ಮನುಷ್ಯನಾಗಿ ಬಾಳು (ತತ್ವಪದ)

ಮನುಷ್ಯನಾಗಿ ಬಾಳು (ತತ್ವಪದ)

ಕವನ

ಮಾನವನಾಗಿ ಹುಟ್ಟಿದ ಮ್ಯಾಲೆ

ಮನುಷ್ಯನಾಗಿ ಬಾಳೋದು ಕಲಿ|

ನರಜನ್ಮ ತಾಳಿದ್ದು ಪುಣ್ಯವಂತೆ

ಪ್ರಾಣಿಗಳಲ್ಲಿಯೇ ಉತ್ತಮವಂತೆ||

 

ಯಾತಕೆ ಎಗರಾಡ್ತಿ ಅಣ್ಣಯ್ಯಾ

ಹಸಿದ ಹೆಬ್ಬುಲಿ ಸ್ವಭಾವದ್ಹಂಗೆ|

ನಾಲ್ಕು ದಿನದ ಬಾಳುವೆಯಂತೆ

ಕೊಟ್ಟು ತಗೊ ಅಭ್ಯಾಸ ಮಾಡ್ಕೊ||

 

ಕುರ್ಚಿ ಕೆಳ್ಗೆ ಕಾಣದ ಕೈಗಳ ಆಟ

ಕಛೇರಿಯಲ್ಲಿ ಲಂಚದಾ ಅವತಾರ |

ಎದುರಿಗೆ ಬಾರರು ಕುತ್ತಿಗೆ ಸೀಳ್ವರು

ಜೇಬನು ತುಂಬಿ ಸ್ವಾರ್ಥದಿ ಮೆರೆವರು||

 

ಪ್ರಾಯದ ಮಿತಿಯು ಇದಕಿಲ್ಲವಲ್ಲ

ಹಸುಳೆ ಮುದುಕಿ ಭೇದವಿಲ್ಲ|

ಹೆಣ್ಣಿನ ಸೆರಗು ಕಂಡರೆ ಸಾಕು

ಜೊಲ್ಲನು ಸುರಿಸೋ ಕಂಟಕರು||

 

ಸ್ವಾರ್ಥದ ಸೌಧ ಕಟ್ಟಿಹರಲ್ಲ

ಹಸಿರ ಸಿರಿಯನು ಬಾಚಿಹರಲ್ಲ|

ಬಡವನ ಹೊಟ್ಟೆಗೆ ಬಡಿದಿಹರಲ್ಲ

ತಮ್ಮ ಹೊಟ್ಟೆಯ ಬೆಳೆಸಿಹರಲ್ಲ||

 

ಹೊತ್ತ ತಾಯಿಗೆ ದ್ರೋಹವ ಮಾಡುತ

ಹಾಲುಂಡ ಎದೆಗೆ ವಿಷವನು ಕಕ್ಕುತ|

ಹಿರಿಯರೆಲ್ಲರ ಸಸಾರ ಮಾಡುತ

ಪಾಪ-ಪುಣ್ಯ ಎಣಿಸದೆ ಹೋದೆ||

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ ಇಂಟರ್ನೆಟ್ ತಾಣ

ಚಿತ್ರ್