ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೬) -ಪ್ರದ್ಯುಮ್ನ

ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೬) -ಪ್ರದ್ಯುಮ್ನ

ಕಳೆದ ಸುಮಾರು ಒಂದು ವರ್ಷದ ಹಿಂದೆ ನಾನು ಮಹಾಭಾರತದ ಕಥೆಗಳಲ್ಲಿ ಅತ್ಯಂತ ವಿರಳವಾಗಿ ಕಂಡು ಬರುವ ಕೆಲವಾರು ಪಾತ್ರಗಳ ಪರಿಚಯ ಮಾಡಿಕೊಡಲು ಪ್ರಯತ್ನಿಸಿದೆ. ದುರ್ಯೋಧನನ ಹೆಂಡತಿ ಭಾನುಮತಿ, ಅಜಮಿಳ, ಕರ್ಣನ ಮಗ, ಕುರುಕ್ಷೇತ್ರ ಯುದ್ಧದ ಬಳಿಕ ದೃತರಾಷ್ಟ್ರನ ಬದುಕುಳಿದ ಮಗ ಯುಯುತ್ಸು, ಸುದಾಮ, ಭೀಮನ ಮೊಮ್ಮಗ ಬಾರ್ಬರಿಕ, ಉಡುಪಿ ರಾಜ, ಚಿತ್ರಾಂಗದಾ, ಉಲೂಪಿ ಹೀಗೆ ಕೆಲವು ಪಾತ್ರಗಳನ್ನು ಹೆಕ್ಕಿ ತಂದು ವಿವರಣೆ ನೀಡಿರುವೆ. ಇದು ಬಹಳ ಮಂದಿ ಓದುಗರಿಗೆ ಮೆಚ್ಚುಗೆಯೂ ಆಗಿತ್ತು. ಅಂತಹದ್ದೇ ಒಂದು ಪಾತ್ರ ಪ್ರದ್ಯುಮ್ನ.

ಪ್ರದ್ಯುಮ್ನ ಭಗವಾನ್ ಶ್ರೀಕೃಷ್ಣ ಹಾಗೂ ರುಕ್ಮಿಣಿಯವರ ಪ್ರಥಮ ಪುತ್ರ. ನಮಗೆ ಪಾಂಡವರ ಹಾಗೂ ಕೌರವರ ಬಗ್ಗೆ ಬಹಳಷ್ಟು ತಿಳಿದಿದೆ. ಆದರೆ ಶ್ರೀಕೃಷ್ಣನ ಮಕ್ಕಳ ಬಗ್ಗೆ ನಮಗೆ ಗೊತ್ತಿರುವುದು ಕಮ್ಮಿ. ಪ್ರದ್ಯುಮ್ನ ಶ್ರೀಕೃಷ್ಣ ಹಾಗೂ ರುಕ್ಮಿಣಿಯವರ ಪ್ರೇಮದ ಫಲವಾಗಿ ಜನಿಸಿದ. ಪ್ರದ್ಯುಮ್ನ ತನ್ನ ಪೂರ್ವ ಜನ್ಮದಲ್ಲಿ ಮನ್ಮಥ ಅಥವಾ ಕಾಮದೇವನಾಗಿದ್ದ. ಶಿವನ ತಪಸ್ಸನ್ನು ಭಂಗ ಮಾಡಲು ಹೋಗಿ ಅವನ ಕೋಪಕ್ಕೆ ಬಲಿಯಾಗಿ ಭಸ್ಮವಾದ ಕಥೆ ನಿಮಗೆ ಗೊತ್ತೇ ಇದೆ. ಮನ್ಮಥನ ಪತ್ನಿ ರತಿದೇವಿಯ ಮನವಿಯ ಮೇರೆಗೆ ಶಿವ ಅವನಿಗೆ ಪುನರ್ಜನ್ಮವನ್ನು ಕರುಣಿಸುತ್ತಾನೆ. ಮನ್ಮಥ ಶ್ರೀಕೃಷ್ಣ -ರುಕ್ಮಿಣಿಯ ಸಂತಾನವಾಗಿ ಭೂಲೋಕದಲ್ಲಿ ಜನಿಸುತ್ತಾನೆ ಮತ್ತು ದಾನವ ರಾಜ ಶಂಭಾಸುರನ ಹತ್ಯೆ ಮಾಡುತ್ತಾನೆ ಎಂದು ಈಶ್ವರನಿಂದ ತಿಳಿದುಕೊಂಡ ತಿಳಿದ ರತಿದೇವಿ ಭೂಲೋಕಕ್ಕೆ ತೆರಳುತ್ತಾಳೆ. ರತಿದೇವಿ ನೇರವಾಗಿ ಶಂಭಾಸುರನ ಅರಮನೆಗೆ ತೆರಳಿ ಅಲ್ಲಿ ಮಾಯಾವತಿ ಎಂಬ ಹೆಸರಿನಿಂದ ಅಡುಗೆಯ ಕೆಲಸದವಳಾಗಿ ಸೇರಿಕೊಳ್ಳುತ್ತಾಳೆ.

ಇತ್ತ ಶ್ರೀಕೃಷ್ಣನ ಅರಮನೆಯಲ್ಲಿ ಮನ್ಮಥನು ಜನ್ಮ ತಾಳುತ್ತಾನೆ. ಮಗು ಹುಟ್ಟುವಾಗಲೇ ದಿವ್ಯ ತೇಜಸ್ಸು ಹಾಗೂ ಅಪರಿಮಿತ ಸೌಂದರ್ಯದಿಂದ ಕಂಗೊಳಿಸುತ್ತಿತ್ತು. ಎಷ್ಟಾದರೂ ಶ್ರೀಕೃಷ್ಣನ ಪುತ್ರನಲ್ಲವೇ? ತನ್ನನ್ನು ಸಾಯಿಸಬಲ್ಲ ವ್ಯಕ್ತಿ ಶ್ರೀಕೃಷ್ಣನ ಅರಮನೆಯಲ್ಲಿ ಜನ್ಮ ತಾಳಿದ್ದಾನೆ ಎಂದು ತಿಳಿದುಕೊಂಡ ಶಂಭಾಸುರ, ಮಾರುವೇಷದಲ್ಲಿ ಬಂದು, ಹತ್ತು ದಿನದ ಪುಟ್ಟ ಮಗುವನ್ನು ಅಪಹರಿಸುತ್ತಾನೆ. ಅಪಹರಿಸಿದ ಮಗುವನ್ನು ತೆಗೆದುಕೊಂಡು ಹೋಗಿ ಸಮುದ್ರದಲ್ಲಿ ಎಸೆಯುತ್ತಾನೆ. 

ಸಮುದ್ರದಲ್ಲಿ ಬಿದ್ದ ಮಗುವನ್ನು ಒಂದು ದೊಡ್ಡ ಮೀನು ನುಂಗಿ ಬಿಡುತ್ತದೆ. ಆ ಮೀನು ಬೆಸ್ತರು ಹಾಕಿದ್ದ ಬಲೆಗೆ ಸಿಕ್ಕಿಕೊಳ್ಳುತ್ತದೆ. ಮೀನಿನ ಗಾತ್ರವನ್ನು ನೋಡಿದ ಮೀನುಗಾರರು ಖುಷಿಯಿಂದ ಆ ಮೀನನ್ನು ಶಂಭಾಸುರನ ಅರಮನೆಗೆ ತಲುಪಿಸುತ್ತಾರೆ. ಶಂಭಾಸುರನಿಂದ ಅದಕ್ಕಾಗಿ ಉತ್ತಮ ಪಾರಿತೋಷಕವನ್ನೂ ಪಡೆದುಕೊಳ್ಳುತ್ತಾರೆ. ಮೀನು ಅಡಿಗೆ ಮನೆಗೆ ಬಂದಾಗ, ಅದನ್ನು ಕತ್ತರಿಸಲಾಗಿ ಒಳಗಿನಿಂದ ಸುಂದರವಾದ ಜೀವಂತ ಮಗು ಹೊರಗೆ ಬರುತ್ತದೆ. ಈ ಮಗುವನ್ನು ನೋಡಿದ ಕೂಡಲೇ ಮಾಯಾವತಿಗೆ ತನ್ನ ಗಂಡ ಮನ್ಮಥನ ನೆನಪಾಗುತ್ತದೆ. ಆ ಮಗುವನ್ನು ಆಕೆಯೇ ಪಾಲನೆ ಪೋಷಣೆ ಮಾಡತೊಡಗುತ್ತಾಳೆ. 

ಒಂದು ದಿನ ಅಲ್ಲಿಗೆ ದೇವ ಋಷಿ ನಾರದರ ಆಗಮನವಾಗುತ್ತದೆ. ಈ ಮಗುವನ್ನು ನೋಡಿದ ನಾರದರು, ಮಾಯಾವತಿ ಬಳಿ ಹೇಳುತ್ತಾರೆ ‘ನಿಸ್ಸಂಶಯವಾಗಿ ಈ ಮಗು ನಿನ್ನ ಪತಿ ಮನ್ಮಥನೇ, ಜಾಗರೂಕತೆಯಿಂದ ಸಾಕು'. ನಾರದರ ಮಾತಿನಿಂದ ಪ್ರಸನ್ನಳಾದ ಮಾಯಾವತಿ ಆ ಮಗುವಿಗೆ ಪ್ರದ್ಯುಮ್ನ ಎಂದು ಹೆಸರು ಇಡುತ್ತಾಳೆ. ದಿನಕಳೆದಂತೆ ಮಗು ಬೆಳೆದು ಯುವಕನಾಗುತ್ತಾನೆ. ಪ್ರದ್ಯುಮ್ನನನ್ನು ನೋಡುವಾಗ ಶ್ರೀಕೃಷ್ಣನನ್ನೇ ನೋಡಿದಂತಾಗುತ್ತಿತ್ತು. ಅಷ್ಟೊಂದು ಅಪ್ಪನ ಹೋಲಿಕೆ ಮಗನಿಗಿತ್ತು. ಮಾಯಾವತಿ ಪ್ರದ್ಯುಮ್ನನ ಜೊತೆ ತಾಯಿಯಂತೆ ವ್ಯವಹರಿಸದೇ ಬೇರೇ ರೀತಿಯ ವರ್ತನೆ ಮಾಡುತ್ತಿದ್ದಳು. ಇದನ್ನು ಗಮನಿಸಿದ ಪ್ರದ್ಯುಮ್ನ ‘ನೀನು ಯಾಕೆ ನನ್ನ ಜೊತೆ ಅಮ್ಮನ ಹಾಗೆ ವರ್ತನೆ ಮಾಡುವುದಿಲ್ಲ, ನಿನ್ನ ವರ್ತನೆಗಳು ಪ್ರೇಯಸಿಯ ಹಾಗಿವೆಯಲ್ಲಾ’ ಎನ್ನುತ್ತಾನೆ. 

ಅದಕ್ಕೆ ಮಾಯಾವತಿ  ‘ ನೀವು ನನ್ನ ಮಗನಲ್ಲ, ನನ್ನ ಪತಿದೇವರು. ನಿಮ್ಮ ಜನ್ಮವಾಗಿರುವುದೇ ಶಂಭಾಸುರನ ಹತ್ಯೆ ಮಾಡುವ ಸಲುವಾಗಿ' ಎನ್ನುತ್ತಾ ಪ್ರದ್ಯುಮ್ನನಿಗೆ ಅವನ ಜನ್ಮದ ಹಿಂದಿನ ರಹಸ್ಯವನ್ನು ತಿಳಿಸುತ್ತಾಳೆ. ಆಕೆ ಪ್ರದ್ಯುಮ್ನನಿಗೆ ಶಸ್ತ್ರಾಸ್ತ್ರಗಳ ಜ್ಞಾನ ಹಾಗೂ ಯುದ್ಧ ವಿದ್ಯೆಯನ್ನು ಕಲಿಸುತ್ತಾಳೆ. ಇದರಿಂದ ಪ್ರದ್ಯುಮ್ನ ಉತ್ತಮ ಯೋಧನಾಗಿ ಪರಿವರ್ತನೆಯಾಗುತ್ತಾನೆ. ನಂತರ ಒಂದು ದಿನ ಶಸ್ತ್ರಾಸ್ತ್ರಗಳ ಸಹಿತ ಪ್ರದ್ಯುಮ್ನ ಶಂಭಾಸುರನ ಆಸ್ಥಾನಕ್ಕೆ ಹೋಗುತ್ತಾನೆ. ಅವನನ್ನು ನೋಡಿ ಪ್ರಸನ್ನನಾಗಿ ಶಂಭಾಸುರ ‘ ಇವನೇ ನಾವು ಸಾಕಿದ ಹುಡುಗ. ಎಷ್ಟು ದೊಡ್ಡವನಾಗಿದ್ದಾನೆ' ಎಂದು ಹೆಮ್ಮೆಯಿಂದ ಸಭಿಕರಿಗೆ ಪರಿಚಯ ಮಾಡುತ್ತಾನೆ. ಅದಕ್ಕೆ ಪ್ರದ್ಯುಮ್ನ ಸಿಟ್ಟಿನಲ್ಲಿ ‘ನಾನು ಯಾರೆಂದು ನಿನಗಿನ್ನೂ ತಿಳಿದಿಲ್ಲ, ನೀನು ಕೃಷ್ಣನ ಅರಮನೆಯಿಂದ ಅಪಹರಿಸಿ ತಂದು ಸಮುದ್ರಕ್ಕೆ ಎಸೆದ ಮಗುವೇ ನಾನು. ನಿನ್ನನ್ನು ವಧಿಸುವ ಸಲುವಾಗಿಯೇ ಬಂದಿರುವೆ' ಎನ್ನುತ್ತಾನೆ.

ಶಂಭಾಸುರನಿಗೂ ಪ್ರದ್ಯುಮ್ನನಿಗೂ ಭೀಕರ ಕಾಳಗವಾಗುತ್ತದೆ. ಶಂಭಾಸುರನ ಪ್ರತಿಯೊಂದು ಆಕ್ರಮಣವನ್ನು ಹಿಮ್ಮೆಟ್ಟಿಸುತ್ತಾ ಪ್ರದ್ಯುಮ್ನ ತನ್ನ ಖಡ್ಗದಿಂದ ಅವನ ತಲೆಯನ್ನು ಕತ್ತರಿಸುತ್ತಾನೆ. ಹೀಗೆ ಶಂಭಾಸುರನ ವಧೆಯಾಗುತ್ತದೆ. ದೇವ-ದೇವತೆಗಳು ಪ್ರದ್ಯುಮ್ನನ ಸಾಹಸವನ್ನು ಮೆಚ್ಚಿ ಅವನ ಮೇಲೆ ಪುಷ್ಪವೃಷ್ಟಿ ಮಾಡುತ್ತಾರೆ. ಮಾಯಾವತಿಗೆ ಇದರಿಂದ ತುಂಬಾನೇ ಪ್ರಸನ್ನತೆ ಉಂಟಾಗುತ್ತದೆ. ಮತ್ತೆ ರತಿ-ಮನ್ಮಥರ ಮಿಲನವಾಗುತ್ತದೆ.

ನಂತರ ಪ್ರದ್ಯುಮ್ನ ತನ್ನ ಪತ್ನಿಯನ್ನು ಕರೆದುಕೊಂಡು ಹೆತ್ತವರನ್ನು ಕಾಣಲು ದ್ವಾರಕೆಗೆ ಬರುತ್ತಾನೆ. ಕೃಷ್ಣ ಆ ಸಮಯ ದ್ವಾರಕೆಯಲ್ಲಿರಲಿಲ್ಲ. ದೂರದಿಂದ ಪ್ರದ್ಯುಮ್ನನನ್ನು ನೋಡಿದ ರುಕ್ಮಿಣಿ ತನ್ನ ಪತಿಯೇ ಬಂದಳು ಎಂದು ಓಡೋಡಿ ಹೋದಳು. ಪ್ರದ್ಯುಮ್ನನನ್ನು ಸಮೀಪಿಸುವಷ್ಟರಲ್ಲಿ ಮತ್ತೊಂದು ಕಡೆಯಿಂದ ಶ್ರೀಕೃಷ್ಣ ಬರುತ್ತಿರುವುದನ್ನು ಕಂಡ ರುಕ್ಮಿಣಿಯು ಒಂದು ಕ್ಷಣ ದಂಗಾಗಿ ಹೋದಳು. ಕೂಡಲೇ ಅವಳಿಗೆ ಈತ ತನ್ನ ಕಾಣೆಯಾದ ಮಗ ಎಂದು ಅರಿವಾಯಿತು. ರುಕ್ಮಿಣಿ ಪ್ರದ್ಯುಮ್ನನನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳತೊಡಗಿದಳು. ಈ ತಾಯಿ ಮಗನ ಪುನರ್ ಮಿಲನವನ್ನು ನೋಡಿ ಅಲ್ಲಿದ್ದ ಎಲ್ಲರ ಕಣ್ಣುಗಳು ಒದ್ದೆಯಾದವು. 

ಸಾಕ್ಷಾತ್ ಮಹಾ ವಿಷ್ಣುವೇ ಭೂಮಿಯಲ್ಲಿ ಕೃಷ್ಣನಾಗಿ ಜನಿಸಿದರೂ ಮಾನವನಾಗಿದ್ದ ಕಾರಣ ಪುತ್ರ ಶೋಕದಿಂದ ಮುಕ್ತನಾಗಲು ಸಾಧ್ಯವಾಗಲಿಲ್ಲ. ಹಲವಾರು ವರ್ಷ ಮಗನನ್ನು ಅಗಲಿರಬೇಕಾಯಿತು. ಆದರೆ ಈ ಅಗಲುವಿಕೆಯ ಹಿಂದೆ ಶಂಭಾಸುರನ ವಧೆಯ ಉದಾತ್ತ ಕಾರಣವಿತ್ತು. ಇದೆಲ್ಲಾ ಕೃಷ್ಣನಿಗೆ ತಿಳಿದಿತ್ತು. ಕೊನೆಗೂ ಶಂಭಾಸುರನ ವಧೆಯ ನಂತರ ಶ್ರೀಕೃಷ್ಣ -ರುಕ್ಮಿಣಿಯರಿಗೆ ತಮ್ಮ ಪುತ್ರ ಪ್ರದ್ಯುಮ್ನನ ದರ್ಶನವಾಯಿತು.

ಚಿತ್ರ ಕೃಪೆ: ಅಂತರ್ಜಾಲ ತಾಣ