ಮಕ್ಕಳ ಭವಿಷ್ಯಕ್ಕೆ ಹಿರಿಯರೆ ಬದಲಾಗಬೇಕು

ಮಕ್ಕಳ ಭವಿಷ್ಯಕ್ಕೆ ಹಿರಿಯರೆ ಬದಲಾಗಬೇಕು

ಮಗುವಿಗೆ ಸಂಬಂಧಿಸಿದಂತೆ ಹೀಗೊಂದು ಸನ್ನಿವೇಶ. ಒಂದು ಮನೆಯಲ್ಲಿ ಮಗುವಿನ ತಾಯಿ ಸರಿ ಸುಮಾರು 8-10 ವರ್ಷದ ಮಗನ ಕೈಯಲ್ಲಿ ಒಂದು ಕಪ್ ಕಾಫಿ ಕೊಟ್ಟು ತಂದೆಗೆ ಕೊಡಲು ಹೇಳುತ್ತಾಳೆ, ಮನೆಯ ಹೊರಗೆ ಜಗುಲಿಗೆ ಕುಳಿತ ತಂದೆಗೆ ಕೊಡಲು ಹೋಗಬೇಕಾದರೆ ಆ ಮಗು ಒಂದು ಕೈಯಲ್ಲಿ ಕಾಫಿ ಕಪ್, ಇನ್ನೊಂದು ಕೈಯಲ್ಲಿ ಗ್ಲಾಸ್ ನೀರು ಹೀಗೆ ಎರಡೂ ಕೈಯಲ್ಲಿ ಹಿಡಿದುಕೊಂಡು ಬರಬೇಕಾದರೆ! ಆ ಮಗುವಿನ ಮನಸ್ಥಿತಿ ಸೂಕ್ಷ್ಮವಾಗಿ ಗಮನಿಸಿ ನೋಡಿ ಹೇಗಿರುತ್ತೆ ಎಂದು.

ಒಂದು ಕೈಯಲ್ಲಿ ಬಿಸಿಯಾದ ಕಾಫಿ, ಇನ್ನೊಂದು ಕೈಯಲ್ಲಿ ನೀರು ಹೀಗಿರುವಾಗ ಮಗು ಬಿಸಿಯಾದ ಕಾಫಿ ಕಡೆ ಹೆಚ್ಚು ಒತ್ತುಕೊಟ್ಟು ಮೆಲ್ಲಗೆ ಬರುತ್ತಿರುತ್ತದೆ. ಏಕೆಂದರೆ ಚೂರು ಹೆಚ್ಚುಕಮ್ಮಿಯಾದರೆ ಕೈ ಸುಡುತ್ತದೆ ಎಂಬ ಭಯ. ಹೀಗೆ ಬರಬೇಕಾದರೆ, ಇನ್ನೇನು ತಂದೆಗೆ ಕಾಫಿ ತಲುಪಿಸಬೇಕು ಎನ್ನುವಷ್ಟರಲ್ಲಿ ಕೈಯಿಂದ ಜಾರಿ ಬಿದ್ದು ಕಪ್ ಒಡೆದು ಕಾಫಿ ಕಾಲ್ಮೇಲೆ ಚೆಲ್ಲಿಕೊಳ್ಳುತ್ತದೆ.

ಈ ಸಂದರ್ಭದಲ್ಲಿ ತಂದೆಯ ಪ್ರತಿಕ್ರಿಯೆ ಹೇಗಿರಬಹುದು? ಆಶ್ಚರ್ಯ ಆದರೂ ಮಗುವಿನ ನಿರೀಕ್ಷೆಯಂತೆಯೇ ಇತ್ತು. ಏಕೆಂದರೆ ಮಗುವಿಗೆ ಇದು ಹೊಸದೇನಲ್ಲ. ಕೆಳಗೆ ಬಿದ್ದು ಒಡೆದ ಕಾಫಿ ಕಪ್ಪನ್ನು ಒಮ್ಮೆ ನೋಡಿ ಮತ್ತೊಮ್ಮೆ ಮಗನ ಮುಖ ನೋಡುತ್ತಾ.. ಸಿಟ್ಟಿನಿಂದ ತಂದೆ ಮಗುವನ್ನುದ್ದೇಶಿಸಿ ಅನ್ನುತ್ತಾನೆ; 'ನನಗೆ ಮೊದಲೇ ಗೊತ್ತಿತ್ತು, ನೀನ್ ಕೈಯಿಂದ ಕಪ್ಪ ಬೀಳಸಗೊಂಡೆ ಬರ್ತಿಯಂತ? ನಿನ್ನ ಹಣೆಬರಹನೆ ಇಷ್ಟೆ, ಸ್ವಲ್ಪರ ಜಾಗೃತೆ?, ಯಾವಾಗ್ ಶ್ಯಾಣೆ ಆಗ್ತಿ, ಕತ್ತಿ ಬೆಳದಂಗ ಬೆಳದರಾಯ್ತನ್' ಎಂದು ಗದರಿಸಿದಾಗ ಆ ಮಗುವಿನ ಮನದಲ್ಲಿ ಯಾವ ಪರಿಣಾಮ ಬೀರಿರಬಹುದು? ಮಗುವಿಗೆ ಇದು ಹೊಸದೇನಲ್ಲ ಈ ತರಹದ ಆಕಸ್ಮಿಕ ಸನ್ನಿವೇಶಗಳು ನಡೆದಾಗಲೆಲ್ಲ ಮಂಗಳಾರತಿ ಇದ್ದದ್ದೆ. 'ಬುದ್ದಿನೆ ಇಲ್ಲ, ನಿನಗ್ ಯಾವಾಗ ಬುದ್ದಿ ಬರಬೇಕು, ತಿನ್ನದ್ ಒಂದೆ ಗೊತ್ತು, ಮಾಡೋದ್ ಗೊತ್ತಿಲ್ಲ, ದಡ್ಡ' ಹೀಗೆ ಮಕ್ಕಳ ಕುರಿತು ಋಣಾತ್ಮಕ ಪದ ಬಳಕೆಯಿಂದ ಮಗುವಿನಲ್ಲಿ ನಿರಂತರ ತನ್ನಷ್ಟಕ್ಕೆ ತಾನೆ ತನ್ನ ಕುರಿತು ನಕರಾತ್ಮಕ ಧೋರಣೆಗಳು ಹುಟ್ಟಿಕೊಳ್ಳುತ್ತದೆ. ಇದರಿಂದ ಮಗುವಿನಲ್ಲಿ ಅತ್ಮವಿಶ್ವಾಸ ಕುಗ್ಗಿಕೊಳ್ಳುವುದು, ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂದೇಟು, ಪರಾವಲಂಬಿಯಾಗಿ ಬೆಳೆಯುತ್ತಾ ವಯಸ್ಸಿನ ಬೇಳವಣಿಗೆಯಾದರೂ ಮಾನಸೀಕ ಬೆಳವಣಿಗೆ ಕಾಣದೆ ಆತಂಕ ಮತ್ತು ಅಸ್ವಸ್ಥ ಮನಸ್ಥಿತಿಯಲ್ಲಿ ನಡೆಯಬೇಕಾಗುತ್ತದೆ. ಮೇಲಿನ ಸನ್ನಿವೇಶದಂತೆ ಮಕ್ಕಳ ಬದುಕಿನಲ್ಲಿ ಸಣ್ಣ ಪುಟ್ಟ ತಪ್ಪುಗಳು ನಡೆಯುವುದು ಸಹಜ ಈ ಸಂದರ್ಭದಲ್ಲಿ ಹಿರಿಯರ ನಡೆ ಹೇಗಿರಬೇಕು ಎಂಬುವುದು ಅರಿತುಕೊಳ್ಳಬೇಕು. ಮಕ್ಕಳನ್ನು ಶಿಕ್ಷಿಸುವ ಬದಲು ಅವರ ತಪ್ಪುಗಳನ್ನು ತಿದ್ದುವ ಪರಿ ಪ್ರಮುಖವಾಗುತ್ತದೆ. ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಹಿರಿಯರ ಜವಾಬ್ದಾರಿ ಬಹಳ ಮಹತ್ವಪೂರ್ಣವಾಗಿದೆ ಎಂಬುವುದು ಎಲ್ಲರಿಗೂ ಗೊತ್ತು. ಆದರೂ ಕೆಲವೊಮ್ಮೆ ಆ ಜವಾಬ್ದಾರಿ ಮರೆತು ನಡೆಯುತ್ತೇವೆ.

ಮಕ್ಕಳ ಮನಸು ಬಹಳ ಸೂಕ್ಷ್ಮ, ಮನೆಯ ಹಿರಿಯರ ನಡೆ ನುಡಿ ಮಾತು ಪರಿಸರ ಎಲ್ಲವೂ ಮಗುವಿನ ಮನಸಿನ ಮೇಲೆ ಪರಿಣಾಮ ಬೀರುವುದು ಸಹಜ. ಮಕ್ಕಳಲ್ಲಿ ಗೃಹಿಸುವ ಶಕ್ತಿ ಹೆಚ್ಚಿಗೆ ಇದ್ದು ವಿಶ್ಲೇಷಣೆ ಅಥವಾ ಪರಿಶೀಲನೆ ಶಕ್ತಿ ಕುಂಟಿತವಾಗಿರುವ ಕಾರಣ ಅವರ ಮನದ ಮೇಲೆ ಬಾಹ್ಯದ ಪರಿಣಾಮ ತೀವ್ರಗೊಳ್ಳುತ್ತದೆ. ಎಲ್ಲರೂ ಹೇಳುವಂತೆ ಮಕ್ಕಳ ಮನಸ್ಸು ಹೂವಿನಂತೆ ಮಧುರ ಮತ್ತು ನಿಷ್ಕಲ್ಮಶ. ಬೀಜದಂತೆ ಬೆಳೆ ಎನ್ನುವಂತೆ ಮಕ್ಕಳಲ್ಲಿ ನೀವು ಯಾವ ಪ್ರಭಾವ ಬೀರುತ್ತೀರಿ ಅದೇ ಪ್ರತಿಫಲಿಸುತ್ತದೆ. ಅತೀ ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ಮೂಗು ತೂರಿಸಿ ಮಗುವಿನ ಸ್ವಾತಂತ್ರ್ಯ ಕಸಿದುಕೊಳ್ಳುವ ನಿಟ್ಟಿನಲ್ಲಿ ವಾತಾವರಣ ಮತ್ತು ಹಿರಿಯರ ವರ್ತನೆ ಆಗಾಬಾರದು.

ಮಕ್ಕಳ ಜೊತೆ ಮಾತನಾಡುವಾಗ ಹಿರಿಯರು ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಯಾವತ್ತೂ ಹೇಳಬಾರದು, ಯಾವುದೆ ವಿಷಯ ಪ್ರಸ್ತಾ ಪದಲ್ಲಿ ವಿಷಯ ಮುಖ್ಯವಾಗದೆ ಹೇಳುವ ರೀತಿ ಮುಖ್ಯವಾಗಿರುತ್ತದೆ. ಹೇಳುವಾಗಿನ ವರ್ತನೆ ಬಹಳ ಮುಖ್ಯ. ಮಗುವಿನ ತಪ್ಪುಗಳನ್ನು ತಿದ್ದಲು ಕೂಡ ಹಿರಿಯರಲ್ಲಿ ವಿಶೇಷ ಅರ್ಹತೆ ಬೇಕು. ಶಾಲೆಗಳಲ್ಲಾಗಲಿ ಅಥವಾ ಮನೆಯಲ್ಲೇ ಆಗಲಿ ಶಿಕ್ಷಕರು, ಪಾಲಕರು ಮಗುವಿನ ತಪ್ಪನ್ನು ಸರಿಪಡಿಸುವತ್ತ ಹೆಚ್ಚು ಗಮನ ಕೊಡಬೇಕೆ ಹೊರತು ಮಗುವನ್ನು ಶಿಕ್ಷಿಸಲು ಮುಂದಾಗುವುದಲ್ಲ. ಮಕ್ಕಳು ಬೆಳೆಯುವ ಹಂತದಲ್ಲಿ ಅವರ ಆತ್ಮವಿಶ್ವಾಸಕ್ಕೆ ದಕ್ಕೆ ಬರದಂತೆ, ಮಕ್ಕಳನ್ನು ಭಯಗ್ರಸ್ತ ಮತ್ತು ಆತಂಕದ ವಾತಾವರಣದಿಂದ ಮುಕ್ತಗೊಳಿಸಬೇಕು. ಮಕ್ಕಳ ಬೆಳವಣಿಗೆ ಅವರ ಭವಿಷ್ಯದ ಬದುಕಿಗೆ ಸ್ವತಹ ಹಿರಿಯರು ಬದಲಾಗಬೇಕಾದದ್ದು ಅನಿವಾರ್ಯ.

-ವೀರಣ್ಣ ಕಲಕೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ