ಭೀಷ್ಮನಗೆ
---------ಭೀಷ್ಮನಗೆ--------
ಭಾದ್ರಪದ ಶುಕ್ಲ ಚೌತಿಯ ನಿಶಾ ಗಗನದಲಿ
ತೇಲುತಿಹುದು ಕಿಶೋರ ಚಂದ್ರನ ದೀಪ್ತಿ ದ್ವೀಪ.
ಗಣೇಶ ಚತುರ್ಥಿಯ ಶುಭದಿನದಿ, ಜನಮನಗಳಲಿ
ತುಂಬಿದೆ ಶ್ರದ್ಧಾ ಭಕ್ತಿ ಸಂಭ್ರಮಗಳ ಕಲಾಪ.
ಹಬ್ಬದಲಿ ಮುಳುಗಿರಲು, ಮೌಡ್ಯವವರನಿಡಿರಲು,
ನೋಡಲಳುಕುತಿಹರು ತಿರೆಯ ಜನ, ಚಂದಿರನ.
ಕೆಡಕು ಕಾಡುವುದೆಂಬ ಮೂಢನಂಬಿಕೆಯ ಭ್ರರ್ತ್ಸನ,
ದೂರಮಾಡಿದೆ ಅವರಿಂದ ಸೌಮ್ಯ ಇಂಗದಿರನ.
ನೋಟವನೆ ಕೊಂಕಿಸಿ, ತಲೆಯನ್ನು ತಗ್ಗಿಸಿ
ನಡೆಯುತಿಹರೆಲ್ಲ !! ಆದರ್ಆ ಭಯವು ಈ ಶಿಶುಗಿಲ್ಲ.
ತಾನೋದ ಕಡೆಯಲ್ಲ ಹಿಂದೆ ಬರುತಿಹನಲ್ಲ,
ಎಂದು ವಿಸ್ಮಿತಗೊಂಡಿದೆ ಶಿಶು, ತಾನಿಡಿದು ಗಲ್ಲ.
"ನೋಡಿ ನೋಡಿ ಹೋದಲೆಲ್ಲ, ಚಂದ್ರ ಬರುತಿಹನು"
ಹರ್ಷಚಿತ್ತ ಮುಗ್ಧ ಶಿಶುವು ಕೂಗಿ ನಲಿದಿದೆ.
"ಅಯ್ಯೋ , ಎಂತ ಕೇಡುಗಾಲ, ಮಗುವೆ ಏಕೆ ನೋಡಿದೆ?"
ಎಂದು ಮೌಡ್ಯ ಮತಿಗಳೆಲ್ಲ ಕೊರಗಿ ಹೇಳಿವೆ.
ಚೌತಿ ಚಂದ್ರನ ಜೋತ್ಸ್ನ ಪ್ರೇಂಖವು
ಗಗನ ತಿಮಿರವ ನೀಗಿ ಬೆಳಗಿದೆ.
ಶೈಶವ ಹೃದಯ ಮುಗ್ಧ ನೋಟವು
ಆಜ್ಞಾನ ಕತ್ತಲೆಯ ಮೀರಿ ಬೆಳಗಿದೆ.
"ಪ್ರಕೃತಿಯ ಚಿರ ಸೌಂದರ್ಯವೆಂತೋ , ಅಂತೆ
ಕಂಡಿದೆ ಈ ಪರಿಶುದ್ಧ ಶಿಶುಸ್ಮೃತಿಯು"
ಎಂದು ಸತ್ಯವ ಕಂಡಂತೆ ಹೇಳಲು, ಕೋಪ
ತಾಪದಿ ಮೂಢ ವರ್ಗವೇ ಉರಿದೆದ್ದಿವೆ.
ಕಹಿ ಸತ್ಯ ಕೇಳದೆ ನನ್ನನಳಿದರು.
ವಾಕ್-ಶರಗಳ ಸುರಿಮಳೆಯ ಸುರಿದರು.
ಇವರ ವಾಗ್ಬಾಣದಾಳಿಗೆ ನನ್ನಸಹಾಯ-
ವಾದವು, ಬೀಷ್ಮನಂದದಿ ಕೆಳಗುರುಳಿತು.
ಅಸತ್ಯ ಕಡಲಲಿ ಶಿಶು ನೋಟ ರೂಪದಿ
ಸತ್ಯವದು ತೇಲುವುದ ಕಂಡೆನು.
ಗಗನ ಸೌಂದರ್ಯ ಕಂಡ ಶಿಶು ಮೊಗದಲಿ,
ಕಂಡೆ ನಾನು ಶ್ರೀಕೃಷ್ಣ ನಗೆ.
ನನ್ನ ತುಟಿಯಂಚಿನಲಿ ಮಿಂಚಿತಾಗ,
ನೋವಿನಲರಳಿದ ಭೀಷ್ಮನಗೆ.
- ಚಂದ್ರಹಾಸ ( ೧೦/೧೧/೨೦೧೨)