ಭಗವಂತನ ಉತ್ತರ
ರಜೆಯೇನೊ ಇದೆ.
ಆದರೆ ಸಂಭ್ರಮವಿಲ್ಲ.
ಸುತ್ತಲೂ ನಮ್ಮವರೇ ಇದ್ದಾರೆ
ಆದರೂ ಒಂಟಿ ಎನ್ನಿಸುತ್ತಿದೆ.
ಗೊಂದಲದ ಗೂಡಾಗಿದೆ ಮನ
ಏನೋ ತಳಮಳ.
ತುಂಟ ಮಕ್ಕಳ ಕೈಯನ್ನು
ಕಟ್ಟಿ ಹಾಕಿದ ಅನುಭವ.
ಯಾವುದೋ ಅಜ್ಞಾತ ಕಣ್ಣುಗಳು
ನಮ್ಮನ್ನು ಬೇಟೆಯಾಡಲು
ತವಕಿಸಿ ನಿಂತಿದೆ.
ನಾವೆಲ್ಲರೂ ಬಲಿಪಶುಗಳು
ಶರಣಾಗತಿಯೊಂದೇ
ನಮ್ಮ ಮುಂದಿರುವ ದಾರಿ
ಯಾವ ಆಯುಧವೂ
ನಾನಿದ್ದೇನೆ ಧೈರ್ಯವಾಗಿ ಹೋರಾಡು
ಎಂದು ನಮ್ಮ ರಕ್ಷಣೆಗೆ ನಿಂತಿಲ್ಲ.
ಚಂದಿರ ಮಂಗಳ ಗ್ರಹಗಳಲ್ಲೆಲ್ಲಾ
ನಮ್ಮದೇ ಆದಿಪತ್ಯ ಇರಬೇಕೆಂದು
ಹಪಹಪಿಸುತ್ತಿದ್ದೊ.
ನಾವಿರುವ ಭೂಮಿಯಲ್ಲೇ
ನಮ್ಮ ಉಳಿವಿಗಾಗಿ ಅಂಜಿ
ಕೂತಿದ್ದೇವೆ.
ಏನಾಯಿತು ನಮ್ಮ ಜ್ಞಾನ-ವಿಜ್ಞಾನ
ಪಾಂಡಿತ್ಯ ಬುದ್ಧಿವಂತಿಕೆ ಎಲ್ಲಾ.
ಒಂದು ಅಣುಬಾಂಬಿನಲ್ಲಿ
ಇಡೀ ಶತ್ರು ರಾಷ್ಟ್ರವನೇ
ಸರ್ವನಾಶ ಮಾಡುವ
ದಿಟ್ಟತನ ದರ್ಪ ಅಹಂಕಾರಗಳೆಲ್ಲವೂ.
ಯಾವುದೋ ಅಣುವಿಗೆ ಹೆದರಿ
ನಾವೆಲ್ಲರೂ ಮುದುರಿ
ಅಡಗಿ ಕುಳಿತ್ತಿದ್ದೇವಲ್ಲಾ
ಕನ್ನಡಿಯೆ ನಮ್ಮನ್ನು ನೋಡಿ
ಅಣಕಿಸಿ ನಗುತ್ತಿದೆ.
ಯಾರಲ್ಲೂ ಯುದ್ಧದ ಮಾತಿಲ್ಲ
ಯಾರನ್ನೂ ಗೆಲ್ಲುವ ಹಠವಿಲ್ಲ
ಮನುಷ್ಯನ ಪೌರುಷದ
ಮಾತಿಗೆ ನಾವೇ ನಕ್ಕು
ಸುಮ್ಮನಾಗಬೇಕು.
ಬದುಕಬೇಕೆಂದರೆ
ಬಗ್ಗಿ ನಡೆಯಬೇಕು.
ಆಜ್ಞಾಧಾರಕ ಅದೃಶ್ಯ
ಅವನ ಅಣತಿಯನ್ನು
ಪಾಲಿಸುವುದಷ್ಟೇ
ನಮಗುಳಿದಿರುವ ದಾರಿ
ಇದಲ್ಲವೇ ಮನುಷ್ಯನ ದರ್ಪಕ್ಕೆ
ಭಗವಂತನ ಉತ್ತರ.
(ಬರೆದವರಾರೋ ಗೊತ್ತಿಲ್ಲ. ಅರ್ಥ ಪೂರ್ಣ ಅನಿಸಿತು. ಹಾಗೇ ಸಂಗ್ರಹಿಸಿ ಪ್ರಕಟಿಸಿದ್ದೇವೆ)
