ಮರಳುಗಾಡಿನ ಮದುವೆ (ವಿಶ್ವಕಥಾಕೋಶ -೨೩)

ಮರಳುಗಾಡಿನ ಮದುವೆ (ವಿಶ್ವಕಥಾಕೋಶ -೨೩)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಹಾಗೂ ೨೦೧೨ರಲ್ಲಿ ತೃತೀಯ ಮುದ್ರಣ ಮಾಡಲಾಯಿತು. ದ್ವಿತೀಯ ಮುದ್ರಣದ ಸಮಯದಲ್ಲಿ ಪ್ರಕಾಶಕರು ಬರೆದ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಇಪ್ಪತ್ತಮೂರನೆಯ ಸಂಪುಟ ‘ಮರಳುಗಾಡಿನ ಮದುವೆ'. ವಿಶ್ವಕಥಾಕೋಶದ ಈ ಸಂಪುಟದಲ್ಲಿ ಪಶ್ಚಿಮ ಏಷ್ಯಾ ದೇಶಗಳ ಕಥೆಗಳಿವೆ. ಈ ಸಂಪುಟದಲ್ಲಿ ಅರೇಬಿಯಾದ ಒಂದು, ಇರಾಕ್ ದೇಶದ ಒಂದು, ಇರಾನ್ ದೇಶದ ಮೂರು, ಅಫಘಾನಿಸ್ತಾನದ ಒಂದು, ಸಿರಿಯಾದ ಒಂದು, ಜೋರ್ಡಾನ್ ನ ಒಂದು, ಪಾಲೆಸ್ತೀನ್ ದೇಶದ ಮೂರು, ಇಸ್ರೇಲ್ ನ ಎರಡು ಕಥೆಗಳಿವೆ.

ಈ ಪುಸ್ತಕದಲ್ಲಿ ಇರುವ ೧೩ ಕಥೆಗಳೆಂದರೆ, ಮರಳುಗಾಡಿನ ಮದುವೆ (ಆಲ್ ಅಸ್ಮಾ ಇ), ಸಿಹಿ ನೀರು (ಫಾನೆನ್ ಆಲ್ ದಬ್ಬಾಘ್), ನಾವಿಕ ಮತ್ತು ಮುತ್ತು ವ್ಯಾಪಾರಿ (ಅನಾಮಿಕ), ಮತ್ಸರದ ಮಡದಿ (ಹೆಲೆನ್ ದವೀದಿಯನ್), ಪುಟ್ಟ ಕಪ್ಪು ಮೀನು (ಸಮದ್ ಬೆಹ್ರ್ ಗನಿ), ಮನೆಗೊಂದು ಜಮಖಾನ (ಇಬ್ರಾಹಿಂ ಶೇಖ್), ಗುಡ್ಡಗಾಡಿನ ಹದಿವಯಸ್ಕರು (ಅರಫ್ ಅಲ್ ಖೌರಿ), ಐಸ್ ಕ್ರೀಂ (ಹುಸ್ನೆ ಫರೀದ್), ಯಾರ ಭೂಮಿ (ಘಸನ್ ಕನಘಾನಿ), ಮಳೆಗೆ ಮುಂಚೆ (ರಶೀದ್ ಅಬೂ ಶವರ್), ಮೊದಲ ಬಲಿದಾನ ಖಮೀಸನದೇ (ಜೈನ್ ಆಲ್ ಅಬಿದಿನ್ ಅಲ್ ಹುಸ್ಸೈನಿ), ತಾಯಿ ತೊರೆದ ತಬ್ಬಲಿ (ಷೊಲೋಮ್ ಅಸ್ಜ್), ಊರಿಗೆ ಮರಳಿದ ಅಗ್ರಗಾಮಿ (ಅಮೋಸ್ ಮೊಸ್ಸೆನ್ ಸನ್). 

ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ವಾಸುದೇವ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೧೭೫ ಪುಟಗಳನ್ನು ಹೊಂದಿದೆ. ಪಶ್ಚಿಮ ಏಷ್ಯಾ ದೇಶಗಳ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.