ಭಾರತೀಯ ಚಿತ್ರಕಲೆ - ಭಾಗ 4

ಭಾರತೀಯ ಚಿತ್ರಕಲೆ - ಭಾಗ 4

ತಂಜಾವೂರು ಚಿತ್ರಕಲೆ
ತಮಿಳುನಾಡಿನ ತಂಜಾವೂರು ಈ ಚಿತ್ರಕಲೆಯ ಮೂಲ. ಆರಂಭದಲ್ಲಿ ಇವನ್ನು ಪ್ರಾರ್ಥನಾ ಕೋಣೆಗಳಲ್ಲಿ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಆದರೆ ಈಗ ಇವು ಅಲಂಕಾರಿಕ ಚಿತ್ರಗಳಾಗಿಯೂ ಜನಪ್ರಿಯವಾಗಿವೆ.

ಈ ಚಿತ್ರಗಳು ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದವುಗಳೇ ಆಗಿರುತ್ತವೆ. ಉದಾಹರಣೆಗೆ, ದಶಾವತಾರಗಳು, ಬೆಣ್ಣೆ ಕದಿಯುವ ಬಾಲಕೃಷ್ಣ ಇತ್ಯಾದಿ. ಇಲ್ಲಿರುವ ಚಿತ್ರ ಮಹಾಶಿವನ ವಾಹನ ನಂದಿಯದು.

ಮರದ ಹಲಗೆ ತುಂಡುಗಳಲ್ಲಿ ಸ್ಕೆಚ್ ಬರೆದು, ಕಲಾವಿದರು ಬಣ್ಣ ತುಂಬುತ್ತಾರೆ. ಅವನ್ನು ಅಂದಗೊಳಿಸಲು ಬಣ್ಣದ ಕಲ್ಲುಗಳು, ಆಭರಣಗಳು ಮತ್ತು ಗಾಜಿನ ತುಂಡುಗಳನ್ನು ಬಳಸುತ್ತಾರೆ. ಚಿತ್ರಗಳ ಕಂಬಗಳು, ಮಾಲೆಗಳು ಮತ್ತು ಆಭರಣಗಳಿಗೆ ಚಿನ್ನದ ತಗಡನ್ನು ತಗಲಿಸಿ ಚಿತ್ರಗಳನ್ನು ಆಕರ್ಷಕವಾಗಿಸುತ್ತಾರೆ.

ಮೊಘಲರ ಪುಟಾಣಿ ಚಿತ್ರಗಳು
೧೬ನೇ ಶತಮಾನದಲ್ಲಿ ಮೊಘಲ್ ದೊರೆ ಅಕ್ಬರ ಪರ್ಷಿಯಾದಿಂದ ಕಲಾಕಾರರನ್ನು ಕರೆಸಿ, ಸ್ಥಳೀಯ ಕಲಾಕಾರರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಿದ್ದು ಮೊಘಲ್ ಚಿತ್ರಕಲೆಯ ನಾಂದಿ. ಹೆಸರೇ ಸೂಚಿಸುವಂತೆ ಇವು ಅಳತೆಯಲ್ಲಿ ಚಿಕ್ಕವು. ಈ ಚಿತ್ರಗಳಲ್ಲಿ ಸೂಕ್ಷ್ಮ ವಿವರಗಳು ಜಾಸ್ತಿ. ಅಲಂಕಾರಿಕ ಚೌಕಟ್ಟು ಮತ್ತು ಹಿನ್ನೆಲೆಯಲ್ಲಿರುವ ವಿವರಗಳು ಈ ಚಿತ್ರಗಳ ವಿಶೇಷ.

ರಾಜನ ಆಸ್ಥಾನದ ವೈಭವ, ಬೇಟೆಯ ಚಿತ್ರಗಳು, ಕಟ್ಟಡಗಳ ವಿನ್ಯಾಸ - ಇವು ಈ ಚಿತ್ರಗಳ ವಸ್ತು. ಪಕ್ಷಿಗಳು ಮತ್ತು ಪ್ರಾಣಿಗಳು, ಈ ಚಿತ್ರಗಳಲ್ಲಿರುವ ಜನಪ್ರಿಯ ವಿಷಯಗಳು. ಒಂದೇ ಚಿತ್ರವನ್ನು ಬರೆದು ಮುಗಿಸಲು ಹಲವು ಪಳಗಿದ ಚಿತ್ರಕಾರರು ಕೈಜೋಡಿಸಿದರು.

ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್ ಇನ್ ಇಂಡಿಯನ್ ಆರ್ಟ್” ಪುಸ್ತಕ