ಭಿನ್ನತೆಯಲ್ಲೂ ಐಕ್ಯತೆ ಭಾರತದ ಏಕತೆ...

ಭಿನ್ನತೆಯಲ್ಲೂ ಐಕ್ಯತೆ ಭಾರತದ ಏಕತೆ...

ನಿನ್ನೆಯ ಈದ್ ಮಿಲಾದ್ ಮತ್ತು ಇಂದಿನ ‌ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ಕೋರುತ್ತಾ, ಆ ಭಿನ್ನತೆಯ ಸಂಸ್ಕೃತಿಗಳಲ್ಲಿ ಎರಡನೇ ಬಹುಮುಖ್ಯ ಸಮುದಾಯ ಮುಸ್ಲೀಮರದು. ಅವರ ನಂಬಿಕೆಗಳ ಆದರ್ಶಗಳ ಗ್ರಂಥದ ರಚನೆಯ ಮತ್ತು ಇಸ್ಲಾಂ ಧರ್ಮದ ಪ್ರಬಲ ಪ್ರತಿಪಾದಕರಾದ ಮಹಮದ್ ಪೈಗಂಬರ್ ಅವರ ಜನುಮದಿನದ ಸಂದರ್ಭದಲ್ಲಿ  ಎಲ್ಲರಿಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ಕೋರುತ್ತಾ...  ಎಂದಿನಂತೆ ಪ್ರೀತಿಯಿಂದ ಅವರ ಆತ್ಮಾವಲೋಕನಕ್ಕೆ ಮನವಿ ಮಾಡಿಕೊಳ್ಳೋಣ.

ಈ ಭರತ ಭೂಮಿಯ ಪ್ರತಿ ಅಂಗುಲ ಜಾಗ. ಪ್ರತಿ ಹನಿ ನೀರು ಸೇರಿದಂತೆ ಎಲ್ಲ ವಿಷಯ ವಸ್ತುಗಳ ಮೇಲೂ ಇಲ್ಲಿನ ಭಾರತೀಯ ಅಧಿಕೃತ ಪ್ರಜೆಗಳಿಗೆ 138 ಕೋಟಿಗೂ ಹೆಚ್ಚು ಜನರಿಗೆ ಸಮಾನ ಹಕ್ಕು ಇದೆ.( ಸಮಾನ ಪಾಲು ಇನ್ನೂ ಸಾಧ್ಯವಾಗಿಲ್ಲ. ಅದಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ಅದು ಬೇರೆ ಮಾತು.) ಇದು ಕೇವಲ ಘೋಷಣೆಯಲ್ಲ. ಸಾಂವಿಧಾನಾತ್ಮಕವಾಗಿಯೂ ಇದೆ. ಅದೇ ರೀತಿ ಸಮಾನ ಕರ್ತವ್ಯಗಳೂ ಇದೆ. ಈ ನೆಲೆಯಲ್ಲಿಯೇ ಮನಬಿಚ್ಚಿ ಮಾತನಾಡೋಣ.

ಹಿಂದೂಗಳಿಗೆ ಬೇರೆ ಎಲ್ಲಾ ಧರ್ಮಗಳಿಗಿಂತ ಇಸ್ಲಾಂ ಧರ್ಮದ ಬಗ್ಗೆ ಹೆಚ್ಚಿನ ಕೋಪವಿದೆ ಮತ್ತು ಅದೇ ರೀತಿ ಮುಸ್ಲೀಮರಿಗೂ ಹಿಂದು ಧರ್ಮದ ಮೇಲೆ ಹೆಚ್ಚು ಕೋಪವಿದೆ. ಮೇಲ್ನೋಟಕ್ಕೆ ಇಲ್ಲ ಎಂದರೂ ಅಂತರಾಳದಲ್ಲಿ ಖಂಡಿತ ಇದು ಬಹುತೇಕರಲ್ಲಿ ಮನೆಮಾಡಿದೆ. ಇದು ವಾಸ್ತವ.  ಆದರೆ ಏಕೆ ? ಇದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ ಮತ್ತು ಅದೇ ಪರಿಹಾರವೂ ಆಗಬಹುದು. ಇಬ್ಬರೂ ನಂಬಿದ ದೇವರು ಮತ್ತು  ಧರ್ಮಗಳು ಖಂಡಿತ ಈ ದ್ವೇಷವನ್ನು ಬಿತ್ತಿಲ್ಲ. ದ್ವೇಷ ಉಂಟುಮಾಡುವುದೇ ಆದರೆ ಅವು ಧರ್ಮಗಳಲ್ಲ. ಈ ಎರಡೂ ಧರ್ಮಗಳು ತಮ್ಮ ಆಚರಣೆಗಳಲ್ಲಿ ಸಾಕಷ್ಟು ವಿರುದ್ಧ ರೀತಿ ನೀತಿ ಅನುಸರಿಸುತ್ತವೆ. ಅದು ಒಂದು ಸಣ್ಣ ಕಾರಣ. ಅದಕ್ಕಿಂತ ಮುಖ್ಯವಾಗಿ...

ನನ್ನ ಅನಿಸಿಕೆ ಏನೆಂದರೆ ಸ್ವಾತಂತ್ರ್ಯ ನಂತರ ಪಾಕಿಸ್ತಾನವೆಂಬ ಸಂಪೂರ್ಣ ಇಸ್ಲಾಂ ದೇಶ ಕಾಶ್ಮೀರದ ವಿಷಯದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಯುದ್ಧ ಮಾಡುತ್ತಲೇ ಇದೆ. ನಂತರದ ದಿನಗಳಲ್ಲಿ ಭಯೋತ್ಪಾದಕರ ಪ್ರಭಾವಕ್ಕೆ ಒಳಗಾಗಿ ಅತ್ಯಂತ ಹಿಂಸಾತ್ಮಕ ಕೃತ್ಯಗಳನ್ನು ಎಸಗುತ್ತಿದೆ ಮತ್ತು ಅದೇ ಸಮಯದಲ್ಲಿ ಇರಾಕ್, ಸಿರಿಯಾ, ಆಫ್ಘಾನಿಸ್ತಾನ ಮುಂತಾದ ದೇಶಗಳು ಭಯೋತ್ಪಾದಕರ ಅಡುಗುತಾಣವಾಯಿತು. ಅಲ್ಲದೆ ಇವೆಲ್ಲವೂ ಇಸ್ಲಾಂ ಆಡಳಿತ ದೇಶಗಳೇ. ಆ ಕಾರಣಕ್ಕೇ ಬಹಳಷ್ಟು ಹಿಂದೂಗಳಿಗೆ ಅದರಲ್ಲೂ ಕಾಶ್ಮೀರವನ್ನು ಭಾವನಾತ್ಮಕವಾಗಿ ಪ್ರೀತಿಸುವ ಮನಸುಗಳಿಗೆ ಅಲ್ಲಿನ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದಿಂದ ರೋಸಿಹೋಗಿ ಮತ್ತು ಆಗಾಗ ದೇಶದ ಒಳಗಡೆ ನಡೆದ ಬಾಂಬ್ ಸ್ಪೋಟಗಳಿಂದ ಭಯೋತ್ಪಾದಕರನ್ನು ದ್ವೇಷಿಸುತ್ತಾ ಅವರಲ್ಲಿ ಬಹುತೇಕರು ಮುಸ್ಲಿಂ  ಸಮುದಾಯವರೇ ಎಂದು ಭಾವಿಸಿ ಸಾರಾಸಗಟಾಗಿ ಅವರನ್ನು ವಿರೋಧಿಸತೊಡಗಿದರು ಮತ್ತು ಇದರಲ್ಲಿ ಓಟಿನ ರಾಜಕೀಯದ ಚದುರಂಗದಾಟವೂ ತನ್ನ ಪಾಲು ಸಲ್ಲಿಸಿತು.

ಇತ್ತ ಕಡೆ ಸಣ್ಣ ಪುಟ್ಟ ಗಲಭೆಗಳಲ್ಲಿ ಮುಗಿಯುತ್ತಿದ್ದ ಹಿಂದೂ ಮುಸ್ಲಿಂ ಜಗಳಗಳು ಬಾಬರಿ ಮಸೀದಿ ಧ್ವಂಸದ ನಂತರ ಮುಸ್ಲಿಮರ ನಂಬಿಕೆ ಮತ್ತು ಸುರಕ್ಷತೆಗೆ ಬಲವಾದ ಪೆಟ್ಟುಬಿದ್ದು ಅವರು ನಿಜವಾಗಲೂ ನಾವು ಅಲ್ಪಸಂಖ್ಯಾತರು ಎಂಬ ಅನುಮಾನ ಬಲವಾಯಿತು. ಹಿಂದೂಗಳು ಬಹುವಾಗಿ ವಿರೋಧಿಸುವ ಪಾಕಿಸ್ತಾನದ ಬೆಂಬಲಿಗರು ನಾವಲ್ಲಾ ಎಂದೂ, ನಾವೂ ಕೂಡ ಭಾರತೀಯರೇ ಎಂದೂ ನಿರೂಪಿಸಬೇಕಾದ ಒತ್ತಡಕ್ಕೆ ಒಳಗಾದರು. 

ಅದು ಭಾರತದ ರಾಜಕೀಯ ಮತ್ತು ಪಾಕಿಸ್ತಾನದ ISI ಎಂಬ ಬೇಹುಗಾರಿಕೆ ಸಂಸ್ಥೆಯ ಅನುಕೂಲಕರ ದಾಳವೂ ಆಯಿತು. ಅಲ್ಲಿಂದ ಎರಡೂ ಧರ್ಮದ ಜನರ ನಡುವೆ ಕಂದಕವೂ ದೊಡ್ಡದಾಯಿತು. ಬಹುಸಂಖ್ಯಾತರೆಂಬ ಮೇಲರಿಮೆ ಮತ್ತು ಅಲ್ಪಸಂಖ್ಯಾತರೆಂಬ ಕೀಳರಿಮೆ ಸಹಜವಾಗಿ ದ್ವೇಷ ಉಂಟಾಗುತ್ತದೆ. ಅನಂತರ ಪ್ರತಿ ವಿಷಯವೂ ಅದರ ನೆರಳಲ್ಲೇ ನಡೆಯುತ್ತದೆ. ಪ್ರೀತಿ ವಿಶ್ವಾಸಗಳಿಗೆ ಜಾಗವೇ ಇರುವುದಿಲ್ಲ. ಈಗ ಆಗಿರುವುದು ಅದೇ.

ನಾನು ಗಮನಿಸಿದಂತೆ ವಿಶ್ವದ ಬೇರೆ ದೇಶದ ಮುಸ್ಲೀಮರಿಗಿಂತ ಭಾರತೀಯ ಮುಸ್ಲೀಮರು ಸ್ವಲ್ಪ ಭಿನ್ನ. ಧರ್ಮ ಇಸ್ಲಾಂ ಆದರೂ ಅನೇಕ ಆಚರಣೆ - ಸಂಪ್ರದಾಯಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಭಾವ ಸಮ್ಮಿಳಿತವಾಗಿದೆ. ಬಹುತೇಕ ಶಿಕ್ಷಣ - ಉಡುಗೆ - ಆಹಾರ - ದೇಹ ರಚನೆ - ಉದ್ಯಮ - ಮುಂತಾದುವು ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿದೆ. ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯನ್ನೇ ಬಳಸಿ ಅತ್ಯುತ್ತಮ ಸಾಹಿತ್ಯ ಸಂಗೀತ ಸಿನಿಮಾ ಕಲೆ ಸೃಷ್ಟಿಸುತ್ತಿದ್ದಾರೆ. ಈಗ ಮುಸ್ಲೀಮರನ್ನು ಮುಖ್ಯವಾಹಿನಿಗೆ ತರುವ ಬಹುದೊಡ್ಡ ಜವಾಬ್ದಾರಿ ಹಿಂದೂಗಳಿಗಿದೆ. ಅದೇ ರೀತಿ ಮುಸ್ಲೀಮರು ಕೂಡ ಭಾರತೀಯತೆಯನ್ನು ಮೂಲವಾಗಿಟ್ಟುಕೊಂಡು ಅವರ ಧಾರ್ಮಿಕ ಆಚರಣೆಗಳಲ್ಲಿ ಇರಬಹುದಾದ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಗ್ರಾಮೀಣ ಪರಿಸರದಲ್ಲಿ ಈಗಾಗಲೇ ಹೇಗೆ ಮಿಲನವಾಗಿದೆಯೋ ಹಾಗೆ ಎಲ್ಲಾ ಕಡೆಯೂ ಹೊಂದಾಣಿಕೆ ಮಾಡಿಕೊಂಡು ಸಹಕರಿಸಬೇಕಿದೆ. 

ತಮ್ಮಲ್ಲಿರಬಹುದಾದ ಮೌಡ್ಯಗಳನ್ನು ತೊರೆದು ಆಧುನಿಕತೆ ಬೆಳೆಸಿಕೊಳ್ಳಬೇಕಿದೆ. ಬಹುತೇಕ ವಿದ್ಯಾವಂತ ಮುಸ್ಲೀಮರು ಇದನ್ನು ಅಳವಡಿಸಿಕೊಂಡಿದ್ದಾರೆ. ಇದು ಇನ್ನಷ್ಟು ಬಲಗೊಳ್ಳಲಿ ಎಂದು ಆಶಿಸುತ್ತಾ, ಏನೇ ಆಗಲಿ ದೇಶದ ರಕ್ಷಣೆ ಮತ್ತು ಸಾರ್ವಭೌಮತೆ ವಿಷಯದಲ್ಲಿ ರಾಜಿಯಾಗದೆ, ಭಯೋತ್ಪಾದನೆಯನ್ನು ಉಗ್ರವಾಗಿ ಮಟ್ಟ ಹಾಕಿ ಯಾವುದೇ ಧರ್ಮದ ಹಂಗಿಲ್ಲದೆ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಎತ್ತಿಹಿಡಿಯಬೇಕಿದೆ. ಹಿಂದೂ ಮುಸ್ಲಿಂ ಐಕ್ಯತೆ ಈ ದೇಶದ ಹಿತದೃಷ್ಟಿಯಿಂದ ಬಹುಮಖ್ಯ ಎಂದು ಪ್ರತಿಪಾದಿಸುತ್ತಾ...

***

ಇಂದು ಕರ್ನಾಟಕ ಸರ್ಕಾರದ ರಜಾ ದಿನ. ವಾಲ್ಮೀಕಿ ಜಯಂತಿ ಪ್ರಯುಕ್ತ. ಈ ದಿನ ಯಾರನ್ನು ಸ್ಮರಿಸೋಣ? ರಾಮ - ಲಕ್ಷ್ಮಣ - ರಾವಣ - ಸೀತೆ - ಆಂಜನೇಯ - ವಾಲಿ - ಸುಗ್ರೀವ - ವಿಭೀಷಣ - ದಶರಥ - ಶಬರಿ - ಶ್ರವಣ ಕುಮಾರ....... ಹೀಗೆ ಸಾಗುವ ಪಾತ್ರಗಳೋ....ಅಥವಾ ರಾಮಾಯಣವೆಂಬ ಬೃಹತ್ ಗ್ರಂಥವನ್ನೋ ಅಥವಾ ಅದರ ಕರ್ತೃ ವಾಲ್ಮೀಕಿಯನ್ನೋ ಅಥವಾ, ವಾಲ್ಮೀಕಿಯ ನಾಯಕ ಜನಾಂಗವನ್ನೋ ಅಥವಾ ಈಗಿನ ಆ ಜಾತಿಯ ರಾಜಕೀಯ ನಾಯಕರನ್ನೋ?

ಐತಿಹಾಸಿಕ ದಾಖಲೆಗಳ ಪ್ರಕಾರ ವಾಲ್ಮೀಕಿ ಎಂಬ ಹೆಸರಿನ, ಬೇಟೆಯಾಡಿ ಜೀವನ ನಡೆಸುತ್ತಿದ್ದ  ವ್ಯಕ್ತಿ ರಾಮಾಯಣ ಎಂಬ ಗ್ರಂಥವನ್ನು ರಚಿಸುತ್ತಾರೆ. ರಾಮ ಎಂಬ ಪಾತ್ರವನ್ನು ಆದರ್ಶ ಪುರುಷನಂತೆ ಕೇಂದ್ರ ಸ್ಥಾನದಲ್ಲಿ ನಿಲ್ಲಿಸಿ, ಸೀತೆ ಎಂಬ ಹೆಣ್ಣನ್ನು ಮಹಿಳೆಯರ ಆದರ್ಶದ ಪ್ರತೀಕವಾಗಿ ಚಿತ್ರಿಸಿ, ಲಕ್ಷ್ಮಣ ಭರತ ಶತೃಘ್ಞರಂತ ಆದರ್ಶ ಸಹೋದರರನ್ನು, ರಾವಣನೆಂಬ ಪಾತ್ರವನ್ನು ದುಷ್ಟತನದ ಸಂಕೇತವಾಗಿ ಬಳಸಿ, ಹನುಮಂತನೆಂಬ ಪಟ್ಟ ಶಿಷ್ಯನಂತ ನಂಬುಗೆಯ ವ್ಯಕ್ತಿತ್ವವನ್ನು ಮತ್ತೂ ಹಲವಾರು ಪಾತ್ರಗಳನ್ನು ತುಂಬಾ ಸೂಕ್ಷ್ಮವಾಗಿ ಸೃಷ್ಟಿಸಿರುತ್ತಾರೆ.

ಕೇವಲ ಪಾತ್ರಗಳ ಸೃಷ್ಟಿ ಮಾತ್ರವಲ್ಲದೆ ಆಗಿನ ಕಾಲದ ವ್ಯವಸ್ಥೆಯ ಎಲ್ಲಾ ಮಗ್ಗುಲುಗಳನ್ನು ಮತ್ತು ನಂಬಿಕೆಗಳನ್ನು, ಆಚರಣೆಗಳನ್ನು, ಅಗಸನ ಮಾತು, ರಾಜ ಪುರೋಹಿತರ ಸಲಹೆ, ಶಂಬೂಕನ ಹತ್ಯೆ ಮುಂತಾದ ಅನೇಕ ಅಂಶಗಳನ್ನು ಮತ್ತು ಬಹುಮುಖ್ಯವಾಗಿ ಆಗಿನ ಕಾಲದ ಭೌಗೋಳಿಕ ಪ್ರದೇಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ‌. ಇದ್ದನ್ನೆಲ್ಲಾ ಗಮನಿಸಿದಾಗ ನಾವು ನಿಜವಾಗಲೂ ಸ್ಮರಿಸಬೇಕಾಗಿರುವುದು... 

ವಾಲ್ಮೀಕಿ ಎಂಬ ವ್ಯಕ್ತಿಯನ್ನು, ಮತ್ತು ಆತನ ಅತ್ಯದ್ಭುತ ಕ್ರಿಯಾತ್ಮಕ ಬುದ್ದಿ ಶಕ್ತಿಯನ್ನು, ಶತಶತಮಾನಗಳು ಕಳೆದರೂ ಇಂದಿಗೂ ಹೊಸ ಹೊಸ ಹೊಳಹುಗಳನ್ನು ನೀಡುತ್ತಿರುವ ಆ ಮಹಾನ್ ಗ್ರಂಥವನ್ನು ಸೃಷ್ಟಿಸಿದ ಆತನ ಚಿಂತನಾ ಪ್ರಜ್ಞೆಯನ್ನು...

ಆ ಕಾರಣಕ್ಕಾಗಿ ವಾಲ್ಮೀಕಿಯನ್ನು ನೆನೆಯುತ್ತಾ, ಎಲ್ಲಾ ರೀತಿಯ ಕಲೆಗಾರರಿಗೆ ವಾಲ್ಮೀಕಿ ಕ್ರಿಯಾತ್ಮಕತೆಯಲ್ಲಿ ಮುಗಿಯದ ಅಕ್ಷಯ ಪಾತ್ರೆಯಂತ ಸ್ಪೂರ್ತಿಯ ಚಿಲುಮೆಯಾಗಲಿ ಎಂದು ಆಶಿಸುತ್ತಾ...

  • 353 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಿಂದ ಸುಮಾರು 33 ಕಿಲೋಮೀಟರ್ ದೂರದ ಮುಳಬಾಗಿಲು ತಾಲ್ಲೂಕು ತಲುಪಿತು. ಇಂದು 20/10/2021 ಬುಧವಾರ 354 ನೆಯ ದಿನ ನಮ್ಮ ಕಾಲ್ನಡಿಗೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಿಂದ ಸುಮಾರು 22 ಕಿಲೋಮೀಟರ್ ದೂರದ ಬೇತಮಂಗಲ ಗ್ರಾಮ ತಲುಪಲಿದೆ. ನಾಳೆ 21/10/2021  355 ನೆಯ ದಿನ ಕೋಲಾರ ಜಿಲ್ಲೆಯ ಚಿನ್ನದ ನಗರ ಕೆ ಜಿ ಎಪ್ ಕಡೆಗೆ....

-ವಿವೇಕಾನಂದ. ಹೆಚ್.ಕೆ., ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ