ಭಾಷಾ ವಿದ್ವಾಂಸ, ರಂಗಾಯಣ ನಿರ್ದೇಶಕ, ಪ್ರೊ. ಲಿಂಗದೇವರು ಹಳೆಮನೆಯವರ ನಿಧನ !

ಭಾಷಾ ವಿದ್ವಾಂಸ, ರಂಗಾಯಣ ನಿರ್ದೇಶಕ, ಪ್ರೊ. ಲಿಂಗದೇವರು ಹಳೆಮನೆಯವರ ನಿಧನ !

ಪ್ರೊ. ಲಿಂಗದೇವರು  ಹಳೆಮನೆಯವರನ್ನು ಒಂದೆರಡು ವರ್ಷಗಳ ಹಿಂದೆ ನಮ್ಮ ಮುಂಬೈನ ಮೈಸೂರ್ ಅಸೋಸಿಯೇಷನ್ ಸಭಾಗೃಹದಲ್ಲಿ ಕಂಡಿದ್ದೆವು. ಅವರ ಭಾಷಣವನ್ನು ಕೇಳಿ ಸವಿದಿದ್ದೆವು. ಕನ್ನಡ ಭಾಷೆಗೆ ಸಿಗಬೇಕಾಗಿದ್ದ ಶಾಸ್ತ್ರೀಯ ಭಾಷೆಯ ಸ್ಥಾನದ ಬಗ್ಗೆ ಕೇಂದ್ರ ಸರ್ಕಾರದ ತಾರತಮ್ಯದ ಬಗ್ಗೆ, ನಮ್ಮ ಕನ್ನಡಿಗರ ಮಾತೃ ಭಾಷಾಪ್ರೀತಿಯ ಕೊರತೆಯ ಬಗ್ಗೆ ಮತ್ತು ಅಲ್ಲಿ ತಲೆದೋರಿರುವ ರಾಜಕೀಯಗಳನ್ನು ಅವರು ಒತ್ತಿ ನಮ್ಮೆಲ್ಲರ ಮುಂದಿಟ್ಟಿದ್ದರು. ಅವರ ಭಾಷೆಯ ಮೇಲಿನ ಪ್ರಭುತ್ವ ಹಾಗೂ ಪ್ರತಿಪಾದನೆಗೆ ಮರುಳಾಗದವರಿಲ್ಲ. ಪ್ರೊ. ಲಿಂಗದೇವರು, ೭ ನೇ ತಾರೀಖು, ಮಂಗಳವಾರ ರಾತ್ರಿ ಹೃದಯಾಘಾತಕ್ಕೆ ಒಳಗಾಗಿ ಮೈಸೂರಿನ ಆಸ್ಪತ್ರೆಗೆ ಭರ್ತಿಯಾದಮೇಲೂ ಚೇತರಿಸಿಕೊಳ್ಳದೆ ಕೊನೆಯುಸಿರೆಳೆದರು.



ಚಿಕ್ಕನಾಯಕನಹಳ್ಳಿಯ ಬಳಿಯ ಆಲಗೋಣವೆಂಬ ಗ್ರಾಮವಾಸಿಯಾದ ಲಿಂಗದೇವರು ಹಳೆಮನೆಯವರು ಬಹುಶೃತರು. ತಮ್ಮ ವಿದ್ಯಾಭ್ಯಾಸವನ್ನು ಅವರು ತಮಿಳುನಾಡಿನ ಅಣ್ಣಾಮಲೈ ವಿ. ವಿ ದಲ್ಲಿ ಮತ್ತು ನಂತರ ಮೈಸೂರು ವಿ. ವಿ ನಲ್ಲಿ ಪಡೆದರು. ಮೈಸೂರಿನ ಭಾಷಾ ಸಂಸ್ಥಾನ ಕಾರ್ಯಾಲಯದಲ್ಲಿ ಕನ್ನಡ ಪ್ರಭಾಗದ ಮುಖ್ಯಸ್ಥರಾಗಿದ್ದರು.



೬೨ ರ ಹರೆಯದ  ಲಿಂಗದೇವರು ಹಳೆಮನೆಯವರು, ತಮ್ಮ ಹೆಂಡತಿ ನಂದಾ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು (ಭೂಮಿಕಾ ಹಾಗೂ ನಿಹಾರಿಕಾ) ಹಾಗೂ ಅಪಾರ ಮಿತ್ರವೃಂದವನ್ನು ಅಗಲಿದ್ದಾರೆ. ಕನ್ನಡ ಭಾಷಾ ವಲಯದಲ್ಲಿ ಲಿಂಗದೇವರು ಹಳೆಮನೆಯವರ ಸ್ಥಾನ ಬಹಳ ಮೇರುಮಟ್ಟದ್ದಾಗಿತ್ತು.


ಅವರ ಕುಟುಂಬಕ್ಕೆ ಮತ್ತು ಸಂಬಂಧೀಕರಿಗೆ ಈ ಅಪಾರ ದುಖಃವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಸಂಪದಿಗರೆಲ್ಲರ ಪರವಾಗಿ ಪ್ರಾರ್ಥಿಸುತ್ತೇನೆ.


 


http://www.youtube.com/watch?v=pc3LpiFCgME


 
-ಎಚ್. ಆರ್. ಲಕ್ಷ್ಮೀವೆಂಕಟೇಶ,
ಮುಂಬೈ-೮೪


 

Comments