ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
ನೀರು! ಇಂದು ಕುಡಿಯುವ ನೀರಿಗಾಗಿ ಹಾಹಾಕಾರ. ಬಿಸಿಲಿನ ಬೇಗೆಯನ್ನ ತಾಳಲಾರದೆ ಮನುಷ್ಯನೇ ಅಲ್ಲ, ಪ್ರಾಣಿ ಮತ್ತು ಪಕ್ಷಿ ಸಂಕುಲಗಳೂ ಸಹ ಆಕ್ರಂದಿಸುತ್ತಿವೆ. ಇವೆಲ್ಲದರ ಮಧ್ಯೆ ಇರುವ ನೀರಿನ ಸೆಲೆಗಳನ್ನೂ ಮನುಷ್ಯನ ಹಣದಾಹ ನುಂಗಿ ಹಾಕ್ತಿದೆ. ನೀರಿನ ಬಗೆಗಿನ ಅನಕ್ಷರತೆ, ಅಂಧಾನುಕರಣೆ ಅವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದರೂ ಅದನ್ನು ಗಮನಿಸಲಿಕ್ಕೆ ಅವನಿಗೆ ಇಂದು ಸಮಯವಿಲ್ಲ. ಕಾಂಕ್ರೀಟ್ ಕಾಡಿನ ಮಧ್ಯೆ ಸುಖವಿದೆ ಎಂದುಕೊಂಡಿರುವ ಮಾನವನನ್ನ ಆ ಭ್ರಮೆಯಿಂದ ಎಬ್ಬಿಸಲಿಕ್ಕೆ ಒಬ್ಬರ ಅಥವಾ ಇಬ್ಬರ ಕೂಗೂ ಎಲ್ಲಿಗೂ ಸಾಲದು.
ಮಡಿವಾಳ ಕೆರೆ ಬೆಂಗಳೂರಿನ ಅತಿವಿಸ್ತಾರವಾದ ಕೆರೆಗಳಲ್ಲಿ ಒಂದು. ಇದರ ಸುತ್ತಮುತ್ತಲಿರುವ ಸಮಸ್ಯೆಗಳೂ ಅತಿ ವಿಸ್ತಾರವಾದುವೇ. ಇವುಗಳನ್ನೆಲ್ಲ ಸರಿಪಡಿಸಲಿಕ್ಕೆ, ಜನರಲ್ಲಿ ಕೆರೆಯ ಬಗ್ಗೆ ತಿಳುವಳಿಕೆ ಮೂಡಿಸಲಿಕ್ಕೆ ನಮ್ಮ ಮುರಳಿ ಬಹಳ ದಿನಗಳಿಂದ ಪರಿಶ್ರಮ ಪಡುತ್ತಿದ್ದಾನೆ. ಅದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿಕ್ಕೆ ನಾವೆಲ್ಲ ನೆನ್ನೆ (ಭಾನುವಾರ)ಮಡಿವಾಳ ಕೆರೆಯ ಬಳಿ ಸೇರಿದ್ದೆವು. ವಿಶ್ವ ನೀರಿನ ದಿನಾಚರಣೆಯ ಅಂಗವಾಗಿ ನೆಡೆದ ಈ ಕಾರ್ಯಕ್ರಮದ ಕೆಲ ಕ್ಷಣಗಳನ್ನ ನಾನಿಲ್ಲಿ ಸೆರೆ ಹಿಡಿಯಲಿಕ್ಕೆ ಪ್ರಯತ್ನ ಪಟ್ಟಿದ್ದೇನೆ.
ಮಡಿವಾಳ ಕೆರೆ
ನೀರು ಏಕೆ ಮುಖ್ಯ, ನೀರಿನ ಸೆಲೆಗಳನ್ನ ಏಕೆ ನಾವು ರಕ್ಷಿಸಬೇಕು, ನೀರಿನಲ್ಲಿನ ಕಲ್ಮಶಗಳನ್ನ ಕಂಡು ಹಿಡಿಯೋದು ಹ್ಯಾಗೆ, ಅದರ ಸುತ್ತಮುತ್ತಲಿನ ಸುಂದರ ಪರಿಸರ, ಪಕ್ಷಿ ಸಂಕುಲಗಳನ್ನು ಹೇಗೆ ಉಳಿಸಬೇಕು, ಏಕೆ ಉಳಿಸಬೇಕು, ಇದರಲ್ಲಿ ಸಮುದಾಯದ ಪಾತ್ರವೇನು, ಅಂತರ್ಜಲ ಇಂದೇನಾಗ್ತಿದೆ, ಮಳೆ ಕುಯ್ಲು ಏಕೆ ಮುಖ್ಯ, ನಮ್ಮ ಆರೋಗ್ಯ ಕಾಪಾಡುವುದರಲ್ಲಿ ನೀರಿನ ಪಾತ್ರವೇನು. ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರವನ್ನ ಕಂಡುಕೊಳ್ಳುವ ಪ್ರಯತ್ನ ಇಲ್ಲಿ ನೆಡೆಯಿತು. ಆರ್ಘ್ಯಂ ಸಂಸ್ಥೆಯ ತಂಡ ಜನರಿಗೆ ನೀರಿನಲ್ಲಿ ಫೋರೈಡ್ ಮತ್ತು ಕ್ಲೋರೈಡ್ ಇದೆಯೇ ಅನ್ನೋದನ್ನ ಸುಲಭವಾಗಿ ಹೇಗೆ ಪರೀಷಿಸಬಹುದು ಅನ್ನೋದನ್ನೂ ಇಲ್ಲಿ ಕಲಿಸಿತು.
ಮಡಿವಾಳ ಕೆರೆಯ ಸುತ್ತ ಸೇರಿದ ಜನ ಸಮುದಾಯ.
ನಮ್ಮ ಜೊತೆ ಸೇರಿದ ಅನೇಕ ನಿವಾಸಿಗಳು ತಮ್ಮ ಸಹಾಯ ಹಸ್ತವನ್ನ ಚಾಚುವುದಾಗಿ ಬರವಸೆಯನ್ನು ನೀಡುವುದರ ಜೊತೆಗೆ, ತಮ್ಮಲ್ಲಿನ ಅನೇಕ ಸಂದೇಹಗಳಿಗೆ ಉತ್ತರವನ್ನೂ ಕಂಡು ಕೊಂಡರು.
ನೀರಿನ್ನೂ ಪರೀಕ್ಷಿಸಿ ನೋಡೋಣ್ವಾ?
ನಿಮ್ಮ ನೀರಿನಲ್ಲಿ ನೈಟ್ರೇಟ್ ಎಷ್ಟಿದೆ?
ಪ್ರಮೋದ್ ಸುಬ್ಬರಾವ್ ರವರ ಪಕ್ಷಿ ಪ್ರಪಂಚ (ಮಡಿವಾಳ ಕೆರೆಯ ಸುತ್ತಮುತ್ತ ಕಂಡು ಬರುವ ಪಕ್ಷಿಗಳ ಬಗ್ಗೆ ಸುಂದರವಾಗಿ ವಿವರಣೆ ನೀಡಿದರು)
ಕೆರೆಯ ಸುತ್ತಲಿನ ಅಪಾರ್ಟ್ಮೆಂಟುಗಳು ಮತ್ತು ಅಲ್ಲಿಂದ ಬರುತ್ತಿರುವ ಕಲ್ಮಶಗಳನ್ನು ನೋಡಿ
ಈ ಸುಖ ನಾಳೆನೂ ಇರ್ಲಿಕ್ಕೆ ಸಾಧ್ಯಾನಾ?
ನೀರಿನ ಬಗ್ಗೆ ಹಾಡುಗಳನ್ನಾಡಿದ ಮಾಳವಿಕಾ ಮತ್ತು ತಂಡ
ಕೆರೆಯ ಸುತ್ತ ಸರಿದಾಡಿದಾಗ.
ಮತ್ತೊಂದು ನೋಟ
ಅರ್ಘ್ಯಂ Indiawaterportal.org
ಮಡಿವಾಳ ಕೆರೆ
ತನ್ನ ನೀರಿನ ಸೆಲೆಗಳನ್ನ ಉಳಿಸಿಕೊಳ್ಳಲಿಕ್ಕೆ ಎಲ್ಲೆಡೆಗಳಲ್ಲಿ ಜನ ಸಮೂಹ ಎಚ್ಚೆತ್ತು ಕೊಳ್ಳಬೇಕಿದೆ. ನಗರಗಳೇ ಇರಲಿ, ಹಳ್ಳಿಗಳೇ ಇರಲಿ ಜನರ ತಿಳುವಳಿಕೆಗೆ ಗುಳಿಗೆ ಕೊಡದೆ ಈ ಕೆಲಸ ಸಾಧ್ಯವಿಲ್ಲ. ನಿಮ್ಮ ಮನೆಯ ಸುತ್ತಮುತ್ತಲು ನೀವೂ ಇದರ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಲಿಕ್ಕೆ ಪ್ರಯತ್ನ ಪಡಿ. ಮುರಳಿಯಂತಹ ಅನೇಕರು ನಿಮ್ಮ ಮಧ್ಯೆ ಇರಬಹುದು ಅವರ ಸಲಹೆ ಮತ್ತು ಸಹಾಯ ನಿಮಗೆ ದೊರೆಯುತ್ತದೆ. ನೀವೂ ನಿರನ್ನು ಉಳಿಸ್ಲಿಕ್ಕೆ ಪ್ರಯತ್ನ ಪಡ್ಟೀರಲ್ವಾ?