ಭಾರತ ಸರ್ಕಾರದ ಒಂಬತ್ತು ವರ್ಷಗಳು… (ಭಾಗ 1)

ಭಾರತ ಸರ್ಕಾರದ ಒಂಬತ್ತು ವರ್ಷಗಳು… (ಭಾಗ 1)

ಅದನ್ನು ನರೇಂದ್ರ ಮೋದಿಯವರ ಆಡಳಿತದ ಅವಧಿ ಎನ್ನುವುದೇ ಹೆಚ್ಚು ಸೂಕ್ತವಾಗಿದೆ. ಬಹುತೇಕ ಈ ಒಂಬತ್ತು ವರ್ಷಗಳು ಭಾರತದ ಬಹುತೇಕ ರಾಜಕೀಯ, ಆಡಳಿತ, ಮಾಧ್ಯಮ ಮತ್ತು ಆರ್ಥಿಕ ಚಟುವಟಿಕೆಗಳು ಈ ಏಕ ವ್ಯಕ್ತಿಯ  ಸುತ್ತಲೇ ತಿರುಗುತ್ತಿರುವುದು ವಾಸ್ತವ. ಈ ಒಂಬತ್ತು ವರ್ಷಗಳಲ್ಲಿ ನಿಜವಾಗಿಯೂ ಸಾಕಷ್ಟು ಬದಲಾವಣೆ ಆಗಿದೆ. ಅದರಲ್ಲಿ ಕೆಲವು ಉತ್ತಮ, ಕೆಲವು ‌ಆತಂಕಕಾರಿ ಎರಡೂ ಇವೆ. ಕೆಲವು ತಕ್ಷಣದ ಪರಿಣಾಮ ಬೀರಿದರೆ ಮತ್ತೊಂದಿಷ್ಟು ದೀರ್ಘಕಾಲದಲ್ಲಿ ಪರಿಣಾಮ ಬೀರಬಹುದು. ಅವುಗಳಲ್ಲಿ ಕೆಲವು ಮುಖ್ಯವಾದವುಗಳು...

1) ಭ್ರಷ್ಟಾಚಾರದ ವಿರುದ್ಧ ಆಕ್ರೋಶದಿಂದ ಮತದಾನ ಮಾಡಿದ ಭಾರತೀಯ ಮತದಾರರಿಗೆ ಮೋದಿ ಕೊಟ್ಟಿದ್ದೇನು ?

ಹೌದು, 2014 ರಲ್ಲಿ ಮತದಾರರು ಬಯಸಿದ ಬಹುಮುಖ್ಯ ಬದಲಾವಣೆಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಬಹುಮುಖ್ಯವಾದುದು. ಅಣ್ಣಾ ಹಜಾರೆಯವರ ಹೋರಾಟದ ಮುಂದುವರಿದ ಭಾಗವಾಗಿ ಅನೇಕ ಹಗರಣಗಳ ಬಗ್ಗೆ ಮಾಧ್ಯಮಗಳು ಮಾಡಿದ ಅತಿರಂಜಿತ ವರದಿಗಳ ಪರಿಣಾಮ ಮತದಾರರು ನರೇಂದ್ರ ಮೋದಿಯವರನ್ನು ಬೆಂಬಲಿಸಿದರು. ಈ ಒಂಬತ್ತು ವರ್ಷಗಳಲ್ಲಿ ಭಾರತದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆಯೇ ಎಂಬ ಪ್ರಶ್ನೆ ನಮಗೆ ಕೇಳಿಕೊಂಡು‌ ಅದಕ್ಕೆ ತುಂಬಾ ವಿಶಾಲವಾದ ಮತ್ತು ಮುಕ್ತವಾದ ಆತ್ಮಸಾಕ್ಷಿಯ ನೆರಳಲ್ಲಿ ಯೋಚಿಸಿದರೆ ಉತ್ತರ ಸಿಗಬಹುದು.

ಭ್ರಷ್ಟಾಚಾರದ ಬಗ್ಗೆ ಇಡೀ ದೇಶದ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಿದ ಹೆಗ್ಗಳಿಕೆ ಮೋದಿಯವರಿಗೆ ಸಲ್ಲಬೇಕು. ಭ್ರಷ್ಟಾಚಾರ ಈ‌ ದೇಶಕ್ಕೊಂದು ಶಾಪ ಎಂದು ನಿರಂತರವಾಗಿ ಮಾತನಾಡುತ್ತಾ ಬಂದರು. ಅನೇಕ ಭ್ರಷ್ಟರ ಮೇಲೆ ದಾಳಿಗಳಾದವು. ಭ್ರಷ್ಟಾಚಾರದ ನಿರ್ಮೂಲನೆಯ ಭಾಗವಾಗಿ ನೋಟು ಅಮಾನ್ಯೀಕರಣ, ಜಿಎಸ್ಟಿ, ಎಲ್ಲಾ ಆರ್ಥಿಕ ವ್ಯವಹಾರಗಳ ಡಿಜಟಲೀಕರಣ, ಬ್ಯಾಂಕ್ ಖಾತೆ ತೆರೆಯಲು ಯೋಜನೆಗಳು, ಯಾವುದೇ ದೊಡ್ಡ ಗಂಭೀರ ಹಗರಣ ನಡೆಯದಂತೆ ಎಚ್ಚರಿಕೆ ಮುಂತಾದ ಕ್ರಮಗಳನ್ನು ಕೈಗೊಂಡರು. ಅದಕ್ಕೆ ಅಭಿನಂದನಾರ್ಹರು.

ಅದೇರೀತಿ ಕೇವಲ ವಿರೋಧ ಪಕ್ಷಗಳನ್ನಷ್ಟೇ ಗುರಿ ಮಾಡಿ ದಾಳಿ ಮಾಡುವುದು, ಹೆದರಿಸಿ ಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೆಳೆಯುವುದು, ಇಡೀ ದೇಶದಲ್ಲಿ 300 ಕ್ಕೂ ಹೆಚ್ಚು ಶಾಸಕರನ್ನು ಬಹಿರಂಗ ಹರಾಜಿನಲ್ಲಿ ಖರೀದಿಸಿ ಸರ್ಕಾರಗಳನ್ನು ರಚಿಸಿರುವುದು, ತಮ್ಮ ಪಕ್ಷದ ಭ್ರಷ್ಟರನ್ನು ರಕ್ಷಿಸಿರುವುದು, ಹಗರಣಗಳ ಆರೋಪದ ಬಗ್ಗೆ ತನಿಖೆ ಮಾಡಿಸದಿರುವುದು ಹೀಗೆ ಕೆಲವು ವಿಷಯಗಳಲ್ಲಿ ಅಪ್ರಾಮಾಣಿಕ ಮತ್ತು ಪಕ್ಷಪಾತ ಮಾಡಿರುವುದನ್ನು ನಿಷ್ಪಕ್ಷಪಾತ ಮನಸ್ಸಿನ ಜನರು ಮರೆಯಲಾರರು. 

2) ರೈಲು ನಿಲ್ದಾಣದಲ್ಲಿ ಟೀ ಮಾರುತ್ತಿದ್ದರು ಎಂದು ಹೇಳಲಾದ ಸಾಮಾನ್ಯ ವ್ಯಕ್ತಿ ಪ್ರಧಾನಿಯಾಗಿ ಆಯ್ಕೆಯಾದ ಅತ್ಯದ್ಭುತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೋದಿ ಸಲ್ಲಿಸಿದ ಕೃತಜ್ಞತೆಗಳು ಏನು ?

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಮತ್ತು ವೈವಿಧ್ಯಮಯ ದೇಶದಲ್ಲಿ ಅತ್ಯಂತ ಸಾಧಾರಣ ಕುಟುಂಬದ ಸಾಮಾನ್ಯ ವ್ಯಕ್ತಿ ಚುನಾವಣೆಯ ಮೂಲಕ ನೂರಕ್ಕೂ ಹೆಚ್ಚು ವರ್ಷ ಹಳೆಯದಾದ ಪಕ್ಷವನ್ನು ಎರಡು ಬಾರಿ ಹೀನಾಯವಾಗಿ ಸೋಲಿಸಿ ಅತ್ಯಂತ ಹೆಚ್ಚು ದಾಖಲೆಯ ಬಹುಮತದಿಂದ ಆಯ್ಕೆಗೊಂಡು ಈಗಲೂ ಜನಪ್ರಿಯತೆಯಲ್ಲಿ ಮುಂದುವರಿಯುತ್ತಿರುವುದು ಬಹುದೊಡ್ಡ ಸಾಧನೆ. ಚುನಾವಣಾ ಸಮಯದಲ್ಲಿ ಬಹಳ ಆಕ್ರಮಣಕಾರಿಯಾಗಿ ಪ್ರಚಾರ ಮಾಡುವ ಮೋದಿಯವರು ಚುನಾವಣಾ ಫಲಿತಾಂಶದ ನಂತರ ಸೋತಾಗಲು ವಿರೋಧಿಗಳನ್ನು ಅಭಿನಂದಿಸಿ ತಮ್ಮ ಸ್ಥಾನದ ಜವಾಬ್ದಾರಿ ನಿರ್ವಹಿಸುತ್ತಾರೆ.

ಹಾಗೆಯೇ, ನ್ಯಾಯಾಂಗ ವ್ಯವಸ್ಥೆಯೂ ಸೇರಿ ಕೆಲವು ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿರುವುದು, ವಿರೋಧ ಪಕ್ಷಗಳನ್ನು ತೀವ್ರವಾಗಿ ನಿರ್ಲಕ್ಷಿಸಿರುವುದು, ಸಂಪುಟದ ಇತರ ಸಚಿವರಿಗೆ ಯಾವುದೇ ಮಾನ್ಯತೆ ನೀಡದೆ ಏಕ ವ್ಯಕ್ತಿ ಪ್ರದರ್ಶನ ಮಾಡುವುದು, ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದ ಕೆಲವು ವಿವಾದಾತ್ಮಕ ಕಾನೂನುಗಳನ್ನು ಜಾರಿಗೊಳಿಸಲು ಪರೋಕ್ಷವಾಗಿ ಪ್ರಯತ್ನಿಸುವುದು ಮುಂತಾದ ತನ್ನನ್ನೇ ಬೆಳೆಸಿದ ಸಂವಿಧಾನದ ವಿರೋಧಿ ನಡವಳಿಕೆಗಳು ಕೂಡ ಅವರ ಅವಧಿಯಲ್ಲಿ ನಡೆಯುತ್ತಿದೆ.

3) ಒಂಬತ್ತು ವರ್ಷಗಳ ಹಿಂದಿನವರೆಗಿನ ಮತ್ತು ನಂತರದ ಈಗಿನ ಸಾಮಾಜಿಕ ಸಾಮರಸ್ಯ ಹೇಗಿದೆ ? ಅದಕ್ಕೆ ಮೋದಿಯವರ ಕೊಡುಗೆ ಏನು ?

ಭಾರತದ ಸಾಮಾಜಿಕ ವ್ಯವಸ್ಥೆಯ ರಚನೆಯೇ ಬಹಳ ಅಸಮಾನತೆಯಿಂದ ಕೂಡಿದೆ. ಜಾತಿ ವ್ಯವಸ್ಥೆ, ಆರ್ಯ ದ್ರಾವಿಡ ಭಿನ್ನತೆ, ನಗರ ಹಳ್ಳಿಗಳ ವ್ಯತ್ಯಾಸ, ಅಕ್ಷರಸ್ಥ ಅನಕ್ಷರಸ್ಥರ ಕಂದಕ, ಬಡವ ಶ್ರೀಮಂತರ ಬೇದ, ಭಾಷಾ ವೈವಿಧ್ಯತೆ, ಧಾರ್ಮಿಕ ಶ್ರೇಷ್ಠತೆಯ ವ್ಯಸನ ಎಲ್ಲವೂ ಸೇರಿ ಗೊಂದಲಮಯವಾಗಿದೆ. ಮೋದಿಯವರು " ಏಕ್ ಭಾರತ್ ಶ್ರೇಷ್ಠ್ ಭಾರತ್ " ಪರಿಕಲ್ಪನೆಯನ್ನು ಜಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ಘೋಷಣೆಯನ್ನು ಆಗಾಗ ಉಚ್ಚರಿಸುತ್ತಲೇ ಇರುತ್ತಾರೆ. ಒಂದೇ ಬಾರಿಗೆ ಚುನಾವಣೆ, ಒಂದೇ ರೇಷನ್ ಕಾರ್ಡ್, ಏಕರೂಪ ನಾಗರಿಕ ಸಂಹಿತೆ ಮುಂತಾದ ವಿಷಯಗಳನ್ನು ಜಾರಿ ಮಾಡಿ ಸಾಮರಸ್ಯ ಮೂಡಿಸುವ ಕನಸನ್ನು ಹೊಂದಿದ್ದಾರೆ. ಹಾಗೆ ಚಿಂತಿಸಲು ಅವರು ಸ್ವತಂತ್ರರು.

ಆದರೆ ಈ ಒಂಬತ್ತು ವರ್ಷಗಳಲ್ಲಿ ಭಾರತದ ಸಾಮಾಜಿಕ ಸಾಮರಸ್ಯ ಕುಸಿದಿದೆ. ಈ ವಿಷಯದಲ್ಲಿ ಮೋದಿಯವರ ಮಾತು ಮತ್ತು ಕೃತಿಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಅವರ ತಮ್ಮ ಮಾತೃ ಸಂಸ್ಥೆಯ ಅಣತಿಯಂತೆ ಕಾರ್ಯನಿರ್ವಹಿಸುತ್ತಿರುವುದು ಬಹಿರಂಗ ಸತ್ಯ. ಇವರ ಕಾಲದಲ್ಲಿ ಕೋಮು ಗಲಭೆಗಳು ಕಡಿಮೆಯಾಗಿರುವುದು ನಿಜ. ಆದರೆ ಆಂತರ್ಯದಲ್ಲಿ ಅಸಮಾಧಾನ ಅಡಗಿದೆ. ಸಾಮಾಜಿಕ ಜಾಲತಾಣಗಳ ಪರಿಣಾಮವಾಗಿ ಈ ಸಾಮರಸ್ಯ ಹದಗೆಟ್ಟಿರುವುದು  ಹೆಚ್ಚಾಗಿರುವುದಾದರೂ ಅದಕ್ಕೆ ವೇದಿಕೆ ಕಲ್ಪಿಸಿರುವುದು ಮೋದಿಯವರ ಆಡಳಿತ ವೈಖರಿ. ಈ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ.

4) ಮೋದಿಯವರ ಆಡಳಿತದಲ್ಲಿ ಆರ್ಥಿಕ ಪ್ರಗತಿ ಹೇಗಿದೆ ? ಜನರ ಜೀವನಮಟ್ಟದಲ್ಲಿ ಸುಧಾರಣೆ ಆಗಿದೆಯೇ ?

ಈ ವಿಷಯದಲ್ಲಿ ಎರಡು ರೀತಿಯ ಬೆಳವಣಿಗೆಯನ್ನು ಗಮನಿಸಬಹುದು. ಒಂದು ಕಡೆ ಭಾರತದ ಒಟ್ಟು ಆರ್ಥಿಕತೆ ವಿಶ್ವಮಟ್ಟಲ್ಲಿ ಐದನೆಯ ಸ್ಥಾನಕ್ಕೆ ಏರಿದೆ. ಶೀಘ್ರದಲ್ಲೇ ಮೂರನೆಯ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಗಳು ಸಾಗಿವೆ. ಜಿಎಸ್ಟಿ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಯಿಂದ ರಫ್ತು ಹೆಚ್ಚಾಗುತ್ತಿದೆ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರ ಸ್ಥಾನಮಾನ ಬೆಳೆಯುತ್ತಿದೆ. ಬುಲೆಟ್ ಟ್ರೈನ್, ವಿಮಾನ ನಿಲ್ದಾಣಗಳು, ದೊಡ್ಡ ದೊಡ್ಡ ಫ್ಲೈ ಓವರ್ ಗಳು, ಸುರಂಗಮಾರ್ಗಗಳು, ಐಟೆಕ್ ಕಟ್ಟಡಗಳು ತಲೆ ಎತ್ತುತ್ತಿವೆ. ಷೇರು ಮಾರುಕಟ್ಟೆ ದಾಖಲೆ ಗರಿಷ್ಠ ಮಟ್ಟ ತಲುಪುತ್ತಿದೆ.

ಇನ್ನೊಂದು ಕಡೆ ಅಷ್ಟೇ ವೇಗದಲ್ಲಿ ಮಧ್ಯಮವರ್ಗದ ಜನರು ಕೆಳ ಮಧ್ಯಮವರ್ಗಕ್ಕೆ ಜಾರುತ್ತಿದ್ದಾರೆ. ಶಿಕ್ಷಣ ಆರೋಗ್ಯ ಸಾರಿಗೆ ದಿನ ನಿತ್ಯದ ಅವಶ್ಯಕ ವಸ್ತುಗಳು ದುಬಾರಿಯಾಗುತ್ತಿದೆ. ಕೊಳ್ಳುಬಾಕ ಸಂಸ್ಕೃತಿಯ ಆಕ್ರಮಣದಿಂದ ಬದುಕು ಅತೃಪ್ತಿಯನ್ನು ಹೆಚ್ಚಿಸುತ್ತಿದೆ. ರಸ್ತೆ ಟೋಲ್ ಗಳೇ ದೊಡ್ಡ ಹೊರೆಯಾಗುತ್ತಿದೆ. ಬಡವ ಶ್ರೀಮಂತರ ಅಂತರ ಹೆಚ್ಚಾಗುತ್ತಿದೆ.  ಹಿಂದಿಗಿಂತ ಇಂದು ಅನೇಕ ಕಾರಣಗಳಿಂದ ಬದುಕು ಭಾರವೆನಿಸುತ್ತಿದೆ.

ಕೆಲವರು ಈ ಕಾರ್ಯಯೋಜನೆಗಳು ಭವಿಷ್ಯದಲ್ಲಿ ಉತ್ತಮ ಪರಿಣಾಮ ಬೀರಬಹುದು ಎಂದರೆ ಮತ್ತೆ ಕೆಲವರು ಇದು ಕೆಟ್ಟ ಪರಿಣಾಮ ಬೀರುತ್ತದೆ ಎಂದೂ ಹೇಳುತ್ತಾರೆ. ಆರ್ಥಿಕ ಪರಿಸ್ಥಿತಿಯನ್ನು ಭವಿಷ್ಯವೇ ನಿರ್ಧರಿಸಬೇಕು. ಆದರೆ ಆರ್ಥಿಕ ಕೇಂದ್ರೀಕೃತ ಯೋಜನೆಗಳಿಗೇ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ಮಾನವೀಯ ಮೌಲ್ಯಗಳು ತೀರಾ ಕೆಳಮಟ್ಟಕ್ಕೆ ಕುಸಿಯುತ್ತಿದೆ ಎಂಬುದು ವಾಸ್ತವ.

(ಇನ್ನೂ ಇದೆ)

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ