ಭಾನುವಾರದ ನಮ್ಮ ಕುಟುಂಬದ ದಿನಚರಿ (ಭಾಗ 1)

ಭಾನುವಾರದ ನಮ್ಮ ಕುಟುಂಬದ ದಿನಚರಿ (ಭಾಗ 1)

ತುಂತುರು ಹನಿಗಳು ಬೀಳುತ್ತಾ ಅದರ ಮರಿ ಹನಿಗಳು ಗಾಳಿಗೆ ಸೊಯ್ಯನೆ ಕಿಟಕಿಯ ಸರಳುಗಳ ಒಳಗಿಂದ ಮನೆಯೊಳಗೆ ಹಾದು ಹೋಗುವ ಬೆಳಗಿನ 6:00 ಗಂಟೆ ಸಮಯದಲ್ಲಿ ಆ ಚುಮು ಚುಮು ಚಳಿಯಲ್ಲಿ ನಮ್ಮ ಬೆಡ್ ರೂಮಿನಲ್ಲಿ ನನ್ನೊಡನೆ ಮಲಗಿದ್ದ ನನ್ನ ಪತ್ನಿ ನೀಡಿದ ಆ ಸುಂದರ ಮುತ್ತಿನ ಸ್ಪರ್ಶ ನನ್ನನ್ನು ಎಚ್ಚರಿಸಿತು. ನಾನೂ ಬಾಗಿ ಆಕೆಯನ್ನು ತಬ್ಭಿ ಪ್ರತಿ ಮುತ್ತನ್ನು ನೀಡಿದೆ. ಮಧ್ಯದಲ್ಲಿ ನನ್ನನ್ನು  ಬಿಗಿಯಾಗಿ ತಬ್ಬಿಕೊಂಡು ಮಲಗಿದ್ದ ನಮ್ಮ ಪುಟ್ಟ ಕಂದ ಈ ಕದಲುವಿಕೆಯಿಂದ ಕಣ್ಣು ಬಿಟ್ಟಿತು. ತನ್ನ ಕತ್ತನ್ನು ಪಕ್ಕಕ್ಕೆ ಹೊರಳಿಸಿ ಅವರ ಅಮ್ಮನನ್ನು  ತದೇಕಚ್ಚಿತ್ತದಿಂದ ನೋಡಿತು. ಅಮ್ಮ ಆ ಮಗುವಿಗೂ ಒಂದು ಮುತ್ತು ನೀಡಿ ಎದ್ದು ಹೊರ ನಡೆಯಿತು. ಪುಟ್ಟ ಕಂದ ಮತ್ತೆ ನನ್ನನ್ನು ಬಾಚಿ ತಬ್ಬಿಕೊಂಡು ನಿದ್ದೆಗೆ ಜಾರಿತು.  

ಇಂದು ಭಾನುವಾರ. ಹಾಗೇ ಆ ಮಗುವನ್ನೂ, ಕಿಟಕಿಯಾಚೆಯ ತುಂತುರು ಸೋನೆ ಮಳೆಯನ್ನು ದಿಟ್ಟಿಸುತ್ತಾ ಮೊನ್ನೆಯಷ್ಟೇ ನಿಧನರಾದ ಕನ್ನಡ ಸಾಹಿತ್ಯದ ಭಾವ ಲಹರಿಯನ್ನು, ಮಣ್ಣಿನ ಸೊಗಡಿನಲ್ಲಿ ತನ್ನ ಕಾವ್ಯದಲ್ಲಿ ಹಿಡಿದಿಟ್ಟ  ಕವಿ ಶ್ರೀ ಎಚ್ ಎಸ್ ವೆಂಕಟೇಶ್ ಮೂರ್ತಿಯವರ " ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ಮಳೆ ಸುರಿಸಿ ಹಗುರಾದ ಮುಗಿಲಿನಂತೆ " ಎಂಬ ಸಾಲುಗಳು ಜೊತೆಗೆ, " ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ - ಬೇವ ಅಗಿವ ಸವಿಗಾನದ ಹಕ್ಕಿ  ಹಾಡಿ ಹಾಡಿ ಮುಕ್ತ " ಎಂಬ ಧಾರಾವಾಹಿಯ ಶೀರ್ಷಿಕೆ ಗೀತೆಯ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ ಕನಸಿನ ರಮ್ಯ ಲೋಕದಲ್ಲಿ ಇರುವಾಗ ನನ್ನ ಹೆಂಡತಿ ಬಿಸಿ ಬಿಸಿ ಹಬೆಯಾಡುವ ಕಾಫಿ ಕೈಯಲ್ಲಿ ಹಿಡಿದು ಬಂದಳು. ನಾನು ಹಾಗೆ ಮಗುವಿನ ಕೈ ಬಿಡಿಸಿಕೊಂಡು ಹಾಸಿಗೆಯ ಮೇಲೆಯೇ ದಿಂಬುಸರಿಸಿ ಮಂಚಕ್ಕೆ ಒರಗಿ ಕುಳಿತು ಕಾಫಿ ಹೀರ ತೊಡಗಿದೆ. ಆಕೆಯೂ ಪಕ್ಕದಲ್ಲಿ ಕುಳಿತು ಕಾಫಿ ಕುಡಿಯುತ್ತಾ ಕೇಳಿದಳು

 " ಇಂದು ಬೆಳಗಿನ ಉಪಹಾರ ಏನಿರಬೇಕು " ನಾನು ನನ್ನಾಸೆಯ ನೀರು ದೋಸೆ, ಕಾಯಿ ಚಟ್ನಿ, ಮೊಟ್ಟೆ ಪಲ್ಯ ಬೇಕೆಂದು ಹೇಳಿದಾಗ ಆಕೆ ನನ್ನನ್ನೊಮ್ಮೆ ಪ್ರೀತಿಯಿಂದ ದಿಟ್ಟಿಸಿ " ಸರಿ " ಎಂದಳು. ಆಕೆ ಇನ್ನೇನು ಎದ್ದು ಹೊರಡಬೇಕೆನ್ನುವಾಗ ಕೈ ಹಿಡಿದು ಹೇಳಿದೆ "ತುಂಬಾ ಗಡಿಬಿಡಿ ಏನು ಬೇಡ. ಸುಮಾರು 9:00 ಗಂಟೆಯಷ್ಟೊತ್ತಿಗೆ ರೆಡಿಯಾದರೆ ಸಾಕು. ಹತ್ತು ಗಂಟೆಗೆ ಸರಿಯಾಗಿ ನೇತ್ರಾವತಿ ನದಿ ಹುಟ್ಟುವ ಸ್ಥಳಕ್ಕೆ ಚಾರಣ ಹೋಗಿ ಬರೋಣ. ಮಧ್ಯಾಹ್ನ ಅಲ್ಲೇ ಒಂದು ರೆಸಾರ್ಟಿನಲ್ಲಿ ಊಟ ಮಾಡಿ, ಸಂಜೆ ಹಾಗೆಯೇ ಗೆಳೆಯ ವಿಕ್ರಮನ ಮನೆಗೆ ಭೇಟಿ ನೀಡಿ ರಾತ್ರಿ ಅಲ್ಲೇ ಅವರ ಮನೆಯಲ್ಲಿ ಭರ್ಜರಿ ಊಟ ಮಾಡಿ ಬರೋಣ " ಎಂದು ಹೇಳಿದೆ. 

ಹೆಂಡತಿಯ ಬಟ್ಟಲು ಕಣ್ಣುಗಳಲ್ಲಿ ಸಂತೋಷದ ಮಿಂಚು ಹರಿದಾಡಿತ್ತು. ನನ್ನನ್ನು ತಬ್ಬಿಕೊಂಡು ಮತ್ತೆ ಮುತ್ತು ನೀಡಿ ಅಡಿಗೆ ಮನೆ ಕಡೆ ನಡೆದಳು. ಈ ಮಧ್ಯೆ ದಿನ ಪತ್ರಿಕೆ ಬಂದು ಸುಮಾರು ಒಂದು ಗಂಟೆ ಪತ್ರಿಕೆಯನ್ನು ಓದಿದೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿಯಾಗಿ ಕ್ರಿಕೆಟ್ ಆಡುತ್ತಿದೆ. ಫೈನಲ್ ತಲುಪಿದೆ. ಬಹುಶಃ ಈ ಬಾರಿ ಕಪ್ ನಮ್ಮದೇ ಎಂಬ ಭರವಸೆ ಮೂಡಿಸಿದೆ. ಇನ್ನು ಒಂದೇ ಹೆಜ್ಜೆ. ಹೇಗಾದರೂ ಮಾಡಿ ಮಂಗಳವಾರ ಬೇಗ ಮನೆ ಸೇರಿ ಮ್ಯಾಚ್ ನೋಡಬೇಕು ಎಂದು ನಿರ್ಧರಿಸಿದೆ. 

ಪತ್ರಿಕೆಯ ಮುಖಪುಟದಲ್ಲಿ ಉಡುಪಿ ಜಿಲ್ಲೆಯಲ್ಲಿ ಮಳೆಯ ಅನಾಹುತದಿಂದ ಆರ್ಯನ್ ಮತ್ತು ಆಯುಷ್ ಎಂಬ ಇಬ್ಬರು ಪುಟ್ಟ ಮಕ್ಕಳು ತಮ್ಮ ತಾಯಿಯ ಮಡಿಲಲ್ಲಿಯೇ ಪ್ರಾಣಬಿಟ್ಟ ಸುದ್ದಿ ಓದಿ ಮನಸ್ಸಿಗೆ ತುಂಬಾ ನೋವಾಯಿತು. ನನ್ನ ಪುಟ್ಟ ಮಗುವನ್ನು ಹಾಗೆ ದಿಟ್ಟಿಸಿದೆ. ಮನಸ್ಸು ತಡೆಯಲಾಗಲಿಲ್ಲ. ತಲೆ ಕೊಡವಿ ಆ ಘಟನೆಯನ್ನು ಮರೆಯಲು ಪ್ರಯತ್ನಿಸಿದೆ. ಬೇಗ ರೆಡಿಯಾಗೋಣ ಎಂದು ಮಗುವನ್ನು ಮುದ್ದಿಸಿ ನಿಧಾನವಾಗಿ ಎಚ್ಚರಗೊಳಿಸಿ ಬಾತ್ ರೂಂ ಕಡೆ ಹೊರಟೆ. ಮಗುವಿಗೆ ಸ್ನಾನ ಮಾಡಿಸುವುದೇ ಒಂದು ಸಂಭ್ರಮ. ದೊಡ್ಡ ಬಾತ್ ಟಬ್ ನಲ್ಲಿ ಹದವಾಗಿ ಬೆರೆಸಿದ ನೀರಿನಲ್ಲಿ ಮಗುವನ್ನು ಕೂರಿಸಿ ಆ ನೀರಿನಲ್ಲೇ ಸೋಪಿನ ನೊರೆ ಬರುವಂತೆ ಮಾಡಿ, ಹತ್ತು ಹದಿನೈದು ನಿಮಿಷ ಆಟ ಆಡಿದ ನಂತರವೇ ಸ್ವಲ್ಪ ಸ್ನಾನ ಮಾಡಿಸಿ, ಹೆಂಡತಿಗೆ ಮಗುವನ್ನು ಕೊಟ್ಟು ನಾನು ಸ್ನಾನ ಮಾಡಿಕೊಂಡು ಒಂಬತ್ತು ಗಂಟೆಗೆ ಸರಿಯಾಗಿ ತಿಂಡಿಗೆ ಮೂವರು ಒಟ್ಟಾಗಿ ಕುಳಿತೆವು. 

ಕಾಯಿ ಚಟ್ನಿ, ಮೊಟ್ಟೆ ಪಲ್ಯದೊಂದಿಗೆ ನೀರು ದೋಸೆಯನ್ನು ತಿನ್ನುತ್ತಾ, ಆಗಾಗ ಮಗುವಿಗೆ ಬಲವಂತದಿಂದ ಒಂದೊಂದೇ ತುತ್ತು ತಿನ್ನಿಸುತ್ತಾ, ಮಳೆಯ ಅವಾಂತರದ ಬಗ್ಗೆ ಹೆಂಡತಿ ಜೊತೆ ಚರ್ಚಿಸುತ್ತಾ, ಪ್ರಯಾಣಕ್ಕೆ ತೆಗೆದುಕೊಳ್ಳಬೇಕಾದ ವಸ್ತುಗಳು, ತಿಂಡಿಗಳು, ಮಳೆ ಚಳಿಯ ರಕ್ಷಣೆಗೆ ಮಾಡಿಕೊಳ್ಳಲು ಬೇಕಾದ ಸಿದ್ಧತೆ, ಶೂ, ಚಪ್ಪಲಿ ಎಲ್ಲವನ್ನು ಮಾತನಾಡಿಕೊಂಡೆವು. 10:00 ಗಂಟೆಯ ಸುಮಾರಿಗೆ ಎಲ್ಲರೂ ಟ್ರ್ಯಾಕ್ ಸೂಟ್, ರೈನ್ ಕೋಟ್ ಮತ್ತು ಶೂಗಳೊಂದಿಗೆ ಸಿದ್ಧವಾಗಿ ಹೊರಟೆವು. ಇನ್ನೂ ತುಂತುರು ಮಳೆ ಬೀಳುತ್ತಲೆ ಇತ್ತು.  ಕಾರಿನಲ್ಲಿ ಆ ದಟ್ಟ ಹಸಿರ ಕಾಡಿನ ನಡುವೆ ಡ್ರೈವ್ ಮಾಡುವುದು ಒಂದು ಅದ್ಭುತ ಅನುಭವ. ಪಕ್ಕದಲ್ಲಿ ಹೆಂಡತಿ, ಆಕೆಯ ತೊಡೆಯ ಮೇಲೆ ಪುಟ್ಟ ಕಂದ, ಅದರ ತೊದಲು ನುಡಿಗಳು. 

ನಮ್ಮ ಇಡೀ ಪ್ರಯಾಣದ ಕೇಂದ್ರ ಬಿಂದುವೇ ಆ ಕಂದ. ಅದರ ಮಾತುಗಳು, ಚೇಷ್ಟೆಗಳು, ಮಧ್ಯೆ ಮಧ್ಯೆ ತಿಂಡಿ ತಿನಿಸುಗಳು, ಮಗುವಿನ ನಿದ್ದೆ ಎಲ್ಲವೂ ಅದರ ಸುತ್ತಲೇ ಕೇಂದ್ರೀಕೃತ. ಅದು ಮಲಗಿದಾಗಲೂ ಅದರ ಚಟುವಟಿಕೆಯ ಕುರಿತೇ ನಮ್ಮಿಬ್ಬರ ಮಾತುಗಳು. ಸುಮಾರು ಎರಡು ಗಂಟೆಯ ಪ್ರಯಾಣದ ನಂತರ ಕಾರಿನಲ್ಲಿ ಒಂದು ನಿರ್ದಿಷ್ಟ ಜಾಗ ತಲುಪಿದೆವು. ಅಲ್ಲಿ ಕಾರನ್ನು ನಿಲ್ಲಿಸಿ ಮಗುವನ್ನ ಎತ್ತಿಕೊಂಡು ನೇತ್ರಾವತಿ ಹುಟ್ಟುವ ಜಾಗಕ್ಕೆ ನಿಧಾನವಾಗಿ ಬೆಟ್ಟದ ಸಾಲುಗಳ ನಡುವೆ ಹತ್ತ ತೊಡಗಿದೆವು. ಅದಾಗಲೇ ಒಂದಷ್ಟು ಜನ ನಮ್ಮಂತೆ ಚಾರಣಿಗರು ಬಂದು ಹತ್ತಲು ಪ್ರಾರಂಭಿಸಿದ್ದರು. ಮಗುವನ್ನು ಹೆಗಲ ಮೇಲೆ ಕೂರಿಸಿಕೊಂಡು ಆ ತುಂತುರು ಹನಿಯಲ್ಲಿ ಅದಕ್ಕೆ ಎಲ್ಲವನ್ನು ಹೇಳುತ್ತಾ ನಾನು ಹೆಜ್ಜೆ ಹಾಕುತ್ತಿದ್ದರೆ ನನ್ನ ಹಿಂದೆ ಕ್ಯಾಪ್ ಧರಿಸಿದ ಹೆಂಡತಿ ಮಗುವಿಗೆ ಬೇಕಾದ ಎಲ್ಲಾ ತಿಂಡಿ ತಿನಿಸುಗಳ ಬ್ಯಾಗನ್ನು ಬೆನ್ನಿಗೆ ಹಾಕಿಕೊಂಡು ನಡೆಯುತ್ತಾ ಬರುತ್ತಿದ್ದಳು.

ಸುಮಾರು ಮುಕ್ಕಾಲು ಗಂಟೆಯ ನಂತರ ಸ್ವಲ್ಪ ಎತ್ತರದ ಪ್ರದೇಶ ಹತ್ತಿದ ಮೇಲೆ ಒಂದು 15 ನಿಮಿಷದ ವಿರಾಮಕ್ಕಾಗಿ ಅಲ್ಲಿಯೇ ಇದ್ದ ಕಲ್ಲು ಬಂಡೆಯ ಮೇಲೆ ಕುಳಿತೆವು. ಮಗುವನ್ನು ಇಳಿಸಿ ಸುತ್ತಲೂ ಒಮ್ಮೆ ಕಣ್ಣಾಡಿಸಿದೆ. ಅದ್ಭುತ, ಅತ್ಯದ್ಭುತ ಸೌಂದರ್ಯ. ಸುತ್ತಲೂ ಬೆಟ್ಟದ ಸಾಲುಗಳು. ಅದಕ್ಕೆ ಕಳಸವಿಟ್ಟಂತೆ ಮೋಡಗಳು ತುಂತುರು ಹನಿ ಉದುರಿಸುತ್ತಾ ಬೆಟ್ಟದ ಸಾಲಿನಲ್ಲಿ ಚಲಿಸುವ ದೃಶ್ಯಗಳು ಪ್ರಕೃತಿಯ ಸೌಂದರ್ಯದ ಉತ್ತುಂಗದಂತೆ ಕಣ್ಣಿಗೆ ಕಂಡ ದೃಶ್ಯಗಳು ಮೆದುಳನ್ನು ಬೈಪಾಸ್ ಮಾಡಿ ನೇರವಾಗಿ ಹೃದಯಕ್ಕೆ ನಾಟುತ್ತಿದ್ದವು. ಆ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸ್ಟೇಟಸ್ ಗೆ ಹಾಕಿ ನಾವು ಮೂವರು ಕೆಲವು ಸೆಲ್ಫಿ ತೆಗೆದುಕೊಂಡು, ಮಗುವಿನ ವಿವಿಧ ಭಂಗಿಯ ದೃಶ್ಯಗಳನ್ನು ತೆಗೆದು ಅದನ್ನು ನೋಡಿ ಇಬ್ಬರು ಆನಂದಿಸಿದೆವು. 

ಅಲ್ಲಿಯೇ ಮಗುವಿಗೆ ಮನೆಯಿಂದ ತಂದಿದ್ದ ಹಾಲು ಕುಡಿಸಿ, ಮತ್ತೆ ಇಳಿಜಾರಿನಲ್ಲಿ ನಡೆಯುತ್ತಾ ಸಾಗಿದೆವು. ಮುಕ್ಕಾಲು ಗಂಟೆ ಮತ್ತೆ ನಡೆದ ನಂತರ ನೇತ್ರಾವತಿಯ ಹುಟ್ಟಿನ ಆ ಸ್ಥಳ ತಲುಪಿದೆವು. ಕಾಡಿನ ಮಧ್ಯೆ ಅಲ್ಲಿ ನೀರು ಬುಗ್ಗೆ ಬುಗ್ಗೆಯಂತೆ ಚಿಮ್ಮಿ ಫಾಲ್ಸ್ ನಂತೆ ಚಿಕ್ಕದಾಗಿ ಕೆಳಗೆ ಧುಮುಕುತ್ತಾ ಇದ್ದ ಆ ಸೌಂದರ್ಯವನ್ನು ವರ್ಣಿಸುವುದು ತುಂಬಾ ಕಷ್ಟ. ಏಕೆಂದರೆ ಪ್ರಕೃತಿಯ ಅಣುವಿನ ಕಣ ನಾವು. ಆ ಕಣ  ಸೌಂದರ್ಯದ ಅಗಾಧತೆಯನ್ನು ಅಕ್ಷರಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅದು ಭಾವನೆಯ ಕಡಲು ಅನುಭವಿಸಿದವರಿಗಷ್ಟೇ ಸಿಗುವುದು.

(ಇನ್ನೂ ಇದೆ) 

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ