ಮಕ್ಕಳಲ್ಲಿ ಓದುವ ಅಭ್ಯಾಸ ವೃದ್ಧಿಗೆ ಕಾರ್ಯಕ್ರಮ ಸ್ತುತ್ಯರ್ಹ

ಮಕ್ಕಳಲ್ಲಿ ಓದುವ ಅಭ್ಯಾಸ ವೃದ್ಧಿಗೆ ಕಾರ್ಯಕ್ರಮ ಸ್ತುತ್ಯರ್ಹ

ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು, ಸ್ಮಾರ್ಟ್ ಫೋನ್ ಗಳ ಬಳಕೆಯ ಪ್ರಭಾವದಿಂದ ಶಾಲಾ ಮಕ್ಕಳಲ್ಲಿ ದಿನದಿಂದ ದಿನಕ್ಕೆ ಓದುವ ಹವ್ಯಾಸ ಕುಂಠಿತವಾಗುತ್ತಿರುವುದನ್ನು ಸಾಕಷ್ಟು ಅಧ್ಯಯನ ವರದಿಗಳು ಖಚಿತಪಡಿಸಿವೆ. ಈ ಹಿನ್ನಲೆಯಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವುದಕ್ಕಾಗಿ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ‘ಓದುವ ಹವ್ಯಾಸ ಜ್ಞಾನದ ವಿಕಾಸ' ಎಂಬ ವಿನೂತನ ಪ್ರಯತ್ನಕ್ಕೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ.

ಈ ವಿನೂತನ ಯೋಜನೆಯಡಿ ೧ ರಿಂದ ೧೦ನೇ ತರಗತಿಯವರೆಗೆ ಓದುತ್ತಿರುವ ಮಕ್ಕಳು ವಾರದಲ್ಲಿ ಒಂದು ಅವಧಿ ಗ್ರಂಥಾಲಯದಲ್ಲಿ ಕಳೆಯುವುದು ಮತ್ತು ಪ್ರತಿ ಶಾಲೆಯು ಅತ್ಯುತ್ತಮ ಗಂಥಾಲಯ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ. ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ‘ಮಕ್ಕಳ ಸ್ನೇಹಿ ಗ್ರಂಥಾಲಯ' ಅಥವಾ ‘ಓದುವ ಮೂಲೆ' (ರೀಡಿಂಗ್ ಕಾರ್ನರ್) ಸ್ಥಾಪನೆ, ಗ್ರಂಥಾಲಯದ ಅವಧಿ ಅಥವಾ ಯಾವುದೇ ಸಮಯದಲ್ಲಿ ಯಾವುದೇ ಆಚರಣೆ ಇಲ್ಲದೆ ಮಕ್ಕಳು ಸ್ವತಂತ್ರವಾಗಿ ಈ ಸ್ಥಳವನ್ನು ಬಳಸಿಕೊಳ್ಳುವುದು, ಮಕ್ಕಳಿಗೆ ಸುಲಭವಾಗಿ ಪುಸ್ತಕಗಳು ದೊರೆಯುವಂತೆಯೂ ಮಾಡುವುದು ಸೇರಿ ಅನೇಕ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಮಕ್ಕಳ ಬೌದ್ಧಿಕ ವಿಕಾಸದ ದೃಷ್ಟಿಯಿಂದ ರಾಜ್ಯ ಸರಕಾರದ ಈ ನಡೆಯು ಅತ್ಯುತ್ತಮ ಹೆಜ್ಜೆಯಾಗಿದೆ.

ಕೋವಿಡ್ ಕಾಲಘಟ್ಟದಲ್ಲಿ ದೊಡ್ದವರೂ ಸೇರಿದಂತೆ ಮಕ್ಕಳೂ ಸ್ಮಾರ್ಟ್ ಫೋನ್ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ಕಲಿಕೆಗೆ ಬೇರೆ ದಾರಿಯೇ ಇರಲಿಲ್ಲ. ಆಗ ನೆರವಿಗೆ ಬಂದದ್ದೇ ಸ್ಮಾರ್ಟ್ ಫೋನ್ ಗಳು ಅಥವಾ ಆನ್ ಲೈನ್ ಮೂಲಕ ಕಲಿಯುವ ಪದ್ಧತಿ. ಆದರೆ ಶೈಕ್ಷಣಿಕ ವ್ಯವಸ್ಥೆಯು ಕೋವಿಡ್ ಪೂರ್ವ ಸ್ಥಿತಿಗೆ ಮರಳಿ, ಶಾಲೆಗಳು ಎಂದಿನಂತೆ ಆರಂಭವಾದರೂ ಮಕ್ಕಳೂ ಮಾತ್ರ ಫೋನ್ ಗಳನ್ನು ಕೆಳಗಿಟ್ಟಿಲ್ಲ ! ಇಂಥ ಪರಿಸ್ಥಿತಿಯಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು ಸುಲಭದ ಮಾತಲ್ಲ.

೬ ರಿಂದ ೧೦ ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಕಲಿಕೆ ಸರಿಯಲ್ಲ ಎಂದು ವಿಶ್ವಸಂಸ್ಥೆಯೂ ಶಿಫಾರಸು ಮಾಡಿದೆ. ಡಿಜಿಟಲ್ ಕಲಿಕೆ ಆಧುನಿಕ ಕಾಲದ ಅಗತ್ಯವಾದರೂ ಮಕ್ಕಳ ಒಟ್ಟಾರೆ ಕಲಿಕೆಯನ್ನು ಅದು ಪರಿಣಾಮಕಾರಿಯಾಗಿ ಪ್ರತಿನಿಧಿಸುವುದಿಲ್ಲ. ಸಾಂಪ್ರದಾಯಿಕ ಮಾದರೆ ಅಂದರೆ, ಓದುವುದು, ಬರೆಯುವುದು, ಕೇಳುವುದು, ತಿಳಿದುಕೊಳ್ಳುವಂಥ ಪ್ರಕ್ರಿಯೆಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಈ ಒಟ್ಟು ಪ್ರಕ್ರಿಯೆಗೆ ಓದುವ ಹವ್ಯಾಸವು ಪೂರಕವಾಗಿರುತ್ತದೆ. ಹಾಗಾಗಿ ಮಕ್ಕಳನ್ನು ಮತ್ತೆ ಓದುವ ಹವ್ಯಾಸದ ಹಳಿಗೆ ತರುವುದು ಈಗಿನ ತುರ್ತೂ ಹೌದು.

ಓದುವ ಹವ್ಯಾಸವು ಮಕ್ಕಳಲ್ಲಿ ಶಬ್ಧ ಭಂಡಾರ ವೃದ್ಧಿಸಲು ಕಾರಣವಾಗುತ್ತದೆ. ಮಕ್ಕಳ ಗ್ರಹಿಕಾ ಸಾಮರ್ಥ್ಯ, ಏಕಾಗ್ರತೆಯ ಶಕ್ತಿ, ಭಾಷಾ ಕೌಶಲ ಮತ್ತು ಸೃಜನಾತ್ಮಕ ಬರವಣಿಗೆಗೆ ಪೂರಕವಾಗಿರುತ್ತದೆ. ಜತೆಗೆ ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ, ವಿಶ್ಲೇಷಣೆ ಸಾಮರ್ಥ್ಯ, ಸಾರಾಂಶ ಮಾಡುವ ಕ್ಷಮತೆ, ಕಲ್ಪನಾ ಶಕ್ತಿ , ಸೃಜನಶೀಲತೆಯನ್ನು ಬೆಳೆಸುವಲ್ಲಿ ಓದುವ ಹವ್ಯಾಸವು ಅತ್ಯಂತ ಪ್ರಮುಖ ಸಾಧನವಾಗಿದೆ. ಹಾಗಾಗಿ ‘ಓದುವ ಹವ್ಯಾಸ ಜ್ಞಾನದ ವಿಕಾಸ' ಎಂಬ ನೂತನ ಕಾರ್ಯಕ್ರಮ ಕೇವಲ ಆರಂಭಶೂರತ್ವಕ್ಕೆ ಸೀಮಿತವಾಗಿರದೆ ಸಮರ್ಪಕವಾಗಿ ಜಾರಿಗೊಳಿಸುವತ್ತ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಏಕೆಂದರೆ ಸರಕಾರದ ಅನೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳು ಭಾರೀ ಸದ್ದಿನೊಂದಿಗೆ ಆರಂಭವಾಗಿ, ಆನಂತರ ಸದ್ದಿಲ್ಲದೇ ಮರೆಯಾಗುತ್ತವೆ. ಎಲ್ಲಕ್ಕೂ ಮಿಗಿಲಾಗಿ ಶಾಲೆಗಳಲ್ಲಿ ಸುಸಜ್ಜಿತ ಗ್ರಂಥಾಲಯ ಸ್ಥಾಪನೆಗೆ ಗಮನನೀಡಬೇಕು. ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿರುವ ಈ ಯೋಜನೆಯನ್ನು ಯಾವುದೇ ಲೋಪಕ್ಕೆ ಅವಕಾಶ ಇಲ್ಲದಂತೆ ಜಾರಿಗೊಳಿಸಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೩೦-೦೭-೨೦೨೪   

ಚಿತ್ರ ಕೃಪೆ: ಅಂತರ್ಜಾಲ ತಾಣ