ್ಥೆಯಾಗುವ ಹೆಬ್ಬಯಕೆಯನ್ನು ಅದು ಹೊಂದಿದೆ. ಪೆಟ್ರೋಲಿಯಂ ಆಧಾರಿತ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಮಾಲಿನ್ಯ ಮುಕ್ತಗೊಳಿಸುವುದು ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಪ್ಯಾರಿಸ್ ಒಡಂಬಡಿಕೆಯ ಪ್ರಕಾರ, ಈ ಒಪ್ಪಂದಕ್ಕೆ ಸಹಿ ಹಾಕಿದ ಪ್ರತಿ ದೇಶವೂ ಮಾಲಿನ್ಯ ಮಟ್ಟ ನಿಯಂತ್ರಿಸುವಲ್ಲಿ ಬದ್ಧವಾಗಿರಬೇಕಾಗುತ್ತದೆ.

ಆ ಹಿನ್ನೆಲೆಯಲ್ಲಿ ಬೃಹತ್ ಸಂಚಾರ ಜಾಲವಾಗಿರುವ ರೈಲ್ವೆಯಲ್ಲಿ ಇಂತಹ ಬದಲಾವಣೆಗಳು ಆದಲ್ಲಿ, ದೇಶದ ಒಟ್ಟಾರೆ ಮಾಲಿನ್ಯ ಮಟ್ಟ ನಿಯಂತ್ರಿಸುವಲ್ಲಿ ಸಹ ಸಹಕಾರಿಯಾಗುತ್ತದೆ. ಇದಲ್ಲದೆ, ರೈಲ್ವೆಯ ಜೊತೆಗೆ ದೇಶದ ಅಭಿವೃದ್ಧಿ ಸಹ ಬೆಸೆದುಕೊಂಡಿದೆಯಾದ್ದರಿಂದ, ಸಹಜವಾಗಿಯೇ ಅನುಕೂಲವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಈ ಅಂಶ ಒತ್ತಿ ಹೇಳಿದ್ದು, ರೈಲ್ವೆ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರ ದಾಖಲೆ ಪ್ರಮಾಣದ ಹೂಡಿಕೆ ಮಾಡುತ್ತದೆ ಎಂದು ತಿಳಿಸಿದ್ದಾರೆ. ವಿದ್ಯುದೀಕರಣದಿಂದಾಗಿ ಪೆಟ್ರೋಲಿಯಂ ಮೂಲಗಳ ಮೇಲಿನ ಅವಲಂಬನೆ ತಗ್ಗುತ್ತದೆ ಹಾಗೂ ಮಾಲಿನ್ಯ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ಹೌದಾದರೂ, ಅದಕ್ಕೆ ತಕ್ಕನಾಗಿ ನಮ್ಮ ವಿದ್ಯುತ್ ಉತ್ಪಾದನೆ ಸಹ ಹಚ್ಚಬೇಕಾಗುತ್ತದೆ. ವಿದ್ಯುತ್ ಗಾಗಿ ಕಲ್ಲಿದ್ದಲಿನ ಮೇಲೆ ಹೆಚ್ಚು ಪ್ರಮಾಣದಲ್ಲಿ ಅವಲಂಬಿತವಾಗಿರುವ ದೇಶಗಳಲ್ಲಿ ಇದು ಸಹ ಒಂದು ಸವಾಲೇ ಸರಿ. ಇದರ ಜೊತೆಗೆ, ದೇಶದ ಅನೇಕ ಕಡೆಗಳಲ್ಲಿ ರೈಲ್ವೆ ವ್ಯವಸ್ಥೆಯ ಬೇಡಿಕೆಯಿದ್ದು, ಹಲವು ಯೋಜನೆಗಳು ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿವೆ. ಹೀಗೆ ವಿಳಂಬವಾಗಲು ನ್ಯಾಯಾಲಯದ ಮೆಟ್ಟಿಲೇರುವುದು, ಹಣಕಾಸಿನ ಅಡಚಣೆ, ಭೂವ್ಯಾಜ್ಯ ಇತ್ಯಾದಿ ಕಾರಣಗಳು ಇರಬಹುದಾದರೂ, ಆದಷ್ಟು ಬೇಗ ಇವನ್ನು ನಿವಾರಿಸಿಕೊಂಡು ಮುಂದಡಿ ಇಡದಿದ್ದಲ್ಲಿ, ಅಭಿವೃದ್ಧಿಯ ಮೇಲೆ ಅಷ್ಟರಮಟ್ಟಿಗೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆಯಲ್ಲದೆ, ವರ್ಷದಿಂದ ವರ್ಷಕ್ಕೆ ವೆಚ್ಚ ಸಹ ಹೆಚ್ಚುತ್ತಾ ಹೋಗಿ ಸರ್ಕಾರದ ಬೊಕ್ಕಸಕ್ಕೆ, ಅಂತಿಮವಾಗಿ ಜನರಿಗೆ ಇನ್ನಷ್ಟು ಹೊರೆಯಾಗುತ್ತದೆ. ಅಲ್ಲದೆ, ಆಯಾಭಾಗದ ಜನರು ಸೇವೆಯಿಂದ ವಂಚಿತರಾದಂತಾಗುತ್ತದೆ. ರೈಲ್ವೆ ಸುಧಾರಣೆಗಾಗಿ, ಉನ್ನತೀಕರಣಕ್ಕಾಗಿ ಅಪಾರ ಪ್ರಮಾಣ ಬಂಡವಾಳ ಅಗತ್ಯವಿದ್ದು, ಆಸ್ತಿ ನಗದೀಕರಣ ಹೇಳಿದಂತೆ ಅನೇಕ ವಿವಿಧ ಮಾರ್ಗೋಪಾಯಗಳನ್ನು ಸರ್ಕಾರ ಅನ್ವೇಷಿಸುತ್ತಿದೆ. ಈ ಕಾರಣಕ್ಕಾಗಿ ಇಂದಿನ ಬಜೆಟ್ ನಲ್ಲಿ ಹೊಸ ಹೊಸ ಯೋಜನೆಗಳ ಘೋಷಣೆಯ ಸಾಹಸಕ್ಕೆ ಕೈಹಾಕದೆ, ಜಾರಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸುವುದಾಗಿ ಸರ್ಕಾರ ಹೇಳಿತ್ತು. ಹೈಪರ್ಲೂಪ್ ನಂತ ಪರಿಕಲ್ಪನೆಗಳು ವಾಸ್ತವವಾಗಬಹುದು ಎಂಬ ವರ್ತಮಾನದ ಸನ್ನಿವೇಶದಲ್ಲಿ ಭಿನ್ನ ರೀತಿಯಲ್ಲಿ ಯೋಚಿಸಿ, ಯೋಜನೆಗಳನ್ನು ರೂಪಿಸಿ ಸಮಿತಿಯಲ್ಲಿ ಕಾರ್ಯಗತಗೊಳಿಸಬೇಕಾದುದು ಅನಿವಾರ್ಯ ಅಗತ್ಯ. ಈ ನಿಟ್ಟಿನಲ್ಲಿ ಭಾರತೀಯ ರೈಲ್ವೆ ದೃಢ ಹೆಜ್ಜೆ ಇಡಲಿ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೨-೦೧-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ