ಮನದೊಳಗೆ ಸಾವಿನ ನೆರಳ ಸುಳಿಗಳು…! (ಭಾಗ 2)

ಭಯೋತ್ಪಾದಕರು ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸಲು ಕಾರಣವೇ ಇಲ್ಲ. ಅದು ಹಿಂಸೆ, ಅಪರಾಧ ಮತ್ತು ಭಯೋತ್ಪಾದನೆ. ಜೊತೆಗೆ ಅವರು ಯಶಸ್ವಿಯಾಗುವುದೂ ಇಲ್ಲ. ಜೀವ ಹಾನಿ ಮಾತ್ರ ಖಚಿತ. ಅವರ ಕೃತ್ಯಗಳಿಂದ ಅಲ್ಲಿನ ಇವರ ಅನುಯಾಯಿಗಳಿಗೇ ಹೆಚ್ಚು ತೊಂದರೆ. ಅವರು ಬೇರೆ ಕೆಲಸ ನೋಡಿಕೊಳ್ಳುವುದು ಉತ್ತಮ. ಅವರನ್ನು ಸಂಪೂರ್ಣ ನಿಗ್ರಹಿಸಲು ಭಾರತ ಸರ್ಕಾರ ಇನ್ನೂ ಕಠಿಣ ಮತ್ತು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಸ್ಥಳೀಯರ ವಿಶೇಷ ಸ್ಥಾನಮಾನದ ಬೇಡಿಕೆ ಸರಿ ಇದೆ. ಆದರೆ ಈಗ ಅದು ಕೈಮೀರಿ ಹೋಗಿದೆ. ಅವರಿಗೆ ಇದ್ದ ವಿಶೇಷ ಅಧಿಕಾರವನ್ನು ಅಲ್ಲಿನ ಆಡಳಿತಗಾರರು ದುರುಪಯೋಗ ಪಡಿಸಿಕೊಂಡು ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಭ್ರಷ್ಟಾಚಾರ ಸ್ವಜನ ಪಕ್ಷಪಾತ ಮೀರಿ ಅಲ್ಲಿನ ಹಿಂದುಗಳ ಹಿತರಕ್ಷಣೆ ಕಾಯುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಅನೇಕ ಭಾರತೀಯರಿಗೆ ಕಾಶ್ಮೀರ ಒಂದು ಪ್ರತ್ಯೇಕ ರಾಷ್ಟ್ರ ಮತ್ತು ಅದು ಪಾಕಿಸ್ತಾನದ ಪರ ಎಂದು ಭಾವಿಸುವಂತೆ ಘಟನೆಗಳು ನಡೆದಿವೆ. ಆದರೂ ಜಮ್ಮು ಲಡಾಕ್ ಪ್ರದೇಶಗಳನ್ನು ಹೊರತುಪಡಿಸಿ ಕೇವಲ ಕಾಶ್ಮೀರ ಭಾಗಕ್ಕೆ ಮಾತ್ರ ಸ್ವಾಯತ್ತತೆ ನೀಡಿ ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ರೀತಿಯ ಆಧುನಿಕ ಅಭಿವೃದ್ಧಿ ಸಾಧಿಸಿ ನಮ್ಮ ಅನೇಕ ಸೈನಿಕರ ಅಕಾಲಿಕ ಸಾವುಗಳನ್ನು ತಡೆಯುವುದು ಉತ್ತಮ. ಇಲ್ಲದಿದ್ದರೆ ಈ ಸಮಸ್ಯೆ ದೀರ್ಘಕಾಲ ಹೀಗೆ ರಕ್ತದಲ್ಲಿಯೇ ಮುಳುಗಿರುವ ಸಾಧ್ಯತೆ ಇದೆ.
ಭಾರತ ಸರ್ಕಾರ ಇದನ್ನು ಒಂದು ರಾಜಕೀಯ ಅಥವಾ ಸೈನಿಕ ವಿಷಯ ಎಂದು ಮಾತ್ರ ಪರಿಗಣಿಸದೆ ಅನೇಕ ಹಂತಗಳಲ್ಲಿ ಈ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಬೇಕು. ಅದರಲ್ಲಿ ಕಾಶ್ಮೀರ ಭಾಗಕ್ಕೆ ಮಾತ್ರ (ಜಮ್ಮು - ಲಡಾಖ್ ಹೊರತುಪಡಿಸಿ ) ವಿಶೇಷ ಸ್ಥಾನಮಾನ, ಪಾಕಿಸ್ತಾನದ ಜೊತೆ ಮಾತುಕತೆ, ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನದ ಸೈನ್ಯದ ಜೊತೆ ಸೇರಿ ಜಂಟಿ ಕಾರ್ಯಾಚರಣೆ, ಪಾಕಿಸ್ತಾನದ ಅಭಿವೃದ್ಧಿಗೆ ಒಂದಷ್ಟು ಎಲ್ಲಾ ರೀತಿಯ ಸಹಾಯ, ಪಾಕಿಸ್ತಾನದಲ್ಲಿ ಭಾರತದ ಮಾರುಕಟ್ಟೆ ವಿಸ್ತರಿಸಿ ನಮ್ಮ ವಸ್ತುಗಳು ಅಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟ ಸಿಗುವಂತೆ ಮಾಡುವುದು, ಸಿನಿಮಾ ಕಲೆ ಕ್ರೀಡೆ ಮುಂತಾದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಮತ್ತೆ ಜಾರಿ ಮಾಡುವುದು, ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನದ ಹಾಕಿ ಮತ್ತು ಕ್ರಿಕೆಟ್ ತಂಡವನ್ನು ಈಗ ಇರುವ ಪ್ರತ್ಯೇಕ ತಂಡಗಳನ್ನು ಹಾಗೆಯೇ ಉಳಿಸಿಕೊಂಡು ಒಂದು ಎ ಗ್ರೇಡ್ ಟೀಮ್ ರಚಿಸಿ ವಿಶ್ವದ ಇತರ ತಂಡಗಳೊಂದಿಗೆ ಭಾರಸ್ತಾನ ಟೀಮ್ ರಚಿಸಿ ಆಡಿಸಬೇಕು. ಹಾಗೆ ಸಿನಿಮಾ ರಂಗವನ್ನು ಜೋಡಿಸಬೇಕು. ಆಗ ಕಾಶ್ಮೀರ ಒಂದು ವಿವಾದವೇ ಆಗಿರುವುದಿಲ್ಲ.
ಇದು ಕನಸೇ ಇರಬಹುದು. ಆದರೆ ಎಷ್ಟೊಂದು ಸುಂದರ ಮಕ್ಕಳು, ಬಲಿಷ್ಠ ಸೈನಿಕರು, ಬಹಳಷ್ಟು ಸಾಮಾನ್ಯ ಜನರ ಬದುಕು ದುರಂತದಲ್ಲಿ ಅಗತ್ಯವಾಗುವುದನ್ನು ತಡೆಯಲು ಇದನ್ನು ಪ್ರಯತ್ನಿಸಲೇ ಬೇಕು. ಕೇವಲ ಎರಡು ದೇಶಗಳ ರಾಜಕೀಯ ನಾಯಕರ ಅನುಮಾನದಿಂದ ಅಮಾಯಕ ಜೀವಗಳು ಬಲಿಯಾಗುವುದನ್ನು ನೋಡುವುದು ಕೇಳುವುದು ತುಂಬಾ ಹಿಂಸೆಯಾಗುತ್ತದೆ.
ಈ ಪ್ರಯತ್ನಗಳು ಹಿಂದೆ ನಡೆದಿದೆ. ಪಾಕಿಸ್ತಾನ ನಂಬಿಕೆಗೆ ಅರ್ಹವಲ್ಲ ಇತ್ಯಾದಿ ಮಾತುಗಳು ಈಗಲೂ ಚಾಲ್ತಿಯಲ್ಲಿದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಎರಡು ದೇಶಗಳ ಅನೇಕ ಸಾಮಾನ್ಯ ಜನರ ಮನಸ್ಥಿತಿ ಬದಲಾಗಿದೆ. ಪಾಕಿಸ್ತಾನವೂ ಸಹ ಒಂದು ಸಂಧಾನದ ಮಾರ್ಗಕ್ಕೆ ಕಾಯುತ್ತಿರಬಹುದು. ಸ್ಥಳೀಯ ಕಾಶ್ಮೀರಿಗಳು ಸಹ ಆಧುನಿಕತೆಯಿಂದ ಸಾಕಷ್ಟು ಬದಲಾಗಿ ನೆಮ್ಮದಿಗಾಗಿ ತಹತಹಿಸುತ್ತಿದ್ದಾರೆ. ಕೆಲವೇ ದುಷ್ಟರು ಮಾತ್ರ ಇದನ್ನು ಕೆಡಿಸುತ್ತಿದ್ದಾರೆ. ಮೊದಲು ಮನುಷ್ಯ, ಆಮೇಲೆ ಹಿಂದು ಮುಸ್ಲಿಂ ಕಾಶ್ಮೀರಿ ಪಾಕಿಸ್ತಾನಿ ಮುಂತಾದ ಎಲ್ಲವೂ. ಪ್ರೀತಿ ಮತ್ತು ಮಾನವೀಯತೆ ಮಾತ್ರ ಸಾರ್ವಕಾಲಿಕ ಮತ್ತು ಮಾನವ ಧರ್ಮ.
ಕಾಶ್ಮೀರದ ನೆಲದಲ್ಲಿ ಓಡಾಡುವಾಗ ಬರಿಮೈ ಪಕೀರ ನಮ್ಮ ಮೋಹನದಾಸ ಕರಮಚಂದ ಗಾಂಧಿ ನೆನಪಾಗಿ ಕಣ್ಣುಗಳು ಒದ್ದೆಯಾದವು. ಕಾರ್ಗಿಲ್ ಯುದ್ದವೂ ಸೇರಿ ಸುಮಾರು ನಾಲ್ಕು ಯುದ್ದಗಳು ಮತ್ತು ಅದರಿಂದ ಹತರಾದ ಎರಡೂ ಕಡೆಯ ಲಕ್ಷಾಂತರ ಜನರು, ಅಂಗ ಊನರಾದ ಲಕ್ಷಾಂತರ ಜನರು, ಅನಾಥವಾದ ಅನೇಕ ಕುಟುಂಬಗಳು ನೆನಪಾಗಿ ಕಾಶ್ಮೀರದ ಸೌಂದರ್ಯ ಕೆಂಪಾಗಿ ಕಾಣಿಸುತ್ತಿತ್ತು.
ಗಾಂಧಿಯಂತ ವ್ಯಕ್ತಿತ್ವಕ್ಕೆ ಮಾತ್ರ ಕೆಂಪನ್ನು, ಹಸಿರನ್ನು, ಕೇಸರಿಯನ್ನು ಬಿಳಿಯಾಗಿಸುವ ಶಕ್ತಿ ಇತ್ತು. ಆದರೆ ಮನುಷ್ಯರೇ ಅಪರೂಪವಾಗುತ್ತಿರುವ ಈ ಸಂದರ್ಭದಲ್ಲಿ ನಮ್ಮೆಲ್ಲರ ಬದುಕು ದಿಕ್ಕು ದೆಸೆಯಿಲ್ಲದೇ ಸಾಗುತ್ತಿದೆ. ಕ್ಷಮಿಸಿ ಇದು ಒಂದು ಅಭಿಪ್ರಾಯ ಮಾತ್ರ.
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ