ಮಳೆಗಾಲಕ್ಕೆ ಸಿದ್ಧರಾಗೋಣ

ಮಳೆಗಾಲಕ್ಕೆ ಸಿದ್ಧರಾಗೋಣ

ಕರ್ನಾಟಕದಲ್ಲಿ ಮುಂಗಾರು ಮಳೆಯ ಆಗಮನವಾಗಿದೆ. ಬಿರು ಬೇಸಿಗೆಯಿಂದ ತತ್ತರಿಸಿದ ಜನತೆಗೆ ಮೇ ಮೊದಲ ವಾರದಲ್ಲಿ ಆರಂಭವಾದ ಮುಂಗಾರು ಪೂರ್ವ ಮಳೆ ತಂಪಿನ ಸಿಂಚನ ನೀಡಿತ್ತು. ಇದೀಗ ಮುಂಗಾರು ಮಳೆಯ ಅಧಿಕೃತ ಪ್ರವೇಶದೊಂದಿಗೆ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರೆತಿದೆ. ಆದರೆ ಅಬ್ಬರದ ಮಳೆಯ ಆರಂಭದಲ್ಲಿಯೇ ಅನಾಹುತದ ವರದಿಗಳು ಬರಲಾರಂಬಿಸಿವೆ. ಈ ಬಾರಿ ರಾಜ್ಯದ ಬಹುಭಾಗ ೪೦ ಡಿಗ್ರಿ ಸೆಂಟಿಗ್ರೇಡ್ ಗಿಂತ ಹೆಚ್ಚಿನ ತಾಪಮಾನ ಕಂಡು ದಾಖಲೆ ಬರೆದಿತ್ತು. ಇದೀಗ ಕೆಲವೆಡೆ ಸುರಿಯುತ್ತಿರುವ ಧಾರಾಕಾರ ಮಳೆಯೂ ಹಳೆಯ ದಾಖಲೆಗಳನ್ನು ಮುಳುಗಿಸಿದೆ. ಜೂನ್ ೨ರಂದು ಬೆಂಗಳೂರಿನಲ್ಲಿ ೧೧೧.೧ ಮಿಮೀ ಮಳೆಯಾಗಿದೆ. ಜೂನ್ ತಿಂಗಳಲ್ಲಿ ಬೆಂಗಳೂರು ನಗರದ ಸಾಮಾನ್ಯ ಮಳೆ ಪ್ರಮಾಣ ೧೧೦.೩ ಮಿಲಿ ಮೀಟರ್. ಜೂನ್ ತಿಂಗಳ ಒಟ್ಟು ಮಳೆ ಭಾನುವಾರ ಒಂದೇ ದಿನದಲ್ಲಿ ಸುರಿದಿದ್ದು, ೧೩೩ ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. ೧೮೯೧ರ ಜೂನ್ ೧೮ರಂದು ಬೆಂಗಳೂರಿನಲ್ಲಿ ೨೪ ಗಂಟೆಗಳಲ್ಲಿ ೧೦೧.೬ ಮಿ ಮೀ ಮಳೆಯಾಗಿತ್ತು. ಈ ದಾಖಲೆ ಮುರಿದ ಮಳೆ ನಮ್ಮ ಸಂತಸ ಹೆಚ್ಚಿಸಬೇಕಿತ್ತು. ಆದರೆ ರಾಜಧಾನಿಯಲ್ಲಿರುವ ಮಂದಿ ಪ್ರತೀ ಮಳೆಗೂ ಪರಿತಪಿಸುವಂತಾಗಿದೆ. ಇದು ನಾವೇ ಮಾಡಿಕೊಂಡ ಎಡವಟ್ಟುಗಳು. ಕೆರೆಗಳನ್ನು, ರಾಜಕಾಲುವೆಗಳನ್ನು ಮುಚ್ಚಿ, ಎಲ್ಲೆಂದರಲ್ಲಿ ಕಾಂಕ್ರೀಟ್ ಕಟ್ಟಡಗಳನ್ನು, ರಸ್ತೆಗಳನ್ನು ನಿರ್ಮಿಸಿರುವ ನಾವು, ನೀರಿನ ಸಹಜ ಹರಿವನ್ನು ತಡೆದು ಸಮಸ್ಯೆ ತಂದುಕೊಂಡಿದ್ದೇವೆ. ರಸ್ತೆಗಳ ಬದಿಗಳಲ್ಲಿ ಆಳವಾಗಿ ಬೇರೂರುವ ಮರಗಳನ್ನು ನೆಡದೇ, ಮೇಫ್ಲವರ್ ನಂತಹ ಮೇಲ್ಮಟ್ಟದಲ್ಲಿ ಬೇರು ಬಿಡುವಂತಹ ಮೃದುವಾದ ಗಿಡಗಳನ್ನು ಬೆಳೆಸಿದರೆ ಅಪಾಯವನ್ನು ನಾವೇ ಆಹ್ವಾನಿಸಿಕೊಂಡಂತೆ. ಮಳೆಯಾಗಲಿ, ಬಿಸಿಲಾಗಲಿ ಪ್ರಾಕೃತಿಕ ವಿದ್ಯಮಾನಗಳು. ಇದನ್ನು ಅರ್ಥೈಸಿಕೊಂಡು ನಾವು ನಮ್ಮ ಪರಿಸರವನ್ನು ಕಟ್ಟಿಕೊಳ್ಳಬೇಕು. ಪ್ರಕೃತಿ ನಿಯಮ ಮೀರಿದರೆ ಪರಿಣಾಮವನ್ನು ಎದುರಿಸಲೇಬೇಕು. ಮಳೆಗಾಲದ ಅನಾಹುತಗಳನ್ನು ಎದುರಿಸಲು ಪ್ರತೀ ವರ್ಷ ಕ್ರಿಯಾ ಯೋಜನೆ ರೂಪಿಸುವ ಸರಕಾರ ನಮ್ಮ ಪರಿಸರ ಪ್ರಕೃತಿಗೆ ಪೂರಕವಾಗುವಂತೆ ಕಟ್ಟಲೂ ಯೋಜನೆ ರೂಪಿಸಬೇಕು. ಪ್ರತೀ ವರ್ಷ ಸಮಸ್ಯೆ ಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಪ್ರತೀ ಮಳೆಯಲ್ಲೂ ನಮ್ಮ ರೋದನೆ, ವೇದನೆಗಳು ಮರುಕಳಿಸಲಿವೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೪-೦೬-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ