ಮಂಡ್ಯ ಘಟನೆ ಅಮಾನವೀಯ

ಮಂಡ್ಯ ನಗರದ ಸ್ವರ್ಣಸಂದ್ರದ ಹೆದ್ದಾರಿಯಲ್ಲಿ ಸೋಮವಾರ ಸಂಚಾರ ಪೊಲೀಸರ ತಪಾಸಣೆ ವೇಳೆಯಲ್ಲಿ ಬೈಕ್ ಅಡ್ಡಗಟ್ಟಿದ ಪರಿಣಾಮ ಆಯತಪ್ಪಿ ಕೆಳಗೆ ಬಿದ್ದು ಮೂರು ವರ್ಷದ ಮಗು ಮೃತಪಟ್ಟಿರುವುದು ದುಃಖದ ಸಂಗತಿ. ಮಗುವನ್ನು ಚಿಕಿತ್ಸೆಗೆಂದು ಬೈಕ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಹೆಲೈಟ್ ತಪಾಸಣೆಗೆ ಪೊಲೀಸರು ದಿಢೀರನೆ ವಾಹನ ನಿಲ್ಲಿಸುವ ಹಂತದಲ್ಲಿ ಬೈಕ್ ಸ್ಕಿಡ್ ಆಗಿ, ಕೆಳಗೆ ಬಿದ್ದ ಮಗುವಿನ ಮೇಲೆ ಟೆಂಪೋ ಹರಿದಿದೆ. ಮದ್ದೂರು ತಾಲೂಕು ಗೊರವನಹಳ್ಳಿ ಗ್ರಾಮದ ಅಶೋಕ, ವಾಣಿಶ್ರೀ ದಂಪತಿ ಪುತ್ರಿ ರಿತೀಕ್ಷಾ (೩) ಮೃತ ಬಾಲಕಿ. ಈ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವ ಜತೆಗೆ ಸಂಚಾರ ಪೊಲೀಸರ ಬೇಜವಾಬ್ದಾರಿ, ನಿರ್ಲಕ್ಷ್ಯವನ್ನು ದರ್ಶಿಸುತ್ತದೆ. ಸಂಚಾರ ನಿಯಮ, ಕಾನೂನಿನ ಅನುಷ್ಠಾನ ಅಗತ್ಯ ಎಂಬುದು ಸರಿ. ನಿಯಮಗಳ ಪಾಲನೆ ಆಗಬೇಕು ಎಂಬುದರಲ್ಲಿಯೂ ಎರಡು ಮಾತಿಲ್ಲ. ಆದರೆ, ಇವುಗಳ ಜಾರಿಯ ಹಂತದಲ್ಲಿ ಸೂಕ್ಷ್ಮತೆಯನ್ನು ಮರೆತರೆ, ಸುರಕ್ಷತಾ ವಿಧಾನಗಳನ್ನು ಗಾಳಿಗೆ ತೂರಿದರೆ ಜನರ ಜೀವಕ್ಕೆ ಕುತ್ತು. ನಮ್ಮ ವ್ಯವಸ್ಥೆಯಲ್ಲಿ ಅಮಾಯಕ ಜನರ ಜೀವಕ್ಕೆ ಬೆಲೆಯೇ ಇಲ್ಲವೆ? ವ್ಯವಸ್ಥೆಯ ನಿರ್ಲಕ್ಷ್ಯ, ಬೇಜವಾಬ್ದಾರಿತನಕ್ಕೆ ಎಷ್ಟು ಜೀವಗಳು ಬಲಿಯಾಗಬೇಕು?
ಸಂಚಾರ ಪೊಲೀಸರು ಯಾವುದೋ ಮೂಲೆಯಲ್ಲಿ ಅಡಗಿಕೊಂಡು ಒಮ್ಮೆಲೆ ಕಾರ್ಯಾಚರಣೆಗೆ ಇಳಿಯುವುದು, ದಿಢೀರ್ ಅಂತ ವಾಹನ ನಿಲ್ಲಿಸುವುದು ಸರಿಯಲ್ಲ. ಇವೆಲ್ಲ ಅಪಾಯವನ್ನು ಆಹ್ವಾನಿಸುವ ಕೃತ್ಯಗಳು. ವೃತ್ತಿಪರತೆ ಕೊರತೆಯ ನಿದರ್ಶನಗಳು. ಅಷ್ಟಕ್ಕೂ, ಈ ಹಿಂದೆ ವಾಹನಗಳನ್ನು ತಡೆದು ದಾಖಲೆ ಪರಿಶೀಲಿಸದಂತೆ. ವಾಹನ ಚಾಲಕರಿಗೆ ಅನಗತ್ಯ ಕಿರುಕುಳ ಕೊಡದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಸ್ಪಷ್ಟ ಎಚ್ಚರಿಕೆ ನೀಡಿದ್ದರು. ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಈ ಆದೇಶ ಅನ್ವಯವಾಗುತ್ತದೆ. ದಾಖಲೆಗಳ ಪರಿಶೀಲನೆಯ ನೆಪದಲ್ಲಿ ವಾಹನ ನಿಲ್ಲಿಸಿ ಪದೇಪದೆ ತೊಂದರೆ ಕೊಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇಲೆ ಈ ಕ್ರಮ ಕೈಗೊಳ್ಳಲಾಗಿತ್ತು. ಆದರೂ, ಆದೇಶ ಯಾಕೆ ಪಾಲನೆ ಆಗುತ್ತಿಲ್ಲ?
ಇದು ಡಿಜಿಟಲ್ ಯುಗ. ತಂತ್ರಜ್ಞಾನದ ಸಹಾಯದಿಂದ ಬಹುತೇಕ ಕೆಲಸಗಳು ಸುಲಭವಾಗಿವೆ. ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುವ ಅವಕಾಶ ಇದ್ದೇ ಇದೆ. ಅದನ್ನು ಬಿಟ್ಟು ವಾಹನ ಸವಾರರನ್ನು ಅಪರಾಧಿಗಳಂತೆ ಬೆನ್ನಟ್ಟುವುದು, ಎಲ್ಲಿ ಬೇಕಾದಲ್ಲಿ ತಡೆದು ನಿಲ್ಲಿಸುವುದು ಸರಿಯಲ್ಲ. ದಂಡ ವಸೂಲಿಗಾಗಿ ಸಂಚಾರ ಪೊಲೀಸ್ ಇಲಾಖೆಯು ತನ್ನ ಸಿಬ್ಬಂದಿಗೆ ಟಾರ್ಗೆಟ್ ನಿಗದಿ. ಮಾಡಿ, ಅವರ ಮೇಲೆ ಒತ್ತಡ ಹೇರುತ್ತದೆ ಎಂಬ ಆಕ್ಷೇಪಗಳು ಇವೆ. ಇಂಥ ಗುರಿ ನಿಗದಿಯೇ ವಿವೇಚನಾರಹಿತ ಮತ್ತು ಖಂಡನೀಯ. ದಂಡ ವಸೂಲಾತಿಯ 'ಗುರಿ' ಮುಟ್ಟಲು ಸಂಚಾರ ಪೊಲೀಸರು ವಾಹನ ಸವಾರರಿಗೆ ಕಿರುಕುಳ ನೀಡುತ್ತಿರುವುದು, ಸುರಕ್ಷಾ ಕ್ರಮಗಳನ್ನು ಉಲ್ಲಂಘಿಸುತ್ತಿರುವುದು ಮಾಮೂಲು ಎಂಬಂತಾಗಿದೆ. ಮಗುವನ್ನು ಕಳೆದುಕೊಂಡ ಆ ಪಾಲಕರ ನೋವಿಗೆ ಮದ್ದು ಏನು? ಪೊಲೀಸರು ಇನ್ನಾದರೂ ಸೂಕ್ಷ್ಮತೆಯಿಂದ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಜನರ ರಕ್ಷಕರಾಗಬೇಕೆ ಹೊರತು, ಅವರ ಪ್ರಾಣಕ್ಕೆ ಕಂಟಕ ತರುವಂಥ ಸಂವೇದನಾಹೀನತೆಯನ್ನು ಪ್ರದರ್ಶಿಸದಿರಲಿ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೭-೦೫-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ