ಮಂಜು ಮುಸುಕಿದ ಒಂದು ಶಾಮಲ ಸಂಜೆ

ಮಂಜು ಮುಸುಕಿದ ಒಂದು ಶಾಮಲ ಸಂಜೆ

ಬರಹ

ಅಮೆರಿಕದ ಸುಪ್ರಸಿದ್ಧ ಕವಿ ರಾಬರ್ಟ್ ಫ್ರಾಸ್ಟನ “Stopping by Woods on a Snowy Evening” ಎನ್ನುವ ಕವನ ಅವನ ಬಹು ಚರ್ಚಿತ ಕವನಗಳಲ್ಲೊಂದು. ಈ ಕವನವನ್ನು ೧೯೨೨ ರಲ್ಲಿ ಬರೆದು ಬೆಳಕು ಹರಿಯುವಷ್ಟರಲ್ಲಿಯೇ ಆತ ಜಗತ್ತಿನ ತುಂಬಾ ಮನೆಮಾತಾಗಿಬಿಟ್ಟ. ಈತ ನಾಲ್ಕು ಸಾರಿ ಕವನ ರಚನೆಗಾಗಿ ಪ್ರತಿಷ್ಟಿತ ಪುಲ್ಟಿಜರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ. ಅದರಲ್ಲಿ ಮೊಟ್ಟ ಮೊದಲಬಾರಿಗೆ ಈ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡ “New Hampshire” ಎನ್ನುವ ಕವನ ಸಂಕಲನದಿಂದ ಈ ಕವನವನ್ನು ಆಯ್ದು ಕೊಳ್ಳಲಾಗಿದೆ. ವಿಮರ್ಶಕರು ಇದನ್ನು ಇಂಗ್ಲೀಷ ಸಾಹಿತ್ಯದ “masterpiece” ಎಂದು ಗುರುತಿಸುತ್ತಾರಲ್ಲದೆ ಸ್ವತಃ ಕವಿಯು ಸಹ ತಾನು ಬರೆದ ಕವನಗಳಲ್ಲಿ ಅತ್ಯಂತ ಹೆಚ್ಚು ತೃಪ್ತಿ ತಂದುಕೊಟ್ಟ ಕವನವಿದಾಗಿದೆಯೆಂದು ಭಾವಿಸಿದ್ದಾನೆ.

ಈ ಕವನ ಸೌಂದರ್ಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆ ಇವೆರಡರ ನಡುವೆ ನಡೆವ ತುಮುಲಕ್ಕೆ ಹೆಸರಾಗಿದೆ. ಸೌಂದರ್ಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆಗಳ ನಡುವಿನ ಹೋರಾಟದಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬ ಗೊಂದಲದಲ್ಲಿ ಮುಳುಗಿದಾಗ ಕೊನೆಗೆ ಸೌಂದರ್ಯ ಪ್ರಜ್ಞೆಗಿಂತ ಕರ್ತವ್ಯ ಪ್ರಜ್ಞೆಯೇ ಜೀವನದಲ್ಲಿ ಮುಖ್ಯವಾಗುತ್ತದೆ ಎನ್ನುವದನ್ನು ಕವನ ಒತ್ತಿ ಹೇಳುತ್ತದೆ. ಅದು ಕವನದ ಕೊನೆಯ ಸಾಲುಗಳಲ್ಲಿ ವ್ಯಕ್ತವಾಗಿದೆ. ಸಾಂಕೇತಿಕವಾಗಿ ಬರುವ ಕವನದ ಕೊನೆಯ ಸಾಲುಗಳೇ ಅದರ ಜೀವಾಳ. ಇಲ್ಲಿ “sleep” ಎನ್ನುವದು ಸಾವನ್ನು ಸಂಕೇತಿಸುತ್ತದೆ. ಅಂದರೆ ನಾವು ಸಾಯುವದಕ್ಕಿಂತ ಮುಂಚೆ ಮುಗಿಸಬೇಕಾದ ಕರ್ತ್ಯವ್ಯಗಳು ಬಹಳಷ್ಟಿರುತ್ತವೆ; ಅವುಗಳನ್ನು ಮಾಡಿ ಮುಗಿಸಲೇಬೇಕು ಎನ್ನುವದನ್ನು ಹೇಳುತ್ತದೆ. ಜೀವನದಲ್ಲಿ ಕವಿಗೆ ಸುಂದರ ಕಾಡಿನ ಆಕರ್ಷಣೆಯಿದ್ದಂತೆ ನಮ್ಮೆಲ್ಲರಿಗೂ ಬೇರೆ ಬೇರೆ ಆಕರ್ಷಣೆಗಳಿರುತ್ತವೆ ಅವುಗಳನ್ನು ಮೀರಿ ಕರ್ತ್ಯವ್ಯ ಪ್ರಜ್ಞೆಯೆಡೆಗೆ ಗಮನ ಕೊಡಬೇಕೆಂದು ಕವಿ ಹೇಳುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ಕ್ಲಿಕ್ಕಿಸಿ http://www.enotes.com/poetry-criticism/stopping-by-woods-snowy-evening-robert-frost

ವಿಮರ್ಶಕರಷ್ಟೇ ಅಲ್ಲದೆ ಜಗತ್ತಿನ ಬೇರೆ ಬೇರೆ ಗಣ್ಯ ವ್ಯಕ್ತಿಗಳು ಇದನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಅಂಥವರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರಲ್ಲೊಬ್ಬರಾದ ಜಾನ್. ಎಫ್. ಕೆನಡಿ ಹಾಗೂ ಭಾರತದ ಮೊಟ್ಟ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರೂವರು ಸೇರಿದ್ದಾರೆ. ಸದಾ ಕರ್ತವ್ಯ ಪ್ರಜ್ಞೆಯನ್ನೇ ಜ್ಞಾಪಿಸುವ ಕೊನೆಯ ಸಾಲುಗಳನ್ನು ಈ ಇಬ್ಬರು ಗಣ್ಯರು ತಮ್ಮ ಟೇಬಲ್ ಮೇಲೆ ಬರಿಸಿಟ್ಟುಕೊಂಡಿದ್ದರು.
“The woods are lovely, dark, and deep,
But I have promises to keep,
And miles to go before I sleep,
And miles to go before I sleep.”

ನಾನೊಬ್ಬ ಇಂಗ್ಲೀಷ ಅಧ್ಯಾಪಕನಾಗಿ ಇದನ್ನು ಬೇರೆ ಬೇರೆ ತರಗತಿಗಳಿಗೆ ಬೇರೆ ಬೇರೆ ಸ್ತರಗಳಲ್ಲಿ ಪಾಠ ಮಾಡಿದ್ದೇನೆ. ನಿಮ್ಮಲ್ಲೂ ಯಾರಾದರೊಬ್ಬರು ಇದನ್ನು ಈಗಾಗಲೇ ಯಾವುದೇ ತರಗತಿಯಲ್ಲಾದರು ಓದಿರಬಹುದು. ಇದು ನನ್ನ ಮೆಚ್ಚಿನ ಕವನಗಳಲ್ಲಿ ಒಂದು. ಅದರ ಭಾವಾನುವಾದ ಇಲ್ಲಿದೆ. ಓದಿ ಅಭಿಪ್ರಾಯ ತಿಳಿಸಿ. Happy Reading!

ಯಾರ ವನವಿದು ಯಾರ ಕಾಡಿದೆಂದು ನಾನೆಣಿಸಿ ಹೇಳಬಲ್ಲೆ
ಅವನ ಮನೆ ಇಲ್ಲೋ ಎಲ್ಲೋ ಹತ್ತಿರದ ಹಳ್ಳಿಯಲ್ಲಿದೆ
ಕಾಣಲಾರದವನಿಗೆ ನಾನಿಲ್ಲಿ ಕ್ಷಣಹೊತ್ತು ತಂಗಿ
ಮಂಜು ಮುಸುಕಿದವನ ಕಾಡನ್ನು ಮನದಣಿಯುವದು

ನನ್ನ ಕಿರುಗುದರೆಗದೋ ಅನಿಸಿರಬಹುದು ಕೆಲಸ ಕೆಟ್ಟಿತೆಂದು
ಹತ್ತಿರದೆಲ್ಲೆಲ್ಲೂ ತೋಟದ ಮನೆಯಿರದುದೆಡೆ ತಂಗಿರುವದು ಕಂಡು
ಅತ್ತ ಅಂದದ ಕಾಡು ಇತ್ತ ಚೆಂದದ ಹಿಮಗೆರೆ
ನಡುವೆ ನಿಂತಿರುವೆ ನಾ ಮೈಮರೆತು ಇಳಿಸಂಜೆ ಹೊತ್ತು

ಬಾರಿಸುವನವನು ಕಟ್ಟಿನ ಗಂಟೆಯನು ಕತ್ತು ಕುಣಿಸಿ
ಹೊತ್ತಲ್ಲದ ಹೊತ್ತಿನಲ್ಲಿ ತೊಂದರೆಯೇನಾದರಾಗಿದೆಯೆಂದರಿಯಲು
ಇತ್ತ ಎಚ್ಚರಿಕೆಯ ಗಂಟೆ ಅತ್ತ ಹಿತವಾದ ತಂಗಾಳಿ
ನಡುವೆ ನಿಂತಿರುವೆ ನಾ ಹಿಮದ ರಾಶಿಯ ಮೇಲೆ

ಹಸಿರ ಕಾಡು ಬಸಿರ ಕತ್ತಲು ಗೂಢ ನಿಗೂಢವಾಗಿದೆ
ಆದರೆ ನಾನಿತ್ತ ವಚನಗಳನು ಪೂರೈಸಲು ನಡೆಯಬೇಕಿದೆ
ದೂರ ಬಹುದೂರ ಸಾಗಿ ಮನೆ ಸೇರಿ ಮಲಗುವ ಮುನ್ನ
ದೂರ ಬಹುದೂರ ಸಾಗಿ ಮನೆ ಸೇರಿ ಮಲಗುವ ಮುನ್ನ

ಇಂಗ್ಲೀಷ ಮೂಲ: ರಾಬರ್ಟ್ ಫ್ರಾಸ್ಟ್
ಭಾವಾನುವಾದ: ಉದಯ ಇಟಗಿ
ಚಿತ್ರಕೃಪೆ: www.flickr.com/Sunset by Romeo Koitmae