ಮನೆ ಹತ್ತಿ ಉರಿಯುವಾಗ ಚಳಿ ಕಾಯಿಸುವವರು
ಶಿಕ್ಷಣದಲ್ಲಿ ರಾಜಕೀಯ ಅರ್ಥವಿಲ್ಲದ ಯೋಚನೆ
ಬದುಕಿನ ದಿಟ್ಟ ಹೆಜ್ಜೆಯ ಊರು ಮಗನೆ
ನಿನ್ನ ತಲೆಯಡಿಗೆ ನಿನ್ನದೇ ಕೈಗಳು ಎಂದೆಂದು
ನೊಂದು ಬೆಂದರೂ ಬರಲಾರರು ತಾ ಮುಂದು
ಕಲಿಕೆ ಅರಿವು ಸರಿತಪ್ಪು ಸಮನ್ವಯತೆ ತಿಳಿಸುವುದು
ಜೀವನದ ಹಾದಿಯಲಿ ನೆಮ್ಮದಿಯ ಹಾಸುವುದು
ಸಮಾಜ ನಿಂತ ನೀರಲ್ಲ ಸಮನ್ವಯತೆ ಸಾಧಿಸಬೇಕು
ಕಷ್ಟ-ಸುಖ ನೈತಿಕ ಮೌಲ್ಯಗಳ ಅರೆದು ಕುಡಿದಿರಬೇಕು
ಹೆತ್ತವರ ಕನಸನ್ನು ನನಸಾಗಿಸು ಕಂದ
ಸರ್ವಸ್ವ ಮಕ್ಕಳೇ ಅವರ ಹೃದಯದಾನಂದ
ರಾಜಕೀಯ ದೊಂಬರಾಟದಿ ಎಳೆ ಜೀವಗಳು ನಲುಗಿತು
ಕನಸು ನುಚ್ಚುನೂರಾಯಿತು ಬದುಕು ಅತಂತ್ರವಾಯಿತು
ಮನೆಹತ್ತಿ ಉರಿಯುವಾಗ ಚಳಿ ಕಾಯಿಸುವವರು
ಓಟಿನ ಬೇಟೆಗಾಗಿ ನೋಟು ಚೆಲ್ಲಲೂ ಹೇಸದವರು
ಮಕ್ಕಳ ಭವಿಷ್ಯದಲಿ ಬೇಳೆ ಬೇಯಿಸಿ ಲಾಭ ಮಾಡುವವರು
ಎಲುಬಿಲ್ಲದ ನಾಲಿಗೆಯ ಮನಬಂದಂತೆ ಹೊರಳಿಸುವವರು
ಹಿಜಾಬ್ ಕೇಸರಿ ಶಲ್ಯ ಪಂಚೆ ಸೀರೆ ಕುಪ್ಪಸ ಅಂಗಿ
ಆರಡಿ ಮೂರಡಿ ಸೇರುವಾಗ ಬೇಡ ನಿಲುವಂಗಿ
ಬೆತ್ತಲೆಯಾಗಿ ಬಂದೆ ಬಾಳು ಯಾಕೆ ಕತ್ತಲೆ ಮಾಡಿಕೊಳುವೆ
ಹಿತ್ತಾಳೆ ಕಿವಿಯಾಗದೆ ಸ್ವಂತಿಕೆ ಬೆಳೆಸಿಕೊ ಇಂದೆ
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
