ಮದ್ದು ಗುಂಡಿನ ಕಿಡಿಯು ಹಾರಿಸಿ...

ಮದ್ದು ಗುಂಡಿನ ಕಿಡಿಯು ಹಾರಿಸಿ...

ಕವನ

(ಭಾಮಿನಿ ಷಟ್ಪದಿ)

ದೀಪ ಹಚ್ಚುತ ತಮವದೂಡುತ

ಧೂಪ ಬೆಳಗಿ ಜ್ಞಾನ ತುಂಬಿದೆ

ರೂಪನಂದನ ಪೂಜೆ ಮಾಡುವ ದಿವ್ಯದಂಗಳದಿ

ಛಾಪು ಮೂಡಿಸಿ ಕಳೆಯು ಚೆಲ್ಲಿದೆ

ದಾಪುಗಾಲಿನ ರಂಗ ಕುಣಿಯುತ

ಕಾಪು ಮಾಡುತ ಮನವ ಗೆಲ್ಲುತ ಶುಭವ ಕೋರುತಿದೆ||

 

ಸಾಲು ಹಣತೆಯ ಬೆಳಗಿ ಮನೆಯಲಿ

ಹಾಲಿನಂದದಿ ಹೊಳೆದು ಕಾದಿದೆ

ಬಾಲ ಕಲರವ ಮಿಂಚಿ ಮುಳುಗುತ ತೇಲಿ ಮೆರೆಯುತಿದೆ

ಮೇಲು ಕೀಳು ಬೇಧವಳಿಸುತ

ಲಾಲಿ ಹಾಡು ಕೇಳಿ ನಡೆಯುತ

ಮಾಲೆ ಸರವನು ದೈವ ಸನ್ನಿಧಿ ಮುಡಿಸಿ ನಲಿಯುತಿದೆ||

 

ಜನರ ಕಲ್ಮಶದೂಡಿ ಸಾಗುತ

ಮನದಿ ಬೇಡುತ ದೇವನೊಲಿಸುತ

ಬನದ ಸಿರಿಯದು ಬೆಳೆದು ನಿಂತು ನೆರಳು ನೀಡುತಲಿ

ಧನದ ಮದವನು ಹಣದ ಸಿರಿಯನು

ವಿನಯ ಭಾವದಿ ದೂರ ತಳ್ಳುವ

ದಿನದ ಪೂರ್ತಿಯು ದೇವ ವಂದಿಸಿ ಭಕ್ತಿ ಪೂರ್ವಕವು||

 

ಮದ್ದು ಗುಂಡಿನ ಕಿಡಿಯು ಹಾರಿಸಿ

ಸದ್ದು ಮಾಡುತ ಬೆಳಕು ಚೆಲ್ಲುತ

ಗುದ್ದು ನೀಡುವ ಮಾತು ಬೆರೆಸುತ ಭವ್ಯದಂಗಳದಿ

ಬದ್ಧವಾಗಿಯೆ ಪೂಜೆ ಮಾಡುತ

ಸಿದ್ಧರಾಗಿಯೆ ಹೊಸತು ಬಟ್ಟೆಯ

ಸುದ್ಧಿ ಮಾಡುತ ಧರಿಸಿ ನಲಿಯುತ ಹಬ್ಬ ದಿನದಂದು||

 

ಹಬ್ಬ ದಿನದಲಿ ಮುದ್ದು ಮಾಡುತ

ದಿಬ್ಬದಲ್ಲಿನ ದೈವ ನಮಿಸುತ

ಹಬ್ಬಿನಿಂತಿಹ ಬೆಳೆಯ ಸಿರಿಯನು ನೋಡಿ ಸಂತಸದಿ|

ದಬ್ಬಿ ತಮವನು ಚಣದಿ ದೂಕುತ

ಮಬ್ಬು ಕತ್ತಲೆ ಸರಿದು ಬೆಳಕದು

ಕಬ್ಬು ಸಕ್ಕರೆ ಮನದ ನೆಮ್ಮದಿ ಸಿರಿ ಪ್ರಣತಿಯಿದು||

 

-*ಅಭಿಜ್ಞಾ ಪಿ ಎಮ್ ಗೌಡ*

ರೂಪದರ್ಶಿ: ಕಶ್ವಿ, ಬೋಂದೇಲ್ ಕಂಬ್ಳ, ಮಂಗಳೂರು

 

ಚಿತ್ರ್