ಭಾರತ ಮಾತೆಗೆ ಅರ್ಪಣೆ: ಸ್ವಾತಂತ್ರ್ಯ ಹೋರಾಟದ ಎರಡು ಹಾಡುಗಳು
![](https://saaranga-aws.s3.ap-south-1.amazonaws.com/s3fs-public/styles/article-landing/public/Bharath%20Matha%20-Nojoto%20-23May2024.jpg?itok=GQwUwYcA)
ಇವತ್ತು “ಸಂಪದ”ದ ಪುಸ್ತಕ ಸಂಪದ ವಿಭಾಗದಲ್ಲಿ ಡಾ. ಸೂರ್ಯನಾಥ ಕಾಮತರು ಸಂಪಾದಿಸಿದ “ಬಿಡುಗಡೆಯ ಹಾಡುಗಳು” ಪುಸ್ತಕವನ್ನು ಪರಿಚಯಿಸಿದ್ದೇನೆ. ಆ ಅಪರೂಪದ ಪುಸ್ತಕದಿಂದ ಆಯ್ದ ಎರಡು ಹಾಡುಗಳು ಇಲ್ಲಿವೆ:
ಮಾತೃಭೂಮಿ ಜನನಿ
ಮಾತೃಭೂಮಿ ಜನನಿ ನಿನ್ನ ಚರಣ ಸೇವೆ ಮಾಡುವಾ/
ಪರಮ ಹರುಷದಿಂದ ನಿನ್ನ ಸುಖಕೆ ಪ್ರಾಣವೀಯುವಾ //ಪಲ್ಲವಿ//
ತನುಮನಧನದಿಂದ ನಿನ್ನ ಘನತೆಯನ್ನು ಬೆಳೆಸುವಾ/
ದಣಿಯದೆ ಅನುದಿನವು ದುಡಿದು ಗುಣಿಗಳೆನಿಸಿಕೊಳ್ಳುವಾ //೧//
ಬಂದುನಿಂದ ತೊಂದರೆಗಳ ಸಂದಣಿಯನು ಸರಿಸುವಾ/
ಮುಂದೆ ಅಡಿಯನಿಡುತ ಒಂದುಗೂಡಿ ಜಯವ ಪೊಂದುವಾ //೨//
ಹಿಂದುಮಾತೆ ಬಂಧುಭಾವದಿಂದ ನಿನ್ನ ಕಂದರು/
ಒಂದುಗೂಡಿ ಪಾರತಂತ್ರ್ಯ ಬಂಧವ ಹರಿದೊಗೆವೆವು //೩//
ಕೆಟ್ಟ ಕಣ್ಣಿನಿಂದ ನೋಳ್ಪ ದುಷ್ಟಜನರಿಗಂಜದೆ/
ದಿಟ್ಟತನದೊಳೆಲ್ಲರೊಟ್ಟುಗೂಡುತಿಹೆವು ಕಷ್ಟಕೆ //೪//
-ಲೇಖಕರು: ಕವಿಭೂಷಣ ಬೆಟಗೇರಿ ಕೃಷ್ಣಶರ್ಮ
ಮರೆತೆ ಏತಕಯ್ಯಾ
ಮರೆತೆ ಏತಕಯ್ಯಾ ನಿನ್ನ ಮಾತೃಭೂಮಿಯ //ಪಲ್ಲವಿ//
ನಿರುತ ನಿನ್ನ ಹೊರೆಯ ಹೊತ್ತು ಪೊರೆವ ತಾಯಿಯ
ಮರೆತೆ ಏತಕಯ್ಯಾ //ಅನುಪಲ್ಲವಿ//
ಒಂಭತ್ತು ತಿಂಗಳು ತನ್ನೊಳಿಂಬುಗೊಟ್ಟವಳು ತಾಯಿ/
ತೊಂಬತ್ತು ವರುಷವಾದರು ಪೊರೆವ ಕುಂಭಿನಿ ತಾಯಲ್ಲೋ//
ಮಾತೃಭೂಮಿಯಾ //೧//
ನಡೆನುಡಿ ಬರುವ ತನಕ ಒಡಲಿಗನ್ನ ಕೊಡುವಳು ತಾಯಿ/
ಕಡೆತನಕ ನಿನ್ನೊಡಲಿಗೆ ಅನ್ನ ಕೊಡುವಳು ತಾಯಲ್ಲೊ//
ಮಾತೃಭೂಮಿಯ //೨//
ಗೇಣು ಭೂಮಿಗಾಗಿ ಎನ್ನ ಪ್ರಾಣ ಹೋಗಲಿ ಎಂದೆನ್ನುವಿ/
ಕಾಣ್ದೇನೊ ನಾಡೇ ಪರರಾಧೀನವಾಗಿರುವುದು ಮನುಜಾ//
ಮಾತೃಭೂಮಿಯ//೩//
-ಲೇಖಕರು: ಮುದವೀಡು ಕೃಷ್ಣರಾಯರು (1920)